ದಾವಣಗೆರೆಯಲ್ಲಿ ಐಎಂಡಿಯಿಂದ ಹವಾಮಾನ ಕೇಂದ್ರ ಕಾರ್ಯಾರಂಭ; ರೈತರಿಗೆ ಸಿಗಲಿದೆ ಕ್ಷಣ ಕ್ಷಣದ ಉಪಯುಕ್ತ ಮಾಹಿತಿ
ದಾವಣಗೆರೆ ಜಿಲ್ಲೆಯಲ್ಲಿ ಭಾರತ ಹವಾಮಾನ ಇಲಾಖೆಯಿಂದ ಅತ್ಯುನ್ನತ ತಂತ್ರಜ್ಞಾನ ಆಧಾರಿತ ಕೇಂದ್ರ ಕಾರ್ಯಾರಂಭ ಮಾಡಿದೆ. ಇದು 15 ನಿಮಿಷಕ್ಕೊಮ್ಮೆ ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಲಿದೆ. ವಿಶೇಷ ವರದಿ: ನೂರುಲ್ಲಾ ಡಿ.

Published : June 3, 2026 at 8:40 PM IST
ದಾವಣಗೆರೆ: ಬೆಣ್ಣೆ ನಗರಿಯಲ್ಲಿ ಅತ್ಯುನ್ನತ ತಂತ್ರಜ್ಞಾನದ ಕೃಷಿ ಸ್ವಯಂಚಾಲಿತ ಹವಾಮಾನ ಕೇಂದ್ರ ತಲೆ ಎತ್ತಿದೆ. ಇದು ರೈತರಿಗೆ ಅವಶ್ಯಕವಾದ ಮಾಹಿತಿಯನ್ನು ಪ್ರತಿ 15 ನಿಮಿಷಕ್ಕೊಮ್ಮೆ ನೀಡಲಿದ್ದು, ಸಾಕಷ್ಟು ಉಪಯೋಗವಾಗಲಿದೆ.
ಹೌದು, ಭಾರತ ಹವಾಮಾನ ಇಲಾಖೆ (IMD) ಸ್ಥಾಪಿಸಿರುವ ಈ ಕೇಂದ್ರ ಶುಭಾರಂಭ ಮಾಡಿದೆ. ನಗರದ ಆಂಜನೇಯ ಬಡಾವಣೆಯಲ್ಲಿರುವ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಭಾರತ ಹವಾಮಾನ ಇಲಾಖೆ (India Meteorological Department) ಸ್ಥಾಪಿಸಿದ 'ಕೃಷಿ ಸ್ವಯಂಚಾಲಿತ ಹವಾಮಾನ ಕೇಂದ್ರ ತನ್ನ ಕಾರ್ಯ ಆರಂಭಿಸಿದೆ. ಇದು ವಿಶೇಷವಾಗಿ ಮಳೆ, ಗಾಳಿ, ತೇವಾಂಶ ಹಾಗೂ ತಾಪಮಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ಒದಗಿಸಲಿದೆ. ಈ ಹವಾಮಾನ ಕೇಂದ್ರ ದಾವಣಗೆರೆಗೆ ಅತ್ಯವಶ್ಯಕವಾಗಿತ್ತು. ಇದೀಗ ರೈತರ ಕನಸು ನನಸಾಗಿದೆ.
ಐಎಂಡಿಯಿಂದ ಜಿಲ್ಲೆಯಲ್ಲಿ ಮೊದಲ ಹವಾಮಾನ ಕೇಂದ್ರ: ಐಎಂಡಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಕೃಷಿ ಕೇಂದ್ರಿತವಾದ ಹವಾಮಾನ ಕೇಂದ್ರವನ್ನು ಸ್ಥಾಪಿಸಿದೆ. ಇದರಿಂದ ರೈತರಿಗೆ ಹವಾಮಾನದ ಬಗ್ಗೆ, ಬೆಳೆ, ಕೀಟಬಾಧೆ, ಮಳೆ, ಉಷ್ಣಾಂಶದ ಬಗ್ಗೆ ಮಾಹಿತಿ ಕಲೆಹಾಕಲು ಸುಲಭವಾಗಲಿದೆ. ಇಷ್ಟು ದಿನಗಳ ಕಾಲ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ಹಾಗೂ ಹಿರಿಯೂರಿನ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರವು ದಾವಣಗೆರೆ ಜಿಲ್ಲೆಯ ಹವಾಮಾನಕ್ಕೆ ಸಂಬಂಧಿಸಿದ ಮಾಹಿತಿ ಬಗ್ಗೆ ಮುನ್ಸೂಚನೆಯನ್ನು ನೀಡುತ್ತಿತ್ತು. ಇದೀಗ 'ಎಡಬ್ಲ್ಯೂಎಸ್'ಗೆ ಸ್ಥಾಪಿಸಲು ಅಗತ್ಯ ಸ್ಥಳಾವಕಾಶವನ್ನು ನೀಡಿದ್ದು, ಸೆನ್ಸಾರ್ ಆಧಾರಿತ ಉಪಕರಣ ಇದಾಗಿದೆ. ಉಪಕರಣಗಳು ಮಾಹಿತಿ ಒದಗಿಸುವ ಸ್ವಯಂಚಾಲಿತವಾಗಿ ಹವಾಮಾನ ಇಲಾಖೆಯ ಜಾಲತಾಣಕ್ಕೆ ರವಾನೆಯಾಗಲಿದೆ. ಇನ್ನು, ಮಳೆ ಗಾಳಿಯ ಮಾಪನ, ವೇಗ, ತೇವಾಂಶದ ಪ್ರಮಾಣ, ತಾಪಮಾನ ಅಳೆಯುವ ಸ್ವಯಂಚಾಲಿತ ಉಪಕರಣಗಳು ಈ ಕೇಂದ್ರದಲ್ಲಿವೆ.

ಪ್ರತಿ 15 ನಿಮಿಷಕ್ಕೊಮ್ಮೆ ಮಾಹಿತಿ ರವಾನೆ: ಈ ಹವಾಮಾನ ಘಟಕದ ಸುತ್ತಮುತ್ತಲಿನ ಪ್ರದೇಶದ ವಾತಾವರಣದ ಮಾಹಿತಿಯನ್ನು ಉಪಕರಣಗಳು ಪ್ರತಿ 15 ನಿಮಿಷಕ್ಕೊಮ್ಮೆ ರವಾನಿಸಲಿದೆ. ಇದರ ಆಧಾರದ ಮೇರೆಗೆ ದತ್ತಾಂಶ ವಿಶ್ಲೇಷಣೆ ಮಾಡಲಾಗುತ್ತದೆ. ಕೃಷಿ ಚುಟುವಟಿಕೆಗಳಿಗೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಇದರಿಂದ ಅನುಕೂಲವಾಗಲಿದೆ. ರಸ ಹೀರುವ ಕೀಟಗಳ ಬಾಧೆ ಬಗ್ಗೆ, ಕೀಟ, ರೋಗಗಳ ಹಾವಳಿಯ ಸಾಧ್ಯತೆ ಬಗ್ಗೆ ರೈತರಿಗೆ ಸಲಹೆ ನೀಡಲು ನಿಖರ ಮಾಹಿತಿ ಕಲ್ಪಿಸಲಿದೆ. ವರ್ಷವಿಡೀ ಸುರಿದ ಮಳೆಯ ದತ್ತಾಂಶ ಗಮನಿಸಿ ಅಂತರ್ಜಲ ಮಟ್ಟ ನಿರ್ಧರಿಸಲು ಸಾಧ್ಯವಾಗಲಿದೆ. ಆವಿಯಾದ ನೀರಿನಲ್ಲಿ ಎಷ್ಟು ಪ್ರಮಾಣ ಮಳೆಯ ರೂಪದಲ್ಲಿ ಭೂಮಿಗೆ ಮರಳಿತು ಎಂಬ ಜಲಚಕ್ರದ ವಿಶ್ಲೇಷಣೆ, ಕೃಷಿಗೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು ಈ ಕೇಂದ್ರ ಸಹಕಾರಿ ಆಗಲಿದೆ.


ಇದು ಯಾವ ರೀತಿ ಕೆಲಸ ಮಾಡಲಿದೆ: ತರಳಬಾಳು ವಿಜ್ಞಾನ ಕೇಂದ್ರದ ಮುಖ್ಯ ವಿಜ್ಞಾನಿ ಡಾ. ದೇವರಾಜ್ ಅವರು ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ್ದು, "ಇದು ಕೃಷಿ ಸ್ವಯಂ ಚಾಲಿತ ಹವಾಮಾನ ಘಟಕ. ಇದರಲ್ಲಿ ಹವಾಮಾನಕ್ಕೆ ಸಂಬಂಧಿಸಿದಂತೆ ಹತ್ತಾರು ಗುಣಗಳನ್ನು ನೋಡಬಹುದು. ಮಳೆ ಎಷ್ಟು ಬಿದ್ದಿದೆ, ಉಷ್ಣತೆ, ಗಾಳಿಯ ವೇಗ, ತೇವಾಂಶದ ಬಗ್ಗೆ ಸ್ಯಾಟಲೈಟ್ ಮೂಲಕ ಅಳೆಯಲು ಸಾಧ್ಯವಾಗುತ್ತದೆ. ಪ್ರತಿ ನಿಮಿಷಕ್ಕೂ ದತ್ತಾಂಶ ಸಂಗ್ರಹ ಆಗುತ್ತದೆ. ಭಾರತ ಹವಾಮಾನ ಇಲಾಖೆ (IMD) ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಸಂಯಕ್ತ ಆಶ್ರಯದಲ್ಲಿ ಈ ಘಟಕವನ್ನು ಆರಂಭಿಸಲಾಗಿದೆ. ಈ ಘಟಕದಿಂದ ರೈತರಿಗೆ ಮುನ್ನೆಚ್ಚರಿಕೆ ವಿಚಾರಗಳನ್ನು ತಿಳಿಸಬಹುದಾಗಿದೆ. ಅದರಲ್ಲೂ ಮಳೆ ಬಗ್ಗೆ, ಕೀಟ ರೋಗಬಾಧೆ ಬಗ್ಗೆ ರೈತರಿಗೆ ಮುನ್ನೆಚ್ಚರಿಕೆ ನೀಡಬಹುದು. ರಾಜ್ಯಾದ್ಯಂತ ಈ ಘಟಕಗಳನ್ನು ಅಳವಡಿಸಲಾಗಿದ್ದು, ಈ ವರ್ಷ ದಾವಣಗೆರೆಯಲ್ಲಿ ಕಾರ್ಯರಂಭ ಮಾಡಲಾಗಿದೆ. ನಮ್ಮ ಕೃಷಿ ವಿಜ್ಞಾನ ಕೇಂದ್ರಕ್ಕೆ ರೈತರು ಭೇಟಿ ನೀಡುತ್ತಾರೆ. ಮಳೆ ಬರುತ್ತೋ, ಇಲ್ವೋ ಎಂದು ಈ ಘಟಕದಿಂದ ತಿಳಿಯಬಹುದು. ಉಷ್ಣಾಂಶ ಎಷ್ಟಿದೆ, ಉಷ್ಣತೆ ಕಡಿಮೆಯಾದ್ರೇ ಯಾವ ರೀತಿ ಬೆಳೆಗಳಿಗೆ ಕೀಟಬಾಧೆ ಬರಲಿದೆ. ಉಷ್ಣಾಂಶ ಹೆಚ್ಚಾದ್ರೇ ಏನ್ ಆಗಲಿದೆ ಎಂಬುದನ್ನು ಮುಂಚೆಯೇ ತಿಳಿಸಲು ಈ ಘಟಕ ಸಹಕಾರಿಯಾಗಲಿದೆ. ದಾವಣಗೆರೆಯಲ್ಲಿ ರಾಜ್ಯ ಸರ್ಕಾರದ ಹವಾಮಾನ ಮಾಪನ ಕೇಂದ್ರಗಳಿದ್ದವು, ಇದು ಕೇಂದ್ರ ಸರ್ಕಾರದ ಹವಾಮಾನ ಇಲಾಖೆಯ ಮೊದಲ ( IMD) ಕೇಂದ್ರವಾಗಿದೆ'' ಎಂದು ತಿಳಿಸಿದರು.

ಇದನ್ನೂ ಓದಿ: ದಾವಣಗೆರೆಯಲ್ಲಿರುವ ಮಕ್ಕಳ ಪಾರ್ಕ್ಗಳು ಮಕ್ಕಳಿಗೆ ಎಷ್ಟು ಸುರಕ್ಷಿತ? ಪುಟಾಣಿಗಳ ಉದ್ಯಾನವನದಲ್ಲಿ ವ್ಯವಸ್ಥೆ ಹೇಗಿದೆ?

