ನೀವು ಬಯಸುತ್ತಿರುವುದನ್ನು ಸದ್ಯದಲ್ಲೇ ಹೇಳುವೆ: ಶಾಸಕ ಶಿವಗಂಗಾ ಬಸವರಾಜ್
ನೀವು ಬಯಸುತ್ತಿರುವುದನ್ನು ಸದ್ಯದಲ್ಲೇ ಹೇಳುವೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

Published : January 6, 2026 at 8:32 PM IST
ದಾವಣಗೆರೆ: "ಜನವರಿ ಮುಕ್ತಾಯದ ವೇಳೆಗೆ ನೀವು (ಮಾಧ್ಯಮದವರು) ಏನು ಬಯಿಸ್ತಾಯಿದ್ದಿರೋ ಅದನ್ನೇ ಹೇಳುವೆ. ಸಂಕ್ರಾಂತಿ ನಂತರ ಖಂಡಿತವಾಗಿ ಸೂರ್ಯ ಬದಲಾವಣೆ ಆಗುತ್ತದೆ" ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.
ರಾಜ್ಯದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಸರಿಗಟ್ಟಿದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ದಾಖಲೆ ಬರೆಯುತ್ತಿರುವುದು ಎಲ್ಲರಿಗೂ ಖುಷಿಯ ವಿಚಾರ. ಕರ್ನಾಟಕದಲ್ಲಿ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜ ಅರಸು ಅವರ ನಂತರ ಸಿದ್ದರಾಮಯ್ಯನವರು ಹೆಚ್ಚು ದಿನ ಸಿಎಂ ಆಗಿ ದಾಖಲೆ ಮಾಡಿದ್ದಾರೆ. ಅರಸು ಆಡಳಿತ ನಡೆಸುತ್ತಿದ್ದ ಕಾಲದಲ್ಲಿಯೇ ನಾನು ಹಟ್ಟಿದ್ದು. ಈಗ ಆ ಅವಧಿಯನ್ನು ಮೀರಿ ಒಂದು ದಿನ ಜಾಸ್ತಿ ಅಧಿಕಾರ ನಡೆಸುವಂತಹ ಅವಕಾಶ ನಮ್ಮ ಸಿದ್ದರಾಮಯ್ಯನರಿಗೆ ಸಿಕ್ಕಿದೆ. ಈ ನಡುವೆ ನಾನೂ ಕೂಡ ಓರ್ವ ಜನಪ್ರತಿನಿಧಿಯಾಗಿ ವಿಧಾನಸೌಧದಲ್ಲಿ ಕಾಣಿಸಿಕೊಳ್ಳುತ್ತಿರುವುದು ಖುಷಿ ಅನ್ನಿಸುತ್ತದೆ. ಇಷ್ಟು ದಿನ ಸಿಎಂ ಆಗಿ ಅಧಿಕಾರ ನಡೆಸಿದ ಸಿದ್ದರಾಮಯ್ಯ ಅವರಿಗೆ ಶುಭವಾಗಲಿ" ಎಂದರು.
"ಎಷ್ಟು ವರ್ಷವಾದರೂ ಅಧಿಕಾರ ನಡೆಸಲಿ, ಜನರು ಆಶೀರ್ವಾದ ಮಾಡಿದ್ದಾರೆ. ಅವರೇ ದಶಮಾನೋತ್ಸವ ಪೂರೈಸಲಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅದು ಅವರ ಅಭಿಮಾನ. ಎಲ್ಲವನ್ನು ಹೈಕಮಾಂಡ್ ಹಾಗೂ ಜನ ನಿರ್ಧರಿಸುತ್ತಾರೆ. ಮುಂದಿನ ಐದು ವರ್ಷ ಕೂಡ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆಗಲೂ ಸಿದ್ದರಾಮಯ್ಯನವರೇ ಸಿಎಂ ಆಗಲಿ. ಆದರೆ, ಸಿಎಂ ಬದಲಾವಣೆ ಆದಲ್ಲಿ ರಕ್ತ ಕ್ರಾಂತಿ ಆಗುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅಭಿಮಾನಕ್ಕೆ ಹೀಗೆ ಮಾತನಾಡುತ್ತಾರೆ. ರಾಜ್ಯದ ಜನ ಈ ಹಿಂದಿನ ಇತಿಹಾಸ ಗಮನಿಸಿದ್ದಾರೆ.
ಜನವರಿ ಒಳಗೇ ಎಲ್ಲ ಶುಭ ಸುದ್ದಿಗಳ ಬಗ್ಗೆ ಮಾತನಾಡುತ್ತೇನೆ: ಈ ಹಿಂದೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿದಾಗ ಪ್ರತಿಭಟನೆಗಳು, ಆಕ್ರೋಶ ಕೂಡ ಹೊರ ಬಂದವು. ಇಂತವುಗಳು ಸಾಮಾನ್ಯ. ಅಭಿಮಾನಿಗಳ ಅಭಿಮಾನ ಹಾಗೆ ಇರುತ್ತದೆ. ನಾನು ಕೂಡ ಡಿಕೆ ಸಾಹೇಬದರ ಅಭಿಮಾನಿ. ಅವರಿಗೆ ಏನಾದರೂ ತೊಂದರೆ ಆದರೂ ನನಗೆ ನೋವು ಆಗುತ್ತೆ. ಹಾಗೆಯೇ ಅವರಿಗೆ ಅವರದ್ದೇ ಆಗ ಅಭಿಮಾನಿಗಳು ಇರುತ್ತಾರೆ. ಆ ಅಭಿಮಾನಕ್ಕೆ ಮಾತನಾಡುತ್ತಾರೆ. ಅದರಲ್ಲಿ ತಪ್ಪೇನು ಇಲ್ಲ. ಆದರೆ, ಅಭಿಮಾನಿಗಳು ಹೇಳಿದಂತೆ ಯಾವ ಕ್ರಾಂತಿಯೂ ಆಗಲ್ಲ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ದ. ಸಂಕ್ರಾಂತಿ ಬಳಿಕ ಮಾತನಾಡೋಣ. ಜನವರಿ ಮುಕ್ತಾಯದ ವೇಳೆಗೆ ನೀವು ಏನು ಬಯಿಸ್ತಾ ಇದ್ದೀರೋ ಅದನ್ನು ಹೇಳುವೆ. ಸಂಕ್ರಾಂತಿ ನಂತರ ಖಂಡಿತವಾಗಿ ಸೂರ್ಯ ಬದಲಾವಣೆ ಆಗುತ್ತೆ. ಎಲ್ಲಾ ಶುಭ ಸುದ್ದಿಗಳ ಬಗ್ಗೆ ಜನವರಿ ಒಳಗೆ ಮಾತನಾಡುತ್ತೇನೆ" ಎಂದರು.

ಸಿದ್ದರಾಮಯ್ಯ ದೀರ್ಘಾವಧಿ ಮುಖ್ಯಮಂತ್ರಿಯಾಗಿ ದಿ. ದೇವರಾಜ ಅರಸು ಅವರ ದಾಖಲೆ ಪುಡಿಗಟ್ಟಿದ ಹಿನ್ನೆಲೆ ಅವರ ಅಭಿಮಾನಿಗಳು ದಾವಣಗೆರೆಯಲ್ಲಿ ಬೀರಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ ಅಭಿಮಾನಿಗಳು, ಜೈಕಾರ ಹಾಕಿ ಹರ್ಷ ವ್ಯಕ್ತಪಡಿಸಿದರು. ದೇವರಾಜ ಅರಸರು ಹಾಗೂ ಸಿಎಂ ಸಿದ್ದರಾಮಯ್ಯ ಫೋಟೋ ಪ್ರದರ್ಶಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಿದ್ದರಾಮಯ್ಯನವರಿಗೆ ಶುಭ ಕೋರಿದರು.
ಪಿತೂರಿ ಮಾಡಿ ಕೆಳಗಿಳಿಸಿದರೆ ರಕ್ತಕ್ರಾಂತಿ ಆಗುತ್ತೆ: ಈ ವೇಳೆ ಸಿದ್ದರಾಮಯ್ಯನವರ ಅಭಿಮಾನಿ ಲಿಂಗರಾಜ್ ಮಾತನಾಡಿ "ಇತಿಹಾಸದಲ್ಲಿ ಸಿಎಂ ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಆಗಿ ಆಡಳಿತ ನಡೆಸುತ್ತಿರುವ ಕಾರಣ ವಿಶೇಷ ಪೂಜೆ ಸಲ್ಲಿಸಿ ವಿಜಯೋತ್ಸವ ಆಚರಿಸಿದ್ದೇವೆ. ಐದು ವರ್ಷ ಅವರೇ ಆಡಳಿತ ನಡೆಸಬೇಕು. ಪಿತೂರಿ ಮಾಡಿ ಕೆಳಗಿಳಿಸಿದರೆ ರಕ್ತ ಕ್ರಾಂತಿಯಾಗುತ್ತೆ. ಸಂಕ್ರಾಂತಿ ನಂತರ ಏನಾದರೂ ಸಿಎಂ ಸ್ಥಾನದಿಂದ ಇಳಿಸಲು ಮುಂದಾದರೆ ರಾಜ್ಯದಲ್ಲಿ ರಕ್ತ ಕ್ರಾಂತಿ ಆಗಲಿದೆ. ಸಿದ್ದು ಅಭಿಮಾನಿಗಳಿಂದ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್ಗೆ ಇದು ನಮ್ಮ ಎಚ್ಚರಿಕೆಯಾಗಿದೆ ಎಂದರು.

