3 ವರ್ಷದ ಬಳಿಕ ಮರಳಿ ಬಂದು ಮನೆಗಳ್ಳತನ, ಕೆಲಸದಾಕೆ, ಆಕೆಯ ಪತಿ ಸೆರೆ: ₹1.37 ಕೋಟಿಯ ವಸ್ತುಗಳು ವಶಕ್ಕೆ
ಉಂಡ ಮನೆಗೆ ಕನ್ನ ಹಾಕಿದ್ದ ಮನೆಗೆಲಸದವರನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

Published : January 6, 2026 at 2:34 PM IST
|Updated : January 6, 2026 at 3:01 PM IST
ಬೆಂಗಳೂರು: ಹೊಸ ವರ್ಷಾಚರಣೆಗೆ ತೆರಳಿದ್ದವರ ಮನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು, ದುಬಾರಿ ಮೌಲ್ಯದ ವಾಚ್ಗಳನ್ನು ದೋಚಿದ್ದ ಮನೆಗೆಲಸದ ಮಹಿಳೆ ಮತ್ತು ಆಕೆಯ ಪತಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳದ ಹಾಜಿರಾ ಬೇಗಂ ಹಾಗೂ ಪತಿ ಶಾಹಿರ್ ಬಂಧಿತರು. ಇವರಿಂದ 787 ಗ್ರಾಂ ಚಿನ್ನಾಭರಣ, 291 ಗ್ರಾಂ ಬೆಳ್ಳಿಯ ವಸ್ತುಗಳು, 7 ವಾಚ್ಗಳ ಸಹಿತ ಒಟ್ಟು 1.37 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಸದಾಶಿವನಗರದ ನಿವಾಸಿಯಾಗಿರುವ ಅಭಿಷೇಕ್ ಎಂಬವರ ಮನೆಯಲ್ಲಿ ಹಲವು ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದ ಹಾಜೀರಾ ಬೇಗಂ ಮದುವೆಯ ಕಾರಣ ನೀಡಿ ಕಳೆದ ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದಳು. ಆದರೆ ಈ ಬಾರಿ ಹೊಸ ವರ್ಷ ಸಮೀಪಿಸುತ್ತಿದ್ದ ಸಂದರ್ಭದಲ್ಲಿ ಪುನಃ ಬಂದಿದ್ದ ಹಾಜಿರಾ, ಕೆಲಸಕ್ಕೆ ಸೇರಲು ಇಂಗಿತ ವ್ಯಕ್ತಪಡಿಸಿದ್ದಳು. ಮೊದಲಿನಿಂದ ಪರಿಚಿತಳಲ್ಲವೇ ಎಂದು ಆಕೆಯನ್ನು ನಂಬಿದ ಮಾಲೀಕರು, ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಡಿಸೆಂಬರ್ 30ರಂದು ಅಭಿಷೇಕ್ ಅವರು ತಮ್ಮ ಕುಟುಂಬದೊಂದಿಗೆ ಹೊಸವರ್ಷದ ಸಂಭ್ರಮಾಚರಣೆಗಾಗಿ ತಮಿಳುನಾಡಿಗೆ ತೆರಳಿದ್ದರು.ಈ ಸಂದರ್ಭವನ್ನ ಬಳಸಿಕೊಂಡಿದ್ದ ಹಾಜೀರಾ, ತನ್ನ ಪತಿ ಶಾಹಿರ್ನನ್ನು ಮನೆಗೆ ಕರೆಸಿಕೊಂಡಿದ್ದಳು. ಬಳಿಕ ಮನೆಯ ಕೀ ಬಳಸಿ 1.37 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಇಬ್ಬರೂ ಪರಾರಿಯಾಗಿದ್ದರು. ಡಿಸೆಂಬರ್ 31ರಂದು ಅಭಿಷೇಕ್ ಮನೆಗೆ ವಾಪಸ್ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿತ್ತು. ತಕ್ಷಣ ಸದಾಶಿವನಗರ ಪೊಲೀಸ್ ಠಾಣೆಗೆ ಅಭಿಷೇಕ್ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ಹಾಜೀರಾ ಬೇಗಂ ಮತ್ತು ಆಕೆಯ ಪತಿ ಶಾಹೀರ್ರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1.37 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇವುಗಳನ್ನೂ ಓದಿ:

