ಬಾಂಗ್ಲಾದವರು ಇಲ್ಲಿ ಇರುವುದು ಕಂಡು ಬಂದರೆ ಗಮನಿಸಿ ಡಿಪೋರ್ಟ್ ಮಾಡ್ತೇವೆ: ಗೃಹ ಸಚಿವ ಜಿ. ಪರಮೇಶ್ವರ್
ಮನೆ ಮಾಲೀಕರು ಜನರ ದಾಖಲೆ ಪರಿಶೀಲನೆ ಮಾಡಿ ಬಾಡಿಗೆ ಕೊಡಬೇಕು. ಇಲ್ಲವಾದರೆ ಮನೆ ಮಾಲೀಕರ ಮೇಲೆ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವರು ಸೂಚಿಸಿದ್ದಾರೆ.

Published : January 10, 2026 at 4:08 PM IST
ಬೆಂಗಳೂರು: "ಬಾಂಗ್ಲಾದವರು ಇಲ್ಲಿ ಇರುವುದು ಕಂಡು ಬಂದರೆ ಗಮನಿಸಿ ಡಿಪೋರ್ಟ್ ಮಾಡ್ತೇವೆ. ದಾಖಲೆ ಪರಿಶೀಲನೆ ಮಾಡಿ ಬಾಡಿಗೆ ಕೊಡಬೇಕು. ಇಲ್ಲವಾದರೆ ಮನೆ ಮಾಲೀಕರ ಮೇಲೆ ಕ್ರಮ ವಹಿಸಲಾಗುವುದು" ಎಂದು ಗೃಹ ಸಚಿವ ಜಿ. ಪರಮೇಶ್ವರ್ ಎಚ್ಚರಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಬಾಂಗ್ಲಾ ವಲಸಿಗರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಮೊನ್ನೆಯಿಂದಲೂ ನಾವು ವಶಕ್ಕೆ ಪಡೆದು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಪ್ರತಿಯೊಂದು ಠಾಣೆಗೂ ಸೂಚನೆ ನೀಡಲಾಗಿದೆ. ಐಡೆಂಟಿಫೈ ಮಾಡಿ ಡಿಪೋರ್ಟ್ ಮಾಡಿ ಅಂತ. ಈ ವಿಚಾರದಲ್ಲಿ ಬಹಳ ಕಠಿಣ ಇದ್ದೇವೆ. ಬಾರ್ಡರ್ ಬಗ್ಗೆ ಕೇಂದ್ರ ಗಮನಹರಿಸಬೇಕು. ಗಡಿ ಪ್ರದೇಶದಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ. ಬಿಎಸ್ಎಫ್ ಮಿಲಿಟರಿ ಕಾಳಜಿ ವಹಿಸಬೇಕು. ವಲಸಿಗರು ಹಣ ಕೊಟ್ಟು ಒಳಗಡೆ ಬರ್ತಾರೆ ಅಂದರೆ, ಅಲ್ಲಿ ಎಲ್ಲೋ ಸಮಸ್ಯೆ ಆಗುತ್ತಿದೆ ಎಂದು ಅರ್ಥ. ಗಡಿಯಲ್ಲಿ ಸರಿಯಾಗಿ ಗಮನಿಸುತ್ತಿಲ್ಲ ಎಂದು ಅರ್ಥ" ಎಂದರು.
"ಕೇಂದ್ರ ರಕ್ಷಣಾ ಸಚಿವಾಲಯದ ಜೊತೆ ಚರ್ಚಿಸಬೇಕು. ಬಾರ್ಡರ್ ಕ್ರಾಸ್ ಮಾಡಿ ಹೇಗೆ ಬರ್ತಾರೆ?. ದಾಖಲೆ ಪರಿಶೀಲನೆ ಮಾಡಿ ಬಾಡಿಗೆ ಕೊಡಬೇಕು. ಇಲ್ಲವಾದರೆ ಬಾಡಿಗೆ ಕೊಟ್ಟರೆ ಮನೆ ಮಾಲಿಕರು ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ. ಕೊತ್ತನೂರು, ಲಿಂಗರಾಜಪುರದಲ್ಲಿ ಆಫ್ರಿಕನ್ಸ್ ಹೆಚ್ಚಿದ್ದಾರೆ. ಅವರನ್ನು ಗಮನಿಸಲು ಸೂಚಿಸಿದ್ದೇವೆ. ಕೇಂದ್ರದ ನಿಯಮದ ಪ್ರಕಾರ ಕ್ರಮ ಆಗಲಿದೆ ಎಂದು ಸಚಿವರು ತಿಳಿಸಿದರು.
ಪರಮೇಶ್ವರ್ ಸಿಎಂ ಆಗಲಿ ಎಂದು ಸರ್ವಧರ್ಮ ಬೆಂಬಲಿಗರ ಪೂಜೆ ವಿಚಾರವಾಗಿ ಪ್ರತಿಕ್ರಿಯಿಸಿ, "ಪ್ರತಿಯೊಬ್ಬ ರಾಜಕಾರಣಿಗೆ ಬೆಂಬಲಿಗರಿರ್ತಾರೆ. ಅವರನ್ನು ಇಷ್ಟಪಡುವವರು ಇದ್ದೇ ಇರ್ತಾರೆ. ಇನ್ನು ಎತ್ತರಕ್ಕೆ ಹೋಗಲಿ ಎಂಬ ಬಯಕೆ ಇರುತ್ತದೆ. ಅದು ನಮ್ಮ ಕ್ಷೇತ್ರ, ಸ್ವಾಭಾವಿಕವಾಗಿ ಬಯಸ್ತಾರೆ. ಅದು ತಪ್ಪು ಅಂತ ಹೇಳೋದಿಲ್ಲ" ಎಂದು ಬೆಂಬಲಿಗರನ್ನು ಸಮರ್ಥಿಸಿಕೊಂಡರು.
ಮಹಿಳೆಯರಿಗೆ ಬೆಂಗಳೂರು ಸೇಫ್ ಎಂಬ ವರದಿ ಬಗ್ಗೆ ಪ್ರತಿಕ್ರಿಯಿಸುತ್ತಾ, ಬೆಂಗಳೂರು ಟಾಪ್ ಸಿಟಿ ಎಂದು ವರದಿ ತಿಳಿಸಿದೆ. ಬೇರೆ ಬೇರೆ ಪ್ಯಾರಾಮೀಟರ್ ಸೆಟ್ ಮಾಡಿ ಅಧ್ಯಯನ. ಅದನ್ನು ವರದಿಯಲ್ಲಿ ನಿಗದಿ ಪಡಿಸಲಾಗಿದೆ. ಇನ್ಪ್ರಾಸ್ಟಕ್ಚರ್, ಟೆಕ್ನಾಲಜಿ, ಸೇಫ್ಟಿ ಎಲ್ಲ ಪರಿಗಣನೆ. ಖಂಡಿತವಾಗಿ ಇದು ಹೆಮ್ಮೆಯ ವಿಷಯ. ಇದರಲ್ಲಿ ಭಾಗಿಯಾದ ಎಲ್ಲರಿಗೆ ಧನ್ಯವಾದ. ವಿಪಕ್ಷದವರು ಟೀಕೆ ಟಿಪ್ಪಣಿ ಮಾಡ್ತಾರೆ. ನಿನ್ನೆ ಕೂಡ ಬೆಂಗಳೂರಿನ ಬಗ್ಗೆ ಟೀಕೆ ಮಾಡಿದ್ರು. ಪೊಲೀಸರ ವಿಚಾರದಲ್ಲೂ ಇದೇ ರೀತಿ ವರದಿ ಬಂದಿತ್ತು. ಈ ಬಾರಿ ಹೊಸ ವರ್ಷದಲ್ಲಿ ಎಚ್ಚರಿಕೆ ವಹಿಸಿದ್ದೆವು. ಯಾವುದೇ ಸಮಸ್ಯೆಯಾಗದಂತೆ ನೋಡಿದ್ದೆವು. ಪ್ರತಿವರ್ಷ ಆಗುತ್ತಿದ್ದ ಸಾವು ನೋವು ತಪ್ಪಿಸಿದ್ದೆವು. ನಾನು ರಾತ್ರಿ 2 ಗಂಟೆವರೆಗೆ ಕಮಾಂಡ್ ಸೆಂಟರ್ನಲ್ಲಿ ಕುಳಿತಿದ್ದೆ. ನಾವು ಬಹಳ ಎಚ್ಚರಿಯನ್ನು ವಹಿಸಿದ್ದೇವೆ ಎಂದರು.
ದ್ವೇಷ ಭಾಷಣ ಬಿಲ್ಗೆ ಅಂಕಿತ ಬೀಳದ ವಿಚಾರವಾಗಿ ಮಾತನಾಡಿ, "ಅವರ ಬಳಿಯೇ ಇಟ್ಟುಕೊಂಡಿದ್ದಾರೆ. ಸ್ವೀಕಾರವನ್ನೂ ಮಾಡಿಲ್ಲ, ತಿರಸ್ಕರಿಸಿಯೂ ಇಲ್ಲ. ಬಿಲ್ ರಿಜೆಕ್ಟ್ ಆದ ಮೇಲೆ ಸರ್ಕಾರದ ತೀರ್ಮಾನ. 22, 25 ಬಿಲ್ಗಳನ್ನು ರಾಜ್ಯಪಾಲರಿಗೆ ಕಳಿಸಿದ್ದೆವು. ಸುಮಾರು ಬಿಲ್ಗೆ ಸಹಿ ಹಾಕಿದ್ದಾರೆ. ಕೆಲವು ಮಾತ್ರ ಅವರ ಬಳಿಯೇ ಇವೆ. ದಲಿತ ಒಳ ಮೀಸಲಾತಿ ಬಿಲ್ಗೆ ವಿವರಣೆ ಕೇಳಿದ್ದಾರೆ. ಬಿಲ್ ಓದಿ ಆಮೇಲೆ ಅಂಕಿತ ಹಾಕಬಹುದು".
ಮುಂದೆ, ಬಳ್ಳಾರಿ, ಹುಬ್ಬಳ್ಳಿ ಪ್ರಕರಣ ಸಿಐಡಿಗೆ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿ, "ನಿನ್ನೆ ಸಿಎಂ ಜೊತೆ ಮಾತನಾಡಿದ್ದೆವು. ಆನಂತರ ಆದೇಶ ಹೊರಡಿಸಿದ್ದೇವೆ. ನಾವು ಏನೋ ಮುಚ್ಚಿಡ್ತಿದ್ದೇವೆ ಅಂದುಕೊಂಡಿದ್ದಾರೆ. ವಿಪಕ್ಷದವರು ಆಪಾದನೆ ಮಾಡುತ್ತಾನೆ ಇದ್ದಾರೆ. ಇದೇ ಕಾರಣಕ್ಕೆ ಸಿಐಡಿಗೆ ಕೊಡುತ್ತಿದ್ದೇವೆ. ನಿಜ ಏನು ಅಂತ ಅವರಿಗೂ ಗೊತ್ತಾಗಿದೆ. ಸಾರ್ವಜನಿಕರಿಗೂ ಅದನ್ನೇ ಹೇಳುತ್ತೇವೆ" ಎಂದರು.
ಕನ್ನಡಿಗರ ಮೇಲೆ ಮಲಯಾಳಂ ಹೇರಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಇದು ನನ್ನ ಅಭಿಪ್ರಾಯದ ಪ್ರಶ್ನೆ ಅಲ್ಲ. ಕನ್ನಡದ ವಿಚಾರವಾಗಿ ಮಾತನಾಡಬೇಕು. ಕನ್ನಡಕ್ಕೆ ತೊಂದರೆ ಆಗದ ಹಾಗೆ ನೋಡಬೇಕು. ಮಂಗಳೂರಿನಲ್ಲಿ ಬಹುತೇಕ ಕಡೆ ಮಲಯಾಳಂನಲ್ಲೇ ಮಾತನಾಡುತ್ತಾರೆ. ಕಾಸರಗೋಡಿಗೆ ಹೋದರೆ ಕನ್ನಡದಲ್ಲಿ ಮಾತನಾಡುತ್ತಾರೆ. ಅಲ್ಲಿ ಹೆಚ್ಚು ಕನ್ನಡಿಗರು ಇದ್ದಾರೆ. ಅವರಿಗೆ ನಾವು ಉತ್ತೇಜನ ಕೊಡಬೇಕು. ಕಾಸರಗೋಡು ರಾಜ್ಯಕ್ಕೆ ಸೇರಿಸೋದು ದೊಡ್ಡ ವಿಚಾರ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಭಾಷೆ ಆಧಾರದಲ್ಲೇ ರಾಜ್ಯ ವಿಂಗಡಣೆಯಾಗಿದೆ" ಎಂದರು.
ಇದನ್ನೂ ಓದಿ: ಕೋಗಿಲು ಒತ್ತುವರಿದಾರರ ಪೈಕಿ 26 ಮಂದಿಗೆ ಮನೆ ನೀಡಲು ತೀರ್ಮಾನ: ಸಚಿವ ಜಮೀರ್ ಅಹಮದ್ ಖಾನ್

