ಕೈ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ಪರಿಹಾರ ವಿತರಿಸಿದ ಸಚಿವ ಜಮೀರ್ ವಿರುದ್ಧ ಐಟಿಗೆ ದೂರು
ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಕುಟುಂಬಕ್ಕೆ 25 ಲಕ್ಷ ಪರಿಹಾರ ವಿತರಿಸಿದ ಸಚಿವ ಜಮೀರ್ ವಿರುದ್ಧ ಹಿಂದೂ ಮುಖಂಡರೊಬ್ಬರು ಐಟಿಗೆ ದೂರು ನೀಡಿದ್ದಾರೆ.

Published : January 6, 2026 at 8:40 PM IST
ಬೆಂಗಳೂರು: ಬ್ಯಾನರ್ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿಗೆ ಬಲಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಕುಟುಂಬಕ್ಕೆ ಪರಿಹಾರ ರೂಪದಲ್ಲಿ 25 ಲಕ್ಷ ರೂ. ನಗದು ವಿತರಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಕೆಯಾಗಿದೆ.
ಹಿಂದೂ ಮುಖಂಡ ತೇಜಸ್ಗೌಡ ಎಂಬುವರು ಜಮೀರ್ ಅಹಮದ್ ವಿರುದ್ಧ ಐಟಿ ಇಲಾಖೆಗೆ ದೂರು ನೀಡಿದ್ದಾರೆ. ಆರ್ಬಿಐ ನಿಯಮದ ಪ್ರಕಾರ 2 ಲಕ್ಷಕ್ಕಿಂತ ಹೆಚ್ಚು ಹಣ ನಗದು ಇಟ್ಟುಕೊಳ್ಳುವುದು ಅಥವಾ ವಹಿವಾಟು ಮಾಡುವುದು ಕಾನೂನುಬಾಹಿರ. ಒಂದು ವೇಳೆ ಹಣ ಇಟ್ಟುಕೊಂಡಿದ್ದರೆ ಸೂಕ್ತ ದಾಖಲಾತಿ ಇರಬೇಕು. ಹೀಗಾಗಿ, ಈ ಹಣದ ಮೂಲದ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ ಗೌಡ, 'ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅಮಾಯಕ ಕಾರ್ಯಕರ್ತನ ಸಾವಾಗಿತ್ತು. ಆ ಸಾವಿಗೆ ಪರಿಹಾರದ ರೂಪದಲ್ಲಿ ಸಚಿವರು 25 ಲಕ್ಷ ಹಾರ್ಡ್ ಕ್ಯಾಶ್ ಕೊಟ್ಟಿದ್ದಾರೆ. ಅದು ಆರ್ಬಿಐನ ಗೈಡ್ಲೈನ್ಸ್ನ ವೈಲೇಷನ್ ಆಗಿದೆ. 25 ಲಕ್ಷ ಅಲ್ಲ, ಆ ಕುಟುಂಬಕ್ಕೆ 25 ಕೋಟಿ ಹಣವನ್ನು ಕೊಟ್ಟರೂ ಕಡಿಮೆಯೇ. ಆದರೆ, ಅವರೊಬ್ಬ ಸರ್ಕಾರದ ಸಚಿವರಾಗಿ ಯಾವ ರೀತಿ ಹಣವನ್ನು ಕೊಡಬೇಕು ಎಂಬುದನ್ನು ಮರೆತು ಹಣವನ್ನು ಕೊಟ್ಟಿರುವುದು ಅನುಮಾನಾಸ್ಪದವಾಗಿದೆ. ಆ ಕ್ಯಾಶ್ ಅಕೌಂಟಬಲ್ ಆಗಿದೆಯಾ? ಅಥವಾ ಬ್ಲಾಕ್ ಮನಿಯೇ? ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ಗೆ ನಾನು ದೂರು ಕೊಟ್ಟಿದ್ದೇನೆ. 2 ಲಕ್ಷಕ್ಕಿಂತ ಹೆಚ್ಚು ಹಣ ನೀಡಬೇಕಾದರೆ ಬ್ಯಾಂಕಿಂಗ್ ಮೂಲಕವೇ ಅಂದರೆ, ಆರ್ಟಿಜಿಎಸ್, ನೆಫ್ಟ್, ಇಲ್ಲ ಎಂದರೆ ಆನ್ಲೈನ್ ಟ್ರಾನ್ಸಾಕ್ಷನ್ ಮೂಲಕವೇ ಕೊಡಬೇಕು. ಆದ್ರೆ ಇವರು ಹೀಗೆ 25 ಲಕ್ಷ ಹಾರ್ಡ್ ಕ್ಯಾಶ್ ಕೊಟ್ಟಿದ್ದಾರೆ ಎಂದರೆ, ಆ ಹಣದ ಮೂಲವೇನು?. ಯಾವ ರೀತಿ ಹಣವನ್ನು ಸಂಪಾದನೆ ಮಾಡಿದ್ದಾರೆ ಹಾಗೂ ಅದು ಅಕೌಂಟೆಬಲ್ ಆಗಿಲ್ಲದಿದ್ದರೆ ಸೆಕ್ಷನ್ 69 ಆ್ಯಕ್ಟ್ನ ಕಂಪ್ಲೀಟ್ ವೈಲೇಷನ್ ಆಗಿದೆ. ಹಾಗಾಗಿ, ಅದರ ತನಿಖೆಯಾಗಬೇಕು ಎಂದು ದೂರು ಕೊಟ್ಟಿದ್ದೇನೆ' ಎಂದಿದ್ದಾರೆ.
'ಆ ಕುಟುಂಬಕ್ಕೆ ರಾಜಶೇಖರ್ ಎಂಬುವವರು ಒಬ್ಬರೇ ಆಧಾರಸ್ತಂಭವಾಗಿದ್ದರು. ಆ ಕುಟುಂಬಕ್ಕೆ ಸರ್ಕಾರಿ ನೌಕರಿಯನ್ನೂ ಕೊಡಲಿ. ನಮಗೆ ಅದರಿಂದ ಏನೂ ಬೇಜಾರಿಲ್ಲ. ಆ ಕುಟುಂಬಕ್ಕೆ ಏನೇ ಪರಿಹಾರ ಕೊಟ್ಟರೂ ಕಳೆದುಕೊಂಡಿರುವ ಮಗ ಮತ್ತೆ ಹುಟ್ಟಿ ಬರಲ್ಲ. ಆದರೆ, ಹಾರ್ಡ್ ಕ್ಯಾಶ್ ಕೊಟ್ಟಿರುವುದು ಸರಿಯಾದ ಮಾರ್ಗವಲ್ಲ. ಅವರು ಸಚಿವರಾಗಿದ್ದಾರೆ. ಅವರು ಸಮಾಜಕ್ಕೆ ಏನು ಸಂದೇಶ ಕೊಡುತ್ತಾರೆ. ಬಡವರಿಗೊಂದು, ಸಾಹುಕಾರರಿಗೊಂದು ಎಂಬ ಕಾನೂನು ಇಲ್ಲ. ಇವರು ಆರ್ಬಿಐ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬಳ್ಳಾರಿ ಗಲಭೆ: ಮೃತ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಮನೆಗೆ ಭೇಟಿ ನೀಡಿದ ಡಿಸಿಎಂ

