ಹುಬ್ಬಳ್ಳಿಯಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ಹರಿಬಿಟ್ಟು ವಿಕೃತಿ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬೆಚ್ಚಿಬೀಳಿಸುವ ಕೃತ್ಯವೊಂದು ಬೆಳಕಿಗೆ ಬಂದಿದೆ. ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Published : January 11, 2026 at 2:40 PM IST
|Updated : January 11, 2026 at 2:47 PM IST
ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣವೊಂದು ನಡೆದಿದೆ. ಪೊಲೀಸರು ಈ ಕೇಸ್ನ ಬೆನ್ನುಬಿದ್ದು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ಮಹಿಳೆಯೊಂದಿಗೆ ಅಸಭ್ಯವಾಗಿ ಬಟ್ಟೆ ಬಿಚ್ಚಿ ವಿಕೃತವಾಗಿ ವರ್ತಿಸಿ, ವಿಡಿಯೋ ಮಾಡಿಕೊಂಡಿರುವುದು ಸ್ಥಳೀಯರಿಗೆ ಗೊತ್ತಾಗಿದೆ. ಇದರಿಂದ ರೋಸಿಹೋದ ಜನರು ಇಬ್ಬರು ಯುವಕರ ತಲೆ ಬೋಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಕರಣದ ಕುರಿತು ಪೊಲೀಸ್ ಕಮೀಷನರ್ ಮಾಹಿತಿ: ಈ ಕುರಿತಂತೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜ. 9ರಂದು 12ಗಂಟೆ ಸುಮಾರಿಗೆ 35 ವಯಸ್ಸಿನ ಮಹಿಳೆಯನ್ನು ಹಳೆ ಹುಬ್ಬಳ್ಳಿಯ ಹೆಗ್ಗೇರಿ ಮೈದಾನದಿಂದ ಇಬ್ಬರು ಯುವಕರು ಆಟೋದಲ್ಲಿ ಕರೆದುಕೊಂಡು ಹೋಗ್ತಾರೆ. ಮೊದಲು ಆಕೆ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮದ್ಯಪಾನ ಮಾಡಿಸಿದ್ದಾರೆ. ಜೊತೆಗೆ ಇದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ವಿಡಿಯೋದಿಂದ ಆಕೆಯನ್ನು ಪತ್ತೆ ಹಚ್ಚಿದ್ದೇವೆ. ಸಂತ್ರಸ್ತೆ ಒಂದೂವರೆ ತಿಂಗಳಿಂದ ಹುಬ್ಬಳ್ಳಿಯ ಹಲವೆಡೆ ಇರುತ್ತಿದ್ದಳು. ಆಕೆ ಯಾರು ಅಂತ ಗೊತ್ತಿಲ್ಲದಾಗ ಸುಮೊಟೊ ಪ್ರಕರಣ ದಾಖಲಿಸಿದ್ದೆವು. ನಂತರ ಆಕೆಯನ್ನು ಪತ್ತೆಹಚ್ಚಿ ದೂರು ಪಡೆದು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಅತ್ಯಾಚಾರ ಮತ್ತು ವಿಡಿಯೋ ಶೇರ್ ಮಾಡಿದ ಸಂಬಂಧ ಪ್ರಮುಖ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ಶಿವಾನಂದ, ಗಣೇಶ್, ಪ್ರದೀಪ್ ಎಂಬುವರನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿಗಳು ಆಟೋ ಡ್ರೈವಿಂಗ್ ಮತ್ತು ಗೌಂಡಿ ಕೆಲಸ ಮಾಡುತ್ತಿದ್ದರು. ಪ್ರದೀಪ್ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಹೀಗಾಗಿ ಆರೋಪಿಗಳಾದ ಶಿವಾನಂದ, ಗಣೇಶ್ ಅವರನ್ನು ಸ್ಥಳೀಯ ಮುಖಂಡರೇ ಬೈದಿದ್ದಾರೆ. ಅಲ್ಲದೆ ಅವರನ್ನು ಚೆನ್ನಾಗಿ ಹೊಡೆದಿದ್ದಾರೆ. ಈ ಕುರಿತಂತೆ ಅತ್ಯಾಚಾರ ಪ್ರಕರಣ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಸಂತ್ರಸ್ತ ಮಹಿಳೆ ಆರೋಗ್ಯವಾಗಿ ಇದ್ದಾರೆ ಎಂದು ಕಮೀಷನರ್ ಮಾಹಿತಿ ನೀಡಿದರು.
ಈ ರೀತಿಯ ಕೃತ್ಯಗಳನ್ನು ಮಾಡಿದ್ದಕ್ಕೆ ನಮ್ಮ ಸಮುದಾಯದ ಬಗ್ಗೆ ತಪ್ಪು ಭಾವನೆ ಬರುತ್ತದೆ ಎಂದು ಆರೋಪಿ ಯುವಕರನ್ನು ಅದೇ ಸಮುದಾಯದ ಹಿರಿಯರು ಹೊಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ವಶಕ್ಕೆ ಪಡೆದಿದ್ದೇವೆ. ಸೂಕ್ತ ಕಲಂನಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಕಮಿಷನರ್ ತಿಳಿಸಿದ್ದಾರೆ.
ನನ್ನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಮಾಡಿದ್ದಲ್ಲದೇ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಗಂಡ - ಹೆಂಡ್ತಿ ಜಗಳ: ಜಗಳದಲ್ಲಿ ಸಂತ್ರಸ್ತೆಗೆ ಗಂಡ ಹೊಡೆದಿರುತ್ತಾನೆ. ಆಗ ಜಗಳ ಬಿಡಿಸಲು ಬಂದ ಬೇರೆಯವರಿಗೂ ಆತ ಹೊಡೆದಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದ್ಯ ಆತ ಶಿವಮೊಗ್ಗ ಜೈಲಿನಲ್ಲಿದ್ದಾನೆ. ಆ ಬಳಿಕ ಮಹಿಳೆ ಮನೆ ಬಿಟ್ಟು ಬಂದಿದ್ದಾಳೆ. ಈ ಮೊದಲ ರಾಜ್ಯದ ಬೇರೆ ಜಿಲ್ಲಾ ಕೇಂದ್ರದಲ್ಲಿದ್ದಳು. ಬಳಿಕ ಒಂದೂವರೆ ತಿಂಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದಾಳೆ. ಸಿದ್ಧಾರೂಢ ಮಠದಲ್ಲಿ ಊಟ ಮಾಡಿಕೊಂಡು, ಹಾಗೆ ಭಿಕ್ಷೆ ಬೇಡುತ್ತ ತಿರುಗುತ್ತಿದ್ದಳು.
ಇದನ್ನೂ ಓದಿ: ಮರ್ಯಾದೆಗೇಡು ಹತ್ಯೆ ನಿಯಂತ್ರಣಕ್ಕೆ ವಿಶೇಷ ಕಾನೂನು ರಚನೆ: ಸಿಎಂ ಸಿದ್ದರಾಮಯ್ಯ

