ಕೊಪ್ಪಳ: ಗವಿಸಿದ್ದೇಶ್ವರ ಜಾತ್ರೆಯಲ್ಲಿ ಗಮನಸೆಳೆಯುತ್ತಿದೆ ಫಲ - ಪುಷ್ಪ ಪ್ರದರ್ಶನ
ಜನವರಿ 5 ರಿಂದ 14 ರವರೆಗೆ 10 ದಿನಗಳ ಕಾಲ ಗವಿಮಠದ ತೇರು ಮೈದಾನದಲ್ಲಿ ತೋಟಗಾರಿಕಾ ಫಲ - ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

Published : January 7, 2026 at 7:17 PM IST
ಕೊಪ್ಪಳ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಗವಿಮಠದ ತೇರು ಮೈದಾನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಜನವರಿ 5 ರಿಂದ 14 ರವರೆಗೆ 10 ದಿನಗಳ ಕಾಲ ತೋಟಗಾರಿಕಾ ಫಲ - ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಜಾತ್ರೆಗೆ ಬಂದವರ ಗಮನ ಸೆಳೆಯುತ್ತಿದೆ.
ಪ್ರದರ್ಶನ ಕುರಿತು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಮಾಹಿತಿ:: ಜಂಟಿ ನಿರ್ದೇಶಕರಾದ ಕೃಷ್ಣ ಉಕ್ಕುಂದ, "ಈ ವರ್ಷದ ತೋಟಗಾರಿಕೆ ಫಲಪುಷ್ಪ ಪ್ರದರ್ಶನದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೋಟಗಾರಿಕೆ ಇಲಾಖೆಯಿಂದ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ವರ್ಷ ರೈತರಿಗಾಗಿ ವಿದೇಶಿ ತರಕಾರಿ ಮತ್ತು ಹಣ್ಣುಗಳ ಪ್ರದರ್ಶನ ಏರ್ಪಡಿಸಲಾಗಿದೆ. ಮಣ್ಣು ರಹಿತ ಕೃಷಿ ಪದ್ಧತಿ (ಹೈಡ್ರೋಪೋನಿಕ್ಸ್ ಅಥವಾ ಜಲಕೃಷಿ)ಯಲ್ಲಿ ತರಕಾರಿ ಬೆಳೆಯುವ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದರು.
"ಹಾಗೇ ಫಲ ಪುಷ್ಪ ಪ್ರದರ್ಶನದಲ್ಲಿ ಈ ವರ್ಷ ದಿ. ಸಾಲುಮರದ ತಿಮ್ಮಕ್ಕ ಅವರ ಹೂವಿನ ಮಾದರಿಯನ್ನು ರಚಿಸಲಾಗಿದ್ದು, ಮಾದರಿ ಆಕರ್ಷಣೀಯವಾಗಿದೆ. ಚಿಟ್ಟೆ, ಹೃದಯಾಕಾರ, ಕರ್ನಾಟಕ ನಕ್ಷೆಯಲ್ಲಿ ದಿ. ಡಾ.ಪುನೀತ್ ರಾಜಕುಮಾರ್ ಅವರ ಮಾದರಿ, ಜಲಪಾತ, ಗೋಪುರ ಮಾದರಿ, ಟ್ರಯಾಂಗಲ್ ಮಾದರಿ, ನವಿಲು ಮಾದರಿಗಳು ಅತ್ಯಾಕರ್ಷಕವಾಗಿವೆ. 20 - 30 ವರ್ಷಗಳ ಬೋನ್ಸಾಯ್ ಮರಗಳು (ಕುಬ್ಜ ಮರಗಳು) ಕಣ್ಮನ ಸೆಳೆಯುತ್ತವೆ".

"ಜಿಲ್ಲೆಯ ರೈತರು ಬೆಳೆದ ಡ್ರಾಗ್ಯನ್ ಫ್ರುಟ್, ದಾಳಿಂಬೆ ಪ್ರದರ್ಶನ, ಇಲಾಖೆ ಯೋಜನೆಗಳ ಪೋಸ್ಟರ್ಗಳನ್ನು ಪ್ರದರ್ಶಿಸಲಾಗಿದೆ. ತೋಟಗಾರಿಕೆ ಮತ್ತು ಎಫ್ಪಿಒಗಳ ಸಂಯುಕ್ತಾಶ್ರಯದಲ್ಲಿ ನಡೆಸುತ್ತಿರುವ ಕಿಸಾನ್ ಮಾಲ್ ಮಳಿಗೆ ಸ್ಥಾಪಿಸಲಾಗಿದ್ದು, ಇಲ್ಲಿ ರೈತರಿಗೆ ಯೋಗ್ಯ ಬೆಲೆಗೆ ಕೃಷಿ ಪರಿಕರಗಳನ್ನು ಮಾರಾಟ ಮಾಡಲಾಗುತ್ತದೆ. ರೈತರು ಈ ಫಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಿ ಇಲಾಖೆಯ ಯೋಜನೆಗಳ ಮಾಹಿತಿ ಪಡೆದು ಇದರ ಸದುಪಯೋಗ ಪಡೆದುಕೊಳ್ಳಬೇಕು" ಎಂದು ಸೂಚಿಸಿದರು.

ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಚಾಲನೆ ನೀಡಿದ ಮೇಘಾಲಯ ರಾಜ್ಯಪಾಲರು: ಜನವರಿ 5ಕ್ಕೆ ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಮಹಾ ರಥೋತ್ಸವಕ್ಕೆ ಚಾಲನೆ ಸಿಕ್ಕಿದ್ದು , ಲಕ್ಷ, ಲಕ್ಷ ಭಕ್ತರ ಮಧ್ಯೆ ವೈಭವದಿಂದ ಜಾತ್ರೆ ಜರುಗಿತು. ರಥೋವತ್ಸವ ದಿನ ಗವಿಮಠದ ಆವರಣದಲ್ಲಿ ಕಾಲಿಡಲು ಆಗದಷ್ಟು ಜನಸಂದಣಿ ಜಮಾವಣೆಗೊಂಡಿತ್ತು. ಮೇಘಾಲಯ ರಾಜ್ಯಪಾಲರಾದ ಸಿ.ಹೆಚ್. ವಿಜಯಶಂಕರ ಅವರು ರಥೋತ್ಸವಕ್ಕೆ ಚಾಲನೆ ನೀಡಿದ್ದರು. ಸಂಸ್ಥಾನ ಶ್ರೀ ಗವಿಮಠದ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ತೇರು ಎಳೆಯಲಾಯಿತು.
ಉತ್ತತ್ತಿ, ಬಿಲ್ಪತ್ರೆ, ಬೇಡವೆಂದರೂ ಬಾಳೆಹಣ್ಣು, ನಾಣ್ಯಗಳನ್ನು ತೇರಿನತ್ತ ಎಸೆದು ನಿಷ್ಕಲ್ಮಶ ಭಕ್ತಿ ಮೆರೆದು ಜನ ಪುನೀತರಾದರು. ಸುಮಾರು ಒಂದು ಕಿ.ಮೀ. ದೂರದವರೆಗೆ ಸಾಗಿದ ತೇರಿಗೆ ನಿಂತಲ್ಲೇ ಭಕ್ತರು ಕೈ ಮುಗಿದರು. ಕಣ್ಣು ಹಾಯಿಸಿದಲ್ಲೆಲ್ಲ ಜನರೇ ಕಾಣಿಸುತ್ತಿದ್ದರು.
ಇದನ್ನೂ ಓದಿ: ಲಕ್ಷ ಲಕ್ಷ ಭಕ್ತರ ಮಧ್ಯೆ ಜರುಗಿದ ಗವಿಸಿದ್ದೇಶ್ವರ ಮಹಾರಥೋತ್ಸವ: ಮೇಘಾಲಯ ರಾಜ್ಯಪಾಲರಿಂದ ಚಾಲನೆ

