ರೈತನಿಗೆ ಭೂ ಪರಿಹಾರ ಕೊಡದೇ ನಿರ್ಲಕ್ಷ್ಯ: ಕಾರ್ಯಪಾಲಕ ಇಂಜಿನಿಯರ್ ಕಚೇರಿ ಜಪ್ತಿ
ರೈತನಿಗೆ ಭೂ ಪರಿಹಾರ ಕೊಡದೇ ಸತಾಯಿಸಿದ ವಿಸಿ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.

Published : November 18, 2025 at 10:22 PM IST
ಮಂಡ್ಯ: ರೈತನಿಗೆ ಭೂ ಪರಿಹಾರ ಕೊಡದೇ ಸತಾಯಿಸಿದ ವಿಸಿ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.
ಮದ್ದೂರು ತಾಲೂಕಿನ ಹೆಬ್ಬೆರಳು ಗ್ರಾಮದ ರೈತ ಜವರೇಗೌಡ ಅವರಿಗೆ ಭೂ ಪರಿಹಾರ ಕೊಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರು. ನೀರಾವರಿ ಇಲಾಖೆ ಅಧಿಕಾರಿಯ ನಿರ್ಲಕ್ಷ್ಯ ಧೋರಣೆಗೆ ಜಪ್ತಿ ಆದೇಶ ನೀಡಿ ಕೋರ್ಟ್ ಚಾಟಿ ಬೀಸಿತ್ತು. ಆದೇಶದಂತೆ ಮಂಗಳವಾರ (ನ.18) ಸರ್ಕಾರಿ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಜಪ್ತಿಯಾಗಿರುವ ನಾಲ್ಕನೇ ಸರ್ಕಾರಿ ಕಚೇರಿ ಇದಾಗಿದೆ.
ನಾಲೆಗೆ ಭೂಮಿ ಕಳೆದುಕೊಂಡಿದ್ದ ರೈತನಿಗೆ 84 ಲಕ್ಷ ರೂಪಾಯಿ ಪರಿಹಾರ ಕೊಡದೆ ವಿಳಂಬ ಮಾಡಲಾಗಿತ್ತು. ಗ್ರಾಮದ ಮುತ್ತುರಾಯನಕೆರೆಯ ಪೋಷಕ ನಾಲೆಗೆ ರೈತನ ಸುಮಾರು 1.17ಎಕರೆ ವಶ ಮಾಡಿಕೊಳ್ಳಲಾಗಿತ್ತು. 2020ರಲ್ಲಿ ಕೋರ್ಟ್ನಿಂದ ಆದೇಶ ಬಂದಿದ್ದರೂ ಪರಿಹಾರ ನೀಡದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು.
ಈ ಕುರಿತು ರೈತ ಜವರೇಗೌಡ ಮಾಧ್ಯಮದವರೊಂದಿಗೆ ಮಾತನಾಡಿ, 2020ರಲ್ಲಿ ಕೋರ್ಟ್ನಿಂದ ಪರಿಹಾರ ನೀಡಬೇಕೆಂದು ಆದೇಶ ಬಂದಿದ್ದರೂ, ಪರಿಹಾರ ಕೊಟ್ಟಿಲ್ಲ. ಅದಕ್ಕೆ ಕಚೇರಿ ಜಪ್ತಿ ಮಾಡಲಾಗುತ್ತಿದೆ. 1 ಎಕರೆ 17 ಗುಂಟೆ ಜಮೀನನ್ನು ವಶಪಡಿಸಿಕೊಂಡಿದ್ದರು. ಇದಕ್ಕಾಗಿ 84 ಲಕ್ಷ ರೂಪಾಯಿ ಪರಿಹಾರ ಬರಬೇಕಿತ್ತು. ಕಳೆದ ಐದು ವರ್ಷಗಳಿಂದ ಇಂದು, ನಾಳೆ ಎನ್ನುತ್ತ ಅಧಿಕಾರಿಗಳು ಸಬೂಬು ಹೇಳುತ್ತಿದ್ದರು ಎಂದು ಆರೋಪಿಸಿದರು.
ಇವುಗಳನ್ನೂ ಓದಿ: ಮಂಡ್ಯ: ನಾಲೆಯಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ, ಅರಣ್ಯಾಧಿಕಾರಿಗಳ ಎರಡು ದಿನಗಳ ಕಾರ್ಯಾಚರಣೆ ಯಶಸ್ವಿ
ಬಿಡದಿ ಟೌನ್ಶಿಪ್: ಒಂದಿಂಚು ಭೂಮಿ ಕೊಡಬೇಡಿ, ನಿಮ್ಮೊಂದಿಗೆ ನಾನಿದ್ದೇನೆ- ಹೆಚ್.ಡಿ.ಕುಮಾರಸ್ವಾಮಿ

