ETV Bharat / state

ಹಾವೇರಿ‌ ಜಿಲ್ಲೆಯ ಮೋಡ ಬಿತ್ತನೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ‌ಚಾಲನೆ: ಉತ್ತರ ಕರ್ನಾಟಕದಾದ್ಯಂತ ಮೋಡ ಬಿತ್ತನೆಗೆ ನಾಯಕರ ಒತ್ತಾಯ

ಇಂದಿನಿಂದ ವಿಶೇಷ ವಿಮಾನಗಳು ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡುತ್ತಿವೆ. ಈ ವಿಮಾನಗಳಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಚಿವರು ಚಾಲನೆ ನೀಡಿದರು.

DHARWAD  ಮೋಡ ಬಿತ್ತನೆ  ಮಳೆ  ಹುಬ್ಬಳ್ಳಿ ವಿಮಾನ ನಿಲ್ದಾಣ
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮೋಡ ಬಿತ್ತನೆಗೆ ಚಾಲನೆ (ETV Bharat)
author img

By ETV Bharat Karnataka Team

Published : July 6, 2026 at 4:23 PM IST

2 Min Read
Choose ETV Bharat

ಹುಬ್ಬಳ್ಳಿ: ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿದೆ. ರೈತರು ಮಳೆಗಾಗಿ ಪಾರ್ಥನೆ ಮಾಡಿದರೂ ಕೂಡ ಮಳೆಯಾಗದ ಕಾರಣ ಶಾಸಕ ಪ್ರಕಾಶ್​ ಕೋಳಿವಾಡ ನೇತೃತ್ವದಲ್ಲಿ ಹಾವೇರಿ ಜಿಲ್ಲೆಯ ಶಾಸಕರು ಮೋಡ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸಚಿವ ಸತೀಶ್​ ಜಾರಕಿಹೊಳಿ ಮತ್ತು ಮಾಜಿ ಸಚಿವ ಹೆಚ್​. ಕೆ. ಪಾಟೀಲ್​ ಅವರು ಮೋಡ ಬಿತ್ತನೆಯ ವಿಶೇಷ ವಿಮಾನಗಳಿಗೆ ಸೋಮವಾರ ಚಾಲನೆ ನೀಡಿದರು. ಇಂದಿನಿಂದ ವಿಶೇಷ ವಿಮಾನಗಳು ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡುತ್ತಿವೆ. ಹಾವೇರಿ ಜಿಲ್ಲೆಯ ಎಲ್ಲಾ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಈ ಕಾರ್ಯ ಕೈಗೊಂಡಿದ್ದಾರೆ. ಒಂದು ತಾಸಿಗೆ‌ 15 ಲಕ್ಷ ರೂ. ಖರ್ಚಾಗಲಿದೆ. ಒಟ್ಟು ಮೂರು ದಿನ ಮೋಡ ಬಿತ್ತನೆಗೆ ಪ್ಲಾನ್ ಮಾಡಲಾಗಿದೆ.

ಮೋಡ ಬಿತ್ತನೆಗೆ ಹುಬ್ಬಳ್ಳಿಯಲ್ಲಿ ಚಾಲನೆ (ETV Bharat)

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಹೆಚ್.ಕೆ. ಪಾಟೀಲ್​, "ಉತ್ತರ ಕರ್ನಾಟಕದಲ್ಲಿ ಸರ್ಕಾರ ಕೂಡಲೇ ಮೋಡ ಬಿತ್ತನೆ ಮಾಡಬೇಕು. ಸರ್ಕಾರ ಕೂಡಾ ಈ ದಿಸೆಯಲ್ಲಿ ಪ್ರಯತ್ನ ಮಾಡಬೇಕು. ಉತ್ತರ ಕರ್ನಾಟಕ ಶಾಸಕರ ಪರವಾಗಿ ಮನವಿ ಮಾಡುತ್ತಿದ್ದೇನೆ. ಯಾಕೆ ಸರ್ಕಾರ ವಿಳಂಬ ಮಾಡುತ್ತಿದೆ?. ಅಧಿಕಾರಿಗಳ ಮಾತು ಕೇಳಿ ಹಿಂದೇಟು ಹಾಕಬಾರದು. ನೀವು ಅಧಿಕಾರಿಗಳ ಮಾತು ಕೇಳಬೇಡಿ, ವಿಜ್ಞಾನಿಗಳ ಮಾತು ಕೇಳಿ. ಸದ್ಯ ಮೋಡಗಳು ಇವೆ. ಕೂಡಲೇ ಮೋಡ ಬಿತ್ತನೆ ಆರಂಭಿಸಬೇಕು. ಈ ಬಗ್ಗೆ ಸಿಎಂ ಭೇಟಿ ಮಾಡೋದಾದರೂ ಮಾಡುತ್ತೇವೆ. ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.

ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, "ಹಾವೇರಿಯಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಲಾಗಿದೆ. ಮೋಡ ಬಿತ್ತನೆ ಬಗ್ಗೆ ನಾನು ಕೂಡಾ ಸಿಎಂ ಗಮನಕ್ಕೆ ತರುತ್ತೇನೆ. ಮೋಡ ಬಿತ್ತನೆ ಸರ್ಕಾರಿ ಕಾರ್ಯಕ್ರಮವಾಗಬೇಕು. ಈ ಬಗ್ಗೆ ಸಿಎಂಗೆ ಆಗ್ರಹ ಮಾಡುತ್ತೇವೆ. ಮೋಡವಿದ್ದಾಗಲೇ ಮೋಡ ಬಿತ್ತನೆ ಮಾಡಬೇಕು. ಹೀಗಾಗಿ ಮೋಡ ಬಿತ್ತನೆ ತಡವಾಗಿದೆ. ಇನ್ನು ಮುಂದೆ ನಮ್ಮ ಜಿಲ್ಲೆಯಲ್ಲೂ ಮೋಡ ಬಿತ್ತನೆ ಬಗ್ಗೆ ಚಿಂತನೆ ಮಾಡಲಾಗುವುದು" ಎಂದು ಹೇಳಿದರು.

DHARWAD  ಮೋಡ ಬಿತ್ತನೆ  ಮಳೆ  ಹುಬ್ಬಳ್ಳಿ ವಿಮಾನ ನಿಲ್ದಾಣ
ಮೋಡ ಬಿತ್ತನೆ (ETV Bharat)

ಶಾಸಕ ಪ್ರಕಾಶ್​ ಕೋಳಿವಾಡ ಮಾತನಾಡಿ, "ಮೋಡ ಬಿತ್ತನೆ ವಿಮಾನ ಈ ತಿಂಗಳು ಹುಬ್ಬಳ್ಳಿಯಲ್ಲಿ ಇರುತ್ತದೆ. ತೇವಾಂಶ ಇರುವ ಮೋಡುಗಳು ಇದ್ದಾಗ ಮೋಡ ಬಿತ್ತನೆ ಮಾಡಲಾಗುತ್ತದೆ. ಸದ್ಯ ಮೂರು ದಿನಗಳ ಕಾಲ ಮಾಡುತ್ತೇವೆ. ಹಾವೇರಿ ಜಿಲ್ಲೆಯ ಶಾಸಕರು ಪ್ರಯತ್ನ ಮಾಡಿದ್ದೇವೆ. ಒಂದು ಗಂಟೆಗೆ ₹15 ಲಕ್ಷ ಖರ್ಚು ಬರುತ್ತದೆ" ಎಂದು ತಿಳಿಸಿದರು.

ಶಾಸಕ ಎನ್​. ಹೆಚ್. ಕೋನರೆಡ್ಡಿ ಮಾತನಾಡಿ, "ಧಾರವಾಡ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಬೇಕು. ಈ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇವೆ. ಧಾರವಾಡ ಜಿಲ್ಲೆಯ ಶಾಸಕರು ಆಗ್ರಹಿಸಿದ್ದೇವೆ. ರೈತರ ನೆರವಿಗೆ ಹೋಗಲು ಧಾರವಾಡ ಜಿಲ್ಲೆಯ ಶಾಸಕರು ಸಿದ್ಧರಿದ್ದೇವೆ. ಸರ್ಕಾರ ಮಾಡದೇ ಇದ್ದರೆ ವೈಯಕ್ತಿಕವಾಗಿ ಮಾಡುತ್ತೇವೆ. ಮೋಡ ಬಿತ್ತನೆಯಿಂದ ನೂರಕ್ಕೆ ನೂರು ಮಳೆಯಾಗುತ್ತದೆ" ಎಂದರು.

ಇದನ್ನೂ ಓದಿ: ಬಲಗೊಳ್ಳುತ್ತಿದೆ ಮುಂಗಾರು, ಭಾರತದಾದ್ಯಂತ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ