ETV Bharat / state

ಚಾಮರಾಜನಗರ: ಗ್ರಾಮಸ್ಥರ ನಿದ್ದಗೆಡಿಸಿದ್ದ ತಾಯಿ ಹುಲಿ ಸೆರೆ; ತಾಯಿ ಮೂಲಕ ಮರಿಗಳ ಸೆರೆಗೆ ಪ್ಲ್ಯಾನ್​

5 ಹುಲಿಗಳ ಪೈಕಿ ತಾಯಿ ಹುಲಿ ಸೆರೆಯಾಗಿದ್ದು, ಮಿಕ್ಕ 4 ಮರಿ ಹುಲಿಗಳ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ.

Captured Mother Tiger
ಸೆರೆಯಾದ ತಾಯಿ ಹುಲಿ (ETV Bharat)
author img

By ETV Bharat Karnataka Team

Published : January 10, 2026 at 8:10 AM IST

2 Min Read
Choose ETV Bharat

ಚಾಮರಾಜನಗರ: ಚಾಮರಾಜನಗರ ತಾಲೂಕಿನ ನಂಜೇದೇವನಪುರ ಸುತ್ತಮುತ್ತಲು ತಾಯಿ ಹುಲಿ ಜೊತೆ ನಾಲ್ಕು ಮರಿಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಇದೀಗ ತಾಯಿ ಹುಲಿಯನ್ನು ಶುಕ್ರವಾರ ಬೆಳಗ್ಗೆ ಸೆರೆಹಿಡಿಯಲಾಗಿದೆ.

ನಂಜೇದೇವನಪುರದಲ್ಲಿ ಆಪರೇಷನ್ 5 ಟೈಗರ್ಸ್​ನ ಮೊದಲ‌ ಹಂತ ಯಶ ಕಂಡಿದ್ದು, ತುಮಕೂರು ಮಾದರಿ ಬೋನ್​ ಅಳವಡಿಸಿ ಹಸುವನ್ನು ಕಟ್ಟಲಾಗಿತ್ತು. ಹಸು ಬೇಟೆಗೆ ಬಂದ ತಾಯಿ ಹುಲಿ ಬೋನಿನಲ್ಲಿ ಸೆರೆಯಾಗಿದೆ. ಸೆರೆಯಾದ ತಾಯಿ ಹುಲಿಗೆ ಅಂದಾಜು 8 ವರ್ಷಗಳಾಗಿದೆ.

ಗ್ರಾಮಸ್ಥರ ನಿದ್ದಗೆಡಿಸಿದ್ದ ತಾಯಿ ಹುಲಿ ಸೆರೆ (ETV Bharat)

ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು ಹುಲಿ ಓಡಾಟ: ರೈತ ಕುಮಾರಸ್ವಾಮಿ ಎಂಬವರ ಜಮೀನಿನಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಹುಲಿ ಸಂಚಾರ ದೃಶ್ಯ ಸೆರೆಯಾಗಿತ್ತು. ಬಳಿಕ, ಬಾಳೆ ತೋಟವೊಂದರಲ್ಲಿ ಅಳವಡಿಸಿದ್ದ ತುಮಕೂರು ಮಾದರಿ ಬೋನಿನಲ್ಲಿ ತಾಯಿ ಹುಲಿ ಸೆರೆಯಾಗುವ ಮೂಲಕ ಆಪರೇಷನ್ 5 ಟೈಗರ್ಸ್ ಮೊದಲ ಹಂತದಲ್ಲಿ ಯಶ ಕಂಡಿದೆ.

ತಾಯಿ ಮೂಲಕ ಮಕ್ಕಳ ಸೆರೆಗೆ ಪ್ಲಾನ್: 5 ಹುಲಿಗಳ ಪೈಕಿ ತಾಯಿ ಹುಲಿ ಸೆರೆಯಾಗಿದ್ದು, ಮಿಕ್ಕ 4 ಮರಿ ಹುಲಿಗಳ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ.

ಸೆರೆ ಸಿಕ್ಕ ತಾಯಿ ಹುಲಿಗೆ ಪಶು ವೈದ್ಯರಿಂದ ಅರವಳಿಕೆ ಮದ್ದು ನೀಡಿ ಅದರ ಆರೋಗ್ಯದ ಸ್ಥಿತಿಗತಿ ಪರಿಶೀಲನೆ ಮಾಡಲಾಗಿದೆ. ತುಮಕೂರು ಮಾದರಿ ಕೇಜ್​ನಿಂದ ನಾರ್ಮಲ್ ಕೇಜ್​ಗೆ ಹುಲಿಯನ್ನು ಸ್ಥಳಾಂತರಿಸಲಾಗಿದೆ. ಇನ್ನು ಅದೇ ಬೋನಿನಲ್ಲಿ ಹುಲಿಯನ್ನು ಇರಿಸಿ ಉಳಿದ ನಾಲ್ಕು ಮರಿ ಹುಲಿಗಳಿಗಾಗಿ ಬಿಆರ್​ಟಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ.

ಈಗಾಗಲೇ ಥರ್ಮಲ್ ಡ್ರೋನ್ ಕ್ಯಾಮರಾ ತರಿಸಿಕೊಂಡಿರುವ ಅರಣ್ಯ ಸಿಬ್ಬಂದಿ ರಾತ್ರಿಯಿಡೀ ನಾಲ್ಕು ಮರಿ ಹುಲಿಗಳಿಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನಂಜೇದೇವನಪುರ, ವೀರನಪುರ ಸುತ್ತಮುತ್ತಿನ ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಆದೇಶಿಸಿದ್ದರು.

ಕಳೆದೊಂದು ತಿಂಗಳಿನಿಂದ ಬಿಟ್ಟು ಬಿಡದೆ ಮೂರ್ನಾಲ್ಕು ಗ್ರಾಮಸ್ಥರ ನಿದ್ದೆಗೆಡಿಸಿದ್ದ 5 ಹುಲಿಗಳ ಪೈಕಿ ತಾಯಿ ಹುಲಿ ಅರಣ್ಯ ಸಿಬ್ಬಂದಿ ಇರಿಸಿದ್ದ ಕೇಜ್​ನಲ್ಲಿ ಲಾಕ್ ಆಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಈಗ ಸೆರೆ ಸಿಕ್ಕಿದ್ದು ಕೇವಲ ತಾಯಿ ಹುಲಿ ಮಾತ್ರ ಇನ್ನು, 4 ಮರಿ ಹುಲಿಗಳ ಸೆರೆಗಾಗಿ ಆಪರೇಷನ್ ಚಾಲ್ತಿಯಲ್ಲಿದೆ. ಆದಷ್ಟು ಶೀಘ್ರ ಮರಿಗಳನ್ನೂ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಕಳೇಬರ ಪತ್ತೆ

ಬಳ್ಳೂರು ಹುಂಡಿ, ನಾಗಣಪುರ ಗ್ರಾಮದಲ್ಲಿ ಐದು ಆನೆಗಳ ಪ್ರತ್ಯಕ್ಷ: ನಂಜನಗೂಡು ತಾಲೂಕಿನ ನಾಗಣಪುರ ಮತ್ತು ಬಳ್ಳೂರು ಹುಂಡಿ ಗ್ರಾಮದಲ್ಲಿ ಐದು ಆನೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಹೆಡಿಯಾಲ ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಬಳ್ಳೂರುಹುಂಡಿ ಗ್ರಾಮ ಹಾಗೂ ನಾಗಣಪುರ ಗ್ರಾಮದ ಜಮೀನಿನ ಕಡೆ ಲಗ್ಗೆ ಇಟ್ಟ ಆನೆಗಳು, ಬೆಳೆಗಳನ್ನು ತಿಂದು ನಾಶ ಪಡಿಸುತ್ತಿರುವುದನ್ನು ನೋಡಿದ ರೈತರು, ಓಡಿಸಲು ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಬಳಿಕ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಹೆಡಿಯಾಲ ಹಾಗೂ ಓಂಕಾರ ಅರಣ್ಯ ವಲಯದ ಸಿಬ್ಬಂದಿ ಆಗಮಿಸಿ ಆನೆಗಳನ್ನು ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಆನೆಗಳನ್ನು ಒಂದು ಕಡೆ ಓಡಿಸಿದರೆ, ಮತ್ತೊಂದು ಜಮೀನಿನ ಕಡೆಗೆ ಹೋಗುತ್ತಿದ್ದು, ಸಂಜೆ ವೇಳೆಗೆ ಕಾಡಿನತ್ತ ಮರಳಲಿವೆ ಎನ್ನುತ್ತಾರೆ ಅರಣ್ಯ ಸಿಬ್ಬಂದಿ.

ಈ ಕುರಿತು "ಈಟಿವಿ ಭಾರತ್" ಜೊತೆ ದೂರವಾಣಿಯಲ್ಲಿ ಮಾತನಾಡಿದ ಹೆಡಿಯಾಲ ಎಸಿಎಫ್ ಪರಮೇಶ್ ಅವರು, ನಂಜನಗೂಡಿನ ಬಳ್ಳೂರುಹುಂಡಿ, ನಾಗಣಪುರ ಗ್ರಾಮದ ಜಮೀನುಗಳಲ್ಲಿ ಐದು ಆನೆಗಳು ಪ್ರತ್ಯಕ್ಷವಾಗಿದ್ದು, ಇವುಗಳನ್ನು ಕಾಡಿಗೆ ಕಳುಹಿಸಲು ಸಿಬ್ಬಂದಿ ಬಂದಿದ್ದಾರೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಮೈಸೂರು: ಆನೆ ದಾಳಿಗೆ 5 ಬೈಕ್​ಗಳು ಜಖಂ - VIDEO