ಕೇಂದ್ರದ ಆಯೋಗವೇ ಗೃಹಲಕ್ಷ್ಮಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ: ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹರ್ಷ
ಎನ್ಡಿಎ ಒಕ್ಕೂಟ, ಬಿಜೆಪಿಯವರು ಇಡೀ ದೇಶದಲ್ಲಿ ಕರ್ನಾಟಕ ಯೋಜನೆಗಳ ಮಾಡಲ್ನ್ನು ಉಪಯೋಗಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವೆ ವಿಪಕ್ಷಗಳನ್ನು ಟೀಕಿಸಿದರು.

Published : July 9, 2026 at 1:16 PM IST
ಬೆಳಗಾವಿ: "ಗೃಹಲಕ್ಷ್ಮಿ ಯೋಜನೆ ವಿಚಾರದಲ್ಲಿ 5 ಸಾವಿರ ಕೋಟಿ ಅಂತೆಲ್ಲಾ ಬಿಜೆಪಿಯವರು ಬಹಳಷ್ಟು ಆರೋಪ ಮಾಡಿದ್ದರು. ಆದರೆ, ಕೇಂದ್ರದ ಆಯೋಗವೇ ನಮ್ಮ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಮಹಿಳೆಯರ ಅರ್ಥಿಕ ಸಬಲೀಕರಣಕ್ಕೆ ಇದು ಕೊಡುಗೆ ಆಗಿದೆ ಎಂದು ಕೇಂದ್ರದಿಂದ ಆಗಮಿಸಿದ್ದ ನಿಯೋಗ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ" ಎಂದು ಮಾಜಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿದರು.
ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಇಡೀ ವಿಶ್ವದಲ್ಲೇ ಜಾರಿಗೆ ತಂದ ಮಾದರಿ ಕಾರ್ಯಕ್ರಮ ಆಗಿದೆ. ನಾವು ಗೃಹಲಕ್ಷ್ಮಿ ಜಾರಿಗೆ ತಂದ ಮೇಲೆ ಎನ್ಡಿಎ ಒಕ್ಕೂಟ, ಬಿಜೆಪಿಯವರು ಇಡೀ ದೇಶದಲ್ಲಿ ಕರ್ನಾಟಕ ಮಾಡೆಲ್ಅನ್ನು ಉಪಯೋಗಿಸಿಕೊಂಡಿದ್ದಾರೆ. ಕರ್ನಾಟಕ ಮಾಡೆಲ್ಅನ್ನು ಬೇರೆ ಬೇರೆ ರಾಜ್ಯಗಳು ಕಾಪಿ ಮಾಡಿಕೊಂಡಿರುವುದು ಜಗಜ್ಜಾಹೀರು" ಎಂದು ಟೀಕಿಸಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ, "ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ. 11 ಜನ ಕಾಂಗ್ರೆಸ್ ಶಾಸಕರು ಗೆದ್ದು ಹೋಗಿದ್ದೇವೆ. ಇನ್ನೂ ಎರಡು ಸಚಿವ ಸ್ಥಾನ ಕೊಡುತ್ತಾರೆ ಎನ್ನುವ ಭರವಸೆಯಿದೆ" ಎಂದ ಅವರು, ನಿಮಗೆ ಯಾವಾಗ ಸಿಹಿ ಸುದ್ದಿ ಸಿಗುತ್ತದೆ ಎಂಬ ಮಾಧ್ಯಮಗಳ ಪ್ರಶ್ನೆಗೆ "ನೀವೇ ಮುಖ್ಯಮಂತ್ರಿಗಳನ್ನು ಪ್ರಶ್ನೆ ಮಾಡಿ" ಎಂದು ಉತ್ತರಿಸಿದರು.
"ಬಿಜೆಪಿ ಆರೋಪಗಳಲ್ಲಿ ಸತ್ಯಾಂಶವಿಲ್ಲ. ನಮ್ಮ ಸಿಎಂ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುತ್ತಾರೆ ಎನ್ನುವ ನಿರೀಕ್ಷೆಯಿದೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಆಗಬೇಕು. ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿ. ಗೋವಾ, ಮುಂಬೈಗೆ ಹತ್ತಿರವಿದೆ. ಹೀಗಾಗಿ ಕೈಗಾರಿಕೋದ್ಯಮಿಗಳು ಬರಬೇಕು. ಇಲ್ಲಿ ಉದ್ಯೋಗ ಕಲ್ಪಿಸುವ ಕೆಲಸ ಆಗಬೇಕಿದೆ. ಕೈಗಾರಿಕೆ ಬಂದರೆ ಬೆಳಗಾವಿ ಬೆಳೆಯುತ್ತದೆ" ಎಂದರು.
"ಬೆಳಗಾವಿ ಜಿಲ್ಲೆ ವಿಭಜನೆ ಈಗ ಅಪ್ರಸ್ತುತ. ಮುಂದಿನ ದಿನಗಳಲ್ಲಿ ಮತ್ತೆ ವಿಭಜನೆ ಬಗ್ಗೆ ಸಿಎಂ ಜೊತೆಗೆ ಮಾತಾಡುತ್ತೇವೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯ ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಅವರು ನಿರೀಕ್ಷೆ ಹುಸಿ ಮಾಡುವುದಿಲ್ಲ ಎಂಬ ವಿಶ್ವಾಸ ಇದೆ" ಎಂದು ಸಿಎಂ ಅವರನ್ನು ಮಾಜಿ ಸಚಿವೆ ಸಮರ್ಥಿಸಿಕೊಂಡರು.
ಇದನ್ನೂ ಓದಿ: ಸಿಎಂ ಡಿಕೆಶಿಗೆ ಬೆಳಗಾವಿಯಲ್ಲಿ ಅದ್ಧೂರಿ ಸ್ವಾಗತ: ಮುಗಿಲು ಮುಟ್ಟಿದ ಡಿಕೆ, ಡಿಕೆ ಜಯಘೋಷ

