ಲಂಚ ಪ್ರಕರಣದಲ್ಲಿ ಬೆಂಗಳೂರಿನ ಸಿಪಿಆರ್ಐ ಜಂಟಿ ನಿರ್ದೇಶಕ ಸೇರಿ ಇಬ್ಬರನ್ನ ಬಂಧಿಸಿದ ಸಿಬಿಐ: 3.59 ಕೋಟಿ ರೂ.ನಗದು, ವಿದೇಶಿ ಕರೆನ್ಸಿ ಜಪ್ತಿ
ಸಿಬಿಐ ಅಧಿಕಾರಿಗಳು ಶುಕ್ರವಾರ ಬೆಂಗಳೂರಿನಲ್ಲಿ 9.5 ಲಕ್ಷ ರೂ. ಲಂಚದ ವಹಿವಾಟು ನಡೆಸುತ್ತಿದ್ದಾಗ ಜಂಟಿ ನಿರ್ದೇಶಕ ರಾಜಾರಾಮ್ ಮೋಹನರಾವ್ ಅವರನ್ನು ಬಂಧಿಸಿದ್ದಾರೆ.

Published : January 9, 2026 at 10:52 PM IST
ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನ ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಪಿಆರ್ಐ) ನ ಜಂಟಿ ನಿರ್ದೇಶಕ ರಾಜಾರಾಮ್ ಮೋಹನರಾವ್ ಚೆನ್ನು ಮತ್ತು ಸುಧೀರ್ ಗ್ರೂಪ್ ಆಫ್ ಕಂಪನಿಗಳ ನಿರ್ದೇಶಕ ಅತುಲ್ ಖನ್ನಾ ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ. ದಾಳಿ ವೇಳೆ 3.59 ಕೋಟಿ ರೂ. ನಗದು, 4 ಲಕ್ಷ ರೂ.ಗೂ ಅಧಿಕ ಮೌಲ್ಯದ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ.
ಸುಧೀರ್ ಗ್ರೂಪ್ ಆಫ್ ಕಂಪನಿಗಳು ಉತ್ಪಾದಿಸುವ ವಿದ್ಯುತ್ ಉಪಕರಣಗಳಿಗೆ ಅನುಕೂಲಕರ ಪರೀಕ್ಷಾ ವರದಿಗಳನ್ನು ನೀಡುವ ಸಲುವಾಗಿ ಲಂಚ ಕೇಳಿದ ಆರೋಪದ ಮೇಲೆ ಜಂಟಿ ನಿರ್ದೇಶಕರು ಮತ್ತು ಇತರ ಖಾಸಗಿ ವ್ಯಕ್ತಿಗಳ ವಿರುದ್ಧ ಗುರುವಾರ ಪ್ರಕರಣ ದಾಖಲಿಸಲಾಗಿತ್ತು. ಎಫ್ಐಆರ್ ದಾಖಲಾದ ನಂತರ, ಸಿಬಿಐ ಅಧಿಕಾರಿಗಳು ಶುಕ್ರವಾರ ಬೆಂಗಳೂರಿನಲ್ಲಿ 9.5 ಲಕ್ಷ ರೂ. ಲಂಚದ ವಹಿವಾಟು ನಡೆಸುತ್ತಿದ್ದಾಗ ಜಂಟಿ ನಿರ್ದೇಶಕ ರಾಜಾರಾಮ್ ಮೋಹನರಾವ್ ಅವರನ್ನು ಬಂಧಿಸಿದ್ದಾರೆ.
CBI Apprehends Joint Director of Central Power Research Institute, Bengaluru in a Bribery Case of Rs. 9.5 Lakh pic.twitter.com/2mlK77pdNF
— Central Bureau of Investigation (India) (@CBIHeadquarters) January 9, 2026
ರಾಜಾರಾಮ್ ನಿವಾಸದಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ, ಸಿಬಿಐ ಅಧಿಕಾರಿಗಳು 3.59 ಕೋಟಿ ರೂ. ನಗದು, 4,05,858 ರೂ. ಮೌಲ್ಯದ ವಿದೇಶಿ ಕರೆನ್ಸಿಗಳು, ಚಿನ್ನಾಭರಣಗಳು, ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಅಮೆರಿಕನ್ ಡಾಲರ್, ಹಾಂಕಾಂಗ್ ಡಾಲರ್, ಸಿಂಗಾಪುರ್ ಡಾಲರ್, ಇಂಡೋನೇಷಿಯನ್ ರುಪಿಯಾ, ಮಲೇಷಿಯನ್ ರಿಂಗಿಟ್, ಯುರೋ, ಯುವಾನ್, ಸ್ವೀಡಿಷ್ ಕ್ರೋನಾ ಮತ್ತು ಯುಎಇ ದಿರ್ಹಮ್ಗಳು ಸೇರಿವೆ. ದಾಳಿಗಳ ಪರಿಣಾಮವಾಗಿ ಇಲ್ಲಿಯವರೆಗೆ ಸುಮಾರು 3.76 ಕೋಟಿ ರೂ.ಗಳಷ್ಟು (ವಿದೇಶಿ ಕರೆನ್ಸಿ ಸೇರಿದಂತೆ) ನಗದು ಪತ್ತೆಯಾಗಿದೆ. ಶೋಧ ಕಾರ್ಯ ಮುಂದುವರೆದಿದೆ ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ:ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ: ಘಟನೆ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿದ ಸರ್ಕಾರ

