ಮಾಜಿ ಸಚಿವ ಜಮೀರ್ ಅಹ್ಮದ್, ಮೊಹಮ್ಮದ್ ಸಿರಾಜ್ ಆಡಿಯೋ ವೈರಲ್; ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು
ಜಮೀರ್ ಅಹ್ಮದ್ ಹಾಗೂ ಮೊಹಮ್ಮದ್ ಸಿರಾಜ್ ಅವರ ಆಡಿಯೋ ವೈರಲ್ ಆಗಿರುವ ಕುರಿತು ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಸಿರಾಜ್ ಅವರು ದೂರು ದಾಖಲಿಸಿದ್ದಾರೆ.

Published : June 2, 2026 at 8:07 AM IST
ದಾವಣಗೆರೆ: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಮೊಹಮ್ಮದ್ ಸಿರಾಜ್ ಅವರು ಸಂಭಾಷಣೆ ಮಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ವಿಚಾರವಾಗಿ ಆಡಿಯೋ ವೈರಲ್ ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಸಿರಾಜ್ ಅವರು ದೂರು ದಾಖಲಿಸಿದ್ದಾರೆ.
ವಿದ್ಯಾನಗರದಲ್ಲಿ ಇರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ಮೊಹಮ್ಮದ್ ಸಿರಾಜ್ ಅವರು ಡಿವೈಎಸ್ಪಿ ಬಂಕಾಳಿ ನಾಗಪ್ಪ ಅವರಿಗೆ ಸೈಬರ್ ದೂರು ನೀಡಿದರು. ಬೆಂಬಲಿಗರ ಜೊತೆ ಆಗಮಿಸಿ ದೂರು ನೀಡಿದ ಸಿರಾಜ್ ಅವರು ಷಡ್ಯಂತ್ರ ನಡೆಸಿದವರ ವಿರುದ್ದ ಕ್ರಮಕ್ಕೆ ಆಗ್ರಹಿಸಿದರು.
ದೂರು ದಾಖಲು ಮಾಡಿದ ಬಳಿಕ ಮಾತನಾಡಿದ ಸಿರಾಜ್ ಅವರು, 'ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ, ನನ್ನ ಮಾನಕ್ಕೆ ಹಾನಿ ಆಗಿದೆ ಎಂದು ಆರೋಪ ಮಾಡಿದರು. ಡಿವೈಎಸ್ಪಿ ಬಂಕಾಳಿ ನಾಗಪ್ಪ ಅವರಿಗೆ ದೂರು ನೀಡಿ ಕ್ರಮಕ್ಕೆ ಮನವಿ ಮಾಡಲಾಗಿದೆ. ಈ ರೀತಿ ಷಡ್ಯಂತ್ರ ಮಾಡಿದ್ದಾರೆ. ನಾವು ಯಾವುದೇ ರೀತಿಯಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಜಮೀರ್ ಅಹ್ಮದ್ ಪಕ್ಷ ಸಂಘಟನೆ ವಿಚಾರ ಮಾತ್ರ ಚರ್ಚೆ ಮಾಡಿದ್ದಾರೆ. ಈ ರೀತಿ ಯಾವತ್ತೂ ಅವರು ಮಾತನಾಡಿಲ್ಲ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ ದೂರು ನೀಡಿರುವುದು ನನ್ನ ಗಮನಕ್ಕೆ ಇಲ್ಲ. ಶಾಸಕರ ಹೇಳಿಕೆ ಗಮನಿಸಿದೆ. ಅವರು ಸಾಬೀತು ಮಾಡಬೇಕು. ಅದನ್ನು ಬಹಿರಂಗಪಡಿಸಲಿ' ಎಂದು ಒತ್ತಾಯಿಸಿದರು.
'ಘಟನೆ ನಂತರ ಜಮೀರ್ ಅಹ್ಮದ್ ಅವರು ನನಗೆ ಫೋನ್ ಮಾಡಿಲ್ಲ, ನಾನು ಅವರಿಗೆ ಕರೆ ಮಾಡಿಲ್ಲ. ಇಲ್ಲಿವರೆಗೂ ಏನು ಪಕ್ಷ ವಿರೋಧ ಮಾಡಿದ್ದೇವೆ ಎಂದು ಗೊತ್ತಾಗುತ್ತಿಲ್ಲ. ವಕ್ಫ್ ಬೋರ್ಡ್ನಲ್ಲಿ ಅವ್ಯವಹಾರ ಮಾಡಿ ಇಲ್ಲಿ ಹಣ ಬಳಕೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಭ್ರಷ್ಟಾಚಾರ ಮಾಡಿದ್ದು ಸಾಬೀತು ಮಾಡಿದರೆ ನಾನು ಸಾರ್ವಜನಿಕ ಜೀವನದಿಂದ ದೂರ ಇರುವೆ. ದಾಖಲೆ ಸಮೇತ ತೋರಿಸಬೇಕು, ಸಾಬೀತು ಪಡಿಸದಿದ್ದರೆ ನಾನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಭ್ರಷ್ಟಾಚಾರದ ಆರೋಪ ಇತ್ಯರ್ಥ ಆಗೋವರೆಗೂ ನಾನು ಬಿಡುವುದಿಲ್ಲ' ಎಂದು ಕಿಡಿಕಾರಿದರು.

'ಅದು ಎಲ್ಲಿಗೆ ಹೋಗಿ ಮುಟ್ಟತ್ತೊ ಮುಟ್ಟಲಿ. ನಾನು ಹೋರಾಟಕ್ಕೆ ಸಿದ್ದನಿದ್ದೇನೆ. ಈ ರೀತಿ ಮಾತು ಬಂದರೆ ನಾಳೆ ನಾವು ಅದೇ ರೀತಿ ಮಾತನಾಡಬೇಕಾಗುತ್ತದೆ. ಸಚಿವ ಜಮೀರ್ ತಲೆದಂಡದ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು. ಜಮೀರ್ ಅಹ್ಮದ್ ಜೊತೆ ಇಡೀ ಸಮಾಜ ಇಂದು ಇರುತ್ತದೆ, ನಾಳೆಯೂ ಇರುತ್ತದೆ. ಜಮೀರ್ ಅಹ್ಮದ್ ಮಾಸ್ ಲೀಡರ್, ಅವರು ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ' ಎಂದು ಸಿರಾಜ್ ಹೇಳಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ₹7.64 ಲಕ್ಷ ಕೋಟಿ ಸಾಲ ಇದೆ, ಸಿದ್ದರಾಮಯ್ಯ ಡಿಕೆಶಿಗೆ ಹಳೇ ಲಾರಿ ಬಿಟ್ಟೋಗಿದ್ದಾರೆ: ಆರ್. ಅಶೋಕ್

