ETV Bharat / state

ಬಸ್​ನ ಡೀಸೆಲ್ ಟ್ಯಾಂಕ್​ಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಬೆಂಕಿ ಹೊತ್ತಿಕೊಂಡಿತು: ಖಾಸಗಿ ಬಸ್ ಚಾಲಕ

ಹಿರಿಯೂರು ಬಳಿ ಸಂಭವಿಸಿದ ಖಾಸಗಿ ಬಸ್​ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಲಕ ಭೀಕರ ಘಟನೆಯ ಬಗ್ಗೆ ಮಾತನಾಡಿದ್ದಾರೆ.

Accident scene and bus driver
ಅಪಘಾತದ ಸ್ಥಳ ಹಾಗೂ ಖಾಸಗಿ ಬಸ್​ ಚಾಲಕ (ETV Bharat)
author img

By ETV Bharat Karnataka Team

Published : December 25, 2025 at 12:33 PM IST

2 Min Read
Choose ETV Bharat

ಚಿತ್ರದುರ್ಗ: ''ಲಾರಿ ಚಾಲಕನು ನಮ್ಮ‌ ಬಸ್​ನ ಡೀಸೆಲ್‌ ಟ್ಯಾಂಕ್​ ಬಳಿ ಡಿಕ್ಕಿ ಹೊಡೆಸಿದ ಪರಿಣಾಮ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿತು'' ಎಂದು ಜಿಲ್ಲೆಯ ಹಿರಿಯೂರಿನ ಬಳಿ ಅಪಘಾತಕ್ಕೀಡಾದ ಖಾಸಗಿ ಬಸ್ ಚಾಲಕ ಮೊಹಮ್ಮದ್ ರಫೀಕ್ ಘಟನೆಯ ಬಗ್ಗೆ ತಿಳಿಸಿದ್ದಾರೆ.

ಬುಧವಾರ ತಡರಾತ್ರಿ 2 ಗಂಟೆ ಸುಮಾರಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಬಳಿಯ ಗೊರ್ಲತ್ತು ಕ್ರಾಸ್ ಬಳಿ ನಡೆದ ಖಾಸಗಿ ಬಸ್ ಹಾಗೂ ಕಂಟೇನರ್​ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ 9 ಜನ ಅಸುನೀಗಿದ್ದಾರೆ. ಇವರಲ್ಲಿ ಲಾರಿ ಚಾಲಕ ಹಾಗೂ ಬಸ್​ನಲ್ಲಿದ್ದ 8 ಮಂದಿ ಪ್ರಯಾಣಿಕರು ಸೇರಿದ್ದಾರೆ.

ಚಿತ್ರದುರ್ಗ ಬಸ್​ ಅಪಘಾತ (ETV Bharat)

ಲಾರಿ ಚಾಲಕನ ಅಜಾಗರೂಕತೆಯಿಂದ ಘಟನೆ: ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸ್ ಚಾಲಕ ಮೊಹಮ್ಮದ್ ರಫೀಕ್ ಅವರನ್ನು ಮಾಧ್ಯಮಗಳು ಮಾತನಾಡಿಸಿದ್ದು, ಈ ವೇಳೆ ಅಪಘಾತದ ಚಿತ್ರಣವನ್ನು ತೆರೆದಿಟ್ಟಿದ್ದಾರೆ. "ಲಾರಿಯು ಬಸ್​ನ ಡಿಸೇಲ್ ಟ್ಯಾಂಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ನಮ್ಮ ಬಸ್​​ನಲ್ಲಿ ಇಬ್ಬರು ಮಕ್ಕಳಿದ್ದರು. ಶಿವಮೊಗ್ಗ, ಕುಮಟಾ ಮೂಲಕ ಗೋಕರ್ಣಕ್ಕೆ ತೆರಳುತ್ತಿದ್ದೆವು. ದಾರಿ ಮಧ್ಯೆ, ಊಟ ಮುಗಿಸಿ ಪ್ರಯಾಣ ಮುಂದುವರೆಸಿದ್ದೆವು. ಆಗ ಲಾರಿ ಚಾಲಕನ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ" ಎಂದು ರಫೀಕ್ ತಿಳಿಸಿದರು.

ಅಪಘಾತದ ಭಯಾನಕ ಘಟನೆಯನ್ನು ಬಸ್ ಕ್ಲೀನರ್ ಮೊಹಮ್ಮದ್ ಸಾದಿಕ್ ವಿವರಿಸಿದ್ದು, "ಬಸ್​ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ, ನಾನು ಗ್ಲಾಸ್​ ಒಡೆದು ಬಸ್​​ನಿಂದ ಜಿಗಿದು ಹೊರಬಂದೆ. ಕೆಲವು ಪ್ರಯಾಣಿಕರನ್ನು ಉಳಿಸಲು ಸಾಧ್ಯವಾಗಲಿಲ್ಲ" ಎಂದರು.

ಏನಾಯಿತು ಎಂಬುದೇ ನನಗೆ ಗೊತ್ತಾಗಲಿಲ್ಲ: "ರಾತ್ರಿ 1.30ರಿಂದ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರಾತ್ರಿ ನಾನು ಮಲಗಿದ್ದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನೋಡ ನೋಡುತ್ತಿದ್ದಂತೆ ಧಗಧಗನೆ ಹೊತ್ತಿ ಉರಿದಿದೆ. ಸ್ಥಳೀಯರು ನಮ್ಮ ಸಹಾಯಕ್ಕೆ ಬಂದರು. ಅಪಘಾತವಾಗುತ್ತಿದ್ದಂತೆ ಏನಾಗಿದೆ ಎನ್ನುವುದು ಗೊತ್ತಾಗದೆ ನಾವು ಶಾಕ್​ನಲ್ಲಿ ಇದ್ದೆವು. ಲಾರಿ ಅಪ್ಪಳಿಸಿದ ಪರಿಣಾಮ ಡ್ರೈವರ್ ಕೂಡ ಬಸ್​​ನಲ್ಲಿ ಸಿಲುಕಿದ್ದ. ಆತನ ಕೈ, ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. ‌ಅಪಘಾತ ಆದಾಗ ಬಸ್​ನ ಗ್ಲಾಸ್ ಒಡೆದಿತ್ತು. ನಾನು ಕೂಡ ಹಾರಿ ಹೊರಗೆ ಬಿದ್ದಿದ್ದೆ. ಅಪಘಾತ ಆಗಿದ್ದೇ ತಡ ಏನಾಯಿತು ಎಂಬುದೇ ನನಗೆ ಗೊತ್ತಾಗಲಿಲ್ಲ. ಜನ ಧಾವಿಸಿ ರಕ್ಷಣೆ ಮಾಡಿ, ಆಸ್ಪತ್ರೆಗೆ ಸೇರಿಸಿದರು" ಎಂದು ಸಾದಿಕ್ ವಿವರಿಸಿದರು.

ಅಪಘಾತಕ್ಕೀಡಾದ ಖಾಸಗಿ ಬಸ್ ಮಾಲೀಕ ನಾಗರಾಜಯ್ಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ನಮ್ಮ ಬಸ್ ಚಾಲಕನನ್ನು ಮಾತನಾಡಿಸಲು ಆಗಿಲ್ಲ. ಅಪಘಾತದಿಂದ ಶಾಕ್​ಗೆ ಒಳಗಾಗಿದ್ದಾನೆ. ಅವನನ್ನು ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಬೇಕಿದೆ. ನಮ್ಮ ಬಸ್ ಕ್ಲೀನರ್​​ ಜೊತೆಗೆ ಮಾತನಾಡಿ ಮಾಹಿತಿ ಪಡೆದಿದ್ದೇನೆ. ಗಾಯಾಳುಗಳು ಆಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಬಸ್​​ನಲ್ಲಿದ್ದ ಪ್ರಯಾಣಿಕರ ಪೈಕಿ 25 ಜನ ಗೋಕರ್ಣಕ್ಕೆ, ಇಬ್ಬರು ಶಿವಮೊಗ್ಗ ಹಾಗೂ ಇಬ್ಬರು ಕುಮಟಾಕ್ಕೆ ಟಿಕೆಟ್ ಬುಕ್ ಮಾಡಿದ್ದರು'' ಎಂದರು.

ಘಟನೆ ಬಗ್ಗೆ ಮಾಹಿತಿ ನೀಡಿದ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ಅವರು ''12 ಜನ ಗಾಯಳುಗಳು ಹಿರಿಯೂರು ಆಸ್ಪತ್ರೆ, 9 ಜನ ಶಿರಾ ಆಸ್ಪತ್ರೆ ಹಾಗೂ ಮೂವರು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಪ್ರಯಾಣಿಕನಿಗೆ ಹೆಚ್ಚು ಸುಟ್ಟ ಗಾಯಗಳಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಆಗಿರುವ ಪ್ರಯಾಣಿಕನ ಹೊರತಾಗಿ ಒಟ್ಟು 24 ಜನರು ಪ್ರಾಣಪಾಯದಿಂದ ಪಾರಾಗಿದ್ದಾರೆ'' ಎಂದು ಹೇಳಿದರು.

ಇದನ್ನೂ ಓದಿ: ಚಿತ್ರದುರ್ಗ ಭೀಕರ ಅಪಘಾತ: ಪವಾಡ ಸದೃಶ ರೀತಿಯಲ್ಲಿ 42 ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರು