ರೈತನಿಂದ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ
ಹಾವೇರಿ ಜಿಲ್ಲೆಯಲ್ಲಿ ರೈತನಿಂದ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ರೆಡ್ಹ್ಯಾಂಡಾಗಿ ಲೋಕಾಯುಕ್ತ ಅಧಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಮತ್ತೊಂದೆಡೆ ಶಿವಮೊಗ್ಗದಲ್ಲಿ ದರೋಡೆ ಪ್ರಕರಣದ ಇಬ್ಬರು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

Published : February 26, 2026 at 8:02 PM IST
ಹಾವೇರಿ/ಶಿವಮೊಗ್ಗ: ಖಾತೆ ಬದಲಾವಣೆಗಾಗಿ 8,500 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ತಾಲೂಕು ನೆಗಳೂರು ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಫಕ್ಕಿರೇಶ್ ಬಾರ್ಕಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿ. 8500 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳಿಗೆ ಫಕ್ಕಿರೇಶ್ ಸಿಕ್ಕಿಬಿದ್ದಿದ್ದಾರೆ.
ನೆಗಳೂರು ಗ್ರಾಮದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಫಕ್ಕಿರೇಶ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಬಸಾಪುರ ಗ್ರಾಮದ ರೈತ ಕರಿಯಲ್ಲಪ್ಪ ಕೆಸರಳ್ಳಿ ಎಂಬುವರ ಬಳಿ ಖಾತೆ ಬದಲಾವಣೆಗೆ ಫಕ್ಕಿರೇಶ್ 63 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎಂದು ದೂರುದಾರ ರೈತ ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದರು.

ಈ ಮೊದಲು ಕರಿಯಲ್ಲಪ್ಪನಿಂದ 30 ಸಾವಿರ ಹಣ ಪಡೆದು ಕೆಲಸ ಅಪೂರ್ಣ ಮಾಡಿದ್ದು, ಗುರುವಾರ(ಫೆ.26) ಮತ್ತೆ 8,500 ರೂಪಾಯಿ ಪಡೆಯಲು ಫಕ್ಕಿರೇಶ್ ಮುಂದಾಗಿದ್ದರು. ಲಂಚ ಸ್ವೀಕಾರ ಮಾಡುತ್ತಿದ್ದ ಸಂದರ್ಭದಲ್ಲೇ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ಹಿಡಿದಿದ್ದಾರೆ.
ಆರೋಪಿ ಫಕ್ಕಿರೇಶ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾವೇರಿ ಲೋಕಾಯುಕ್ತ ಸಿಪಿಐ ಶ್ರೀದೇವಿ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದೆ.
ಇದನ್ನೂ ಓದಿ: ಗುತ್ತಿಗೆದಾರನಿಂದ ಲಂಚಕ್ಕೆ ಬೇಡಿಕೆ: ಶಿರಹಟ್ಟಿ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ
ಚಲಿಸುತ್ತಿದ್ದ ರೈಲಿನಲ್ಲಿ ಬೆದರಿಸಿ ಮೊಬೈಲ್ ದರೋಡೆ; ಶಿವಮೊಗ್ಗದಲ್ಲಿ ಇಬ್ಬರ ಬಂಧನ: ಚಲಿಸುತ್ತಿದ್ದ ರೈಲಿನಲ್ಲಿ ಚಾಕು ತೋರಿಸಿ ಬೆದರಿಸಿ, ಮೊಬೈಲ್ ದರೋಡ ಮಾಡಿದ್ದ ಇಬ್ಬರನ್ನು ಆರ್ ಪಿ ಎಫ್ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಫೆಬ್ರುವರಿ 11ರ ರಾತ್ರಿ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಸಾಗರ - ಯಶವಂತಪುರ ರೈಲಿನಲ್ಲಿ ಹೊರಟಿದ್ದ ವ್ಯಕ್ತಿಯೂರ್ವರನ್ನು ರೈಲಿನಲ್ಲಿಯೇ ಚಾಕು ತೋರಿಸಿ ಬೆದರಿಸಿ, ಅವರ ಬಳಿ ಇದ್ದ ಮೊಟರಾಲೋ ಕಂಪನಿಯ ಮೊಬೈಲ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದರು. ಈ ಕುರಿತು ಮೊಬೈಲ್ ಕಳೆದುಕೊಂಡಿದ್ದ ವ್ಯಕ್ತಿ ಆನ್ಲೈನ್ನಲ್ಲಿ ದೂರು ದಾಖಲಿಸಿದ್ದರು.

ಈ ದೂರಿನ ಅನ್ವಯ ಆರ್ ಪಿ ಎಫ್ ಪೊಲೀಸರು ತನಿಖೆ ಪ್ರಾರಂಭಿಸಿ, ಶಿವಮೊಗ್ಗದ ರಾಜೀವ್ ಗಾಂಧಿ ಬಡಾವಣೆ ನಿವಾಸಿ ಪರಶುರಾಮ್ ಅಲಿಯಾಸ್ ಚಿಂಗಾರಿ (29) ಹಾಗೂ ಪರಾರಿಯಾಗಿದ್ದ ಇನ್ನೋರ್ವ ಆರೋಪಿ ಮೊಹಮ್ಮದ್ ಹುಸೇನ್ ಎಂಬುರನ್ನು ಸಹ ಬಂಧಿಸಿದ್ದಾರೆ. ಬಂಧಿತರಿಂದ ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಪೋಸ್ಟ್ ಕಮಾಂಡರ್/ಆರ್ಪಿಎಫ್/ಶಿವಮೊಗ್ಗ, ಮತ್ತು ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ), ಪ್ರಕಾಶ್ ಹಾಗೂ ಇನ್ಸ್ ಪೆಕ್ಟರ್ ಮಹೇಶ್, ಸಬ್-ಇನ್ಸ್ಪೆಕ್ಟರ್ ಭಾಗಿಯಾಗಿದ್ದರು.


