ಕಾಂಗ್ರೆಸ್ ಅಪಪ್ರಚಾರಕ್ಕೆ ಪ್ರತಿಯಾಗಿ ಬಿಜೆಪಿಯಿಂದ ವಿಬಿ ಜಿ ರಾಮ್ ಜಿ ಪರ ಜಾಗೃತಿ ಅಭಿಯಾನ
ಕಾಂಗ್ರೆಸ್ಗೆ ಎನ್ಡಿಎ ಸರ್ಕಾರ ಇರೋದೇ ಸಹಿಸಲು ಆಗುತ್ತಿಲ್ಲ. ಈಗ ವಿ ಬಿಜಿ ರಾಮ್ ಜಿ ವಿರುದ್ಧ ಅಪಪ್ರಚಾರ ಶುರು ಮಾಡಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು.


Published : January 6, 2026 at 8:34 PM IST
ಬೆಂಗಳೂರು: ಕಾಂಗ್ರೆಸ್ ಅಪಪ್ರಚಾರಕ್ಕೆ ಪ್ರತಿಯಾಗಿ ರಾಜ್ಯದಲ್ಲಿ ಬಿಜೆಪಿ ವಿಬಿ ಜಿ ರಾಮ್ ಜಿ ಪರ ಜನವರಿ 15 ರಿಂದ ಫೆಬ್ರವರಿ 28 ರವರೆಗೆ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮನರೇಗಾ ಪರ ಕಾಂಗ್ರೆಸ್ ಅಭಿಯಾನ ವಿಚಾರದಲ್ಲಿ ಜನರಿಗೆ ತಪ್ಪು ಸಂದೇಶ ನೀಡಲು ಹೊರಟಿದೆ. ಇತ್ತೀಚೆಗೆ ಎನ್ಡಿಎ ಸರ್ಕಾರ ವಿಬಿಜಿ ರಾಮ್ ಜಿ ಕಾಯ್ದೆ ತಂದಿದ್ದಾರೆ. ಇದು ಸಕಾರಾತ್ಮಕ ಚಿಂತನೆ ಇರುವ ಕಾಯ್ದೆ. ಮನರೇಗಾ ಯೋಜನೆಯಲ್ಲಿ ಅನೇಕ ಅಂಶಗಳನ್ನು ಸುಧಾರಿಸಿ ವಿಬಿಜಿ ರಾಮ್ ಜಿ ಕಾಯ್ದೆ ತರಲಾಗಿದೆ. ಮನರೇಗಾ ಯೋಜನೆಯಲ್ಲಿ ದುರ್ಬಳಕೆ, ಭ್ರಷ್ಟಾಚಾರ ಇತ್ತು. ಮೂಲಸೌಕರ್ಯ ವೃದ್ಧಿಗೆ ಅದು ಸಹಕಾರಿ ಆಗಿರಲಿಲ್ಲ. ಅದಕ್ಕಾಗಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ, ಇದರ ವಿರುದ್ಧ ಕಾಂಗ್ರೆಸ್ ಈಗಾಗಲೇ ಅಪಪ್ರಚಾರ ಶುರು ಮಾಡಿದೆ ಕೇಂದ್ರದ ಯೋಜನೆಗಳಲ್ಲಿ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ದೂರಿದರು.
ಕಾಂಗ್ರೆಸ್ಗೆ ಎನ್ಡಿಎ ಸರ್ಕಾರ ಇರೋದೇ ಸಹಿಸಲು ಆಗುತ್ತಿಲ್ಲ. ಈಗ ವಿ ಬಿಜಿ ರಾಮ್ ಜಿ ವಿರುದ್ಧ ಅಪಪ್ರಚಾರ ಶುರು ಮಾಡಿದ್ದಾರೆ. ಗಾಂಧಿಯವರ, ಮೋದಿಯವರ ಕನಸು ನನಸಾಗಬೇಕಾದರೆ ಹಳ್ಳಿಗಳು ಉದ್ಧಾರ ಆಗಬೇಕು. ಅಂಬೇಡ್ಕರ್ ಆಗಲಿ ಗಾಂಧಿಯವರಾಗಲೀ ಅವರ ಹೆಸರಿಗೆ ಬಿಜೆಪಿ ಅಪಮಾನ ಮಾಡಿಲ್ಲ. ಮುಂದೇನು ಮಾಡೋದಿಲ್ಲ. ಅಪಮಾನ ಮಾಡೋ ಜಾಯಮಾನ ಇರೋದು ಕಾಂಗ್ರೆಸ್ಗೆ ಮಾತ್ರ. ಕರ್ನಾಟಕ ರಾಜ್ಯದಲ್ಲಿ ವಿಬಿ ಜಿ ರಾಮ್ ಜಿ ಪರ ಜನವರಿ 15 ರಿಂದ ಫೆಬ್ರವರಿ 28 ರವರೆಗೆ ಜಾಗೃತಿ ಅಭಿಯಾನ ಮಾಡುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಏನು ಸಾಧನೆ ಮಾಡಿದ್ದಾರೆ?: ಸುದೀರ್ಘ ಅವಧಿಯ ಮುಖ್ಯಮಂತ್ರಿ ದಾಖಲೆ ಸೃಷ್ಟಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅರಸು ದಾಖಲೆ ಮುರಿದಿದ್ದೇನೆ ಅನ್ನೋದು ಭ್ರಮೆ ಮಾತ್ರ. ಪತ್ರಿಕೆಗಳ ಮುಖಪುಟದಲ್ಲಿ ಅರಸು ಅವರ ದಾಖಲೆ ಮುರಿದಿದ್ದಾರೆ ಎಂದು ಹೆಮ್ಮೆಯಿಂದ ಜಾಹೀರಾತು ಕೊಟ್ಟಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿ, ತಮ್ಮ ಅವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆ. ಅರಸು ಅವರು ಸುದೀರ್ಘವಾಗಿ ಸಿಎಂ ಆಗಿ ದಾಖಲೆ ಮಾಡಿದ್ದರು. ಭೂಸುಧಾರಣಾ ಕಾಯ್ದೆಗಳನ್ನು ತಂದು ಬದಲಾವಣೆಗೆ ಕಾರಣರಾದರು. ಮಲ ಹೊರುವ ಅನಿಷ್ಟ ಪದ್ಧತಿ ತೊಲಗಿಸಿದರು, ವೃದ್ಧಾಪ್ಯ ವೇತನ, ವಿಧವಾ ವೇತನ ತಂದು ದನಿ ಇಲ್ಲದವರಿಗೆ ಅರಸು ದನಿ ಆಗಿದ್ದರು. ಅಂಥ ಅರಸು ಅವರನ್ನು ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡಲಾಯ್ತು. ಅವರಿಗೆ ಅಧಿಕಾರ ನಡೆಸಲು ಬಿಟ್ಟಿದ್ರೆ ಪರಿಪೂರ್ಣ ಅವಧಿಗೆ ಸಿಎಂ ಆಗಿ ದಾಖಲೆ ಬರೆಯುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.
ಇಂದಿರಾ ಗಾಂಧಿಯವರಿಗೆ ರಾಜಕೀಯ ಮರುಜನ್ಮ ಕೊಟ್ಟಿದ್ದು ಅರಸು. ಅರಸು ಅವರನ್ನು ಅಪಮಾನ ಮಾಡಿ ಉಚ್ಛಾಟನೆ ಮಾಡಿದ್ರು ಅದೇ ಇಂದಿರಾಗಾಂಧಿ ಅಂಥ ನಾಯಕನೊಬ್ಬನಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್. ಸಿದ್ದರಾಮಯ್ಯ ತಾವು ಈಗ ಅರಸು ದಾಖಲೆ ಮುರಿದಿದ್ದೇನೆ ಅಂತಿದ್ದಾರೆ. ಸಿದ್ದರಾಮಯ್ಯ ಮಾಡಿದ ಸಾಧನೆ ಏನು ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಅರಸು ಅವರು ಅವಿರೋಧವಾಗಿ ಸಿಎಂ ಆಗಿ ಆಯ್ಕೆ ಆಗಿದ್ರು, 2013-2018 ರವರೆವರೆಗೆ ಸಿದ್ದರಾಮಯ್ಯ ಸಹ ಜನಪರ ಆಡಳಿತ ಕೊಟ್ಟಿದ್ದೇನೆ ಅಂದು ಕೊಂಡಿದ್ದಾರೆ. ಆದ್ರೆ ಅಂತಹ ಸಿದ್ದರಾಮಯ್ಯ 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾಭವ ಆದ್ರು. ಸಿದ್ದರಾಮಯ್ಯ ಈಗ ಈ ಅವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆ. ಸಿದ್ದರಾಮಯ್ಯ ಅದೃಷ್ಟದಿಂದ ಸಿಎಂ ಆದವರು, ಅವಕಾಶವಾದಿ ಮುಖ್ಯಮಂತ್ರಿ ಎಷ್ಟು ಲಕ್ಷ ಬಡ ಜನರಿಗೆ ಮನೆ ಕೊಟ್ಟಿದ್ದಾರೆ ಹೇಳಲಿ ಎಂದು ಸವಾಲು ಹಾಕಿದರು.
ಸಿಎಂ ಆದ ಮೇಲೆ ಅಹಿಂದ ಮರೆತೇ ಹೋಯಿತು: ಸಿದ್ದರಾಮಯ್ಯಗೆ ಸಿಎಂ ಆದ ಮೇಲೆ ಅಹಿಂದ ಮರೆತು ಹೋಯಿತು, ಬಡವರಿಗೆ ಮೀಸಲಿಟ್ಟ 14 ಸೈಟ್ ತಮ್ಮ ಕುಟುಂಬಕ್ಕೆ ಕೊಟ್ಟು, ಮುಡಾ ಸೈಟು ತಗೊಂಡು ಬಡವರಿಗೆ ಮೋಸ ಮಾಡಿ ಯಾರಿಗೂ ಗೊತ್ತಾಗದ ಹಾಗೇ ಸೈಟು ವಾಪಸ್ ಕೊಟ್ಟಿದ್ದು ಮರೆತು ಹೋಯಿತಾ?. ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಕಾಂತರಾಜು ವರದಿ ಜಾರಿ ಮಾಡಿಲ್ಲ. ಅದನ್ನು ಜಾರಿ ಮಾಡುವ ಇಚ್ಚಾಶಕ್ತಿ ಅವರಿಗೆ ಇರಲಿಲ್ಲ. ಆ ವರದಿ ಕಸದ ಬುಟ್ಟಿಗೆ ಹಾಕಿ ಅಹಿಂದ ವರ್ಗಕ್ಕೆ ಈ ಮೂಲಕ ಅಪಮಾನ ಮಾಡಿ ಕನ್ನಡಿಗರಿಗೆ ಮೋಸ ಮಾಡಿದರು. ಬುರುಡೆ ಗ್ಯಾಂಗ್ ಮಾತು ಕೇಳಿ ಎಸ್ಐಟಿ ರಚನೆ ಮಾಡಿ ಧರ್ಮಸ್ಥಳ ಭಕ್ತರ ಭಾವನೆಗೆ ಧಕ್ಕೆ ಮಾಡಿದರು. ಧರ್ಮಸ್ಥಳ ವಿರುದ್ಧ ದೊಡ್ಡ ಷಡ್ಯಂತ್ರ ಮಾಡಲಾಯ್ತು. ಆರ್ಸಿಬಿ ಕಾಲ್ತುಳಿತದಲ್ಲಿ 11 ಜನರ ಸಾವಿಗೆ ಕಾರಣರಾದರು ಇದೇನಾ ಸಾಧನೆ ಎಂದು ಟೀಕಿಸಿದರು.
ಕೋಗಿಲು ಲೇಔಟ್ನಲ್ಲಿ ಅಕ್ರಮ ಮನೆಗಳು ಅಂತ ತೆರವು ಮಾಡಿದರು ಈಗ ಹೈಕಮಾಂಡ್ ಮತ್ತು ಕೇರಳ ಸಿಎಂ ಮಾತು ಕೇಳಿ ಅವರಿಗೆ ಮನೆ ಕೊಡ್ತಿದ್ದೀರಿ, ಬಡವರಿಗೆ ಮನೆ ಕೊಡಲಿಲ್ಲ, ಇದೇನಾ ಸಾಧನೆ..?. ಹಿಂದೂ ಕಾರ್ಯಕರ್ತರ ಟಾರ್ಗೆಟ್ ಮಾಡಿ ದ್ವೇಷ ಭಾಷಣ ಬಿಲ್ ತಂದು ಅರಸು ಅವರ ಹೆಸರು ಹೇಳಲೂ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಮತ್ತು ಯಾವ ನೈತಿಕತೆ ಇದೆ ಎಂದು ಹೇಳಿ ಅಂತ ಪ್ರಶ್ನಿಸಿದರು.
ಇದನ್ನೂ ಓದಿ: 'ಕರ್ನಾಟಕ ಉಳಿಸಿ, ಕಾಂಗ್ರೆಸ್ ತೊಲಗಿಸಿ', 'ಬೆಂಗಳೂರು ಉಳಿಸಿ' ಹೋರಾಟಕ್ಕೆ ರಾಜ್ಯ ಬಿಜೆಪಿ ಕೋರ್ ಕಮಿಟಿ ತೀರ್ಮಾನ

