ETV Bharat / state

ಡೆಲಿವರಿ ಬಾಯ್​​ಗೆ ಮನಸೋಇಚ್ಛೆ ಹಲ್ಲೆಗೈದ ಕಿಡಿಗೇಡಿಗಳಿಗೆ ಸ್ಥಳೀಯರಿಂದ ಥಳಿತ

ಡೆಲಿವರಿ ಬಾಯ್​​ಗೆ ಬೈಕ್​​ ಸವಾರರು ಥಳಿಸಿರುವ ಘಟನೆ ಬೆಂಗಳೂರಿನ ಮಹಾದೇವಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.

BIKE RIDERS ATTACK ON DELIVERY BOY
ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡುತ್ತಿರುವ ಬೈಕ್​​ ಸವಾರರು (ETV Bharat)
author img

By ETV Bharat Karnataka Team

Published : January 9, 2026 at 3:32 PM IST

2 Min Read
Choose ETV Bharat

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಡೆಲಿವರಿ ಬಾಯ್ ಮೇಲೆ ಇಬ್ಬರು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಅಮಾನವೀಯವಾಗಿ ವರ್ತಿಸುತ್ತಾ ಅಟ್ಟಹಾಸ ಮೆರೆಯುತ್ತಿದ್ದ ಕಿಡಿಗೇಡಿಗಳನ್ನು ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಈ ಘಟನೆ ತಡರಾತ್ರಿ ಬೈಯ್ಯಪ್ಪನಹಳ್ಳಿ ವ್ಯಾಪ್ತಿಯ ಮಹಾದೇವಪುರ ಮುಖ್ಯರಸ್ತೆಯಲ್ಲಿ ನಡೆದಿದೆ.

ಘಟನೆಯ ವಿವರ: ಡೆಲಿವರಿ ಬಾಯ್ ಸ್ಕೂಟರ್‌ನಲ್ಲಿ ಸಾಗುವಾಗ ರಸ್ತೆ ತಿರುವಿನ ಬಳಿ ಆರೋಪಿಗಳಿಬ್ಬರು ಸ್ಕೂಟರ್‌ನಲ್ಲಿ ಬಂದಿದ್ದಾರೆ. ಡೆಲಿವರಿ ಬಾಯ್ ತಕ್ಷಣ ತನ್ನ ಸ್ಕೂಟರ್ ನಿಲ್ಲಿಸಿದ್ದಾನೆ. ಆದರೆ ಆರೋಪಿಗಳು ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದಿದ್ದಾರೆ. ಇದರಿಂದ ಸಿಟ್ಟಿಗೆದ್ದು ಏಕಾಏಕಿ ಹೆಲ್ಮೆಟ್‌ನಿಂದ ಡೆಲಿವರಿ ಬಾಯ್ ಮೇಲೆ ಹಲ್ಲೆ ಮಾಡಿದ್ದಾರೆ.

ಡೆಲಿವರಿ ಬಾಯ್​​ಗೆ ಮನಸೋಇಚ್ಛೆ ಹಲ್ಲೆಗೈದ ಕಿಡಿಗೇಡಿಗಳು (ETV Bharat)

ರಸ್ತೆಯಲ್ಲೇ ಆತನನ್ನು ಬೀಳಿಸಿ ಕಾಲಿನಿಂದ ಒದ್ದು ಅಮಾನವೀಯವಾಗಿ ವರ್ತಿಸಿದ್ದಾರೆ. ಡೆಲಿವರಿ ಬಾಯ್ ಮನವಿಯನ್ನೂ ಕೇಳದೆ ಹಲ್ಲೆಗೈಯ್ಯುತ್ತಿದ್ದ ಆರೋಪಿಗಳನ್ನು ಗಮನಿಸಿದ ಕೆಲ ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರಶ್ನಿಸಿದವರ ಮೇಲೂ ಎಗರಾಡಿದಾಗ ಸ್ಥಳೀಯರು ಒಟ್ಟಾಗಿ ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದಾರೆ‌.

ಘಟನೆಯ ದೃಶ್ಯಗಳು ಹತ್ತಿರದ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆ ಬಗ್ಗೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಹಲ್ಲೆಗೊಳಗಾದ ಡೆಲಿವರಿ ಬಾಯ್ ಹಾಗೂ ಆರೋಪಿಗಳನ್ನು ಪತ್ತೆ ಹಚ್ಚಲು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.

ಇವುಗಳನ್ನೂ ಓದಿ:

2ನೇ ಪತ್ನಿಯನ್ನು ತೊರೆಯುವಂತೆ ರೌಡಿಶೀಟರ್ ಮೇಲೆ ಮೊದಲ ಪತ್ನಿಯಿಂದ ಹಲ್ಲೆ: ಎರಡನೇ ಪತ್ನಿಯನ್ನು ತೊರೆಯುವಂತೆ ಮೊದಲ ಪತ್ನಿ ತನ್ನ ರೌಡಿಶೀಟರ್ ಪತಿಗೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದಿತ್ತು. ಇದೀಗ ಹಲ್ಲೆಗೊಳಗಾದ ರೌಡಿಶೀಟರ್ ತನ್ನ ಪತ್ನಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಜೆ.ಜೆ.ನಗರದ ನಿವಾಸಿ ಸೈಯದ್ ಅಸ್ಗರ್ ಎಂಬಾತ ತನ್ನ ಪತ್ನಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಕಳ್ಳತನ, ಮಾದಕ ಪದಾರ್ಥಗಳ ಮಾರಾಟ ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದ ಆರೋಪಿ, ಇತ್ತೀಚಿಗೆ ಜೈಲಿನಿಂದ ಹೊರಬಂದಿದ್ದ. ಆದರೆ, ಎರಡನೇ ಪತ್ನಿಯನ್ನ ತೊರೆಯುವಂತೆ ಒತ್ತಾಯಿಸಿದ್ದ ತನ್ನ ಮೊದಲನೇ ಪತ್ನಿ ಮಾರಣಾಂತಿಕವಾಗಿ ಹಲ್ಲೆಗೈದು, ಕೈ ಮುರಿದಿದ್ದಾಳೆ ಎಂದು ಸೈಯದ್ ಅಸ್ಗರ್ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಹಲ್ಲೆಗೊಳಗಾದ ಸೈಯದ್ ಅಸ್ಗರ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಅವರ ಗಾಯಗೊಂಡ ಕಣ್ಣಿನ ಪಕ್ಕದಲ್ಲಿ ಹೋಲಿಗೆ ಹಾಕಿದ್ದಾರೆ. ಇದೀಗ ಅಸ್ಗರ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.