ETV Bharat / state

ಬಂಗಾಳದಲ್ಲಿ ಬಿಜೆಪಿ ಗೆಲುವಿಗೆ ರಣತಂತ್ರ ರೂಪಿಸಿದ ಚಿಕ್ಕಮಗಳೂರಿನ ಯುವಕನಿಗೆ ಸನ್ಮಾನ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಜಯದ ಹಿಂದೆ ಪ್ರಮುಖ ಪಾತ್ರವಹಿಸಿದ ಅರುಣ್ ಬಿನ್ನಡಿ ಅವರಿಗೆ ಸ್ವಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದರು.

Arun Binnadi, who worked hard for BJP's victory in West Bengal elections, was felicitated in his hometown
ಸ್ವಗ್ರಾಮದಲ್ಲಿ ಅರುಣ್ ಬಿನ್ನಡಿ ಅವರಿಗೆ ಸನ್ಮಾನ (ETV Bharat)
author img

By ETV Bharat Karnataka Team

Published : May 7, 2026 at 1:24 PM IST

2 Min Read
Choose ETV Bharat

ಚಿಕ್ಕಮಗಳೂರು: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಅದ್ಭುತ ಯಶಸ್ಸಿನ ಹಿಂದೆ ರಾಜ್ಯದ ವ್ಯಕ್ತಿಯೊಬ್ಬರ ಚಾಣಾಕ್ಷತನ ಹಾಗೂ ತಂತ್ರಗಾರಿಕೆಯೂ ಪ್ರಮುಖ ಪಾತ್ರ ವಹಿಸಿರುವುದು ರಾಜಕೀಯ ವಲಯದ ಗಮನ ಸೆಳೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿನ್ನಡಿ ಗ್ರಾಮದ ಯುವಕ ಅರುಣ್ ಬಿನ್ನಡಿ ಅವರ ರಾಜಕೀಯ ಕಾರ್ಯಚಟುವಟಿಕೆಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಹಿಂದೆ ಕೇವಲ ಘಟಾನುಘಟಿ ನಾಯಕರಷ್ಟೇ ಅಲ್ಲದೆ, ತೆರೆಮರೆಯಲ್ಲಿ ನಿಂತು ತಂತ್ರ ರೂಪಿಸಿದ ಯುವಕ ಅರುಣ್ ಬಿನ್ನಡಿ ಅವರ ಶ್ರಮವೂ ದೊಡ್ಡದಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಕಾಫಿನಾಡಿನ ಈ ಯುವ ನಾಯಕ, ಕೈತುಂಬಾ ಸಂಬಳದ ಉದ್ಯೋಗವನ್ನು ತೊರೆದು ದೇಶಸೇವೆಗೆ ಮುಂದಾದವರು. ತನ್ನ ಪರಿಶ್ರಮ, ತಂತ್ರಗಾರಿಕೆ ಹಾಗೂ ಸಂಘಟನಾ ಸಾಮರ್ಥ್ಯದ ಮೂಲಕ ರಾಜಕೀಯ ವಲಯದಲ್ಲಿ ವಿಶಿಷ್ಟ ಗುರುತು ಗಳಿಸಿದ್ದಾರೆ. 2019ರ ಲೋಕಸಭೆ ಚುನಾವಣೆ ಸೇರಿದಂತೆ ಹಲವು ಪ್ರಮುಖ ಚುನಾವಣೆಯಲ್ಲಿ ಅವರು ಮಹತ್ವದ ಪಾತ್ರವಹಿಸಿರುವುದು ಗಮನಾರ್ಹ.

ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಭಾಗದಲ್ಲೂ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಬಿನ್ನಡಿ ತಮ್ಮದೇ ಆದ ಛಾಪು ಮೂಡಿಸಿದ್ದರು. ತಮ್ಮ ಮೇಲೆ ಬಂದ ಪ್ರತಿಯೊಂದು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬರುವಲ್ಲಿ ಯಶ ಕಂಡಿದ್ದಾರೆ.

ಹಾಗೆಯೇ ಇತ್ತೀಚಿನ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸಿಲಿಗುರಿ ನಾರ್ತ್ ಜೋನ್ ಸಂಘಟನಾ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದ ಅರುಣ್, ತಿಂಗಳುಗಟ್ಟಲೆ ನೆಲಮಟ್ಟದಲ್ಲಿ ಕಾರ್ಯನಿರ್ವಹಿಸಿ ಜಯದ ತಂತ್ರ ರೂಪಿಸಿದರು. ಸ್ಥಳೀಯ ಪರಿಸ್ಥಿತಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಮತದಾರರ ಮನಸ್ಥಿತಿಗೆ ಹೊಂದುವಂತೆ ಪ್ರಚಾರ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯ ಅಡೆತಡೆಗಳ ನಡುವೆಯೂ ತಮ್ಮ ಸಂಘಟನಾ ಸಾಮರ್ಥ್ಯದಿಂದ ಮತ್ತೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಿರುವುದು ವಿಶೇಷ.

ತನ್ನ ಸ್ವಗ್ರಾಮ ಬಿನ್ನಡಿಗೆ ಆಗಮಿಸಿದ ಅರುಣ್ ಅವರಿಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನ ಮಾಡಿದರು. ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದು, ''ಕರ್ನಾಟಕದ ಹುಡುಗ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಹೆಮ್ಮೆಯ ಕ್ಷಣ'' ಎಂದು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಮತಾ ಕೋಟೆ ಕೆಡವಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ್ದು ಹೇಗೆ? ಇಲ್ಲಿದೆ ವಿಸ್ತೃತ ವಿಶ್ಲೇಷಣೆ

293 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ವಿಜಯ ದಾಖಲಿಸಿದೆ. ತೃಣಮೂಲ ಕಾಂಗ್ರೆಸ್ ಕೇವಲ 81 ಸ್ಥಾನಗಳನ್ನು ಪಡೆದುಕೊಂಡಿತು. ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಗೆದ್ದಿದೆ.