ಬೆಂಗಳೂರಲ್ಲಿ 23ನೇ ಚಿತ್ರಸಂತೆ ಉದ್ಘಾಟನೆ: ಸಿಎಂ ಚಿತ್ರ ಬಿಡಿಸಿ ಗಿಫ್ಟ್ ಕೊಟ್ಟ ಕಲಾವಿದರು- ಫೋಟೋಗಳು
ಬೆಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ 23ನೇ ಚಿತ್ರಸಂತೆಯನ್ನು ಉದ್ಘಾಟಿಸಿದರು.

Published : January 4, 2026 at 3:32 PM IST
ಬೆಂಗಳೂರು: ನಗರದ ಕುಮಾರಕೃಪಾ ರಸ್ತೆಯಲ್ಲಿನ ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಿರುವ ಪ್ರತಿಷ್ಟಿತ 23ನೇ ಚಿತ್ರಸಂತೆಯನ್ನು ಕ್ವಾನ್ವಸ್ ಮೇಲೆ ಬರೆಯುವ ಮೂಲಕ ಸಿಎಂ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು. ಈ ಮೂಲಕ 8ನೇ ಬಾರಿ ಚಿತ್ರಸಂತೆಗೆ ಅವರು ಚಾಲನೆ ನೀಡಿದಂತಾಯಿತು.
ಬಳಿಕ ಮಾತನಾಡಿದ ಸಿಎಂ, "ಅತ್ಯಂತ ಸಂತೋಷದಿದ 23ನೇ ಚಿತ್ರಸಂತೆ ಉದ್ಘಾಟಿಸಿದ್ದೇನೆ. ಇದು ನಾನು 8ನೇ ಬಾರಿ ಚಿತ್ರಸಂತೆಯಲ್ಲಿ ಭಾಗವಹಿಸುತ್ತಿರುವುದು. ಕಲಾವಿದರನ್ನು ಪ್ರೋತ್ಸಾಹಿಸಲು ಚಿತ್ರ ಪ್ರದರ್ಶನ ಹಾಗೂ ಮಾರಾಟದ ವೇದಿಕೆಯನ್ನು ಚಿತ್ರಕಲಾ ಪರಿಷತ್ ಅನೇಕ ವರ್ಷದಿಂದ ಮಾಡುತ್ತಿದೆ. 2003ರಲ್ಲಿ ಆರಂಭವಾಗಿದ್ದ ಚಿತ್ರಸಂತೆ ಇದೀಗ 23ನೇ ಚಿತ್ರಸಂತೆಯಾಗಿದೆ. 22 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶದ ಕಲಾವಿದರು ಭಾಗಿಯಾಗಿದ್ದಾರೆ. ಕಲಾವಿದರು, ಜನರು ಸೇರಲು ಒಂದು ವೇದಿಕೆ ಬೇಕಾಗುತ್ತದೆ. ಅದನ್ನು ಚಿತ್ರಕಲಾ ಪರಿಷತ್ ಮಾಡ್ತಿದೆ. ನಾವು ಸಹಾಯ ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಸಹಾಯ ಮಾಡ್ತೇವೆ" ಎಂದು ಭರವಸೆ ನೀಡಿದರು.
"ಕಲೆ ರಾಜ್ಯದ ಸಂಸ್ಕೃತಿಯ ಕೈಗನ್ನಡಿ ಎಂದು ರವಿವರ್ಮಾ ಹೇಳಿದ್ದರು. ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಅವರು, ಮ್ಯೂಸಿಯಂ ಮಾಡಬೇಕು ಅಂತ ಹೇಳಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಈ ವರ್ಷದ ಚಿತ್ರಸಂತೆಯನ್ನು ಪರಿಸರಕ್ಕೆ ಸಮರ್ಪಿಸಲಾಗಿದೆ. ನಾವು ಪರಿಸರ ರಕ್ಷಣೆ ಮಾಡಿದರೆ, ಪರಿಸರ ನಮ್ಮ ರಕ್ಷಣೆ ಮಾಡುತ್ತದೆ. ಬೆಂಗಳೂರಲ್ಲಿ ವಾಯುಮಾಲಿನ್ಯ ಜಾಸ್ತಿ ಆಗ್ತಿದೆ. ದೆಹಲಿಯಲ್ಲಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಾವೆಲ್ಲರೂ ಪರಿಸರ ರಕ್ಷಣೆ ಮಾಡಬೇಕು" ಎಂದು ಕರೆ ನೀಡಿದರು.

ಪ್ರತಿ ವರ್ಷ ಮೂರರಿಂದ ಐದು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ಶೇ.30ರಷ್ಟು ಕಾಡು ಇರಬೇಕು. ನಮ್ಮಲ್ಲಿ ಶೇ.20ರಷ್ಟು ಅರಣ್ಯ ಪ್ರದೇಶವಿದೆ. ಇದನ್ನು ಹೆಚ್ಚು ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಸಾಲು ಮರದ ತಿಮ್ಮಕ್ಕನವರಂತೆ ಸಾರ್ವಜನಿಕರು ಗಿಡಗಳನ್ನು ನೆಡಬೇಕು. ಮಕ್ಕಳನ್ನು ಸಾಕಿದಂತೆ ಗಿಡಮರಗಳನ್ನು ಅವರು ಸಾಕಿದ್ದ ಕಾರಣ ಪ್ರಶಸ್ತಿಗಳು ದೊರೆಯಿತು. ಅವರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ನಾವೆಲ್ಲರೂ ಗಿಡ ಬೆಳೆಸುವ ಪ್ರಯತ್ನವನ್ನು ಮಾಡಬೇಕು ಎಂದು ಇದೇ ಸಂದರ್ಭದಲ್ಲಿ ಸಿಎಂ ತಿಳಿಸಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮೊದಲಾದವರು ಉಪಸ್ಥಿತರಿದ್ದರು.

ಸಿಎಂಗೆ ಚಿತ್ರ ಗಿಫ್ಟ್: ಚಿತ್ರಸಂತೆಯಲ್ಲಿ ಸಿಎಂ ಸಿದ್ದರಾಮಯ್ಯರಿಗೆ ಅವರದೇ ಚಿತ್ರವನ್ನು ಗಿಫ್ಟ್ ನೀಡಲಾಯಿತು. ಹಾನಗಲ್ನಿಂದ ಬಂದಿರುವ ರಾಣಿ ಎಂಬ ಕಲಾವಿದೆ ಚಿತ್ರ ಬಿಡಿಸಿದ್ದಾರೆ. ಸುಮಾರು ಎರಡು ದಿನಗಳಲ್ಲಿ ಈ ಚಿತ್ರ ಬಿಡಿಸಿದ್ದರು. ತಮ್ಮ ಚಿತ್ರವನ್ನು ಸಿದ್ದರಾಮಯ್ಯ ಖುಷಿಯಿಂದ ಸ್ವೀಕರಿಸಿದರು.

ಪ್ರತಿ ಜಿಲ್ಲೆಯಲ್ಲಿ ಸಾಧಕರ ಮ್ಯೂಸಿಯಂ ತೆರೆಯಲು ಮನವಿ: ಪ್ರತಿ ಜಿಲ್ಲೆಗಳಲ್ಲಿ ಸಾಧಕರ ಮ್ಯೂಸಿಯಂ ತೆರೆಯುವಂತೆ, ಕನಿಷ್ಠ ಎರಡು ಕಲಾ ಗ್ಯಾಲರಿ ಶುರು ಮಾಡುವಂತೆ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮನವಿ ಮಾಡಿದರು. ಈ ಬಾರಿ ಪರಿಸರಕ್ಕೆ ಚಿತ್ರಸಂತೆಯನ್ನು ಸಮರ್ಪಿಸಿದ್ದೇವೆ ಎಂದರು.

ದೀರ್ಘಾವಧಿ ಸಿಎಂ ಆಗಿ ಸಿಎಂ ಸಿದ್ದರಾಮಯ್ಯ ಅವರು ದೇವರಾಜು ಅರಸು ದಾಖಲೆ ಮುರಿದಿದ್ದಾರೆ. ಜನವರಿ 2ರಂದು ಅತಿ ಹೆಚ್ಚು ಅವಧಿಗೆ ಸಿಎಂ ಆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚಿತ್ರಸಂತೆಯಲ್ಲಿ ಈ ಬಗ್ಗೆಬಿ.ಎಲ್.ಶಂಕರ್ ಉಲ್ಲೇಖಿಸುತ್ತಿದ್ದಂತೆ ಸಿಎಂ ಮೊಗದಲ್ಲಿ ನಗು ಅರಳಿತು.

1530 ಕಲಾವಿದರು ಭಾಗಿ: ಈ ಬಾರಿಯ ಚಿತ್ರಸಂತೆ ಹಲವು ಆಕರ್ಷಣೆಗಳಿಂದ ಕೂಡಿದ್ದು, ರಾತ್ರಿ 8ರ ವರೆಗೆ ನಡೆಯಲಿದೆ. ಪರಿಸರ ವಿಷಯ ಆಧರಿಸಿದ ಈ ಬಾರಿ ಚಿತ್ರಸಂತೆಯಲ್ಲಿ 22 ರಾಜ್ಯಗಳಿಂದ 1530 ಕಲಾವಿದರು ಭಾಗವಹಿಸಿದ್ದು, ಸಂಜೆ ವೇಳೆಗೆ ಸುಮಾರು 5 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ಇದೆ. ಚಿತ್ರಸಂತೆಗೆ ಆಗಮಿಸುವವರಿಗೆ ಅನುಕೂಲವಾಗುವಂತೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ, ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ, ವಿಧಾನಸೌಧ ಮೆಟ್ರೋ ನಿಲ್ದಾಣಗಳಿಂದ ಶಿವಾನಂದ ವೃತ್ತದವರೆಗೆ ಫೀಡರ್ ಬಸ್ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ 10 ನಿಮಿಷಕ್ಕೊಂದರಂತೆ ಬಿಎಂಟಿಸಿ ಬಸ್ಗಳು ಲಭ್ಯವಿವೆ. ಸಾರ್ವಜನಿಕರಿಗೆ ಆಯ್ದ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಆಹಾರ ಮಳಿಗೆಗಳ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಮತ್ತು ಆಂಬ್ಯುಲೆನ್ಸ್ ಸೌಲಭ್ಯ, ಭದ್ರತಾ ಉದ್ದೇಶಕ್ಕಾಗಿ ಸಿಸಿಟಿವಿ ಕ್ಯಾಮೆರಾಗಳ ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ಎಟಿಎಂ ಸೌಲಭ್ಯ, ಇಡೀ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ: ದೇವರಾಜ ಅರಸ್ ದಾಖಲೆ ಮುರಿದು ಕರ್ನಾಟಕದ ದೀರ್ಘಾವಧಿ ಸಿಎಂ ಆಗಿ ಇತಿಹಾಸ ನಿರ್ಮಿಸಿದ ಸಿದ್ದರಾಮಯ್ಯ

