ರಣಜಿ ಫೈನಲ್: ಕರ್ನಾಟಕಕ್ಕೆ ಮಯಾಂಕ್ ಶತಕದ ಆಸರೆ; 5 ವಿಕೆಟ್ ನಷ್ಟಕ್ಕೆ 220 ರನ್
ರಣಜಿ ಫೈನಲ್ ಹಣಾಹಣಿಯಲ್ಲಿ ಜಮ್ಮು ಕಾಶ್ಮೀರ ವಿರುದ್ಧ ಬೃಹತ್ ಹಿನ್ನಡೆಯಲ್ಲಿರುವ ಕರ್ನಾಟಕಕ್ಕೆ ಮಯಾಂಕ್ ಅಗರ್ವಾಲ್ ಆಸರೆಯಾಗಿದ್ದಾರೆ.

Published : February 26, 2026 at 8:13 PM IST
ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2025-26ರ ಫೈನಲ್ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ತಂಡಕ್ಕೆ ಮಯಾಂಕ್ ಅಗರ್ವಾಲ್ ಅಜೇಯ ಶತಕದ ಮೂಲಕ ಆಸರೆಯಾಗಿದ್ದಾರೆ. ಆದರೂ ಸಹ ರಾಜ್ಯ ತಂಡದ ಎದುರು ಬೆಟ್ಟದಷ್ಟು ಸವಾಲಿದೆ.
ಮೂರನೇ ದಿನದಾಟದ ಅಂತ್ಯಕ್ಕೆ ಕರ್ನಾಟಕವು ಮೊದಲ ಇನ್ನಿಂಗ್ಸ್ನಲ್ಲಿ 69 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿದೆ. ಅಗರ್ವಾಲ್ 207 ಬಾಲ್ಗಳಿಗೆ 130 ರನ್ ಹಾಗೂ ಪ್ರಸಿದ್ಧ ಕೃಷ್ಣ 75 ಎಸೆತಗಳಲ್ಲಿ 27 ರನ್ಗಳೊಂದಿಗೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Standing up to the challenge 👏
— BCCI Domestic (@BCCIdomestic) February 26, 2026
Mayank Agarawal with a crucial knock for Karnataka 🙌
Updates ▶️ https://t.co/G0ytZLEyNB @IDFCFIRSTBank | #RanjiTrophy pic.twitter.com/Csytg0Nphi
ಇದಕ್ಕೂ ಮುನ್ನ, ಮೂರನೇ ದಿನದಾಟದ ಆರಂಭದಲ್ಲಿ ಪ್ರವಾಸಿ ಜಮ್ಮು ಕಾಶ್ಮೀರ ತಂಡವು ಆಲೌಟ್ ಆಗುವ ಮೂಲಕ ಪ್ರಥಮ ಇನ್ನಿಂಗ್ಸ್ನಲ್ಲಿ 584 ರನ್ಗಳ ಬೃಹತ್ ಮೊತ್ತ ದಾಖಲಿಸಿತು. 6 ವಿಕೆಟ್ಗೆ 527 ರನ್ಗಳಿಂದ ಬ್ಯಾಟಿಂಗ್ ಮುಂದುವರೆಸಿದ ಕಣಿವೆ ನಾಡಿನ ತಂಡ, ಇನ್ನೂ 57 ರನ್ ಸೇರಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು.
ಬಳಿಕ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಆರಂಭದಿಂದಲೂ ವೈಫಲ್ಯ ಅನುಭವಿಸಿತು. ಕೆ.ಎಲ್.ರಾಹುಲ್ ಕೇವಲ 13 ರನ್ಗಳಿಗೆ ಅಕಿಬ್ ನಬಿ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಕನ್ನಯ್ಯ ವಾಧವನ್ಗೆ ಕ್ಯಾಚ್ ನೀಡಿ ಹೊರ ನಡೆದರು. ಇದರಿಂದ ಭೋಜನ ವಿರಾಮಕ್ಕೂ ಮುನ್ನ ಕರ್ನಾಟಕ 13 ಓವರ್ ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 35 ರನ್ ಕಲೆಹಾಕಿತ್ತು.

ವಿರಾಮದ ನಂತರ ಕ್ರೀಸ್ಗಿಳಿದ ನಾಯಕ ಆಟ ದೇವದತ್ತ ಪಡಿಕ್ಕಲ್ 11 ರನ್ ಗಳಿಸಿ ಔಟಾದರೆ, ಅವರ ಬೆನ್ನಲ್ಲೇ ಅನುಭವಿ ಕರುಣ್ ನಾಯರ್ ಹಾಗೂ ಸ್ಮರಣ್ ರವಿಚಂದ್ರನ್ ಇಬ್ಬರೂ ಶೂನ್ಯಕ್ಕೆ ವಿಕೆಟ್ ಒಪ್ಪಿಸುವ ಮೂಲಕ ರಾಜ್ಯ ತಂಡ ಒತ್ತಡಕ್ಕೆ ಸಿಲುಕಿತು. ಕರುಣ್ ಅಕಿಬ್ ನಬಿ ಎಸೆತದಲ್ಲಿ ಕ್ಲೀನ್ ಬೌಲ್ಡಾದರೆ, ಸ್ಮರಣ್ ಕೂಡ ನಬಿ ಬೌಲಿಂಗ್ನಲ್ಲೇ ಕನ್ಹಯ್ಯಗೆ ಕ್ಯಾಚ್ ನೀಡಿ ಪೆವಿಲಿಯನ್ ಪರೇಡ್ ನಡೆಸಿದರು. ಆಗ ತಂಡದ ಮೊತ್ತ 17.6 ಓವರ್ಗಳಲ್ಲಿ 57 ರನ್ ಆಗಿತ್ತು.
ಬಳಿಕ, ಮಯಾಂಕ್ ಅಗರ್ವಾಲ್ ಜೊತೆಗೂಡಿದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಸಮಯೋಚಿತ ಆಟ ತೋರಿದರು. ಈ ಜೋಡಿ ಐದನೇ ವಿಕೆಟ್ಗೆ 105 ರನ್ ಸೇರಿಸಿತು. ತಮ್ಮ ಅನುಭವದಂತೆ ಆಟ ಪ್ರದರ್ಶಿಸಿದ ಅಗರ್ವಾಲ್ ಭರ್ಜರಿ ಶತಕ (130*, 207 ಎಸೆತ) ದಾಖಲಿಸಿದರು. ಈ ಹಂತದಲ್ಲಿ 27 ರನ್ ಗಳಿಸಿದ್ದ ಗೋಪಾಲ್ ಯುದ್ವೀರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
ತದನಂತರ, ಕೃತಿಕ್ ಕೃಷ್ಣ (27*) ಜೊತೆಗೂಡಿರುವ ಮಯಾಂಕ್ 6ನೇ ವಿಕೆಟ್ಗೆ 58 ರನ್ ಸೇರಿಸಿ ನಾಲ್ಕನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ತಂಡವು ಇನ್ನೂ 364 ರನ್ಗಳ ಭಾರಿ ಹಿನ್ನಡೆಯಲ್ಲಿದೆ.
ಇದನ್ನೂ ಓದಿ: ಕರ್ನಾಟಕ- ಜಮ್ಮು & ಕಾಶ್ಮೀರ ರಣಜಿ ಫೈನಲ್ ಡ್ರಾ ಆದ್ರೆ ಗೆಲ್ಲೋದು ಈ ತಂಡ! ಈ ಲೆಕ್ಕಾಚಾರ ಗೊತ್ತೇ?

