ETV Bharat / sports

ರಣಜಿ ಫೈನಲ್: 584 ರನ್ ಗಳಿಸಿದ ಜಮ್ಮು ಕಾಶ್ಮೀರ; ಸಂಕಷ್ಟದಲ್ಲಿ ಕರ್ನಾಟಕ ತಂಡ

ರಣಜಿ ಟ್ರೋಫಿ ಫೈನಲ್​​ನಲ್ಲಿ ಜಮ್ಮು ಕಾಶ್ಮೀರ ತಂಡ ಬೃಹತ್​ ಮೊತ್ತ ದಾಖಲಿಸಿದ್ದು, ಕರ್ನಾಟಕ ತಂಡಕ್ಕೆ ಕಠಿಣ ಸವಾಲು ಎದುರಾಗಿದೆ.

karnataka-vs-jammu-and-kashmir-ranji-trophy-final-match
ರಣಜಿ ಟ್ರೋಫಿ ಫೈನಲ್ (ETV Bharat)
author img

By ETV Bharat Karnataka Team

Published : February 26, 2026 at 1:19 PM IST

2 Min Read
Choose ETV Bharat

ಹುಬ್ಬಳ್ಳಿ: ಇಲ್ಲಿನ ನೃಪತುಂಗ ಬೆಟ್ಟದ ತಪ್ಪಲಿನ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕದ ವಿರುದ್ಧ ಜಮ್ಮು ಕಾಶ್ಮೀರ ತಂಡ ಪ್ರಥಮ ಇನ್ನಿಂಗ್ಸ್​ನಲ್ಲಿ 584 ರನ್​ಗಳ ಬೃಹತ್​ ಮೊತ್ತ ದಾಖಲಿಸಿದೆ. ಪ್ರತ್ಯುತ್ತರವಾಗಿ ಕರ್ನಾಟಕ ತಂಡವು 4 ವಿಕೆಟ್​ ಕಳೆದುಕೊಂಡು 74 ರನ್​ ಗಳಿಸಿ ಆಡುತ್ತಿದೆ.

ಪಂದ್ಯದ ಮೂರನೇ ದಿನವಾದ ಗುರುವಾರ ನಿನ್ನೆಯ ಮೊತ್ತಕ್ಕೆ 57 ರನ್ ಸೇರಿಸುವಷ್ಟರಲ್ಲಿ ಜಮ್ಮು ಕಾಶ್ಮೀರ ತಂಡ ತನ್ನೆಲ್ಲ ವಿಕೆಟ್​​​ಗಳನ್ನು ಕಳೆದುಕೊಂಡಿತು. 2ನೇ ದಿನದ ಅಂತ್ಯಕ್ಕೆ‌ ಜಮ್ಮು ಕಾಶ್ಮೀರವು 6 ವಿಕೆಟ್​​ಗೆ 527 ರನ್ ಪೇರಿಸಿತ್ತು. ಕರ್ನಾಟಕ ಪರ ವೇಗಿ ಪ್ರಸಿದ್ಧ ಕೃಷ್ಣ 98 ರನ್ ನೀಡಿ 5 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಬಳಿಕ ಬ್ಯಾಟಿಂಗ್ ಆರಂಭಿಸಿರುವ ಕರ್ನಾಟಕ ಆರಂಭಿಕ ಬ್ಯಾಟರ್ ಕೆ.ಎಲ್.ರಾಹುಲ್​​ ವಿಕೆಟ್​ ಕಳೆದುಕೊಂಡಿತು. ರಾಹುಲ್ ಕೇವಲ 13 ರನ್​​ ಗಳಿಸಿ ಆಕಿಬ್​ ನಬಿ ಬೌಲಿಂಗ್​ನಲ್ಲಿ ಕನ್ನಯ್ಯ ವಾಧವನ್​ಗೆ ಕ್ಯಾಚ್​ ನೀಡಿ ಹೊರನಡೆದರು. ಬಳಿಕ ನಾಯಕ ದೇವದತ್ತ ಪಡಿಕ್ಕಲ್​ ಕೂಡ ಭೋಜನ ವಿರಾಮದ ಬಳಿಕ ಸುನಿಲ್ ಕುಮಾರ್​​ ಬೌಲಿಂಗ್​ನಲ್ಲಿ 11 ರನ್​ಗೆ ಔಟಾದರು. ತದನಂತರ ಕರುಣ್​ ನಾಯರ್​ ಹಾಗೂ ಸ್ಮರಣ್​ ರವಿಚಂದ್ರನ್​ ಇಬ್ಬರೂ ಸಹ ಖಾತೆ ತೆರೆಯದೇ ನಿರಾಸೆ ಮೂಡಿಸಿದ್ದು, ಅತಿಥೇಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಯಾಂಕ್ ಅಗರ್ವಾಲ್​​​ ಬ್ಯಾಟಿಂಗ್​ ಮುಂದುವರೆಸಿದ್ದಾರೆ. ಕರ್ನಾಟಕದ ಮುಂದೆ ಬೃಹತ್​ ಮೊತ್ತ ಕಲೆಹಾಕುವ ಸವಾಲು ಎದುರಾಗಿದೆ.

karnataka-vs-jammu-and-kashmir-ranji-trophy-final-match
ರಣಜಿ ಟ್ರೋಫಿ ಫೈನಲ್ (ETV Bharat)

ಜಮ್ಮು ಕಾಶ್ಮೀರ ಬ್ಯಾಟಿಂಗ್​: ರಣಜಿ ಕ್ರಿಕೆಟ್​ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್​ ತಲುಪಿರುವ ಜಮ್ಮು ಕಾಶ್ಮೀರ ತಂಡದ ಬ್ಯಾಟರ್​ಗಳು ಕರ್ನಾಟಕದ ಬೌಲಿಂಗ್​ ಪಡೆಯನ್ನು ಇನ್ನಿಲ್ಲದೆ ಕಾಡಿದರು. ತಂಡದ ಪರ ಒಬ್ಬರು ಶತಕ ಹಾಗೂ ನಾಲ್ವರು ಬ್ಯಾಟರ್​​ಗಳು ಅರ್ಧಶತಕಗಳನ್ನು ಬಾರಿಸಿ ಮಿಂಚಿದರು. ಖಾಮ್ರನ್​ ಇಕ್ಬಾಲ್​ (6) ಹೊರತುಪಡಿಸಿ ಉಳಿದೆಲ್ಲಾ ಅಗ್ರಕ್ರಮಾಂಕದ ಬ್ಯಾಟರ್​ಗಳು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.

ಯಾವರ್​ ಹಸ್ಸನ್​ 88, ಶುಭಮ್​ ಪುಂದಿರ್​ 121, ನಾಯಕ ಪರಾಸ್​ ದೋಗ್ರಾ 70, ಅಬ್ದುಲ್​ ಸಮದ್​ 61, ವಿಕೆಟ್​ ಕೀಪರ್​ ಬ್ಯಾಟರ್​ ಕನ್ಹಯ್ಯ ವಾಧವಾನ್​ 70 ಹಾಗೂ ಸಾಹಿಲ್ ಲೋಹ್ರಾ 72 ರನ್​ ಬಾರಿಸಿ ಬೃಹತ್​ ಮೊತ್ತಕ್ಕೆ ಕಾರಣರಾದರು. ಅಲ್ಲದೆ, ಬಾಲಂಗೋಚಿಗಳಾದ ಅಬಿದ್​ ಮುಸ್ತಾಕ್​ 28 ಹಾಗೂ ಯುದ್ವೀರ್​ ಸಿಂಗ್​ 30 ರನ್​ ಗಳಿಸುವ ಮೂಲಕ ಕರ್ನಾಟಕದ ಬೌಲರ್​ಗಳ ಬೆವರಿಳಿಸಿದರು. ಕರ್ನಾಟಕದ ಪರ ಪ್ರಸಿದ್ದ್​ ಕೃಷ್ಣ 98 ರನ್​ಗೆ 5 ವಿಕೆಟ್​ ಪಡೆದರೆ, ವಿದ್ಯಾದರ್​ ಪಾಟೀಲ್​, ವಿಜಯ್​ಕುಮಾರ್​ ವೈಶಾಕ್​, ಶ್ರೇಯಸ್​ ಗೋಪಾಲ್​, ಶಿಖರ್​ ಶೆಟ್ಟಿ ತಲಾ ಒಂದು ವಿಕೆಟ್​ ಕಿತ್ತರು.

ಪಂದ್ಯದಲ್ಲಿ ಇಂದೂ ಸೇರಿ ಇನ್ನೆರಡು ದಿನಗಳ ಆಟ ಬಾಕಿ ಇದೆ. ಒಂದು ವೇಳೆ, ಪಂದ್ಯ ಡ್ರಾ ಆಗಿ, 584 ರನ್​ಗಳ ಬೃಹತ್​​ ಮೊತ್ತವನ್ನು ದಾಟುವಲ್ಲಿ ಕರ್ನಾಟಕವು ವಿಫಲವಾದರೆ, ಜಮ್ಮು ಕಾಶ್ಮೀರ ತಂಡವು ನಿಯಮದ ಪ್ರಕಾರ ಇನ್ನಿಂಗ್ಸ್​ ಮುನ್ನಡೆ ಆಧಾರದ ಮೇಲೆ ಚಾಂಪಿಯನ್​ ಆಗಿ ಹೊರಹೊಮ್ಮಲಿದೆ. ಹೀಗಾಗಿ, ಭಾರಿ ರನ್​ ಬಿಟ್ಟುಕೊಟ್ಟಿರುವ ಕರ್ನಾಟಕ ತಂಡವು ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿದೆ.

ಇದನ್ನೂ ಓದಿ: ರಣಜಿ ಫೈನಲ್‌: ಜಮ್ಮು-ಕಾಶ್ಮೀರ ಬೃಹತ್​ ಮೊತ್ತ; ಮಾತಿನ ಚಕಮಕಿ ವೇಳೆ ಕರ್ನಾಟಕದ ಫೀಲ್ಡರ್‌ಗೆ 'ಹೆಡ್‌ಬಟ್' ಮಾಡಿದ ಪರಾಸ್ ಡೋಗ್ರಾ