ETV Bharat / sports

ರಣಜಿ ಫೈನಲ್: ಕರ್ನಾಟಕ 293ಕ್ಕೆ ಆಲೌಟ್: ಬಿಗಿಹಿಡಿತ ಸಾಧಿಸಿದ ಜಮ್ಮು ಕಾಶ್ಮೀರ

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 293 ರನ್​ಗಳಿಗೆ ಆಲೌಟ್ ಆಯಿತು.

karnataka-team-all-out-for-293-runs-in-first-innings-of-ranji-trophy-final-match
ರಣಜಿ ಫೈನಲ್ (ETV Bharat)
author img

By ETV Bharat Karnataka Team

Published : February 27, 2026 at 2:22 PM IST

2 Min Read
Choose ETV Bharat

ಹುಬ್ಬಳ್ಳಿ: ಇಲ್ಲಿನ ನೃಪತುಂಗ ಬೆಟ್ಟದ ತಪ್ಪಲಿನ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರದ ವಿರುದ್ಧ ರಾಜ್ಯ ತಂಡವು ತೀವ್ರ ಹಿನ್ನಡೆಯಲ್ಲಿದೆ.

ನಾಲ್ಕನೇ ದಿನವಾದ ಶುಕ್ರವಾರ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಜಮ್ಮು ಕಾಶ್ಮೀರದ 584 ರನ್​ಗಳಿಗೆ ಪ್ರತ್ಯುತ್ತರವಾಗಿ, 93.3 ಓವರ್​ಗಳಲ್ಲಿ 293 ರನ್​ಗೆ ಆಲೌಟ್ ಆಯಿತು. ಈ ಮೂಲಕ 291 ರನ್​ಗಳ ಹಿನ್ನಡೆ ಅನುಭವಿಸಿತು. ಮೊದಲ ಬಾರಿಗೆ ರಣಜಿ ಫೈನಲ್​ ತಲುಪಿರುವ ಕಣಿವೆನಾಡಿನ ತಂಡ ಮೇಲುಗೈ ಸಾಧಿಸಿದೆ.

ಮಯಾಂಕ್ 160 ರನ್​: ಮೂರನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿದ್ದ ಕರ್ನಾಟಕ ಶುಕ್ರವಾರ ಹೆಚ್ಚಿನ ಪ್ರತಿರೋಧವೊಡ್ಡಲಿಲ್ಲ. ಮೊದಲ ಅವಧಿಯಲ್ಲೇ 73 ರನ್​ಗೆ ಇನ್ನುಳಿದ ಐದು ವಿಕೆಟ್​ಗಳನ್ನು ಕಳೆದುಕೊಂಡಿತು. ಮಯಾಂಕ್ ಅಗರವಾಲ್ ಹಾಗೂ 27 ರನ್​ ಬಾರಿಸಿದ್ದ ಕೃತಿಕ್​ ಕೃಷ್ಣ ಇಂದು ಬ್ಯಾಟಿಂಗ್​ ಮುಂದುವರೆಸಿದರು. ಕೆಲ ಹೊತ್ತಲ್ಲೇ, ಕೃತಿಕ್ ಕೃಷ್ಣ (36) ಹಾಗೂ ಅವರ ಬೆನ್ನಲ್ಲೇ ವಿದ್ಯಾಧರ ಪಾಟೀಲ (11) ಔಟಾದರು. ಇನ್ನೊಂದೆಡೆ, ನಾಲ್ಕನೇ ದಿನವೂ ಅಗರವಾಲ್ ಏಕಾಂಗಿ ಹೋರಾಟ ಮುಂದುವರೆಸಿದರು. ಕ್ರೀಸ್​​ನಲ್ಲಿ 443 ನಿಮಿಷ ನಿಂತಿದ್ದ ಅವರು 260 ಎಸೆತಗಳಲ್ಲಿ 160 ರನ್ ಗಳಿಸಿದ್ದಾಗ ನಬಿ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ಇದಾದ ಬಳಿಕ, ಶಿಖರ್​ ಶೆಟ್ಟಿ 0 ಹಾಗೂ ಪ್ರಸಿದ್ಧ್​ ಕೃಷ್ಣ 4 ರನ್​ಗೆ ಔಟಾಗುವ ಮೂಲಕ ಕರ್ನಾಟಕ ಎಲ್ಲಾ ವಿಕೆಟ್​ ಕಳೆದುಕೊಂಡಿತು. ವಿಜಯ್​ಕುಮಾರ್​ ವೈಶಾಖ್​ ಅಜೇಯ 17 ರನ್​ ಗಳಿಸಿದರು.

291 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಜಮ್ಮು ಕಾಶ್ಮೀರ ತಂಡ, 19 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 66 ರನ್​ ಗಳಿಸಿದೆ. ಯಾವರ್ ಹಸನ್ ಹಾಗೂ ಶುಭಂ ಕುಂದಿರ್ ವಿಕೆಟ್ ಒಪ್ಪಿಸಿದ್ದಾರೆ. ಪ್ರಸಿದ್ಧ್ ಕೃಷ್ಣ ಬೌಲಿಂಗ್​ನಲ್ಲಿ ಯಾವರ್ ಹಸನ್ ಕ್ಲಿನ್ ಬೌಲ್ಡ್​ ಆದರೆ , ಶುಭಂ ಕುಂದಿರ್ ವೈಶಾಖ್​ ಎಸೆತದಲ್ಲಿ ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿ ಹೊರನಡೆದರು.

ದಾಖಲೆ ಬರೆದ ನಬಿ: ಜಮ್ಮು ಕಾಶ್ಮೀರದ ವೇಗದ ಬೌಲರ್ 29 ವಯಸ್ಸಿನ ಅಕೀಬ್ ನಬಿ ಟೂರ್ನಿಯ ಫೈನಲ್ ಪಂದ್ಯದಲ್ಲಿ 5 ವಿಕೆಟ್ ಪಡೆದು ಸಂಭ್ರಮಿಸಿದರು. ಪ್ರಸ್ತುತ ರಣಜಿ ಟ್ರೋಫಿ ಟೂರ್ನಿಯಲ್ಲಿ 7ನೇ ಬಾರಿ ಐದು ವಿಕೆಟ್ ಪಡೆದ ಕೀರ್ತಿಗೆ ಅವರು ಪಾತ್ರರಾದರು.

ಇದನ್ನೂ ಓದಿ: ಟಿ-20 ವಿಶ್ವಕಪ್ 2026: ಪಾಯಿಂಟ್ಸ್ ಟೇಬಲ್ ಲೆಕ್ಕಾಚಾರ ಹೇಗಿದೆ?: ಭಾರತ ಸೇರಿದಂತೆ ಯಾರಿಗೆಲ್ಲ ಸೆಮಿಫೈನಲ್​ ಹಾದಿ ಸುಗಮ?