ಐಪಿಎಲ್ ಪ್ರಾರಂಭಕ್ಕೂ ಮೊದಲೇ ಆರ್ಸಿಬಿ ಫ್ಯಾನ್ಸ್ಗಳಿಗೆ ಸಿಕ್ಕಿತು ಗುಡ್ನ್ಯೂಸ್!
ಈಬಾರಿ ಐಪಿಎಲ್ನಲ್ಲಿ ಆರ್ಸಿಬಿ ತಮ್ಮ ಪಂದ್ಯಗಳನ್ನು ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆಡಲಿದೆ.


Published : March 3, 2026 at 5:40 PM IST
|Updated : March 3, 2026 at 8:14 PM IST
ಐಪಿಎಲ್ ಪ್ರಾರಂಭಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ಯಾನ್ಸ್ಗಳಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಈ ಬಾರಿಯ ಐಪಿಎಲ್ನಲ್ಲಿ ಉದ್ಘಾಟನ ಪಂದ್ಯ ಸೇರಿದಂತೆ ತವರು ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿವೆ ಎಂದು ಆರ್ಸಿಬಿ ಅಧಿಕೃತವಾಗಿ ತಿಳಿಸಿದೆ. ಈ ಋತುವಿನಲ್ಲಿ ಆರ್ಸಿಬಿಯ ಐದು ತವರು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಉಳಿದ ಎರಡು ಪಂದ್ಯಗಳನ್ನು ರಾಯ್ಪುರದಲ್ಲಿ ನಡೆಯಲಿವೆ.
ಈ ಕುರಿತು ಆರ್ಸಿಬಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಯೋಜಿಸುವಲ್ಲಿ ಮಾರ್ಗದರ್ಶನ, ಸಹಕಾರ ಮತ್ತು ಬೆಂಬಲಕ್ಕಾಗಿ ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಮತ್ತು ಕರ್ನಾಟಕ ಪೊಲೀಸರಿಗೆ ಆರ್ಸಿಬಿ ಪ್ರಾಮಾಣಿಕ ಕೃತಜ್ಞತೆ ಸಲ್ಲಿಸುತ್ತದೆ. 2026 ಐಪಿಎಲ್ ಋತುವಿನಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ನಮ್ಮ ಮಂಡಳಿ ಆದ್ಯತೆ ನೀಡುತ್ತದೆ ಎಂದು ತಿಳಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸಿಇಒ ರಾಜೇಶ್ ಮೆನನ್ ಪ್ರತಿಕ್ರಿಯಿಸಿ, "ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ತಂಡದ ಗುರುತನ್ನು ಜೀವಂತಗೊಳಿಸುವ ಒಂದು ಸುಂದರ ಸ್ಥಳವಾಗಿದೆ. ಬೆಂಗಳೂರು ಮೈದಾನಕ್ಕೆ ಅಭಿಮಾನಿಗಳು ತರುವ ಶಕ್ತಿಯು ನಮ್ಮ ಆಟಗಾರರಿಗೆ ಇದ್ದು ಇದು ಅವರಿಗೆ ಪ್ರೇರಕವೂ ಆಗಿದೆ. ಆಟದ ಪ್ರತಿಯೊಂದು ಹಂತದಲ್ಲೂ ಫ್ಯಾನ್ಸ್ ನಮ್ಮ ಆಟಗಾರರಿಗೆ ಸ್ಫೂರ್ತಿ ನೀಡುತ್ತಾರೆ. ಸದಾ ನಮ್ಮೊಂದಿಗೆ ಇರುವ ಅಭಿಮಾನಿಗಳು ಈ ಬಾರಿಯೂ ತಮ್ಮ ನೆಚ್ಚಿನ ತಂಡದ ಪಂದ್ಯಗಳನ್ನು ತವರಿನಲ್ಲೇ ವೀಕ್ಷಿಸಬಹುದಾಗಿದೆ."
"ನಿರಂತರ ಚರ್ಚೆಗಳು ಮತ್ತು ಅನುಮತಿ ಸಿಕ್ಕ ನಂತರ , ಆರ್ಸಿಬಿ ಬೆಂಗಳೂರಿನಲ್ಲಿ ಐದು ಪಂದ್ಯಗಳನ್ನು ಆಡುತ್ತದೆ ಎಂದು ದೃಢೀಕರಿಸಲು ನಮಗೆ ಸಂತೋಷವಾಗಿದೆ. ಇದನ್ನು ಸಾಧ್ಯವಾಗಿಸುವಲ್ಲಿ ಬೆಂಬಲ ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರ, ಕೆಎಸ್ಸಿಎ ಮತ್ತು ಕರ್ನಾಟಕ ಪೊಲೀಸರಿಗೆ ನಾವು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದ್ದಾರೆ."
ಗಮನಾರ್ಹವಾಗಿ, 2026 ರ ಋತುವಿನ ಪ್ಲೇಆಫ್ಗಳು ಮತ್ತು ಫೈನಲ್ಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ. ಕಳೆದ ಆವೃತ್ತಿಯ ಐಪಿಎಲ್ ಫೈನಲ್ನಲ್ಲಿ ಪಂಜಾಬ್ ತಂಡವನ್ನು ಮಣಿಸಿ ಆರ್ಸಿಬಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಕಾಲ್ತುಳಿತ ಉಂಟಾಗಿ 11 ಜನರು ಪ್ರಾಣಕಳೆದುಕೊಂಡಿದ್ದರು. ಬಳಿಕ ಆರ್ಸಿಬಿ ಕ್ರಿಕೆಟ್ ಪಂದ್ಯ ಸೇರಿದಂತೆ ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ನಡೆಸಲು ಸುರಕ್ಷಿತ ಸ್ಥಳವಲ್ಲ ಎಂದು ಕ್ರಿಕೆಟ್ ಪಂದ್ಯಗಳನ್ನು ನಿರ್ಬಂಧಿಸಲಾಗಿತ್ತು. ಇದೀಗ ಸರ್ಕಾರ ಪಂದ್ಯಗಳ ನಡೆಸಲು ಅನುಮತಿ ನೀಡಿದೆ.
ಇದನ್ನೂ ಓದಿ: ಟಿ-20 ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಿಗಾಗಿ ಅಂಪೈರ್ - ರೆಫರಿಗಳನ್ನು ಪ್ರಕಟಿಸಿದ ಐಸಿಸಿ

