ಪ್ರಿಯಾಂಶ್, ಕಾನೊಲಿ ಅಬ್ಬರಕ್ಕೆ ಬೆಚ್ಚಿಬಿದ್ದ ಜೈಂಟ್ಸ್: ಪಂಜಾಬ್ ಕಿಂಗ್ಸ್ ಗೆಲುವಿನ ನಾಗಾಲೋಟ
ಟಾಸ್ ಗೆದ್ದು ಪಂಜಾಬ್ ಕಿಂಗ್ಸ್ ತಂಡಕ್ಕೆ ಬ್ಯಾಟಿಂಗ್ ನೀಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಮತ್ತೊಂದು ಸೋಲು ಕಂಡಿದೆ.

Published : April 20, 2026 at 9:12 AM IST
ಚಂಡೀಗಡ: ಈ ಬಾರಿಯ ಐಪಿಎಲ್ನಲ್ಲಿ ಅಜೇಯ ಗೆಲುವಿನ ಓಟ ಮುಂದುವರೆಸಿರುವ ಪಂಜಾಬ್ ಕಿಂಗ್ಸ್ ತಂಡ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 54 ರನ್ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಪಾರಮ್ಯ ಮುಂದುವರೆಸಿದೆ.
ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ತಂಡ ಪಂಜಾಬ್ಗೆ ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಆಟ ಆರಂಭಿಸಿದ ಕಿಂಗ್ಸ್ಗೆ ಪ್ರಬಸಿಮ್ರಾನ್ ಸಿಂಗ್ ಶೂನ್ಯಕ್ಕೆ ಔಟಾಗುವ ಮೂಲಕ ಆಘಾತ ಎದುರಾಯಿತು. ಆದರೆ ಎರಡನೇ ವಿಕೆಟ್ಗೆ ಜೊತೆಯಾದ ಯುವ ಬ್ಯಾಟರ್ಗಳಾದ ಪ್ರಿಯಾಂಶ್ ಆರ್ಯ (93, 37 ಬಾಲ್) ಹಾಗೂ ಕೂಪರ್ ಕಾನೊಲಿ (87, 46 ಎಸೆತ) ಭರ್ಜರಿ 184 ರನ್ಗಳ ಜೊತೆಯಾಟವಾಡುವ ಮೂಲಕ ಜೈಂಟ್ಸ್ ಬೌಲರ್ಗಳನ್ನು ಚೆಂಡಾಡಿದರು.
Kya wholesome team hain yaarr! ♥️pic.twitter.com/cWHoc0w0K0
— Punjab Kings (@PunjabKingsIPL) April 19, 2026
ಈ ಹಂತದಲ್ಲಿ ಕಾನೊಲಿ ಔಟಾದರೆ, ಅವರ ಬೆನ್ನಲ್ಲೇ ಶತಕದ ಹೊಸ್ತಿಲಲ್ಲಿದ್ದ ಪ್ರಿಯಾಂಶ್ 93 ರನ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ಅಯ್ಯರ್ ಕೂಡ ಕೇವಲ 5 ರನ್ಗೆ ಪೆವಿಲಿಯನ್ಗೆ ಮರಳಿದರು. ಕೊನೆಯ ಓವರ್ಗಳಲ್ಲಿ ಸ್ಟೊಯ್ನಿಸ್ 29 (16 ಎಸೆತ), ನೆಹಾಲ್ ವಧೇರಾ (13) ಹಾಗೂ ಶಶಾಂಕ್ ಸಿಂಗ್ (17) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ 7 ವಿಕೆಟ್ಗಳಿಗೆ 254 ರನ್ ಬಾರಿಸಿತು. ಇದು ಈ ಋತುವಿನ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮುನ್ನ ಆರ್ಸಿಬಿ 250 ರನ್ ಗಳಿಸಿರುವುದು ಅತ್ಯಧಿಕ ಸ್ಕೋರ್ ಆಗಿತ್ತು. ಲಕ್ನೋ ಪರ ಮೊಹಮದ್ ಶಮಿ ಸೇರಿದಂತೆ ಎಲ್ಲಾ ಬೌಲರ್ಗಳು ದುಬಾರಿಯಾದರೂ ಸಹ, ವೇಗಿ ಪ್ರಿನ್ಸ್ ಯಾದವ್ 4 ಓವರ್ಗಳಲ್ಲಿ ಕೇವಲ 25 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದರು.
ಜೈಂಟ್ಸ್ ಬ್ಯಾಟಿಂಗ್: 255 ರನ್ ಗುರಿ ಬೆನ್ನಟ್ಟಿದ ಜೈಂಟ್ಸ್ ಉತ್ತಮ ಆರಂಭ ಪಡೆಯಿತು. ಪವರ್ ಪ್ಲೇ ಅಂತ್ಯದಲ್ಲಿ 35 ಗಳಿಸಿದ್ದ ಆಯುಶ್ ಬದೋನಿ ಮೊದಲ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿದರು. ಈ ವೇಳೆ ತಂಡದ ಮೊತ್ತ 61 ರನ್ಗಳಾಗಿತ್ತು. ಬಳಿಕ ನಾಯಕ್ ರಿಷಭ್ ಪಂತ್ (43) ಜೊತೆಗೂಡಿದ ಮಿಚಲ್ ಮಾರ್ಷ್ (40) ಕೊಂಚ ಭರವಸೆ ಮೂಡಿಸಿದರೂ ಸಹ ಅದು ಸಾಕಾಗಲಿಲ್ಲ. ಚಹಲ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಮಾರ್ಷ್ ಬ್ರೆಟ್ಲೆಟ್ಗೆ ಕ್ಯಾಚ್ ನೀಡಿ ಹೊರನಡೆದರು.
ನಂತರ, ಪಂತ್ ಕೂಡ 43 ರನ್ಗೆ ಔಟಾದರು. ಈ ಬಾರಿ ಸಂಪೂರ್ಣ ವಿಫಲರಾಗಿರುವ ಪೂರನ್ (9) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಮಾರ್ಕ್ರಮ್ 42 ಹಾಗೂ ಮುಕುಲ್ ಚೌದರಿ ಅಜೇಯ 21 ರನ್ ಬಾರಿಸಿ ಕೊಂಚ ಹೋರಾಟ ಪ್ರದರ್ಶಿಸಿದರು. ಅಂತಿಮವಾಗಿ 20 ಓವರ್ಗಳಲ್ಲಿ 200 ರನ್ ಮಾತ್ರ ಗಳಿಸಿದ ಜೈಂಟ್ಸ್, ಟೂರ್ನಿಯ 6 ಪಂದ್ಯಗಳಲ್ಲಿ ನಾಲ್ಕು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಜಾರಿದೆ. ಪ್ರಿಯಾಂಶ್ ಆರ್ಯ ಪಂದ್ಯದ ಆಟಗಾರ ಪ್ರಶಸ್ತಿಗೆ ಪಾತ್ರರಾದರು.
ಇದನ್ನೂ ಓದಿ: ರಾಜಸ್ಥಾನ ಮಣಿಸಿ ಕೊನೆಗೂ ಗೆಲುವಿನ ಖಾತೆ ತೆರೆದ ಕೆಕೆಆರ್!!

