ETV Bharat / sports

​ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಕ್ರಿಕೆಟ್‌ ಜೊತೆಗೆ ಲಿಂಕ್ ಮಾಡಬಾರದು: ಶಶಿ ತರೂರ್

ಐಪಿಎಲ್​ ಮಿನಿ ಹರಾಜಿನಲ್ಲಿ ಬಾಂಗ್ಲಾದೇಶ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್​ ತಂಡ ಖರೀದಿಸಿದಕ್ಕಾಗಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಈ ವಿಚಾರವಾಗಿ ಶಶಿ ತರೂರು ಪ್ರತಿಕ್ರಿಯೆ ನೀಡಿದ್ದಾರೆ.

ಶಶಿ ತರೂರ್​ ಮತ್ತು ಮುಸ್ತಾಫಿಜುರ್​ ರೆಹಮಾನ್​
ಶಶಿ ತರೂರ್​ ಮತ್ತು ಮುಸ್ತಾಫಿಜುರ್​ ರೆಹಮಾನ್​ (IANS)
author img

By ETV Bharat Sports Team

Published : January 3, 2026 at 11:34 AM IST

3 Min Read
Choose ETV Bharat

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಭಾರತದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿವೆ. ಹಿಂದೂಗಳ ಮೇಲಿನ ಸರಣಿ ದಾಳಿಗಳಿಂದಾಗಿ ಬಾಂಗ್ಲಾದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ ಈ ಸಮಯದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಐಪಿಎಲ್ 2026ರ ಮಿನಿ-ಹರಾಜಿನಲ್ಲಿ ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ದಾಖಲೆಯ ಬೆಲೆ ₹9.2 ಕೋಟಿ ರೂ.ಗೆ ಖರೀದಿಸಿದ್ದಕ್ಕಾಗಿ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯೆ ನೀಡಿದ್ದಾರೆ.

"ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಕ್ರಿಕೆಟ್‌ಗೆ ಲಿಂಕ್ ಮಾಡಬಾರದು. ಆದಾಗ್ಯೂ, ಆ ದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಅವರ ಸರ್ಕಾರವನ್ನು ಒತ್ತಾಯಿಸುತ್ತೇವೆ. ಮುಸ್ತಾಫಿಜುರ್ ರೆಹಮಾನ್ ಒಬ್ಬ ಕ್ರಿಕೆಟಿಗ ಅಲ್ಪಸಂಖ್ಯಾತರ ಮೇಲಿನ ದಾಳಿಗಳಿಗೂ ಅವರಿಗೆ ಯಾವುದೇ ಸಂಬಂಧವಿಲ್ಲ. ಈ ವಿಷಯದಲ್ಲಿ ಅವರ ವಿರುದ್ಧ ವೈಯಕ್ತಿಕವಾಗಿ ಯಾವುದೇ ಆರೋಪಗಳು ಸರಿಯಲ್ಲ. ಅಲ್ಲಿಯ ದಾಳಿಯನ್ನು ಇವರ ಐಪಿಎಲ್‌ ಆಯ್ಕೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಎರಡನ್ನೂ ಒಟ್ಟಿಗೆ ಬೆರೆಸುವುದು ಒಳ್ಳೆಯದಲ್ಲ,' ಎಂದು ಶಶಿ ತರೂರ್ ತಿಳಿಸಿದ್ದಾರೆ.

"ಕ್ರೀಡೆಯಲ್ಲಿ ರಾಜಕೀಯ ಬೆರೆಸಬೇಡಿ. ನಮ್ಮ ನೆರೆಹೊರೆಯವರನ್ನು ದೂರವಿಡುವುದು ಅವರೊಂದಿಗೆ ಆಟವಾಡದಿರುವುದು ಹೇಗೆ ಸರಿ? ನಮ್ಮ ದೇಶವೂ ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಹಾಗಾಗಿ ರಾಜಕೀಯ ಬಿಟ್ಟು ನಾವು ಅವರೊಂದಿಗೆ ಆಡಬೇಕು' ಎಂದು ಶಶಿ ತರೂರ್ ತಿಳಿಸಿದ್ದಾರೆ.

ಬಾಂಗ್ಲಾದೇಶಿ ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿರುವುದಕ್ಕೆ ಫ್ರಾಂಚೈಸಿಯನ್ನು ದೂಷಿಸಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ, 'ಎಕ್ಸ್' ಮೂಲಕ ಟೀಕಿಸಿದ್ದಾರೆ. 'ಐಪಿಎಲ್‌ನಲ್ಲಿ ಬಾಂಗ್ಲಾದೇಶಿ ಆಟಗಾರ ಇರುವುದಕ್ಕೆ ಬಿಜೆಪಿ ದೂಷಿಸುತ್ತಿದೆ. ವಿದೇಶಿ ಆಟಗಾರರು ಈ ಲೀಗ್‌ನಲ್ಲಿ ಆಡುತ್ತಿರುವುದಕ್ಕೆ ಕಾರಣ ಬಿಸಿಸಿಐ ಮತ್ತು ಐಪಿಎಲ್ ವಿಧಿಸಿರುವ ನಿಯಮಗಳೇ ಕಾರಣ. ಈ ವಿಷಯದಲ್ಲಿ ಫ್ರಾಂಚೈಸಿಯನ್ನು ಟೀಕಿಸುವ ಬದಲು, ಬಿಜೆಪಿ ನಾಯಕರು ಬಿಸಿಸಿಐಯನ್ನು ಪ್ರಶ್ನಿಸಬೇಕು ಎಂದು ಅವರು ಹೇಳಿದರು.

ಅವರು ಹಿಂದಿನ ಘಟನೆಗಳನ್ನು ಸಹ ಉಲ್ಲೇಖಿಸಿ, "ಪಹಲ್ಗಾಮ್ ದಾಳಿಯ ನಂತರ, ಭಾರತ ಮತ್ತು ಪಾಕಿಸ್ತಾನ ನಡುವೆ ಪಂದ್ಯಗಳನ್ನು ಆಡಲು ಬಿಜೆಪಿ ಆಕ್ಷೇಪಿಸಲಿಲ್ಲ. ಕೋವಿಡ್ ಅವಧಿಯಲ್ಲಿ, ಐಪಿಎಲ್ ಪಂದ್ಯಗಳನ್ನು ಇಸ್ಲಾಮಿಕ್ ದೇಶಗಳಿಗೆ ಸ್ಥಳಾಂತರಿಸುವುದನ್ನು ಅದು ಎಂದಿಗೂ ಪ್ರಶ್ನಿಸಲಿಲ್ಲ. ಫ್ರಾಂಚೈಸಿಗಳನ್ನು ಪ್ರಶ್ನಿಸುವ ಬದಲು, ಬಿಜೆಪಿ ಗೃಹ ಸಚಿವರನ್ನು ಕೇಳಬೇಕು" ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬಿಸಿಸಿಐ ಪ್ರತಿಕ್ರಿಯೆ: ಮತ್ತೊಂದೆಡ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ವಿಚಾರವಾಗಿ ಬಿಸಿಸಿಐ ಮೌನ ಮುರಿದಿದ್ದು ಅವರನ್ನು ತಂಡದಿಂದ ರಿಲೀಸ್​ ಮೂಡುವಂತೆ ಕೆಕೆಆರ್​ಗೆ ಕೇಳಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ದೇವಜಿತ್ ಸೈಕಿಯಾ ಇದನ್ನು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯಿಂದಾಗಿ, ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಮ್ಮ ತಂಡದಿಂದ ಬಿಡುಗಡೆ ಮಾಡುವಂತೆ ಬಿಸಿಸಿಐ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್)ಗೆ ನಿರ್ದೇಶನ ನೀಡಿದೆ ಎಂದು ಸೈಕಿಯಾ ತಿಳಿಸಿದ್ದಾರೆ. ಕೆಕೆಆರ್ ಅವರನ್ನು ಬದಲಾಯಿಸಲು ಬಯಸಿದರೆ, ಬಿಸಿಸಿಐ ಅದಕ್ಕೆ ಅವಕಾಶ ನೀಡುತ್ತದೆ ಎಂದು ಸಹ ಸೈಕಿಯಾ ಸ್ಪಷ್ಟಪಡಿಸಿದ್ದಾರೆ.

ಹರಾಜಿನಲ್ಲಿ ಮುಸ್ತಾಫಿಜುರ್ ಖರೀದಿಸಿದ ಕೆಕೆಆರ್​: ಐಪಿಎಲ್ 2026ಗಾಗಿ ಡಿಸೆಂಬರ್‌ನಲ್ಲಿ ನಡೆದಿದ್ದ ಮಿನಿ-ಹರಾಜಿನಲ್ಲಿ ಕೆಕೆಆರ್ ಮುಸ್ತಾಫಿಜುರ್ ಅವರನ್ನು ಖರೀದಿಸಿತು. ಶಾರುಖ್ ಖಾನ್ ಒಡೆತನದ ಕೆಕೆಆರ್ ಮುಸ್ತಾಫಿಜುರ್ ಅವರನ್ನು ₹9.20 ಕೋಟಿಗೆ ಪಡೆದುಕೊಂಡಿತು. ಮುಸ್ತಾಫಿಜುರ್ ಅವರಿಗಾಗಿ ಕೆಕೆಆರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಕೆಕೆಆರ್) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಕೆಕೆಆರ್ ಬಾಂಗ್ಲಾದೇಶದ ಆಟಗಾರನನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಆದಾಗ್ಯೂ, ಮುಸ್ತಾಫಿಜುರ್ ಅವರನ್ನು ಖರೀದಿಸಿದ ನಂತರ ಕೆಕೆಆರ್ ಮತ್ತು ಶಾರುಖ್ ಖಾನ್ ವಿರುದ್ಧ​ ಟೀಕೆಗಳು ಕೇಳಿಬರಲಾರಂಭಿಸಿದವು.

ಈ ಬಾರಿ ಹರಾಜಿನಲ್ಲಿ ಏಳು ಬಾಂಗ್ಲಾದೇಶದ ಆಟಗಾರರು ಕಾಣಿಸಿಕೊಂಡಿದ್ದರು. ಈ ಆಟಗಾರರಲ್ಲಿ ರಿಷಾದ್ ಹುಸೇನ್, ತಸ್ಕಿನ್ ಅಹ್ಮದ್, ತನ್ಜಿಮ್ ಹಸನ್ ಸಕಿಬ್, ನಹಿದ್ ರಾಣಾ, ರಕಿಬುಲ್ ಹಸನ್, ಮೊಹಮ್ಮದ್ ಶೋರಿಫುಲ್ ಇಸ್ಲಾಂ ಮತ್ತು ಮುಸ್ತಾಫಿಜುರ್ ರೆಹಮಾನ್ ಹೆಸರುಗಳಿದ್ದವು. ಈ ಪೈಕಿ, ಮುಸ್ತಾಫಿಜುರ್ ಮಾತ್ರ ಹರಾಜಿನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: ಟಿ20 ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ; ಇಬ್ಬರು ಸ್ಟಾರ್​ ಆಟಗಾರರಿಗಿಲ್ಲ ಸ್ಥಾನ