ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಕೆಎಸ್ಸಿಎ ಮಹಾರಾಜ ಟ್ರೋಫಿ T-20 ಪಂದ್ಯಾವಳಿ
ರಾಜ್ಯದ ಪ್ರತಿಷ್ಠಿತ ಮಹಾರಾಜ T20 ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಜೂನ್ 20 ರಿಂದ ಜುಲೈ 12ರವರೆಗೆ ನಡೆಯಲಿದೆ ಎಂದು ಕೆಎಸ್ಸಿಎ ತಿಳಿಸಿದೆ.

Published : May 23, 2026 at 10:47 AM IST
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಹಾರಾಜ T20 ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಜೂನ್ 20 ರಿಂದ ಜುಲೈ 12ರವರೆಗೆ ನಡೆಯಲಿದೆ. ಈ ಬಾರಿ ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಪಂದ್ಯಗಳು ನಡೆಯಲಿದ್ದು, ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಟೂರ್ನಿಯು ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದ ಪಂದ್ಯಗಳು ಮೈಸೂರಿನಲ್ಲಿ ಆರಂಭವಾಗಲಿವೆ. ನಂತರ ಹುಬ್ಬಳ್ಳಿಯಲ್ಲಿ, ಅಂತಿಮ ಸುತ್ತಿನ ಪಂದ್ಯಗಳು ಮತ್ತೆ ಮೈಸೂರಿನಲ್ಲಿ ನಡೆಯಲಿವೆ.
ಜೂನ್ 4ರಂದು ಆಟಗಾರರ ಹರಾಜು ಪ್ರಕ್ರಿಯೆ ಆಲೂರಿನಲ್ಲಿ ನಡೆಸಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ. ಪ್ರತಿ ತಂಡಗಳಿಗೆ ಗರಿಷ್ಠ 60 ಲಕ್ಷ ರೂಪಾಯಿಗಳ ಮೊತ್ತವನ್ನು (ಪರ್ಸ್) ನಿಗದಿಪಡಿಸಲಾಗಿದೆ. ಕೆಎಸ್ಸಿಎ ಹಿರಿಯ ಆಟಗಾರರ ಆಯ್ಕೆ ಸಮಿತಿಯು ಸಿದ್ಧಪಡಿಸಲಿರುವ ಸುಮಾರು 130 ರಿಂದ 150 ಆಟಗಾರರು ಹರಾಜಿನಲ್ಲಿರಲಿದ್ದಾರೆ. ಪ್ರತಿ ತಂಡವು ಕನಿಷ್ಠ 16 ಮತ್ತು ಗರಿಷ್ಠ 18 ಆಟಗಾರರನ್ನ ಖರೀದಿಸಬಹುದಾಗಿದೆ. ಇದರೊಂದಿಗೆ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಇಬ್ಬರು ಹೆಚ್ಚುವರಿ 'ಕ್ಯಾಚ್ಮೆಂಟ್ ಏರಿಯಾ' (ಸ್ಥಳೀಯ ವ್ಯಾಪ್ತಿಯ) ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಫ್ರಾಂಚೈಸಿಗಳು ಮತ್ತು ಅವುಗಳ ಮಾಲೀಕರು
ಬೆಂಗಳೂರು (ಕಲ್ಯಾಣಿ ಮೋಟಾರ್ಸ್)
ಮೈಸೂರು (ನ್ಯಾಚುರಲ್ ಎಸೆನ್ಷಿಯಲ್ ಆಯಿಲ್ಸ್ ಲಿಮಿಟೆಡ್, ಸೈಕಲ್ ಅಗರಬತ್ತಿ)
ಹುಬ್ಬಳ್ಳಿ (ಜಿಂದಾಲ್ ಸ್ಟೀಲ್)
ರಾಯಚೂರು (ಮೈಕಾನ್ ಇಂಜಿನಿಯರ್ಸ್ ಹುಬ್ಬಳ್ಳಿ ಪ್ರೈವೇಟ್ ಲಿಮಿಟೆಡ್)
ಮಂಗಳೂರು (ಕ್ಲೀನ್ ಪ್ಯಾಕ್ಸ್ ಲಿಮಿಟೆಡ್)
ಶಿವಮೊಗ್ಗ (ಐಸಿಎಸ್ ಮೊಬೈಲ್ ಪ್ರೈವೇಟ್ ಲಿಮಿಟೆಡ್)
ಈ ಬಾರಿಯ ಮಹಾರಾಜ ಟ್ರೋಫಿಯು 'ಸೋನಿ ಸ್ಪೋರ್ಟ್ಸ್' ಮೂಲಕ ಟಿವಿಯಲ್ಲಿ ಪ್ರಸಾರವಾಗಲಿದೆ. ಡಿಜಿಟಲ್ ಪ್ರಸಾರದ ಹಕ್ಕುಗಳಿಗಾಗಿ ಸೂಕ್ತ ಸಂಸ್ಥೆಯ ಹುಡುಕಾಟದಲ್ಲಿರುವುದಾಗಿ ಆಯೋಜಕರು ತಿಳಿಸಿದ್ದಾರೆ.
ಮಹಾರಾಜ ಟ್ರೋಫಿ ಚಾಂಪಿಯನ್ಸ್
ಮಹಾರಾಜ ಟ್ರೋಫಿ 2022ರಲ್ಲಿ ಪ್ರಾರಂಭಗೊಂಡಿದ್ದು ಈಗಾಗಲೇ 4 ಆವೃತ್ತಿಗಳು ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಈ ಟೂರ್ನಿಯಲ್ಲಿ ಇದುವರೆಗೆ 4 ತಂಡಗಳು ಚಾಂಪಿಯನ್ಗಳಾಗಿ ಹೊರಹೊಮ್ಮಿವೆ. 2022ರ ಚೊಚ್ಚಲ ಆವೃತ್ತಿಯಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ ಚಾಂಪಿಯನ್ ಆಗಿತ್ತು. ನಂತರ 2023ರಲ್ಲಿ ಹುಬ್ಬಳಿ ಟೈಗರ್ಸ್, 2024ರಲ್ಲಿ ಮೈಸೂರ್ ವಾರಿಯರ್ಸ್, 2025ರಲ್ಲಿ ಮಂಗಳೂರು ಡ್ರ್ಯಾಗನ್ಸ್ ತಂಡಗಳು ಈಗಾಗಲೇ ಟ್ರೋಫಿ ಗೆದ್ದುಕೊಂಡಿವೆ.
ಮಹಾರಾಣಿ ಕಪ್ (ಮಹಿಳಾ ಟೂರ್ನಿ)
ಮಹಿಳಾ ಆವೃತ್ತಿ 'ಮಹಾರಾಣಿ ಕಪ್' ಟೂರ್ನಿ ಆಯೋಜಿಸಲು ಕೆಎಸ್ಸಿಎ ಉತ್ಸುಕವಾಗಿದೆ. ಆದರೆ ಫ್ರಾಂಚೈಸಿಗಳ ಆಯ್ಕೆ ಪ್ರಕ್ರಿಯೆ ಇನ್ನು ಅಂತಿಮಗೊಳ್ಳದ ಕಾರಣ ಸದ್ಯಕ್ಕೆ ದಿನಾಂಕಗಳನ್ನು ನಿಗದಿಪಡಿಸಿಲ್ಲ ಎಂದು ಕೆಎಸ್ಸಿಎ ತಿಳಿಸಿದೆ.
"ಮಹಾರಾಜ ಟ್ರೋಫಿಯಷ್ಟೇ ಯಶಸ್ವಿಯಾಗಿ ಮಹಾರಾಣಿ ಕಪ್ ಆಯೋಜಿಸುವುದು ನಮ್ಮ ಉದ್ದೇಶವಾಗಿದೆ. ಸದ್ಯಕ್ಕೆ ಆರು ಫ್ರಾಂಚೈಸಿಗಳು ಆಸಕ್ತಿ ತೋರಿಸಿವೆಯಾದರೂ, ಮಹಿಳಾ ಆಟಗಾರ್ತಿಯರ ಸಂಖ್ಯೆಯನ್ನ ಗಮನದಲ್ಲಿಟ್ಟುಕೊಂಡು ಸದ್ಯಕ್ಕೆ ತಂಡಗಳ ಸಂಖ್ಯೆಯನ್ನ ನಾಲ್ಕಕ್ಕೆ ಸೀಮಿತಗೊಳಿಸಿದ್ದೇವೆ. ಈ ನಾಲ್ಕು ಫ್ರಾಂಚೈಸಿಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಅದು ಮುಗಿದ ತಕ್ಷಣ ಟೂರ್ನಿಯ ದಿನಾಂಕ ಘೋಷಣೆ ಮಾಡಲಿದ್ದೇವೆ" ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ.

