ಮಧುಮೇಹದಿಂದ ದೇಹದ ಯಾವೆಲ್ಲಾ ಅಂಗಗಳ ಮೇಲೆ ಪರಿಣಾಮ? ಶುಗರ್ನಿಂದ ಮೂತ್ರಪಿಂಡಗಳ ಮೇಲೆ ಆಗುವ ತೊಂದರೆ ಏನು?
ರಕ್ತದಲ್ಲಿನ ಸಕ್ಕರೆ ಮಟ್ಟವು ಅತಿಯಾಗಿ ಏರಿಕೆಯಾದರೆ, ಮೂತ್ರಪಿಂಡಗಳು, ಕಣ್ಣುಗಳು ಮತ್ತು ನರಗಳ ಮೇಲೆ ಹೇಗೆ ಗಂಭೀರ ಪರಿಣಾಮ ಬೀರುತ್ತದೆ? ಕಿಡ್ನಿಗಳ ಮೇಲೆ ಪರಿಣಾಮ ಬೀರುವ ಮಧುಮೇಹದ ಲಕ್ಷಣಗಳು ಯಾವುವು ಎಂಬುದನ್ನು ತಿಳಿಯೋಣ.


Published : February 23, 2026 at 4:26 PM IST
- ಹುಚ್ಚೇಶ್ವರ ಅಣ್ಣಿಗೇರಿ
ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆಯು ಹಲವು ಜನರನ್ನು ಬಾಧಿಸುತ್ತಿದೆ. ಶುಗರ್ ಪ್ರಮುಖವಾಗಿ ಜೀವನಶೈಲಿಗೆ ಸಂಬಂಧಿಸಿದೆ. ನಮ್ಮ ಜೀವನಶೈಲಿ, ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಸಂಭವಿಸುವ ಕಾಯಿಲೆಯಾಗಿದೆ. ಮಧುಮೇಹ ಬಂದ ಬಳಿಕ ಬಹಳ ಜಾಗರೂಕರಾಗಿರಬೇಕು. ಈ ಕಾಯಿಲೆಗೆ ಶಾಶ್ವತ ಪರಿಹಾರವಿಲ್ಲ. ಇದು ನಮ್ಮ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸುವ ಕಾಯಿಲೆಯಾಗಿದೆ. ಶುಗರ್ ಅನ್ನು ಸರಿಯಾದ ಸಮಯಕ್ಕೆ ನಿಯಂತ್ರಿಸದಿದ್ದರೆ, ಇತರ ಕಾಯಿಲೆಗಳ ಅಪಾಯವನ್ನು ವೇಗವಾಗಿ ಹೆಚ್ಚಿಸುತ್ತದೆ. ಮಧುಮೇಹವು ದೇಹದ ವಿವಿಧ ಭಾಗಗಳ ಮೇಲೂ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆಯಾದರೆ, ಮೂತ್ರಪಿಂಡ, ಕಣ್ಣುಗಳು ಹಾಗೂ ನರಗಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ.
ಮಧುಮೇಹವು ಮುಖ್ಯವಾಗಿ ಮೂತ್ರಪಿಂಡಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮಧುಮೇಹ ಹೊಂದಿರುವ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಮೂತ್ರಪಿಂಡದ ಕಾಯಿಲೆಗೂ ಒಳಗಾಗುತ್ತಾರೆ. ಈ ಸ್ಥಿತಿಯನ್ನು ಡಯಾಬಿಟಿಕ್ ನೆಫ್ರೋಪತಿ ಎಂದು ಕರೆಯಲಾಗುತ್ತದೆ. ಮಧುಮೇಹ ಹೊಂದಿರುವ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಮೂತ್ರಪಿಂಡ ಸಂಬಂಧಿತ ಕಾಯಿಲೆಗೆ ತುತ್ತಾಗುತ್ತಾರೆ.

ಟೈಪ್ 1 ಮಧುಮೇಹವು ಸಾಮಾನ್ಯವಾಗಿ ಮೂತ್ರಪಿಂಡಗಳಿಗೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ. ಜೊತೆಗೆ ಟೈಪ್ 2 ಮಧುಮೇಹದಿಂದಲೂ ಮೂತ್ರಪಿಂಡದ ಹಾನಿ ಸಂಭವಿಸಬಹುದು. ಈ ಲಕ್ಷಣಗಳು ಕಾಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಮಧುಮೇಹ ಪ್ರಾರಂಭವಾದ ಐದು ವರ್ಷಗಳ ಬಳಿಕ ಈ ಸಮಸ್ಯೆಯು ಕಾರಣವಾಗುತ್ತದೆ. ಸಮಯಕ್ಕೆ ಸರಿಯಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಂಡರೆ ಮೂತ್ರಪಿಂಡಗಳಿಗೆ ಹಾನಿಯಾಗದಂತೆ ತಡೆಯಲು ಸಾಧ್ಯವಾಗುತ್ತದೆ. ಮಧುಮೇಹವು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರಿದರೆ ಕಾಣಿಸಿಕೊಳ್ಳುವ ಲಕ್ಷಣಗಳೇನು? ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಉಡುಪಿಯ ಎಸ್ಡಿಎಂ ಆಯುರ್ವೇದ ಆಸ್ಪತ್ರೆ ಹಾಗೂ ಕಾಲೇಜಿನ ಪ್ರೊ. ಡಾ. ಅನಿರುದ್ಧ ಅವರು ಈಟಿವಿ ಭಾರತದ ಜೊತೆಗೆ ಮಾತನಾಡಿದರು.
ಮಧುಮೇಹವು ಕಿಡ್ನಿಗಳಿಗೆ ಹೇಗೆ ಹಾನಿ ಮಾಡುತ್ತದೆ? ಅಧಿಕ ರಕ್ತದ ಸಕ್ಕರೆ ಮಟ್ಟಗಳು ಅಥವಾ ಮಧುಮೇಹವು ಮೂತ್ರಪಿಂಡಗಳಲ್ಲಿನ ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಈ ನಾಳಗಳು ದುರ್ಬಲವಾದಾಗ ಅಥವಾ ಹಾನಿಗೊಳಗಾದಾಗ ಇವು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ದೇಹದ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹವು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹದ ಸಂಯೋಜನೆಯು ಮೂತ್ರಪಿಂಡಗಳಿಗೆ ಗಮನಾರ್ಹ ಹಾನಿ ಉಂಟುಮಾಡುತ್ತದೆ.

ಮಧುಮೇಹಿಗಳಿಗೆ ಮೂತ್ರಪಿಂಡ ಕಾಯಿಲೆಗೆ ಅಪಾಯಕಾರಿ ಅಂಶಗಳು ಯಾವುವು?
- ಬೊಜ್ಜು
- ಧೂಮಪಾನ
- ಅಧಿಕ ರಕ್ತದೊತ್ತಡ
- ಅಧಿಕ ಉಪ್ಪು ಸೇವನೆ
- ಹೃದಯ ಕಾಯಿಲೆ
- ಮೂತ್ರಪಿಂಡ ಕಾಯಿಲೆಯ ಕುಟುಂಬದ ಇತಿಹಾಸ
- ಅನಿಯಂತ್ರಿತ ರಕ್ತದೊತ್ತಡ
ಮಧುಮೇಹದಿಂದ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುವ ಲಕ್ಷಣಗಳೇನು?:
ಪದೇ ಪದೇ ಮೂತ್ರ ವಿಸರ್ಜನೆ: ನೊರೆ ಅಥವಾ ಗುಳ್ಳೆಗಳಂತಹ ಮೂತ್ರವು ಪ್ರೋಟೀನ್ ಸೋರಿಕೆಯನ್ನು ಸೂಚಿಸುತ್ತದೆ. ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ, ಗಾಢ ಅಥವಾ ಚಹಾ ಬಣ್ಣದ ಮೂತ್ರ ಅಥವಾ ಕಡಿಮೆ ಮೂತ್ರ ವಿಸರ್ಜನೆಯಂತಹ ಲಕ್ಷಣಗಳನ್ನು ನಿರ್ಲಕ್ಷಿಸಬಾರದು.
ಆಯಾಸ, ದೌರ್ಬಲ್ಯ: ನಿರಂತರ ಆಯಾಸ, ದೌರ್ಬಲ್ಯ ಅಥವಾ ಕೆಳ ಬೆನ್ನಿನಲ್ಲಿ ಭಾರವಾದ ಭಾವನೆಯು ಮೂತ್ರಪಿಂಡಗಳ ಮೇಲೆ ಹೆಚ್ಚಿದ ಒತ್ತಡದ ಸಂಕೇತವಾಗಿರಬಹುದು. ಈ ಲಕ್ಷಣಗಳು ಮುಂದುವರಿದರೆ ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಿ.
ಪಾದಗಳಲ್ಲಿ, ಕಣ್ಣುಗಳ ಸುತ್ತ ಊತ: ವೈದ್ಯರು ತಿಳಿಸುವ ಪ್ರಕಾರ, ದ್ರವ ಧಾರಣವು ಮತ್ತೊಂದು ಎಚ್ಚರಿಕೆಯ ಸಂಕೇತವಾಗಿದೆ. ಮೂತ್ರಪಿಂಡಗಳು ಹೆಚ್ಚುವರಿ ದ್ರವವನ್ನು ತೆಗೆದುಹಾಕಲು ಸಾಧ್ಯವಾಗದಿದ್ದಾಗ ಇದು ದೇಹದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಪಾದಗಳಲ್ಲಿ ಅಥವಾ ಕಣ್ಣುಗಳ ಸುತ್ತಲೂ ಸೌಮ್ಯವಾದ ಊತವು ಮೂತ್ರಪಿಂಡದ ಹಾನಿಯ ಸಂಕೇತವಾಗಿರಬಹುದು.

ಹಸಿವು ಕಡಿಮೆಯಾಗುವುದು: ಮಧುಮೇಹ ಹೊಂದಿರುವ ರೋಗಿಯು ಹಠಾತ್ತನೆ ಹಸಿವನ್ನು ಕಳೆದುಕೊಂಡರೆ ಅಥವಾ ಅವರ ಹಸಿವಿನಲ್ಲಿ ಬದಲಾವಣೆಗಳನ್ನು ಗಮನಿಸಿದರೆ, ಅದು ಮಧುಮೇಹ ನೆಫ್ರೋಪತಿಯ ಸಂಕೇತವಾಗಿರಬಹುದು. ರಕ್ತದಲ್ಲಿ ಕಲ್ಮಶಗಳು ಸಂಗ್ರಹವಾದಾಗ ವಾಕರಿಕೆ, ವಾಂತಿ, ಹಸಿವು ಕಡಿಮೆಯಾಗುವುದು, ತೂಕ ನಷ್ಟದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಅಧಿಕ ರಕ್ತದೊತ್ತಡ: ರಕ್ತದೊತ್ತಡದಲ್ಲಿ ಸ್ವಲ್ಪ ಹೆಚ್ಚಳವಾದರೂ ಸಹ ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ಮೂತ್ರಪಿಂಡಗಳು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ತುರಿಕೆ: ರಕ್ತದಲ್ಲಿನ ಕಲ್ಮಶಗಳು ಹೆಚ್ಚಾಗುವುದರಿಂದ ಚರ್ಮದ ಮೇಲೆ ತೀವ್ರವಾದ, ನಿರಂತರ ತುರಿಕೆ ಉಂಟಾಗುತ್ತದೆ.
ವಾಂತಿ, ವಾಕರಿಕೆ: ದೇಹದಲ್ಲಿ ವಿಷಕಾರಿ ವಸ್ತುಗಳ ಸಂಗ್ರಹದಿಂದಾಗಿ ವಾಕರಿಕೆ ಮತ್ತು ಆಗಾಗ್ಗೆ ವಾಂತಿ ಆಗುತ್ತದೆ.

ಮಧುಮೇಹವು ದೇಹದ ಈ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ? ದೀರ್ಘಕಾಲೀನ ಹತೋಟಿಯಲ್ಲಿ ಇಲ್ಲದ ಮಧುಮೇಹ ಕಾಯಿಲೆಯು ದೇಹದ ಹಲವಾರು ಅಂಗಗಳ ಕಾರ್ಯ ಕ್ಷಮತೆಯನ್ನು ಕಡಿಮೆ ಮಾಡುತ್ತದೆ. ಮುಖ್ಯವಾಗಿ ಮೂತ್ರಪಿಂಡದ ಮೇಲೆ ಮಧುಮೇಹದ ಪರಿಣಾಮವು ಸಾಮಾನ್ಯವಾಗಿ ಕಂಡು ಬರುತ್ತದೆ. ಹಾಗೆಯೇ ಶರೀರದ ನರಗಳು, ಹೃದಯ, ಕಣ್ಣುಗಳು ಮತ್ತು ಚರ್ಮದ ಮೇಲೆಯೂ ಇದರ ದುಷ್ಪರಿಣಾಮ ಉಂಟಾಗಬಹುದು ಎಂದು ಡಾ.ಅನಿರುದ್ಧ ತಿಳಿಸುತ್ತಾರೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣವು ತುಂಬಾ ಹೆಚ್ಚಾದರೆ ಏನಾಗುತ್ತದೆ? ಮಧುಮೇಹಿಗಳಲ್ಲಿ ಅಧಿಕ ಸಕ್ಕರೆ ಮಟ್ಟದಿಂದ ಮೂತ್ರಪಿಂಡಗಳಿಗೆ ಹಾನಿ ಉಂಟು ಮಾಡುತ್ತದೆ. ಅಧಿಕ ಒತ್ತಡಕ್ಕೆ ಒಳಗಾಗಿ ಮೂತ್ರದಲ್ಲಿ "ಆಲ್ಬುಮಿನ್"ಅಂಶವನ್ನು ಹೊರಹಾಕುತ್ತದೆ. ಕಾಲಕ್ರಮೇಣ ಮೂತ್ರಪಿಂಡಗಳು ಮೂತ್ರವನ್ನು ಉತ್ಪಾದಿಸುವ ಕ್ಷಮತೆಯನ್ನು ಕಳೆದುಕೊಳ್ಳುತ್ತವೆ. ಹಾಗೆಯೇ ಕಣ್ಣುಗಳಲ್ಲಿ ರಕ್ತ ಸಂಚಾರದ ವ್ಯತ್ಯಯಯಿಂದಾಗಿ ದೃಷ್ಟಿಯು ಮಂದವಾಗಬಹುದು. ನರಗಳು ಸಹ ರಕ್ತಪೂರೈಕೆಯ ಬದಲಾವಣೆಯಿಂದ ಮತ್ತು ಇನ್ನಿತರ ಕಾರಣಗಳಿಂದ ಸರಿಯಾಗಿ ಕಾರ್ಯನಿರ್ವಹಣೆ ಮಾಡದೆ ಇರಬಹುದು.

ಶುಗರ್ನಿಂದ ಕಿಡ್ನಿಗಳಿಗೆ ಹಾನಿಯಾಗುತ್ತಿದೆಯೇ? ನಿಯಮಿತ ಪರೀಕ್ಷೆಗಳನ್ನು ಮಾಡಬೇಕು. ಮೂತ್ರದ ಅಲ್ಬುಮಿನ್-ಟು-ಕ್ರಿಯೇಟಿನೈನ್ ಅನುಪಾತ (ಯುಎಸಿಆರ್) ಮೂತ್ರಪಿಂಡದ ಹಾನಿಯ ಆರಂಭಿಕ ಸಂಕೇತವಾಗಿದೆ. ಇಜಿಎಸ್ಆರ್ ರಕ್ತ ಪರೀಕ್ಷೆಯು ಮೂತ್ರಪಿಂಡಗಳು ತ್ಯಾಜ್ಯ ಉತ್ಪನ್ನಗಳನ್ನು ಎಷ್ಟು ಚೆನ್ನಾಗಿ ಫಿಲ್ಟರ್ ಮಾಡುತ್ತಿವೆ ಎಂಬುದನ್ನು ಸೂಚಿಸುತ್ತದೆ. ಪ್ರತಿಯೊಬ್ಬ ಮಧುಮೇಹ ರೋಗಿಯು ವರ್ಷಕ್ಕೊಮ್ಮೆಯಾದರೂ ಎರಡೂ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಅಧಿಕ ರಕ್ತದೊತ್ತಡ ಕಿಡ್ನಿ ಕಾಯಿಲೆಗೆ ಕಾರಣವಾಗುವುದಲ್ಲದೆ ಅದನ್ನು ವೇಗವಾಗಿ ಹದಗೆಡಿಸುತ್ತದೆ. ಇದಕ್ಕಾಗಿಯೇ ನಿಯಮಿತ ರಕ್ತದೊತ್ತಡ ಮೇಲ್ವಿಚಾರಣೆ ಅಗತ್ಯವಾಗಿದೆ ಎಂದು ವೈದ್ಯರು ತಿಳಿಸುತ್ತಾರೆ.
ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಹೇಗೆ? ಮೂತ್ರಪಿಂಡದ ಕಾರ್ಯ ಕುಸಿತಕ್ಕೆ ಯಾವುದೇ ನಿಗದಿತ ಸಮಯದ ಚೌಕಟ್ಟು ಇಲ್ಲ. ಹೆಚ್ಚಿನ ಮಧುಮೇಹ ರೋಗಿಗಳಿಗೆ, ಈ ಪ್ರಕ್ರಿಯೆಯು ವರ್ಷಗಳಲ್ಲಿ ನಿಧಾನವಾಗಿ ಮುಂದುವರಿಯುತ್ತದೆ. ಸ್ಪಷ್ಟ ಲಕ್ಷಣಗಳು ಕಾಣಿಸಿಕೊಂಡ ಬಳಿಕ, ಈ ಸ್ಥಿತಿಯು ವೇಗವಾಗಿ ಹದಗೆಡುತ್ತದೆ. ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ರಕ್ತದಲ್ಲಿನ ಶುಗರ್ ಹಾಗೂ ರಕ್ತದೊತ್ತಡ ನಿಯಂತ್ರಣದ ಮೇಲೆ ಗಮನಹರಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ವೈದ್ಯರು ಸರಿಯಾದ ಔಷಧಿಗಳನ್ನು ಸೂಚಿಸಬಹುದು. ಸಕಾಲಿಕ ಚಿಕಿತ್ಸೆಯು ಮೂತ್ರಪಿಂಡ ವೈಫಲ್ಯದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.

ಮಧುಮೇಹದಿಂದ ಕಿಡ್ನಿಗಳಿಗೆ ಹಾನಿಯಾದರೆ ಕಾಣಿಸುವ ಲಕ್ಷಣಗಳಿವು: ಮಧುಮೇಹ ಕಾಯಿಲೆಯಿಂದ ಮೂತ್ರಪಿಂಡಗಳು ತೊಂದರೆಗೆ ಒಳಗಾದಾಗ ಮೂತ್ರದಲ್ಲಿ ಪ್ರೋಟೀನ್/ಆಲ್ಬುಮಿನ್ ಅಂಶ ಸೋರಿಕೆ ಉಂಟಾಗಿ ದೇಹದಲ್ಲಿ ಪ್ರೋಟೀನ್ ಕೊರತೆಯಿಂದ ಮುಖದಲ್ಲಿ ಊತ, ಕಾಲುಗಳಲ್ಲಿ ಊತ, ಅತಿಯಾದ ಸುಸ್ತು, ಪದೇ ಪದೇ ಮೂತ್ರದ ಇಲ್ಲವೇ ಇತರ ಸೋಂಕುಗಳು, ತಲೆಸುತ್ತು, ಚರ್ಮದಲ್ಲಿ ಬಿಳಿ ಬಣ್ಣದ ಗೆರೆಗಳು ಇತ್ಯಾದಿ ಲಕ್ಷಣಗಳು ಕಂಡು ಬರಬಹುದು. ಮೂತ್ರದ ಪ್ರಮಾಣ ಕಡಿಮೆ ಆಗಬಹುದು.
ಕಿಡ್ನಿಗಳು ಹಾನಿಗೊಳಗಾಗುತ್ತಿರುವುದನ್ನು ಹೇಗೆ ತಿಳಿದುಕೊಳ್ಳಬಹುದು? ಕಿಡ್ನಿಗಳು ಮಧುಮೇಹ ಕಾಯಿಲೆಯಿಂದ ಹಾನಿಗೆ ಒಳಗಾಗಿದೆ ಇಲ್ಲವೋ ಎಂದು ತಿಳಿಯಲು ಹಲವಾರು ಮಾರ್ಗಗಳಿವೆ. ಸಾಮಾನ್ಯವಾಗಿ ಮೂತ್ರಪಿಂಡಗಳ ಕಾರ್ಯಕ್ಷಮತೆಯನ್ನು ಮೂತ್ರ ಮತ್ತು ರಕ್ತ ಪರೀಕ್ಷೆಯಿಂದ ಕಂಡುಕೊಳ್ಳಬಹುದು. ಹಾಗೆಯೇ ಅಲ್ಟ್ರಾಸೌಂಡ್, ಎಂ. ಆರ್. ಐ ಇತ್ಯಾದಿ ತಂತ್ರಜ್ಞಾನಗಳಿಂದ ಕೂಡ ಬೇಗನೆ ಮೂತ್ರಪಿಂಡಗಳ ಆರೋಗ್ಯವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಮೂತ್ರಪಿಂಡದ ಕಾಯಿಲೆ ಯಾವ ಹಂತ ತಲುಪಿದೆ ಎನ್ನುವುದನ್ನು ತಿಳಿಯಬಹುದು ಎಂದು ಉಡುಪಿಯ ಎಸ್ಡಿಎಂ ಆಯುರ್ವೇದ ಆಸ್ಪತ್ರೆ ಹಾಗೂ ಕಾಲೇಜಿನ ಪ್ರೊ. ಡಾ. ಅನಿರುದ್ಧ ತಿಳಿಸುತ್ತಾರೆ.

ಓದುಗರಿಗೆ ಪ್ರಮುಖ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ಪರಿಣತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇವುಗಳನ್ನು ಓದಿ:
- ಚಿಕ್ಕಮಕ್ಕಳಲ್ಲಿ ಹೃದಯಾಘಾತವಾಗಲು ಕಾರಣಗಳೇನು? ತಡೆಯುವುದು ಹೇಗೆ?: ಹೃದ್ರೋಗ ತಜ್ಞರು ತಿಳಿಸುವುದೇನು?
- ಕಿಡ್ನಿ ಕಸಿ ನಂತರವೂ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಮಹಿಳೆ
- ಸ್ಥಳೀಯ ಹಾವುಗಳ ವಿಷದಿಂದ 'ವಿಷ ನಿರೋಧಕ ಔಷಧ' ತಯಾರಿಸಿದ ಗುಜರಾತ್; ಶೀಘ್ರ ಬಿಡುಗಡೆ, ಮಾನವ ಸಾವು ತಗ್ಗುವ ನಿರೀಕ್ಷೆ
- ಮಾನಸಿಕ ಸಮಸ್ಯೆಗಳಿಗೆ ಮನೋಚಿಕಿತ್ಸೆಯೇ ಮದ್ದು: ಇದು ಯಾರಿಗೆಲ್ಲ ಪ್ರಯೋಜನ?
- ವಿಟಮಿನ್ ಕೆ ಕೊರತೆಯಾ? ಈ ಲಕ್ಷಣಗಳು ಕಂಡುಬಂದರೆ ಎಚ್ಚರವಹಿಸಿ

