'ಪ್ರೇಮದ ಊರಲಿ' ಚಿತ್ರದ ಟೀಸರ್ ರಿಲೀಸ್: ನನಗ ಹಳ್ಳಿ ಕಥೆ ಇಷ್ಟ- ರಂಗಾಯಣ ರಘು
'ಪ್ರೇಮದ ಊರಲಿ' ಎಂಬ ಸಿನಿಮಾ ತೆರೆಗೆ ಬರುತ್ತಿದ್ದು, ಟೀಸರ್ ಬಿಡುಗಡೆಯಾಗಿದೆ.

Published : March 4, 2026 at 9:00 AM IST
'ಅಕ್ಷಿ' ಎಂಬ ಸಿನಿಮಾ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಮನೋಜ್ ಕುಮಾರ್ ಅವರು 'ಪ್ರೇಮದ ಊರಲಿ' ಎಂಬ ಹೊಸ ಕಥೆಯೊಂದಿಗೆ ಬರುತ್ತಿದ್ದು, ಇತ್ತೀಚೆಗೆ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಟೀಸರ್ ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಹಿರಿಯ ನಟ ರಂಗಾಯಣ ರಘು, "ತಪ್ಪುಗಳನ್ನು ಮಾಡ್ತಾ ಹೋಗಿ ಜೀವನ ಕಲಿಯುವ ಪಾತ್ರದಲ್ಲಿ ನಾನು ನಟಿಸಿದ್ದೇನೆ. ನಾಯಕ ನಟ ಶ್ರೀರಾಮ್ ಮೊದಲು ಫೋನ್ ಮಾಡಿ ಹಳ್ಳಿ ಕಥೆ ಇದು ಎಂದು ಹೇಳಿದರು. ನನಗೆ ಹಳ್ಳಿ ಕಥೆ ಇಷ್ಟವಾಗುತ್ತದೆ. ಡೈರೆಕ್ಟರ್ ಕಥೆ ಹೇಳಿದರು. ಇಷ್ಟವಾಯ್ತು. ಶೂಟಿಂಗ್ ಜಾಗ ತುಂಬಾನೇ ಸೊಗಸಾಗಿತ್ತು. ಶೂಟಿಂಗ್ ಮುಗಿಸಿದ ಬಳಿಕ ನಾನು ಅಲ್ಲಿನ ಹಳ್ಳಿಯವನೇ ಆದೆ. ನಿರ್ದೇಶಕರು ಕೆಲಸ ಮಾಡುವ ರೀತಿ ನನಗೆ ಇಷ್ಟವಾಯ್ತು. ನಿಮ್ಮ ಪ್ರೀತಿ, ಸಹಕಾರ ನಮ್ಮ ಚಿತ್ರದ ಮೇಲಿರಲಿ" ಎಂದು ಮನವಿ ಮಾಡಿದರು.
ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ, "ರಂಗಾಯಣ ರಘು ಸರ್ ಈ ಸಿನಿಮಾಗೆ ಹಾಗೂ ನನಗೆ ಬೆಳಕು. ಅವರ ಅಭಿನಯದ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ. ಅವರು ಒಂದು ವಿಶಿಷ್ಟವಾದ ಪಾತ್ರದಲ್ಲಿ ನಟಿಸಿದ್ದಾರೆ. ಹಾಸನದ ಸದಾ ಮಳೆ ಬರುವ ಜಾಗದಲ್ಲಿ ಶೂಟಿಂಗ್ ಮಾಡಿದ್ದೇವೆ. ಹೀರೋ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ನಾಯಕಿರು ಅದ್ಭುತವಾಗಿ ನಟಿಸಿದ್ದಾರೆ. ನನಗೆ ಈ ಅವಕಾಶ ಕೊಟ್ಟ ನಿರ್ಮಾಪಕರಿಗೆ ಧನ್ಯವಾದಗಳು. ಚಿತ್ರಕ್ಕೆ ಏನು ಬೇಕೋ ಎಲ್ಲವನ್ನೂ ನೀಡಿದ್ದಾರೆ. ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. 'ಪ್ರೇಮದ ಊರಲಿ' ಸಿನಿಮಾ ಮ್ಯೂಸಿಕಲ್ ಲವ್ ಸ್ಟೋರಿ. ಚಿತ್ರದ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಟೀಸರ್ ನೋಡಿದ್ರೆ ಗೊತ್ತಾಗುತ್ತದೆ. ಇದು ನಾಗಣ್ಣ ಹಾಗೂ ಸಂತುವಿನ ಪುಟ್ಟ ಲೋಕ. ಊರು ಅಂದರೆ ಸಾವಿರ ಮನೆ, ನೂರು ಮನೆ ಇರಬೇಕು ಎಂಬುದು ಇಲ್ಲ. ಒಂದು ಮನೆಯಲ್ಲಿ ಎಲ್ಲರೂ ಲವಲವಿಕೆಯಿಂದ, ಖುಷಿಯಿಂದ, ಪ್ರೀತಿಯಿಂದ ಇದ್ದರೆ ಅದೇ ನಮಗೆ ದೊಡ್ಡ ಊರು. ಅದೇ ಪ್ರೇಮದ ಊರಲಿ" ಎಂದು ಹೇಳಿದರು.

ನಟ ಶ್ರೀರಾಮ್ ನಾಯಕನಾಗಿ ನಟಿಸಿದ್ದು, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಶ್ರೀರಾಮ್ ತಂದೆಯ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ.

'ಪ್ರೇಮದ ಊರಲಿ' ಚಿತ್ರವನ್ನು ವೆನಿಲ್ಲಾ ಎಂಟರ್ಟೈನ್ಮೆಂಟ್ಸ್, ಜಾನಕಮ್ಮ ಪ್ರೊಡಕ್ಷನ್ ನಡಿ ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ನಿರ್ಮಾಣ ಮಾಡಿದ್ದಾರೆ. ಸುನಾದ ಗೌತಮ್ ಸಂಗೀತ ನಿರ್ದೇಶನ, ರಾಜ್ಕಾಂತ್ ಎಸ್.ಕೆ ಛಾಯಾಗ್ರಹಣ, ಹರ್ಷಿತ್ ಪ್ರಭು ಸಂಕಲನವಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.
ಇದನ್ನೂ ಓದಿ: ದುನಿಯಾ ವಿಜಯ್ ನಟನೆಯ 'ಭೀಮಾ ತೀರದಲ್ಲಿ' ಸಿನಿಮಾ ಡಿಜಿಟಲ್ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆ

