ಪ್ರೀತಿ ಬೆಳೆಸುತ್ತಿರು, ಕೀರ್ತಿ ಗಳಿಸುತ್ತಿರು..: ಮಡದಿ ಪ್ರಗತಿ ಹುಟ್ಟುಹಬ್ಬಕ್ಕೆ ರಿಷಬ್ ಶೆಟ್ಟಿ ಪ್ರೀತಿಯ ಶುಭಾಶಯ
ನಟ ರಿಷಬ್ ಶೆಟ್ಟಿ ತನ್ನ ಪತ್ನಿ ಹುಟ್ಟುಹಬ್ಬಕ್ಕೆ ಪ್ರೇಮದ ಬರಹಗಳಿಂದ ಶುಭಾಶಯ ತಿಳಿಸಿದ್ದು, ಬದುಕಿನಲ್ಲಿ ಅಪರೂಪದ ಬೆಳದಿಂಗಳಿನಂತೆ ಸದಾ ಕಂಗೊಳಿಸುತ್ತಿರು ಎಂದಿದ್ದಾರೆ.

Published : February 28, 2026 at 6:14 PM IST
|Updated : February 28, 2026 at 8:33 PM IST
"ಬದುಕಿನಲ್ಲಿ ಹೀಗೆ ಅಪರೂಪದ ಬೆಳದಿಂಗಳಿನಂತೆ ಸದಾ ಕಂಗೊಳಿಸುತ್ತಾ.. ಪ್ರೀತಿ ಬೆಳೆಸುತ್ತಿರು.. ಕೀರ್ತಿಗಳಿಸುತ್ತಿರು"... ಇದು ತಮ್ಮ ಮುದ್ದಿನ ಮಡದಿ ಹುಟ್ಟುಹಬ್ಬಕ್ಕೆ ಕಾಂತಾರ ನಟ ರಿಷಬ್ ಶೆಟ್ಟಿ ಅಭಿನಂದಿಸಿದ ಸಾಲುಗಳು.
ಕರಾವಳಿ ಕಲೆಯನ್ನು ಕಾಂತಾರ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ನಟ ರಿಷಬ್ ಶೆಟ್ಟಿಯಷ್ಟೇ ಪಾತ್ರ ಅವರ ಪತ್ನಿಯದ್ದೂ ಇದೆ. ಶೆಟ್ಟಿ ಬದುಕಲ್ಲಿ ಪತ್ನಿ ಪ್ರಗತಿ ಆಗಮನ ಹೆಸರಿನಂತೆ ಪ್ರಗತಿಯೇ ಸರಿ.. ಇಂದು ಅವರ ಹುಟ್ಟುಹಬ್ಬವಾಗಿದ್ದು, ರಿಷಬ್ ಅವರು ತಮ್ಮ ಮುದ್ದಿನ ಮಡದಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ.
ಪತ್ನಿ ಜತೆಗಿನ ಸುಂದರ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿರುವ ಅವರು, ಅಕ್ಷರಗಳ ಮೂಲಕ ಪ್ರೀತಿಯ ಜತೆ ಶುಭ ಏಳಿಗೆಯನ್ನು ಹಾರೈಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, "ತನ್ನ ಸುಕೋಮಲತೆಯನ್ನೇ ಶಕ್ತಿಯಾಗಿಸಿಕೊಂಡ ನಿನ್ನೊಳಗಿರುವ ಅಪರೂಪದ ಛಲ, ಮಾತೃತ್ವದ ಮಮತೆ, ವೃತ್ತಿಯೆಡಗಿನ ಏಕಾಗ್ರತೆ, ಏಕಕಾಲದಲ್ಲಿ ಎಲ್ಲವನ್ನೂ ನಿಭಾಯಿಸುವ ಕಾರ್ಯಕ್ಷಮತೆ ನನ್ನಲ್ಲಿ ಬೆರಗು ಮೂಡಿಸುತ್ತದೆ. ಅಷ್ಟೇ ಹೆಮ್ಮೆಯನ್ನೂ ತರುತ್ತದೆ. ಈ ಬಣ್ಣದ ಬದುಕಿನಲ್ಲಿ ಹೀಗೆ ಅಪರೂಪದ ಬೆಳದಿಂಗಳಿನಂತೆ ಸದಾ ಕಂಗೊಳಿಸುತ್ತಾ.. ಪ್ರೀತಿ ಬೆಳೆಸುತ್ತಿರು.. ಕೀರ್ತಿ ಗಳಿಸುತ್ತಿರು" ಎಂದು ಬರೆದು ಹಾಕಿದ್ದಾರೆ.
ಶೆಟ್ಟಿ ಪ್ರೇಮಕಥೆ: ನಟ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಮೊದಲು ಪರಿಚಯವಾಗಿದ್ದು ಚಿತ್ರಮಂದಿರವೊಂದರಲ್ಲಿ. ಆ ಹೊತ್ತಲ್ಲಿ ಚಿತ್ರರಂಗದಲ್ಲಿ ಆರಂಭದ ದಿನಗಳಾದ ಹಿನ್ನೆಲೆ ಈಗಿರುವ ಜನಪ್ರಿಯತೆ ರಿಷಬ್ ಶೆಟ್ಟಿ ಅವರಿಗಿರಲಿಲ್ಲ. ಥಿಯೇಟರ್ಗೆ ಆಗಮಿಸಿದ ಹೆಚ್ಚಿನವರು ನಾಯಕ, ನಾಯಕಿಯರ ಸುತ್ತ ಜಮಾಯಿಸಿದ್ದರು. ಆದರೆ ಪ್ರಗತಿ ಶೆಟ್ಟಿ, ರಿಷಬ್ ಶೆಟ್ಟಿ ಅವರನ್ನು ಗುರುತಿಸಿ ನಿಮ್ಮ ಅಭಿಮಾನಿ ಎಂದು ಪರಿಚಯಿಸಿಕೊಂಡರು. ಹೀಗೆ ಇಬ್ಬರ ಸ್ನೇಹ ಶುರುವಾಯಿತು. ಸ್ನೇಹ ಪ್ರೀತಿಯಾಗಿ ಸ್ಯಾಂಡಲ್ವುಡ್ನಲ್ಲಿ ಮಾದರಿ ದಂಪತಿಗಳಾಗಿದ್ದಾರೆ.
ಇದನ್ನೂ ಓದಿ: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕುಟುಂಬ ಸಮೇತ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ - WATCH VIDEO
ಮಂಗಳೂರಿನ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ನಿನ್ನೆ ರಿಷಬ್ ಶೆಟ್ಟಿ ದಂಪತಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಪ್ರಸಿದ್ಧ ಕ್ಷೇತ್ರ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

