ETV Bharat / entertainment

ರಮೇಶ್ ಅರವಿಂದ್ ಮುಖ್ಯಭೂಮಿಕೆಯ 'ದೈಜಿ' ಚಿತ್ರದಲ್ಲಿ ಖುಷಿ ರವಿ

ರಮೇಶ್ ಅರವಿಂದ್ ಅಭಿನಯದ 'ದೈಜಿ' ಚಿತ್ರದಲ್ಲಿ ಖುಷಿ ರವಿ ಪ್ರಮುಖ ಪಾತ್ರ ವಹಿಸಿದ್ದಾರೆ.

Kushee Ravi, Ramesh Aravind
ಖುಷಿ ರವಿ, ರಮೇಶ್ ಅರವಿಂದ್ (Photo: ETV Bharat, Film Poster)
author img

By ETV Bharat Entertainment Team

Published : January 9, 2026 at 11:32 AM IST

2 Min Read
Choose ETV Bharat

ತಮ್ಮ ಅಮೋಘ ಅಭಿನಯದಿಂದ ಕನ್ನಡಿಗರ ಮನಗೆದ್ದಿರುವ ಹೆಸರಾಂತ ನಟ ರಮೇಶ್ ಅರವಿಂದ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ಈ ಸಾಲಿನ ಬಹುನಿರೀಕ್ಷಿತ ಚಿತ್ರ 'ದೈಜಿ'. ಈಗಾಗಲೇ ವಿಭಿನ್ನ ಶೀರ್ಷಿಕೆ, ಪೋಸ್ಟರ್ಸ್, ಟೀಸರ್​ನಿಂದ ಕುತೂಹಲ ಕೆರಳಿಸಿರುವ ಈ ಚಿತ್ರ ದೊಡ್ಡ ತಾರಾಬಳ ಒಳಗೊಂಡಿದೆ.

ರಾಧಿಕಾ ನಾರಾಯಣ್, ಅವಿನಾಶ್, ದಿಗಂತ್, ಗುರು ದೇಶಪಾಂಡೆ ಅವರಂತಹ ಜನಪ್ರಿಯ ತಾರೆಯರನ್ನು ಹೊಂದಿರುವ ಈ ಚಿತ್ರದಲ್ಲಿ ಸೂಪರ್ ಹಿಟ್ ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಆಧ್ಯಾತ್ಮಿಕ ಹಿನ್ನೆಲೆಯ ವಿಶೇಷ ಪಾತ್ರದಲ್ಲಿ ಖುಷಿ ಅಭಿನಯಿಸುತ್ತಿದ್ದಾರೆ‌. ಚಿತ್ರತಂಡ ಖುಷಿ ರವಿ ಅವರ ಪೋಟೋಗಳನ್ನು ಅನಾವರಣಗೊಳಿಸಿ ಪ್ರೇಕ್ಷಕರ ಕುತೂಹಲ ದುಪ್ಪಟ್ಟುಗೊಳಿಸಿದೆ.

ನೈಜ ಘಟನೆಯನ್ನಾಧರಿಸಿದ ಸಿನಿಮಾ: ಶಿವಾಜಿ ಸೂರತ್ಕಲ್ 1 ಮತ್ತು 2ನಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಆಕಾಶ್ ಶ್ರೀವತ್ಸ ನಿರ್ದೇಶನದ ಈ ಸಿನಿಮಾ ನೈಜ ಘಟನೆಯನ್ನಾಧರಿಸಿದೆ. ಮನುಷ್ಯ ಹಾಗೂ ಅಲೌಕಿಕ, ಅತೀಂದ್ರಿಯ, ಅಗೋಚರ ಶಕ್ತಿಗಳ ನಡುವಿನ ಸಂಕೀರ್ಣ ಸಂಬಂಧಗಳ ಅನ್ವೇಷಣೆಯೇ ಚಿತ್ರದ ತಿರುಳು.

Khushi Ravi Instagram story
ಖುಷಿ ರವಿ ಇನ್​​​ಸ್ಟಾಗ್ರಾಮ್​ ಸ್ಟೋರಿ (Photo: Khushi Ravi Instagram story)

ದೈಜಿ ಎಂದರೇನು?: ದೈಜಿ ಎಂದರೆ ಪ್ರೇತಾತ್ಮಗಳ ದೈವ ಎಂದರ್ಥ ಎಂದು ನಿರ್ದೇಶಕ ಆಕಾಶ್ ಶ್ರೀವತ್ಸ ಈ ಹಿಂದೆ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ತಿಳಿಸಿದರು.

ದೈಜಿ ಸಿನಿಮಾವು ಜನರ ಮನಸ್ಸಿನಲ್ಲಿ ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಕನ್ನಡದ ಸಿನಿಮಾಗಳಲ್ಲಿ ಒಂದು. ಈಗಾಗಲೇ ಟೀಸರ್ ಸಾಕಷ್ಟು ಸದ್ದು ಮಾಡಿದೆ. ದೈಜಿ ಕೇವಲ ಚಾಣಾಕ್ಷ ಚಿತ್ರಕಥೆಯಷ್ಟೇ ಅಲ್ಲದೇ ಚಿತ್ರೀಕರಣವೂ ಭಾರತದ ವಿವಿಧ ರಾಜ್ಯ, ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಯುನೈಟೆಡ್ ಕಿಂಗ್ಡಮ್​ನಲ್ಲಿ ನಡೆದಿದೆ.

ಈ ಹಿಂದೆ ಪ್ರಮೋಶನಲ್​ ಈವೆಂಟ್​ನಲ್ಲಿ ಮಾತನಾಡಿದ್ದ ನಾಯಕ ನಟ ರಮೇಶ್ ಅರವಿಂದ್, ''ಹುಟ್ಟು - ಸಾವಿನ ಈ ಬಾಳಿನಲ್ಲಿ 2 ಕೊನೆಗಳಿವೆ. ಆದರೆ ಇವೆರಡರ ಮಧ್ಯೆ ಏನಿದೆ? ಇವೆರಡರ ಮಧ್ಯೆ ಪ್ರೀತಿಯಿದೆ. ಒಂದು ವೇಳೆ ಸಾವೇ ಕೊನೆಯಾಗದಿದ್ದರೆ ಏನಿರುತ್ತದೆ? ಅದರಾಚೆಗೆ ಒಂದು ದುಷ್ಟ ಶಕ್ತಿ ಇರುತ್ತದೆ. ಆ ಶಕ್ತಿ ಈ ಪ್ರೀತಿಯನ್ನು ಹೊತ್ತುಕೊಂಡು ಹೋಗುತ್ತದೆ. ಇದನ್ನೇ ನಾವು ಸಾಮಾನ್ಯ ಹಾರರ್ ಚಿತ್ರಗಳಲ್ಲಿ ಕಾಣುವುದು. ಆದ್ರಿಲ್ಲಿ ಆಕಾಶ್ ಶ್ರೀವತ್ಸ ಈ ರೀತಿಯ ಹಾರರ್ ಚಿತ್ರ ಮಾಡಿಲ್ಲ. ನಾನು ಈವರೆಗೆ ಸಾಕಷ್ಟು ಹಾರರ್ ಚಿತ್ರಗಳನ್ನು ವೀಕ್ಷಿಸಿದ್ದೇನೆ. ಆದರೆ ಈ ರೀತಿಯ ಕಥೆ ನಾನು ನೋಡಿಲ್ಲ. ಅಂಥ ವಿಭಿನ್ನ ಚಿತ್ರ ಮಾಡಿದ್ದಾರೆ'' ಎಂದು ತಿಳಿಸಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದರು.

ಇದನ್ನೂ ಓದಿ: 'ಕಾಂತಾರ'ಕ್ಕೆ ಮತ್ತೊಂದು ಗರಿ: ಪ್ರತಿಷ್ಠಿತ ಆಸ್ಕರ್​ ರೇಸ್​ಗೆ ಕನ್ನಡದ ಬ್ಲಾಕ್​​​ಬಸ್ಟರ್ ಸಿನಿಮಾ ಎಂಟ್ರಿ

ರಮೇಶ್ ಅರವಿಂದ್ ಹಾಗೂ ರಾಧಿಕಾ ನಾರಾಯಣ್ ಅವರ ಅದ್ಭುತ ಹಾಗೂ ಮನೋಜ್ಞ ನಟನೆಯು ಭಾವನಾತ್ಮಕ, ಸಸ್ಪೆನ್ಸ್, ರೋಮಾಂಚಕ ಚಿತ್ರಕ್ಕೆ ಭದ್ರ ಬುನಾದಿಯಾಗಿದೆ. ತಾರಾಗಣದಲ್ಲಿ ದಿಗಂತ್ ಮಂಚಾಲೆ, ಅವಿನಾಶ್ ಯೆಳಂದೂರ್, ನಿಧಿ ಹೆಗ್ಡೆ, ಶ್ರೀಧರ್ ಕೊಣನೂರ್, ಬಿ.ಎಂ.ಗಿರಿರಾಜ್ ಇದ್ದಾರೆ. ಅಲ್ಲದೇ, ಹಾಲಿವುಡ್​ನಲ್ಲಿ ನಟಿಸಿರುವ ಸ್ಯಾಂಡಿ ಹಿಗಿನ್ಸ್, ಸಾಲ್ ಯೂಸುಫ್, ಎಲ್ಲೆನ್ ಶಂಬರ್ಲಿಯನ್, ಫ್ಲೋರೆನ್ಶಿಯಾ ಮಾರ್ಟಿನೆಜ, ಮಾಜಿ ಮಿಸ್ ಐರ್ಲೆಂಡ್ ಅಲೆಕ್ಸಾಂಡ್ರಾ ಕೂಡಾ ಬಣ್ಣ ಹಚ್ಚಿದ್ದು, ಸಿನಿಮಾದ ವಿಸ್ತಾರತೆ, ಅಂತಾರಾಷ್ಟ್ರೀಯ ಮಟ್ಟದ ಮಹತ್ವವನ್ನು ತೋರಿಸುತ್ತದೆ.

ಇದನ್ನೂ ಓದಿ: ಹೊಸ ಸಾಹಸಕ್ಕೆ ಕೈ ಹಾಕಿದ ಕಿಚ್ಚ ಸುದೀಪ್ ಮಡದಿ ಪ್ರಿಯಾ: ಜನ್ಮದಿನದಂದು ಘೋಷಣೆ

ಜ್ಯೂಡಾ ಸ್ಯಾಂಡಿ, ನಕುಲ್ ಅಭಯಂಕರ್ ಹಾಗೂ ಸಚಿನ್ ಬಸ್ರೂರ್ ಸಂಗೀತ ಸಂಯೋಜನೆಯಿರುವ ಈ ಚಿತ್ರಕ್ಕೆ ಜ್ಯೂಡಾ ಸ್ಯಾಂಡಿ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಶ್ರೀಶ ಕುದುವಳ್ಳಿ ಅವರ ಛಾಯಾಗ್ರಹಣ ಈ ಬಹುನಿರೀಕ್ಷಿತ ಚಿತ್ರಕ್ಕಿದೆ. ವಿಬಾ ಕಶ್ಯಪ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿ ಕಶ್ಯಪ್ ನಿರ್ಮಿಸುತ್ತಿರುವ ಹಾಗೂ ಶಿವಾಜಿ ಸುರತ್ಕಲ್ ಖ್ಯಾತಿಯ ಆಕಾಶ್‌ ಶ್ರೀವತ್ಸ ನಿರ್ದೇಶನದ ಈ ಚಿತ್ರಕ್ಕೆ ಇನ್ನೊಂದು ಚಿತ್ರೀಕರಣ ಮಾತ್ರ ಬಾಕಿಯಿದೆ.‌ ವಿ.ಎಫ್.ಎಕ್ಸ್ ಕಾರ್ಯ ಬಿರುಸಿನಿಂದ ಸಾಗಿದ್ದು, ಆ ಕೆಲಸ ಪೂರ್ಣಗೊಂಡ ಬಳಿಕ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಲಿದೆ.