ಗುರುರಾಜ ಕುಲಕರ್ಣಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಿರುವ ಸುದೀಪ್
ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹೊಸ ಚಿತ್ರದ ಶೀರ್ಷಿಕೆಯನ್ನು ಕಿಚ್ಚ ಸುದೀಪ್ ಅನಾವರಣ ಮಾಡಲಿದ್ದಾರೆ.

Published : January 8, 2026 at 7:31 PM IST
ಕನ್ನಡ ಚಿತ್ರರಂಗದಲ್ಲಿ ಲಾಸ್ಟ್ ಬಸ್, ಅಮೃತ್ ಅಪಾರ್ಟ್ಮೆಂಟ್, ದಿ ಜಡ್ಜ್ಮೆಂಟ್ ಮೊದಲಾದ ಸದಭಿರುಚಿಯ ಸಿನಿಮಾಗಳ ಮೂಲಕ ನಿರ್ಮಾಪಕ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಗುರುರಾಜ ಕುಲಕರ್ಣಿ (ನಾಡಗೌಡ) ಅವರು ಈ ಬಾರಿ ಮತ್ತೊಂದು ವಿಭಿನ್ನ ಕಥೆಯನ್ನು ಪ್ರೇಕ್ಷಕರ ಮುಂದೆ ತರಲು ತಯಾರಿ ಮಾಡಿಕೊಂಡಿದ್ದಾರೆ. ಹೊಸಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್ಸ್ ಕೆಲಸಗಳು ಪೂರ್ಣಗೊಂಡಿದ್ದು, ಸಂಕ್ರಾಂತಿ ಸಂದರ್ಭದಲ್ಲಿ ಶೀರ್ಷಿಕೆಯನ್ನು ಅಭಿನಯ ಚಕ್ರವರ್ತಿ ಜನಪ್ರಿಯತೆಯ ಕಿಚ್ಚ ಸುದೀಪ್ ಅನಾವರಣ ಮಾಡಲಿದ್ದಾರೆ.
ಈ ಚಿತ್ರದಲ್ಲಿ ಸೂರಜ್ ಗೌಡ ಮತ್ತು ಯುವ ನಟ ಪ್ರವೀಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶರಣ್ಯ ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ ಕನ್ನಡದ ಚಿತ್ರರಂಗದ ಅನೇಕ ಹಿರಿ-ಕಿರಿಯ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇಂದಿನ ತಲೆಮಾರಿನ ಪ್ರೇಕ್ಷಕರಿಗೆ ಇಷ್ಟವಾಗುವಂಥ ಲವ್ ಕಂ ಕ್ರೈಂ-ಥ್ರಿಲ್ಲರ್ ಕಥೆಯನ್ನು ಕುಲಕರ್ಣಿ ಪ್ರೇಕ್ಷಕರ ಮುಂದೆ ತರಲು ಹೊರಟಿದ್ದಾರೆ.
ಈ ಹಿಂದೆ ಕನ್ನಡದಲ್ಲಿ ಜಯರಾಮ್ ಕಾರ್ತಿಕ್ (ಜೆಕೆ) ಮತ್ತು ಅದ್ವಿತಿ ಶೆಟ್ಟಿ ಜೋಡಿಯಾಗಿ ಅಭಿನಯಿಸಿದ್ದ ಐರಾವನ್ ಚಿತ್ರವನ್ನು ನಿರ್ಮಿಸಿದ್ದ ನಿರಂತರ ಪ್ರೊಡಕ್ಷನ್ಸ್ನ ಡಾ.ನಿರಂತರ ಗಣೇಶ್ ಈ ಚಿತ್ರ ನಿರ್ಮಾಣದಲ್ಲಿ ಗುರುರಾಜ್ ಕುಲಕರ್ಣಿಗೆ ಸಾಥ್ ನೀಡುತ್ತಿದ್ದಾರೆ. ನಿರಂತರ ಪ್ರೊಡಕ್ಷನ್ಸ್ ಮತ್ತು ಜಿ9 ಕಮ್ಯುನುಕೇಶನ್ಸ್ ಆ್ಯಂಡ್ ಮೀಡಿಯಾ ಸಂಸ್ಥೆಯ ಸಹಯೋಗದಲ್ಲಿ ಬಿಗ್ ಬಜೆಟ್ನಲ್ಲಿ ಚಿತ್ರ ತಯಾರಾಗುತ್ತಿದೆ.
ಚಿತ್ರದ ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದು, ಪ್ರಮೋದ ಮರವಂತೆ ಸಾಹಿತ್ಯ ಒದಗಿಸುತ್ತಿದ್ದಾರೆ. ಹರ್ಷ ಕುಮಾರ್ ಗೌಡ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಇದೆ. ಬೆಂಗಳೂರು, ಗೋವಾ ಮತ್ತು ಕರ್ನಾಟಕದ ಹಲವು ತಾಣಗಳಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ.
ಚಿತ್ರದ ಹೆಸರು ಸೇರಿದಂತೆ ಇತರೆ ವಿಶೇಷತೆಗಳ ಕುತೂಹಲಕ್ಕೆ ಶೀಘ್ರವೇ ಉತ್ತರ ಸಿಗಲಿದೆ.
ಇದನ್ನೂ ಓದಿ: ಪ್ರಭಾಸ್ ನಟನೆಯ 'ರಾಜಾಸಾಬ್' ನಾಳೆ ತೆರೆಗೆ: ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ನಿಂದ ವಿತರಣೆ

