4 ವರ್ಷಗಳ ವೈವಾಹಿಕ ಜೀವನದ ನಂತರ ವಿಚ್ಛೇದನಕ್ಕೆ ಮುಂದಾದ ಶುಭಾ ಪೂಂಜಾ! ಖಚಿತಪಡಿಸಿದ ಆಪ್ತರು
''ಹೌದು, ಶುಭಾ ಪೂಂಜಾ ಮತ್ತು ಸುಮಂತ್ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ'' ಎಂದು ಆಪ್ತರು ತಿಳಿಸಿದ್ದಾರೆ.

By ETV Bharat Entertainment Team
Published : June 4, 2026 at 12:03 PM IST
'ಮೊಗ್ಗಿನ ಮನಸ್ಸು' (2008) ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟಿ ಶುಭಾ ಪೂಂಜಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ವರದಿಯಾಗಿದೆ.
ಹೌದು, ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗಮನ ಸೆಳೆದ ಶುಭಾ ಪೂಂಜಾ ಹಾಗೂ ಸುಮಂತ್ ಬಿಲ್ಲವ ಇಬ್ಬರೂ ವಿಚ್ಛೇದನಕ್ಕಾಗಿ ಫ್ಯಾಮಿಲಿ ಕೋರ್ಟ್ ಮೊರೆ ಹೋಗಿದ್ದಾರೆ. ದಾಂಪತ್ಯ ಜೀವನ ಆರಂಭಿಸಿದ ನಾಲ್ಕೇ ವರ್ಷಕ್ಕೆ ಬೇರೆಯಾಗುವ ನಿರ್ಧಾರ ಕೈಗೊಂಡಿದ್ದಾರೆ.
ಮದುವೆ ಆಗಿ 4 ವರ್ಷಗಳ ನಂತರ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಇದೆ. ವಿಚಾರಣೆಯ ಭಾಗವಾಗಿ ಇಂದು ಶುಭಾ ಪೂಂಜಾ ಮತ್ತು ಸುಮಂತ್ ಬಿಲ್ಲವ ಫ್ಯಾಮಿಲಿ ಕೋರ್ಟ್ ಎದುರು ಹಾಜರಾಗುವ ಸಾಧ್ಯತೆ ಇದೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಶುಭಾ ಪೂಂಜಾ ಆಪ್ತರು, ''ಹೌದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ'' ಎಂದು ತಿಳಿಸಿದ್ದಾರೆ.
2022ರ ಜನವರಿ 5ರಂದು ಉಡುಪಿಯ ಶಿರ್ವಾದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೊಂದು ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿತ್ತು. ಮದುವೆಗೂ ಒಂದು ವರ್ಷ ಮುನ್ನ ದಾಂಪತ್ಯ ಜೀವನ ಆರಂಭಿಸುವ ಬಗ್ಗೆ ಸುಳಿವು ನೀಡಿದ್ದರು. ವಿವಾಹ ಸಮಾರಂಭಕ್ಕೆ ಗೆಳೆಯರು ಹಾಗೂ ಕುಟುಂಬಸ್ಥರು ಸಾಕ್ಷಿಯಾಗಿದ್ದರು.
ಶುಭಾ ಪೂಂಜಾ ಒಂದು ಸಮಯ ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದರು. ಮಾಡೆಲ್ ಆಗಿಯೂ ಮಿಂಚಿದ್ದರು. 2003-04ರಲ್ಲಿ ವೃತ್ತಿಜೀವನ ಆರಂಭಿಸಿದ ನಟಿ 2 ದಶಕಗಳನ್ನು ಪೂರೈಸಿದ್ದಾರೆ. ಸರಿಸುಮಾರು 50 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ಮತ್ತು ಯಶ್ ಮುಖ್ಯಭೂಮಿಕೆಯ ಮೊಗ್ಗಿನ ಮನಸ್ಸು ಚಿತ್ರ ಶುಭಾ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಈ ಚಿತ್ರದಲ್ಲಿ ಅವರು ಪ್ರಮುಖ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಮೂಲಕ ಕನ್ನಡದ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಫಿಲ್ಮ್ಫೇರ್ ಪ್ರಶಸ್ತಿಯನ್ನೂ ಪಡೆದುಕೊಂಡರು.
ಚಲನಚಿತ್ರೋದ್ಯಮದಲ್ಲಿ 2 ದಶಕಗಳನ್ನು ಪೂರೈಸಿರುವ ನಟಿ 2008 ರಿಂದ 2012ರವರೆಗೆ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ತಮಿಳು ಸಿನಿಮಾಗಳನ್ನೂ ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಮಾಡಲಿಲ್ಲವಾದ್ರೂ, ಟಿವಿ ಕಾರ್ಯಕ್ರಮಗಳಲ್ಲಿ ಮತ್ತು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆ ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ಜುಲೈನಲ್ಲಿ ಗೆಳತಿ ಗೌರಿ ಸ್ಪ್ರಾಟ್ ಜೊತೆ ಅಮೀರ್ ಖಾನ್ 3ನೇ ಮದುವೆ?
ಸಿನಿಮಾಗಳಲ್ಲಿ ಹೆಚ್ಚು ಜನಪ್ರಿಯರಾಗಿದ್ದ ಶುಭಾ ಪೂಂಜಾ, ಅಭಿನಯ ಚಕ್ರವರ್ತಿ ಸುದೀಪ್ ನಡೆಸಿಕೊಡುವ ಕನ್ನಡ ಕಿರುತೆರೆಯ ಬಿಗ್ ಬಸ್ ಸೀಸನ್ 8ರಲ್ಲಿಯೂ ಕಾಣಿಸಿಕೊಂಡು ಮೋಡಿ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಮನರಂಜನೆ ನೀಡಿದ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಸುಮಾರು 100 ದಿನಗಳಿಗೂ ಹೆಚ್ಚು ಕಾಲ ಈ ಮನೆಯಲ್ಲಿ ಉಳಿದುಕೊಂಡು, ಕೊನೆ ಹಂತದಲ್ಲಿ ಎಲಿಮಿನೇಟ್ ಆದ್ರು.
ಇದನ್ನೂ ಓದಿ: ಬಳ್ಳಾರಿಯಲ್ಲಿ ಅದ್ಧೂರಿ ಸ್ವಾಗತ ಪಡೆದ ರಾಮ್ ಚರಣ್, ಶಿವಣ್ಣನ 'ಪೆದ್ದಿ': ಅಭಿಮಾನಿಗಳ ಸಂಭ್ರಮಾಚರಣೆ ನೋಡಿ

