ಆಸ್ಕರ್ ಅಂಗಳದಲ್ಲಿ ಕನ್ನಡ ಚಿತ್ರಗಳು: ರಾಷ್ಟ್ರಪ್ರಶಸ್ತಿ ಬಳಿಕ ಹೊಂಬಾಳೆ ಫಿಲ್ಮ್ಸ್ನ ಮತ್ತೊಂದು ಮೈಲಿಗಲ್ಲು
ಆಸ್ಕರ್ ಅಂಗಳದಲ್ಲಿ ಹೊಂಬಾಳೆ ಫಿಲ್ಮ್ಸ್ನ 'ಕಾಂತಾರ ಚಾಪ್ಟರ್ 1' ಮತ್ತು 'ಮಹಾವತಾರ ನರಸಿಂಹ' ಚಿತ್ರಗಳು ಸ್ಪರ್ಧೆಗಿಳಿದಿವೆ.

By ETV Bharat Entertainment Team
Published : January 9, 2026 at 12:43 PM IST
ಭಾರತೀಯ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್' ಜಾಗತಿಕ ವೇದಿಕೆಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. 2025ರ ಸಾಲಿನ ಜಾಗತಿಕ ಬ್ಲಾಕ್ಬಸ್ಟರ್ ಹಿಟ್ ಚಿತ್ರಗಳಾದ 'ಕಾಂತಾರ: ಚಾಪ್ಟರ್ 1' ಮತ್ತು 'ಮಹಾವತಾರ ನರಸಿಂಹ', ವಿಶ್ವದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯಾದ ಆಸ್ಕರ್ನಲ್ಲಿ ಸ್ಪರ್ಧೆಗಿಳಿದಿವೆ.
ಭಾರತದ ಪೌರಾಣಿಕ ಅನಿಮೇಟೆಡ್ ಸಿನಿಮಾ 'ಮಹಾವತಾರ ನರಸಿಂಹ' ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ ವಿಭಾಗದಲ್ಲಿ ಮತ್ತು 'ಕಾಂತಾರ: ಎ ಲೆಜೆಂಡ್ - ಅಧ್ಯಾಯ 1' ಅತ್ಯುತ್ತಮ ಚಿತ್ರ ಸ್ಪರ್ಧೆಗೆ (Best Picture contending race) ಪ್ರವೇಶ ಪಡೆದುಕೊಂಡಿದ್ದು, ಆಸ್ಕರ್ 2026ರ ಫೈನಲ್ ನಾಮಿನೇಷನ್ಸ್ ಜನವರಿ 22ರಂದು ಪ್ರಕಟಗೊಳ್ಳಲಿದೆ.
Rooted in our culture, driven by divinity.
— Hombale Films (@hombalefilms) January 9, 2026
Proud and privileged as #KantaraChapter1 enters the Best Picture contending race at the #Oscars Academy Awards 2026.#KantaraForOscars#Kantara @hombalefilms @KantaraFilm @shetty_rishab @VKiragandur @ChaluveG @rukminitweets… pic.twitter.com/xSCsH28Qjr
ಹೊಂಬಾಳೆ ಫಿಲ್ಮ್ಸ್ ಕಥೆಗಳ ಶಕ್ತಿ ಪ್ರದರ್ಶನ: ಈ ಎರಡೂ ಚಿತ್ರಗಳು ಆಸ್ಕರ್ನ ಅತ್ಯಂತ ಪ್ರತಿಷ್ಠಿತ ವಿಭಾಗಗಳಲ್ಲಿ ಪ್ರಶಸ್ತಿಗೆ ಸ್ಪರ್ಧಿಸಲು ಅರ್ಹತೆ ಪಡೆದಿವೆ. ಇದು ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ಕಥೆಗಳ ಶಕ್ತಿ ಮತ್ತು ಜಾಗತಿಕ ಗುಣಮಟ್ಟಕ್ಕೆ ಸಂದ ಗೌರವವಾಗಿದೆ.
ಭಾರತೀಯ ಅನಿಮೇಷನ್ ಲೋಕದ ಕ್ರಾಂತಿ: 'ಮಹಾವತಾರ ನರಸಿಂಹ' ಚಿತ್ರ 'ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್' ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಆ ಮೂಲಕ ಈ ವಿಭಾಗದಲ್ಲಿ ಆಯ್ಕೆಯಾದ ಭಾರತದ ಮೊದಲ ಅನಿಮೇಷನ್ ಚಿತ್ರ ಎಂಬ ಇತಿಹಾಸ ಬರೆದಿದೆ.
ಹೊಂಬಾಳೆ ಫಿಲ್ಮ್ಸ್ ಸಾಧನೆ: ಈ ವರ್ಷ ಆಸ್ಕರ್ನ ಸಾಮಾನ್ಯ ಪಟ್ಟಿಯಲ್ಲಿರುವ ಭಾರತದ ಕೇವಲ 4 ಚಿತ್ರಗಳ ಪೈಕಿ 2 ಚಿತ್ರಗಳು ಹೊಂಬಾಳೆ ಸಂಸ್ಥೆಯದ್ದಾಗಿರುವುದು ಗಮನಾರ್ಹವಾಗಿದೆ.
ಆಸ್ಕರ್ ರೇಸ್ನಲ್ಲಿರುವ ಭಾರತೀಯ ಚಿತ್ರಗಳು: ಇಂಟರ್ನ್ಯಾಷನಲ್ ಫೀಚರ್ ಫಿಲ್ಮ್ ಕ್ಯಾಟಗರಿಯಲ್ಲಿ ಪ್ರಪಂಚದಾದ್ಯಂತದ 15 ಸಿನಿಮಾಗಳು ಅಂತಿಮ ಸುತ್ತಿನ ಮತದಾನಕ್ಕೆ ಆಯ್ಕೆಯಾಗಿವೆ. ಈ ಲಿಸ್ಟ್ನಲ್ಲಿ, ಭಾರತದ 'ಹೋಮ್ಬೌಂಡ್' ಚಿತ್ರವಿದೆ. ಅತ್ಯುತ್ತಮ ಚಿತ್ರ ಸ್ಪರ್ಧೆಗೆ ಪ್ರವೇಶ ಪಡೆದ 201 ಅರ್ಹ ಚಲನಚಿತ್ರಗಳ ಪೈಕಿ 'ಕಾಂತಾರ: ಎ ಲೆಜೆಂಡ್ - ಅಧ್ಯಾಯ 1'ರ ಜೊತೆಗೆ ಅನುಪಮ್ ಖೇರ್ ಅವರ 'ತನ್ವಿ: ದಿ ಗ್ರೇಟ್' ಚಿತ್ರವೂ ಇದೆ.
ಹೊಂಬಾಳೆ ಫಿಲ್ಮ್ಸ್ಗಿದು ಹೆಮ್ಮೆಯ ಕ್ಷಣ: ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ: ಚಾಪ್ಟರ್ 1' ತನ್ನ ಸಾಂಸ್ಕೃತಿಕ ವಿಚಾರಗಳ ಮೂಲಕ ಜಗತ್ತನ್ನು ಸೆಳೆದಿದ್ದರೆ, ಅಶ್ವಿನ್ ಕುಮಾರ್ ನಿರ್ದೇಶನದ 'ಮಹಾವತಾರ ನರಸಿಂಹ' ತನ್ನ ದೃಶ್ಯ ವೈಭವದ ಮೂಲಕ ಅನಿಮೇಷನ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ಎರಡೂ ಚಿತ್ರಗಳು ಈಗ ಆಸ್ಕರ್ನ ಪ್ರಮುಖ ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿವೆ. ಭಾರತೀಯ ಕಥೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದೊಂದಿಗೆ ಕೊಂಡೊಯ್ಯುತ್ತಿರುವ ವಿಜಯ್ ಕಿರಗಂದೂರು ನೇತೃತ್ವದ ಹೊಂಬಾಳೆ ಫಿಲ್ಮ್ಸ್ಗಿದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ.
ಇದನ್ನೂ ಓದಿ: Interview: ಆಟೋ ಡ್ರೈವರ್ ಆಗಿದ್ದ ರವಿವರ್ಮ ಇಂದು ಪ್ಯಾನ್ ಇಂಡಿಯಾ ಸಾಹಸ ನಿರ್ದೇಶಕ
ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ಅನ್ನು 2012ರಲ್ಲಿ ಬೆಂಗಳೂರು ಮೂಲದ ವಿಜಯ್ ಕಿರಗಂದೂರ್ ಹಾಗೂ ಚಲುವೆ ಗೌಡ ಸ್ಥಾಪಿಸಿದರು. ಸಂಸ್ಥೆಯ ಮೊದಲ ಸಿನಿಮಾ 2014ರಲ್ಲಿ ಮೂಡಿಬಂತು. ಪುನೀತ್ ರಾಜ್ಕುಮಾರ್ ಮುಖ್ಯಭೂಮಿಕೆಯ ನಿನ್ನಿಂದಲೆ ಚಿತ್ರದಿಂದ ನಿರ್ಮಾಣ ಪಯಣ ಪ್ರಾರಂಭವಾಗಿ, ಮಾಸ್ಟರ್ಪೀಸ್, ರಾಜಕುಮಾರ, ಕೆಜಿಎಫ್ ಚಾಪ್ಟರ್ 1, ಯುವರತ್ನ, ಕೆಜಿಎಫ್ ಚಾಪ್ಟರ್ 2, ಕಾಂತಾರ, ರಾಘವೇಂದ್ರ ಸ್ಟೋರ್ಸ್, ಧೂಮಂ, ಸಲಾರ್ ಪಾರ್ಟ್ಸ್ 1, ರಘು ತಾತ, ಯುವ, ಬಘೀರ, ಕಾಂತಾರ ಚಾಪ್ಟರ್ 1 ಚಿತ್ರಗಳನ್ನು ಈವರೆಗೆ ನಿರ್ಮಾಣ ಮಾಡಿದೆ. ಬಹುತೇಕ ಎಲ್ಲವೂ ಸೂಪರ್ ಹಿಟ್, ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದೆ. ಸದ್ಯ ಸಂಸ್ಥೆಯ 2 ಸಿನಿಮಾಗಳು ಆಸ್ಕರ್ ಅಂಗಳದಲ್ಲಿರೋದು, ಕನ್ನಡ ಚಿತ್ರರರಂಗದ ಕೀರ್ತಿಯನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಉಪ್ಪಿ ಬಣ್ಣ ಹಚ್ಚಿ 37 ವರ್ಷ: ಡೈರೆಕ್ಷನ್ To ಹೀರೋ; ಅಪಶಕುನಗಳಿಗೆ ಕುಗ್ಗದ ರಿಯಲ್ ಸ್ಟಾರ್ ರಿಯಲ್ ಸ್ಟೋರಿ
2022ರಲ್ಲಿ ಮೂಡಿಬಂದ ಹೊಂಬಾಳೆ ಫಿಲ್ಮ್ಸ್ನ 'ಕಾಂತಾರ' 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ 'ಅತ್ಯುತ್ತಮ ಮನರಂಜನಾ ಸಿನಿಮಾ'ವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ನಟ, ನಿರ್ದೇಶಕ, ಬರಹಗಾರ ರಿಷಬ್ ಶೆಟ್ಟಿ 'ಅತ್ಯುತ್ತಮ ನಟ' ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅದೇ ವರ್ಷ ಹೊಂಬಾಳೆ ಫಿಲ್ಮ್ಸ್ನ ಕೆಜಿಎಫ್ 2 ಸಿನಿಮಾ ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್ ಅವಾರ್ಡ್ ಅನ್ನೂ ಪಡೆದುಕೊಂಡಿತ್ತು. ಸಾಹಸ ನಿರ್ದೇಶಕರಾದ ಅನ್ಬುಮಣಿ ಎಂಎಂ ಮತ್ತು ಅರಿವುಮಣಿ ಪ್ರಶಸ್ತಿ ಸ್ವೀಕರಿಸಿದ್ದರು. ಇದೀಗ ಹೊಂಬಾಳೆ ಫಿಲ್ಮ್ಸ್ನ 2 ಚಿತ್ರಗಳು ಆಸ್ಕರ್ ಅಂಗಳದಲ್ಲಿದ್ದು, ಫೈನಲ್ ನಾಮಿನೇಷನ್ಸ್ಗಾಗಿ ಕನ್ನಡಿಗರು ಎದುರು ನೋಡುತ್ತಿದ್ದಾರೆ.

