ಗ್ರಾಮಸ್ಥರಿಗೆ ಆರ್ಥಿಕ ಭದ್ರತೆ ನೀಡುವ ಬೊಂಬಾಟ ವಿಮಾ ಯೋಜನೆ: ಕಡಿಮೆ ಸಮಯ, ಹಣ ವಾಪಸಾತಿ ಸೌಲಭ್ಯವೂ ಉಂಟು!
ಆರ್ಥಿಕ ಭದ್ರತೆಗಾಗಿ ಅಂಚೆ ಕಚೇರಿ ಯೋಜನೆ: ವಿಮಾ ರಕ್ಷಣೆಯೊಂದಿಗೆ ಬಂಪರ್ ಬೋನಸ್


Published : February 25, 2026 at 7:33 AM IST
ಹೈದರಾಬಾದ್: ಈ ದಿನಗಳಲ್ಲಿ ನಾವು ಎಷ್ಟು ಸಂಪಾದಿಸುತ್ತೇವೆ ಎನ್ನುವುದಕ್ಕಿಂತ ನಾವು ಎಷ್ಟು ಉಳಿಸುತ್ತೇವೆ ಎಂಬುದು ಅತಿ ಮುಖ್ಯವಾಗಿದೆ. ಭವಿಷ್ಯದಲ್ಲಿ ನಾವು ಎದುರಿಸುವ ವೆಚ್ಚಗಳು ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ಜನರು ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಹೆಚ್ಚಿನವರು ಯಾವುದೇ ಅಪಾಯಕ್ಕೆ ಅವಕಾಶ ನೀಡದಂತೆ ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಾರೆ. ಅಷ್ಟಕ್ಕೂ ಈಗ ಅಂಚೆ ಕಚೇರಿಗಳಲ್ಲಿ ಕಡಿಮೆ ಹೂಡಿಕೆಯೊಂದಿಗೆ ಹೆಚ್ಚಿನ ಲಾಭ ಪಡೆಯಬಹುದಾದ ಯೋಜನೆಗಳು ಕೂಡಾ ಲಭ್ಯ ಇವೆ.
ಬಹುತೇಕರು ಅಂಚೆ ಕಚೇರಿಯಲ್ಲಿ ಸಿಗುವ ಯೋಜನೆಗಳು ಕೇವಲ ಉಳಿತಾಯ ಯೋಜನೆಗಳೆಂದು ಭಾವಿಸಿದ್ದಾರೆ. ಆದರೆ, ಈಗ ಅಲ್ಲಿ ವಿಮಾ ಪಾಲಿಸಿಗಳು ಲಭ್ಯ ಇವೆ. ಪಾಲಿಸಿದಾರರು ಇವುಗಳಲ್ಲಿ ಹೂಡಿಕೆ ಮಾಡುವ ಮೂಲಕ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಹಣ ವಾಪಸಾತಿ ಸೌಲಭ್ಯವೂ ಇದೆ. ನಾವೀಗ ನಿಮ್ಮೆಲ್ಲರಿಗೂ ಅಂಚೆ ಕಚೇರಿ ನೀಡುವ ಇದೇ ರೀತಿಯ ಸೂಪರ್ ಯೋಜನೆಯನ್ನು ತಂದಿದ್ದೇವೆ. ಹಾಗಾದರೆ, ಆ ಯೋಜನೆ ಯಾವುದು? ಯಾರು ಅರ್ಹರು? ಈಗ ಪೂರ್ಣ ವಿವರಗಳನ್ನು ನೋಡೋಣ.
ಗ್ರಾಮೀಣ ಪ್ರದೇಶದ ಜನರಿಗೆ ಅಲ್ಪಾವಧಿಯ ವಿಮಾ ರಕ್ಷಣೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಅಂಚೆ ಕಚೇರಿ ಈ ಯೋಜನೆಯನ್ನು ತಂದಿದೆ. ಅದುವೆ ಅಂಚೆ ಕಚೇರಿಯ ಗ್ರಾಮ ಪ್ರಿಯ ವಿಮಾ ಯೋಜನೆ. ಇದು ಅತ್ಯುತ್ತಮ ಮನಿ ಬ್ಯಾಕ್ ಪಾಲಿಸಿ. ಗ್ರಾಮೀಣ ಜನರಿಗೆ ಆರ್ಥಿಕ ಭದ್ರತೆಯ ಜೊತೆಗೆ ಉತ್ತಮ ಆದಾಯವನ್ನು ಒದಗಿಸಲು ಈ ಮನಿ ಬ್ಯಾಕ್ ಜೀವ ವಿಮಾ ಪಾಲಿಸಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಈ ಪಾಲಿಸಿ ಪಡೆಯಬೇಕಾದರೆ ಇರುವ ಅರ್ಹತೆಗಳೇನು:
- ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರು ಭಾರತೀಯರಾಗಿರಬೇಕು.
- 20 ರಿಂದ 45 ವರ್ಷದೊಳಗಿನವರು ಈ ಯೋಜನೆಗೆ ಸೇರಲು ಅರ್ಹರು.
- ಈ ಯೋಜನೆಯಲ್ಲಿ ನೀವು ಕನಿಷ್ಠ 10,000 ರೂ. ಮತ್ತು ಗರಿಷ್ಠ 10 ಲಕ್ಷ ರೂ. ವರೆಗೆ ವಿಮೆಯನ್ನು ತೆಗೆದುಕೊಳ್ಳಬಹುದು.
- ಅಂಚೆ ಕಚೇರಿ ನೀಡುವ ಈ ಜೀವ ವಿಮಾ ಪಾಲಿಸಿಯ ಅವಧಿ 10 ವರ್ಷಗಳು.
ಮನಿ ಬ್ಯಾಕ್ ಸೌಲಭ್ಯವೂ ಇದೆ
- ಈ ಯೋಜನೆಯಲ್ಲಿ ಮತ್ತೊಂದು ಅದ್ಭುತ ಸೌಲಭ್ಯವೂ ಲಭ್ಯವಿದೆ. ಅಂದರೆ ಪ್ರವಾಹ, ಭೂಕಂಪ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನಿಮ್ಮ ಪ್ರೀಮಿಯಂ ಹಣವನ್ನು ಒಂದು ವರ್ಷದವರೆಗೆ ಪಾವತಿಸದಿದ್ದರೂ ಬಡ್ಡಿಯನ್ನು ವಿಧಿಸಲಾಗುವುದಿಲ್ಲ. ವಿಶೇಷವಾಗಿ ಇದರಲ್ಲಿ, ಪೂರ್ಣ ಹತ್ತು ವರ್ಷಗಳ ಕಾಲ ಪ್ರೀಮಿಯಂ ಪಾವತಿಸುವ ವ್ಯಕ್ತಿಗೆ ಜೀವ ವಿಮಾದಾರರಿಗೆ ವಿಮಾ ರಕ್ಷಣೆ ಸಿಗುತ್ತದೆ. ಅಲ್ಲದೇ ಒಟ್ಟು ಮೂರು ಮನಿ ಬ್ಯಾಕ್ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ.
- ನೀವು 10 ವರ್ಷಗಳ ಅವಧಿಯೊಂದಿಗೆ ಈ ಪಾಲಿಸಿಯನ್ನು ತೆಗೆದುಕೊಂಡರೆ, ನಾಲ್ಕು ವರ್ಷಗಳ ನಂತರ ನಿಮಗೆ ಶೇಕಡಾ 20 ರಷ್ಟು ಹಣ ಮತ್ತು 7 ವರ್ಷಗಳ ನಂತರ ಮತ್ತೊಮ್ಮೆ ಶೇಕಡಾ 20 ರಷ್ಟು ಹಣ ವಾಪಸ್ ಪಡೆದುಕೊಳ್ಳಬಹುದು.
- 10 ವರ್ಷಗಳ ನಂತರ ಅಂದರೆ ಪಾಲಿಸಿ ಅವಧಿ ಪೂರ್ಣಗೊಂಡ ನಂತರ ಉಳಿದ 60 ಪ್ರತಿಶತವನ್ನು ಬೋನಸ್ ಜೊತೆಗೆ ನಿಮಗೆ ಪಾವತಿಸಲಾಗುತ್ತದೆ. ಪಾಲಿಸಿದಾರನು ಮಧ್ಯದಲ್ಲಿ ಮರಣಹೊಂದಿದರೆ, ನಾಮಿನಿಗೆ ಒಟ್ಟು ರೂ. 10 ಲಕ್ಷ ರೂಪಾಯಿ ಹಣ ಸಿಗುತ್ತದೆ.
- ಈ ಪಾಲಿಸಿಯ ದೊಡ್ಡ ಹೈಲೈಟ್ ಎಂದರೆ ಅಂಚೆ ಕಚೇರಿಯಿಂದ ಒದಗಿಸಲಾದ ಬೋನಸ್. ಅಂಚೆ ಇಲಾಖೆ ಘೋಷಿಸಿದಂತೆ ಇದು ಪ್ರತಿ 1,000 ರೂಪಾಯಿಗೆ ವರ್ಷಕ್ಕೆ ರೂ. 45 ಬೋನಸ್ ನೀಡುತ್ತದೆ.
ತಿಂಗಳಿಗೆ ಎಷ್ಟು ಹಣ ಪಾವತಿಸಬೇಕು:
ಈ ಯೋಜನೆಗೆ ಸೇರುವ ವ್ಯಕ್ತಿಯು 10 ಸಾವಿರ ರೂಪಾಯಿಯಿಂದ 10 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಉದಾಹರಣೆಗೆ ಒಬ್ಬ ವ್ಯಕ್ತಿಯು 30 ನೇ ವಯಸ್ಸಿನಲ್ಲಿ 5 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ ಎಂದು ಕೊಳ್ಳೋಣ. ಅವರು ತಿಂಗಳಿಗೆ ಪ್ರೀಮಿಯಂ ಆಗಿ 5,068 ರೂ. ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಪ್ರಸ್ತುತ ವರ್ಷಕ್ಕೆ ಸಾವಿರ ರೂಪಾಯಿಗಳಿಗೆ 45 ರೂ. ಬೋನಸ್ ನೀಡಲಾಗುತ್ತಿದೆ. ಅದರಂತೆ 5 ಲಕ್ಷ ರೂಪಾಯಿಗಳಿಗೆ ವರ್ಷಕ್ಕೆ 22,500 ರೂ. ಬೋನಸ್ ನೀಡಲಾಗುತ್ತದೆ.
ನೀವು ಹತ್ತು ವರ್ಷಗಳ ಅವಧಿಯಲ್ಲಿ 2,25,000 ರೂ. ಬೋನಸ್ ಸಿಗುತ್ತದೆ. ಅದರೊಂದಿಗೆ ಪಾಲಿಸಿದಾರರಿಗೆ ಮುಕ್ತಾಯದ ಸಮಯದಲ್ಲಿ ಒಟ್ಟು 7 ಲಕ್ಷ 25 ಸಾವಿರ ರೂ. ಸಿಗುತ್ತದೆ.
ಯೋಜನೆಗೆ ಸೇರುವುದು ಹೇಗೆ?: ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಗ್ರಾಮ ಪ್ರಿಯ ಗ್ರಾಮೀಣ ಜೀವ ವಿಮಾ ಯೋಜನೆಯ ಬಗ್ಗೆ ವಿಚಾರಿಸಿ. ಬಳಿಕ ಸಂಬಂಧಿತ ಅರ್ಜಿ ನಮೂನೆಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ ಅಧಿಕಾರಿಗಳಿಗೆ ಸಲ್ಲಿಸಿದರೆ ಆಯ್ತು.
ಇವುಗಳನ್ನು ಓದಿ:
ನಥಿಂಗ್ ಹೊಸ ಸ್ಮಾರ್ಟ್ಫೋನ್ ಮಾರ್ಚ್ನಲ್ಲಿ ಲಗ್ಗೆ! ಡಿಸೈನ್ ಲೀಕ್, ಹೇಗಿದೆ ಗೊತ್ತಾ ಲುಕ್?

