ETV Bharat / business

ನಿಮಗೆ ಗೊತ್ತಿಲ್ಲದಂತೆ ನಿಮ್ಮ ಹೆಸರಲ್ಲಿ ಸಾಲ, ತೆರಿಗೆ ವಂಚನೆ! ಖಾಸಗಿ ಮಾಹಿತಿ ಹಂಚಿಕೊಳ್ಳುವ ಮುನ್ನ ಎಚ್ಚರ

ಏಜೆಂಟರುಗಳ​ ಮಾತಿಗೆ ಬಲಿಯಾಗಿ ಅನೇಕ ಬಾರಿ ಹಂಚಿಕೊಳ್ಳುವ ಮಾಹಿತಿಗಳು ನಿಮ್ಮನ್ನು ಆರ್ಥಿಕ ವಂಚನೆಗೆ ಒಳಗಾಗಿಸುವ ಸಾಧ್ಯತೆ ಇದೆ. ಈ ಕುರಿತು ಪೊಲೀಸರು ಕೂಡ ಎಚ್ಚರ ನೀಡಿದ್ದಾರೆ.

identity-theft-on-the-rise-innocent-citizens-trapped-in-fraud-cases-pan-aadhaar-misuse-leaves-people-facing-loans-gst-dues-they-never-took
ಸಾಂದರ್ಭಿಕ ಚಿತ್ರ (ANI)
author img

By ETV Bharat Karnataka Team

Published : February 27, 2026 at 5:40 PM IST

3 Min Read
Choose ETV Bharat

ಇತ್ತೀಚೆಗೆ ಹೈದರಾಬಾದ್‌ನ ಸಣ್ಣ ಉದ್ಯಮಿಯೊಬ್ಬರು ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಲು ಏಜೆಂಟ್‌ರನ್ನು ನಂಬಿದ್ದೇ ತಪ್ಪಾಗಿದೆ. ಏಜೆಂಟ್​ ಮಾತಿನ ವರಸೆಗೆ ತನ್ನ ವೈಯಕ್ತಿಕ ವಿವರಗಳನ್ನು ಹಂಚಿಕೊಂಡು ಮೋಸ ಹೋಗಿದ್ದಾರೆ. ಉದ್ಯಮಿಯ ಸಿಬಿಲ್​ ಸ್ಕೋರ್​ ಕಡಿಮೆಯಾಗಿ, ಸಾಲ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಾದ ಮೂರು ತಿಂಗಳ ಬಳಿಕ ಅವರಿಗೆ ಆಘಾತ ಕಾದಿತ್ತು. ಸಾಲದ ಕಂತನ್ನು ಇನ್ನೂ ಪಾವತಿಸಿಲ್ಲ ಎಂಬ ನೋಟಿಸ್​ ಜಾರಿಯಾಗಿತ್ತು!.

ತಕ್ಷಣಕ್ಕೆ ನೋಟಿಸ್​ ಕಳುಹಿಸಿದ್ದ ಬ್ಯಾಂಕ್​ಗೆ ಹೋಗಿ ಪರಿಶೀಲಿಸಿದಾಗ ಅವರಿಗೆ ತಿಳಿಯದಂತೇ ಅವರ ಹೆಸರಿನಲ್ಲಿರುವ ದಾಖಲೆಯಲ್ಲಿ 5 ಲಕ್ಷ ರೂ ಸಾಲ ಮಂಜೂರು ಮಾಡಲಾಗಿತ್ತು. ಆಗ ತಮ್ಮ ಗುರುತು ಮತ್ತು ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರ ಮೊರೆ ಹೋಗಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ, ಈ ಹಿಂದೆ ಹೈದರಾಬಾದ್​ನಲ್ಲಿ ಮಾರ್ಕೆಟಿಂಗ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 75 ವರ್ಷದ ವ್ಯಕ್ತಿಯೊಬ್ಬರು ಐದು ವರ್ಷದ ಹಿಂದೆ ತಮ್ಮ ಸ್ವಂತ ಊರಾದ ರಾಜಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ 4 ಕೋಟಿ ರೂ ತೆರಿಗೆ ಬಾಕಿ ಕುರಿತು ಜಿಎಸ್​ಟಿ ನೋಟಿಸ್​ ಬಂದಿದೆ. ತಕ್ಷಣಕ್ಕೆ ಅವರು ಹೈದರಾಬಾದ್​​ಗೆ ಬಂದು ಪರಿಶೀಲಿಸಿದಾಗ ಅವರ ಪ್ಯಾನ್​ ಕಾರ್ಡ್​ ದುರ್ಬಳಕೆ ಮಾಡಿಕೊಂಡು, ಜಿಎಸ್​ಟಿ ಟಿನ್​ ಪಡೆಯಲಾಗಿತ್ತು. ಅವರಿಗೆ ಅರಿವಿರದಂತೆ ಕೋಟ್ಯಂತರ ರೂ ವಹಿವಾಟು ನಡೆಸಲಾಗಿತ್ತು. ಇಳಿ ವಯಸ್ಸಿನಲ್ಲಿ ತಾವು ಮಾಡದ ತಪ್ಪಿಗೆ ಇದೀಗ ಭಾರೀ ದಂಡ ತೆರುವಂತಾಗಿದೆ ಎಂದು ಅವರು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಮಧ್ಯವರ್ತಿಗಳಿಂದ ಗುರುತಿನ ದುರ್ಬಳಕೆ: ಈ ರೀತಿ ವ್ಯಕ್ತಿಯೊಬ್ಬರ ದಾಖಲೆಗಳನ್ನು ದುರ್ಬಳಕೆ ಮಾಡುವ ಮೂಲಕ ಅವರ ಗುರುತು ಕದಿಯುವ ಪ್ರಯತ್ನದಲ್ಲಿ ಮಧ್ಯವರ್ತಿಗಳು ಭಾಗಿಯಾಗಿರುವುದು ಕಂಡುಬಂದಿದೆ. ಪ್ಯಾನ್​, ಆಧಾರ್​, ಮತದಾನದ ಚೀಟಿ ಸೇರಿದಂತೆ ದಾಖಲೆಗಳನ್ನು ಸುಲಭವಾಗಿ ಹಣ ಪಡೆಯುವ ಉದ್ದೇಶದಿಂದ ಆರ್ಥಿಕ ವಂಚನೆಗೆ ಬಳಸಲಾಗುತ್ತಿದೆ. ಇದರ ಪರಿಣಾಮ ಮುಗ್ದ ಜನರು ತೆರಿಗೆ, ಬ್ಯಾಂಕ್​ ಸಾಲದಂತಹ ನೋಟಿಸ್​ ಪಡೆಯುವಂತಾಗಿದೆ.

ಯಾವುದೇ ಹಣಕಾಸಿನ ವ್ಯವಹಾರ ಅಥವಾ ಉದ್ದಿಮೆ ಚಟುವಟಿಕೆಯಲ್ಲಿ ಭಾಗಿಯಾಗದಿದ್ದರೂ ಸಾಲದ ವಂಚನೆ, ಅಕ್ರಮಣ ಹಣ ವಹಿವಾಟು ಮತ್ತು ತೆರಿಗೆ ವಂಚನೆಯಂಥವುಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ

ಹೇಗೆ ನಡೆಯುತ್ತದೆ ವಂಚನೆ?: ಆರ್ಥಿಕವಾಗಿ ದುರ್ಬಲವಾಗಿರುವ ಅಥವಾ ತುರ್ತು ಹಣದ ಅವಶ್ಯಕತೆ ಇರುವವರು ಮಧ್ಯವರ್ತಿಗಳನ್ನು ಸಂಪರ್ಕಿಸುತ್ತಾರೆ. ಅವರು ಸರ್ಕಾರದ ಯೋಜನೆ, ಸಬ್ಸಿಡಿ ಅಥವಾ ವೈಯಕ್ತಿಕ ಸಾಲ ಕೊಡಿಸುವುದಾಗಿ ನಂಬಿಸುತ್ತಾರೆ. ಈ ವೇಳೆ ಆಧಾರ್​, ಪ್ಯಾನ್​, ಫೋಟೋಗ್ರಾಫ್​ ಮತ್ತು ಮೊಬೈಲ್​ ನಂಬರ್​ ಪಡೆಯುತ್ತಾರೆ.

ಈ ಮಾಹಿತಿ ಬಳಕೆ ಮಾಡಿಕೊಂಡು ಸಿಮ್​ ಕಾರ್ಡ್​ ಪಡೆದು ಬ್ಯಾಂಕ್​ ಅಕೌಂಟ್​ ಅನ್ನು ಸಂತ್ರಸ್ತರ ಹೆಸರಿನಲ್ಲಿ ತೆರೆಯುತ್ತಾರೆ. ಈ ಖಾತೆಗಳನ್ನು ತಾತ್ಕಾಲಿನ ಸಾಲ ಅಥವಾ ಯೋಜನೆಗೆ ಅನುಮೋದನೆ ಸಿಗುವವರೆಗೆ ಇಟ್ಟಿರುತ್ತಾರೆ. ಬಳಿಕ ಸಿಮ್ ಕಾರ್ಡ್‌ಗಳು, ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳನ್ನು ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧ ಗ್ಯಾಂಗ್‌ಗಳಿಗೆ ಕಳುಹಿಸಲಾಗುತ್ತದೆ.

ನಕಲಿ ಕಂಪನಿಗಳಿಂದ ಜಿಎಸ್ಟಿ ವಂಚನೆ: ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಏಜೆಂಟ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ತನಿಖೆಗಳು ಬಹಿರಂಗಪಡಿಸಿವೆ. ಅವರಿಗೆ ಪ್ರತಿ ಬ್ಯಾಂಕ್ ಖಾತೆಗೆ ರೂ.20,000 ನೀಡಲಾಗುತ್ತಿದ್ದು, ಇದರಿಂದಾಗಿ ಸಂಬಂಧಿಕರು, ಸ್ನೇಹಿತರು ಮತ್ತು ನೆರೆಹೊರೆಯವರಿಂದ ಖಾತೆಗಳನ್ನು ಸಂಗ್ರಹಿಸಬೇಕಾಗುತ್ತದೆ. ಹಲವಾರು ಸಂದರ್ಭಗಳಲ್ಲಿ ಸಂತ್ರಸ್ತರ ಅವರ ಆಧಾರ್ ಮತ್ತು ಪ್ಯಾನ್ ವಿವರಗಳನ್ನು ಬಳಸಿಕೊಂಡು ಶೆಲ್ ಕಂಪನಿಗಳ ನಿರ್ದೇಶಕರಾಗಿ ತೋರಿಸಲಾಗುತ್ತದೆ.

ಕೆಲವು ವ್ಯಾಪಾರಿಗಳು, ತೆರಿಗೆ ತಪ್ಪಿಸುವ ಮತ್ತು ಕಾನೂನುಬಾಹಿರವಾಗಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆಯುವ ಪ್ರಯತ್ನದಲ್ಲಿ ಅನುಮಾನಾಸ್ಪದ ನಾಗರಿಕರ ಹೆಸರಿನಲ್ಲಿ ನಕಲಿ ಸಂಸ್ಥೆಗಳನ್ನು ರಚಿಸುತ್ತಿದ್ದಾರೆ. ಕದ್ದ ದಾಖಲೆಗಳನ್ನು ಬಳಸಿ, ಜಿಎಸ್‌ಟಿ ನೋಂದಣಿಗಳನ್ನು ಪಡೆಯಲಾಗುತ್ತದೆ. ಕೋಟ್ಯಂತರ ಮೌಲ್ಯದ ನಕಲಿ ವಹಿವಾಟುಗಳನ್ನು ತೋರಿಸಿ, ತೆರಿಗೆಗಳನ್ನು ತಪ್ಪಿಸಲಾಗುತ್ತದೆ. ನೋಟಿಸ್ ಜಾರಿ ಮಾಡಿದಾಗ, ಅಮಾಯಕ ಬಲಿಪಶುಗಳು ಕಾನೂನು ತೊಂದರೆ ಎದುರಿಸಬೇಕಾಗುತ್ತದೆ.

ಪೊಲೀಸರಿಂದ ಎಚ್ಚರಿಕೆ: ಈ ಘಟನೆಗಳ ಕುರಿತು ಎಚ್ಚರಿಕೆ ನೀಡಿರುವ ನಗರ ಸೈಬರ್ ಅಪರಾಧ ವಿಭಾಗದ ಎಸಿಪಿ ಶಿವಮಾರುತಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ. ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳ ಮೂಲ ಅಥವಾ ನಕಲು ಪ್ರತಿಗಳನ್ನು ಎಂದಿಗೂ ಅನಗತ್ಯವಾಗಿ ನೀಡಬೇಡಿ. ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಸಾಲ ಅಥವಾ ಜಿಎಸ್‌ಟಿ ನೋಂದಣಿಗಳನ್ನು ತೆಗೆದುಕೊಳ್ಳಲಾಗಿದೆ ಎಂಬ ಅನುಮಾನವಾದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ. ವಿಳಂಬವಿಲ್ಲದೆ ಪೊಲೀಸ್ ದೂರು ದಾಖಲಿಸಿ ಎಂದು ಸಲಹೆ ನೀಡಿದರು.

ಇವುಗಳನ್ನೂ ಓದಿ: