ಐತಿಹಾಸಿಕ ಇರಾನಿ ನೀಲಿ ಕುಂಬಾರಿಕೆ ಎದುರಿಸುತ್ತಿದೆ ಅತಿದೊಡ್ಡ ಬಿಕ್ಕಟ್ಟು: ಬೇಕಿದೆ ಪರಿಹಾರ.. ಈ ಕಲೆ ವಿಶೇಷತೆ ಏನು ಗೊತ್ತಾ?
ರಾಜಸ್ಥಾನದ ನೀಲಿ ಕುಂಬಾರಿಕೆ ಐತಿಹಾಸಿಕ ಮಹತ್ವ ಹೊಂದಿದ್ದು, ಇದು ಉಳಿಕೆಯ ಸವಾಲನ್ನು ಎದುರಿಸುವಂತೆ ಆಗಿದ್ದು, ಈ ಕುರಿತು ಫಿರೋಜ್ ಸೈಫಿ ಅವರ ವರದಿ ಇಲ್ಲಿದೆ.


Published : June 1, 2026 at 1:22 PM IST
ಜೈಪುರ (ರಾಜಸ್ತಾನ): ಜೈಪುರದ ಐತಿಹಾಸಿಕ ಕುರುಹುಗಳಲ್ಲಿ ಒಂದಾಗಿರುವ ನೀಲಿಯ ಕುಂಬಾರಿಕೆ ಕಲೆ ಪೀಳಿಗೆಯಿಂದ ಪೀಳಿಗೆಗೆ ಬಂದಿದ್ದು, ಇದೀಗ ಅದು ಸಾಕಷ್ಟು ಬಿಕ್ಕಟ್ಟು ಅನುಭವಿಸುವಂತೆ ಆಗಿದೆ. ಕಾರಣ ಆಧುನಿಕ ಕಾಲದ ಸವಾಲು ಮತ್ತು ಹೊಸ ಕಲಾವಿದರ ಕೊರತೆ
ಪರ್ಷಿಯನ್ ಕಲೆ ಎಂದು ಗುರುತಿಸಿಕೊಂಡಿರುವ ಈ ನೀಲಿ ಕುಂಬಾರಿಕೆ ಇರಾನ್ನಿಂದ ಮೊಘಲ್ ಅವಧಿಯಲ್ಲಿ ಅಕ್ಬರ್ನಿಂದ ಭಾರತಕ್ಕೆ ಬಂದಿತು. ರಾಜ ಮಾನ್ಸಿಂಗ್ ಇದನ್ನು ಅಮೆರ್ ನಗರಕ್ಕೆ ಪರಿಚಯಿಸಿದ್ದು, ಇದರ ಹೆಚ್ಚಿನ ಕಲೆ ಜೈಪುರದಲ್ಲಿ ಕಾಣಬಹುದಾಗಿದೆ. ಜೈಪುರದ ಕಲಾಪ್ರೀತಿಯ ಆಡಳಿತಗಾರ, ಎರಡನೇ ಸವಾಯಿ ರಾಮ್ ಸಿಂಗ್ ಈ ಕಲೆಯನ್ನು ಉತ್ತೇಜಿಸಿದರು.

ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿರುವ ನೀಲಿ ಕುಂಬಾರಿಕೆಯ ಕಲಾವಿದ ಅನಿಲ್ ದೊರಾಯ ಹೇಳುವಂತೆ, ಎರಡನೇ ಸವಾಯಿ ರಾಮ್ ಸಿಂಗ್ ಕುಂಬಾರ ಸಮುದಾಯವನ್ನು ಈ ಕಲೆಯನ್ನು ಅಭ್ಯಾಸ ಮಾಡಲು ಪೋಷಿಸಿ, ಪ್ರೋತ್ಸಾಹಿಸಿದರು. ಕ್ರಮೇಣ ಇದು ಜೈಪುರದ ಸಾಂಸ್ಕೃತಿಕ ಗುರುತಾಯಿತು. ತಮ್ಮ ಕುಟುಂಬವು ಈ ಕಲೆಯನ್ನು ಒಂಬತ್ತು ತಲೆಮಾರುಗಳಿಂದ ಜೀವಂತವಾಗಿಟ್ಟುಕೊಂಡು ಬರುವ ಮೂಲಕ ಶತಮಾನಗಳಷ್ಟು ಹಳೆಯ ಪರಂಪರೆಯನ್ನು ಸಂರಕ್ಷಿಸಿದೆ ಎಂದರು.
ಇರಾನ್ನಿಂದ ಬಂದ ಕಲೆ: ಸವಾಯಿ ರಾಮ್ ಸಿಂಗ್ 2 ಅವರಿಗೆ ಗಾಳಿಪಟ ಹಾರಿಸುವುದು ಎಂದರೆ ತುಂಬಾ ಇಷ್ಟ, ಜಲ್ ಮಹಲ್ನಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು. ಗಾಳಿಪಟ ಹಾರಿಸುವವರು ವಿಶೇಷವಾಗಿ ತಯಾರಿಸಿದ ದಾರವನ್ನು ಬಳಸಿದ್ದರಿಂದ ಯಾವುದೇ ಗಾಳಿಪಟ ಹಾರಿಸುವವರು ತಮ್ಮ ಗಾಳಿಪಟವನ್ನು ಕತ್ತರಿಸಲು ಸಾಧ್ಯವಾಗಲಿಲ್ಲ. ಒಮ್ಮೆ ಅವರ ಮುತ್ತಜ್ಜ ರಾಜನ ಗಾಳಿಪಟವನ್ನು ಕತ್ತರಿಸಿದ್ದರು.ಇದರಿಂದ ಸಂತೋಷಗೊಂಡ ರಾಜ, ದೊರಾಯನ ಪೂರ್ವಜರಾದ ಕಲುರಾಮ್ ಕುಮಾರ್ ಮತ್ತು ಭೂರಮಲ್ ಕುಮಾರ್ ಅವರನ್ನು ನೀಲಿ ಕುಂಬಾರಿಕೆ ಕಲೆ ಕಲಿಯಲು ಇರಾನ್ಗೆ ಕಳುಹಿಸಿದ್ದರು ಎಂದು ತಮ್ಮ ಕುಟುಂಬ ಕಲೆಯನ್ನು ಕಲಿತ ಬಗೆ ತಿಳಿಸಿದರು.

ಇರಾನ್ ಮಹಾರಾಜ ಮತ್ತು ರಾಜಸ್ಥಾನದ ಎರಡನೇ ಸವಾಯಿ ರಾಮ್ ಸಿಂಗ್ ಸ್ನೇಹಿತರಾಗಿದ್ದರು. ಇದರಿಂದಾಗಿ ತಮ್ಮ ಪೂರ್ವಜರು ಇರಾನ್ಗೆ ಈ ಕಲೆ ಕಲಿಯಲು ಹೋಗಿ ಅದನ್ನು ಜೈಪುರಕ್ಕೆ ಪರಿಚಯಿಸಿದರು. ಅಲ್ಲಿಂದ ಇಲ್ಲಿಯವರೆಗೆ ಜೈಪುರದಲ್ಲಿ ಈ ಕಲೆ ಪ್ರಾಮುಖ್ಯತೆ ಪಡೆದಿದೆ ಎನ್ನುತ್ತಾರೆ ಅವರು.
ಕುಂಬಾರಿಕೆಗೆ ಮುನ್ನ ಸ್ಥಳೀಯ ಕುಂಬಾರರು ಕಂದು ಕುಂಬಾರಿಕೆಯನ್ನು ಮಾಡುತ್ತಿದ್ದರು. ಇರಾನ್ನ ನೀಲಿ ಕುಂಬಾರಿಕೆ ಕಲಿತ ಬಳಿಕ ಅವರು ವನಿಲಾ ಮತ್ತು ಆಕಾಶ ನೀಲಿ ಬಳಕೆ ಮಾಡಲಾರಂಭಿಸಿದರು.
ನೀಲಿ ಕುಂಬಾರಿಕೆಯ ವೈಶಿಷ್ಟ್ಯ: ನೀಲಿ ಕುಂಬಾರಿಕೆ ಸಾಮಾನ್ಯ ಮಣ್ಣನ್ನು ಬಳಕೆ ಮಾಡುವುದಿಲ್ಲ. ಇದು ಅನೇಕ ಸ್ಫಟಿಕ ಶಿಲೆ, ಗಾಜು, ಫುಲ್ಲರ್ಸ್ ಮಣ್ಣು, ಟ್ರಾಗಕಾಂತ್ ಗಮ್ ಮತ್ತು ಕಲ್ಲುಪ್ಪು ಸೇರಿದಂತೆ ಹಲವಾರು ವಸ್ತುಗಳ ಮಿಶ್ರಣವನ್ನು ಬಳಸಲಾಗುವುದು. ಇವುಗಳನ್ನು ಕೈ ಗಿರಣಿಯಲ್ಲಿ ನುಣ್ಣಗೆ ಪುಡಿಮಾಡಿ ತಿರುಳಾಗುವಂತೆ ಬೆರೆಸಲಾಗುತ್ತದೆ. ಬಳಿಕ ಇದನ್ನು ಚಪಾತಿಯಂತೆ ಸುತ್ತಿ ವಿವಿಧ ಬಣ್ಣಗಳಾಗಿ ರೂಪಿಸಲಾಗುತ್ತದೆ. ನಂತರ ಇದನ್ನು ಹಲವಾರು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಇದು ತುಂಬಾ ಹಗುರ ಮತ್ತು ಕಡಿಮೆ ತೂಕವಿರುತ್ತದೆ.

ಶತಮಾನಗಳಷ್ಟು ಉಳಿಯ ಬಲ್ಲದು ಈ ಬಣ್ಣ: ನೀಲಿ ಕುಂಬಾರಿಕೆಯನ್ನು ಸಂಪೂರ್ಣವಾಗಿ ಕೈಯಿಂದಲೇ ಮಾಡಲಾಗುವುದು. ನೀಲಿ ಮಡಿಕೆಗಳಿಗೆ ಮೊದಲಿಗೆ ಬೀಳಿ ಕೋಟಿಂಗ್ ಮಾಡಿ ಬಳಿಕ ಕೈಯಿಂದ ವಿನ್ಯಾಸ ಮತ್ತು ಚಿತ್ರಕಲೆ ಬಿಡಿಸಲಾಗುವುದು. ಇದಾದ ಬಳಿಕ ಮಡಿಕೆಯನ್ನು ಗೂಡುಗಳಲ್ಲಿ ಸುಡುವ ಕರಗಿದ ಗಾಜಿನ ಪದರದಿಂದ ಮೆರುಗುಗೊಳಿಸಲಾಗುತ್ತದೆ. ಇದು ನೀಲಿ ಮತ್ತು ಆಕಾಶ ನೀಲಿ ಬಣ್ಣವನ್ನು ಪಡೆಯುತ್ತದೆ, ಅದು ಶತಮಾನಗಳವರೆಗೆ ಉಳಿಯುವಷ್ಟು ಬಲ ಹೊಂದಿದ್ದು, ಕಲಾಕೃತಿಯು ಹಾಗೆಯೇ ಉಳಿಯುತ್ತದೆ. ಇದು ಹೂವುಗಳು, ಎಲೆಗಳು, ಬಳ್ಳಿಗಳು, ಪಕ್ಷಿಗಳು, ರಾಜಸ್ಥಾನಿ ವ್ಯಕ್ತಿಗಳು ಮತ್ತು ಕೈಯಿಂದ ಕೆತ್ತಿದ ಸಾಂಪ್ರದಾಯಿಕ ವಿನ್ಯಾಸಗಳನ್ನು ಒಳಗೊಂಡಿದೆ. ಬಣ್ಣಗಳಿಗೆ ಕಲ್ಲಿನ ವರ್ಣದ್ರವ್ಯಗಳನ್ನು ಬಳಸಲಾಗುತ್ತದೆ.

45 ದೇಶಗಳ ರಾಯಭಾರಿಗಳು ಮತ್ತು ಅನೇಕ ಪ್ರಮುಖ ಕೈಗಾರಿಕೋದ್ಯಮಿಗಳು ರಾಮಗಢ್ ಮಾಡ್ನಲ್ಲಿರುವ ತಮ್ಮ ನೀಲಿ ಕುಂಬಾರಿಕೆ ಘಟಕಕ್ಕೆ ಭೇಟಿ ನೀಡಿ ಪಾತ್ರೆಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ನೋಡಿದ್ದು, ಅಲ್ಲಿಂದ ನೀಲಿ ಕುಂಬಾರಿಕೆಯನ್ನು ಸಹ ಖರೀದಿಸಿದ್ದಾರೆ ಎಂಬ ವಿವರಗಳನ್ನೂ ಅವರು ನೀಡಿದ್ದಾರೆ.
ಇದರಲ್ಲಿ ಮುಖ್ಯವಾಗಿ ಬಟ್ಟಲು, ತಟ್ಟೆ, ಹೂಜಿ ಪ್ರಮುಖವಾಗಿವಾಗಿದೆ. ಇದರ ಹೊರತಾಗಿ ಮನೆಗೆ ಬಳಕೆ ಮಾಡುವ ಟೈಲ್ಸ್ ಅನ್ನು ಹೆಚ್ಚು ಬಳಕೆ ಮಾಡಲಾಗುವುದು ಎಂದರು.

ಸರ್ಕಾರದಿಂದ ಪ್ರೋತ್ಸಾಹ: 2016ರ ನಂತರ ಕೇಂದ್ರ ಸರ್ಕಾರವು ನೀಲಿ ಕುಂಬಾರಿಕೆ ಕರಕುಶಲ ವಸ್ತುಗಳನ್ನು ಸಾಕಷ್ಟು ಉತ್ತೇಜಿಸಿದೆ. ಆದರೂ ಈ ಕರಕುಶಲ ವಸ್ತುಗಳ ಮೇಲೆ ಬಿಕ್ಕಟ್ಟಿನ ಮೋಡಗಳು ಕವಿಯುತ್ತಿವೆ. ಪ್ರಪಂಚದಾದ್ಯಂತ ಇದರ ಬೇಡಿಕೆ ಹೆಚ್ಚುತ್ತಿದ್ದರೂ, ಈ ಕಲೆಯನ್ನು ಮುಂದುವರಿಸುವ ಕೈಗಳು ಕಡಿಮೆಯಾಗುತ್ತಿದೆ ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದರು.
ಅನೇಕ ದೇಶಗಳಲ್ಲಿನ ಜನರು ನೀಲಿ ಕುಂಬಾರಿಕೆಯ ಮಹತ್ವ ಅರ್ಥಮಾಡಿಕೊಂಡರೂ, ಜೈಪುರದಲ್ಲಿರುವವರು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವರು ಇದನ್ನು ಚೀನೀ ಎಂದು ಪರಿಗಣಿಸುತ್ತಾರೆ. ಮತ್ತೆ ಕೆಲವರು ಇದನ್ನು ಉತ್ತರ ಪ್ರದೇಶದ ಖುರ್ಜಾದ ಕುಂಬಾರಿಕೆ ಎಂದು ಪರಿಗಣಿಸುತ್ತಾರೆ.

ಕಲಿಕೆಗೆ ಬೇಕಿದೆ ಬೆಂಬಲ: ಇಂದು ಕೆಲವೇ ಕುಟುಂಬಗಳು ಈ ಕಲೆಯನ್ನು ಉಳಿಸಿಕೊಂಡಿದೆ. ಈ ಕಲೆಯನ್ನು ಜೀವಂತವಾಗಿಡಬೇಕಾದರೆ, ಸರ್ಕಾರವು ವಿದ್ಯಾರ್ಥಿಗಳನ್ನು ಕಲಿಯಲು ಪ್ರೋತ್ಸಾಹಿಸಬೇಕು. ಸರ್ಕಾರವು ನಮಗೆ 30 ರಿಂದ 35 ಲಲಿತಕಲೆಗಳ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದರೆ, ನೀಲಿ ಕುಂಬಾರಿಕೆಯಲ್ಲಿ ತರಬೇತಿ ನೀಡಿ ಅಂಗಡಿಗಳನ್ನು ತೆರೆಯಲು ಸಹಾಯ ಮಾಡುತ್ತೇವೆ ಎಂದರು.
ಈ ರೀತಿಯ ಕಲೆ ಕಲಿಯಲು ಬಯಸುವ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಸರ್ಕಾರ ಈ ಕಲೆಯನ್ನು ಪ್ರೋತ್ಸಾಹಿಸಿದರೆ, ಅದು ಇನ್ನು 80 ರಿಂದ 100 ವರ್ಷ ಉಳಿಯಲಿದೆ, ಇಲ್ಲದೇ ಹೋದಲ್ಲಿ 10 ರಿಂದ 20 ವರ್ಷಗಳಲ್ಲಿ ಇದು ಕಳೆಗುಂದಲಿದೆ ಎಂದರು.
ಜೈಪುರದ ಈ ನೀಲಿ ಕುಂಬಾರಿಕೆ ರಾಜಸ್ಥಾನ ಸಾಂಸ್ಕೃತಿಕ ಆತ್ಮವಾಗಿದ್ದು, ಇದರಲ್ಲಿ ಪ್ರತಿ ಬಣ್ಣವೂ ಇತಿಹಾಸ, ವಿನ್ಯಾ ನಮ್ಮ ಸಂಸ್ಕೃತಿ ಮತ್ತು ಪೀಳಿಗೆಯ ಸಂಕಷ್ಟಗಳನ್ನು ಪ್ರತಿಕಲೆಯಲ್ಲೂ ಬಿಂಬಿಸುತ್ತಿದೆ.
ಇಡೀ ಜಗತ್ತು ಈ ಕಲೆಯ ಸೌಂದರ್ಯಕ್ಕೆ ಆಕರ್ಷಿತವಾಗಿರುವ ಸಮಯದಲ್ಲಿ, ಈ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುವುದು ಅತ್ಯಗತ್ಯ. ಈ ಕಲೆ ಕಳೆದುಹೋದರೆ, ಇತಿಹಾಸದ ಒಂದು ಅದ್ಭುತ ಅಧ್ಯಾಯವೂ ಶಾಶ್ವತವಾಗಿ ಕಳೆದುಹೋಗುತ್ತದೆ ಎನ್ನುತ್ತಾರೆ ಅನಿಲ್ ದೊರಾಯ.
ಇವುಗಳನ್ನೂ ಓದಿ:
ಇದು 300 ವರ್ಷಗಳಷ್ಟು ಹಳೆಯ ಮಾರುಕಟ್ಟೆ ಯೋಜನೆ: ಇಂದಿಗೂ ಗಮನ ಸೆಳೆಯಲು ಕಾರಣವೇನು ಗೊತ್ತಾ?
ಜೈಪುರದ ಈ ಬೀದಿಯಲ್ಲಿ ಕರಕುಶಲ ಕಲೆ ಇನ್ನೂ ಜೀವಂತ: 300 ವರ್ಷಗಳ ಪರಂಪರೆಗೆ ಬೇಕಿದೆ ಸರ್ಕಾರದ ನೆರವು

