ವಿಪಕ್ಷ ನಾಯಕನಾಗಿ ರಿತಬ್ರತಾ ಬ್ಯಾನರ್ಜಿ ಶಿಫಾರಸು ಮಾಡಿ ಸ್ಪೀಕರ್ಗೆ ತೃಣಮೂಲ ಬಂಡಾಯ ಶಾಸಕರ ಪತ್ರ
ತೃಣಮೂಲ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ರಿತಬ್ರತಾ ಬ್ಯಾನರ್ಜಿ ಅವರನ್ನು 59 ಮಂದಿ ಬಂಡಾಯ ಶಾಸಕರು ಆಯ್ಕೆ ಮಾಡಿದ್ದಾರೆ.

Published : June 3, 2026 at 4:36 PM IST
ಕೋಲ್ಕತ್ತಾ(ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ ಬಂಡಾಯ ಶಾಸಕರು ಶಾಸಕಾಂಗ ಪಕ್ಷದ ನಾಯಕನಾಗಿ ರಿತಬ್ರತಾ ಬ್ಯಾನರ್ಜಿ ಅವರನ್ನು ಆಯ್ಕೆ ಮಾಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆಯಲು 30 ಶಾಸಕರ ಬೆಂಬಲ ಅಗತ್ಯವಿದೆ. ರಿತಬ್ರತಾ ಪ್ರಸ್ತುತ 58ಕ್ಕೂ ಹೆಚ್ಚು ತೃಣಮೂಲ ಶಾಸಕರ ಬೆಂಬಲ ಹೊಂದಿದ್ದಾರೆ. ಹೀಗಾಗಿ ವಿಧಾನಸಭಾ ಸ್ಪೀಕರ್ ರತೀಂದ್ರ ಬಸು ಅವರಿಗೆ ರಿತಬ್ರತಾ ಪತ್ರವನ್ನು ಸಲ್ಲಿಸಿದ್ದು, ತಮ್ಮನ್ನು ಅಧಿಕೃತವಾಗಿ ವಿರೋಧ ಪಕ್ಷದ ನಾಯಕನಾಗಿ ಘೋಷಿಸಬೇಕೆಂದು ಕೋರಿದ್ದಾರೆ.
ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ನಂತರ, ತೃಣಮೂಲ ಕಾಂಗ್ರೆಸ್ ಆರಂಭದಲ್ಲಿ ಬಲ್ಲಿಗಂಗೆಯ ಶಾಸಕ ಶೋಭಂದೇಬ್ ಚಟ್ಟೋಪಾಧ್ಯಾಯ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿತ್ತು. ಪಕ್ಷದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ವಿಧಾನಸಭೆಗೆ ಪತ್ರವನ್ನು ಕಳುಹಿಸಿದರು. ಈ ಪತ್ರವು ಔಪಚಾರಿಕವಾಗಿ ನಿರ್ಧಾರವನ್ನು ತಿಳಿಸಿತು ಮತ್ತು ಶೋಭಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕನಾಗಿ ಗುರುತಿಸಬೇಕೆಂದು ವಿನಂತಿಸಿತು.
ಇನ್ನು ಆ ಪತ್ರದಲ್ಲಿನ ಸಹಿಗಳು ನಕಲಿ ಎಂದು ಆರೋಪಗಳು ಕೇಳಿಬಂದವು. ಈ ವಿಷಯದ ಬಗ್ಗೆ ಸಿಐಡಿ ತನಿಖೆ ಆರಂಭಿಸಿತು. ತನಿಖಾಧಿಕಾರಿಗಳು ಹಲವಾರು ಶಾಸಕರ ನಿವಾಸಗಳಿಗೆ ಭೇಟಿ ನೀಡಿ, ಅಭಿಷೇಕ್ ಬ್ಯಾನರ್ಜಿ ಅವರಿಗೂ ನೋಟಿಸ್ ನೀಡಲಾಯಿತು.
ಈ ಬೆಳವಳಿಗೆ ನಡುವೆ ಮಾತನಾಡಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಇಬ್ಬರು ತೃಣಮೂಲ ಶಾಸಕರು ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರು ನಕಲಿ ಸಹಿ ವಿಷಯವನ್ನು ಬೆಳಕಿಗೆ ತಂದವರು ಎಂದು ಹೇಳಿದರು. ತಕ್ಷಣವೇ, ತೃಣಮೂಲ ಕಾಂಗ್ರೆಸ್ ಆ ಇಬ್ಬರು ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿತು.
ತೃಣಮೂಲ ಕಾಂಗ್ರೆಸ್ನಲ್ಲಿ ಶಾಸಕರು ಬಂಡಾಯ ಎದ್ದರು. ಕನಿಷ್ಠ 50 ಶಾಸಕರು ರಿತಬ್ರತಾ ಜೊತೆ ಕೈಜೋಡಿಸಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇತ್ತೀಚಿನ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದಿತ್ತು. ಪಕ್ಷಾಂತರ ವಿರೋಧಿ ಕಾನೂನಿನ ನಿಬಂಧನೆಗಳನ್ನು ತಪ್ಪಿಸಲು, ರಿತಬ್ರತಾ ಮತ್ತು ಅವರ ಬಣಕ್ಕೆ ಕನಿಷ್ಠ 53 ಶಾಸಕರ ಬೆಂಬಲ ಬೇಕಾಗಿತ್ತು. ಆದಾಗ್ಯೂ, ಬುಧವಾರ ಬೆಳಗ್ಗೆ 58ಕ್ಕೂ ಹೆಚ್ಚು ಶಾಸಕರು ರಿತಬ್ರತಾಗೆ ಬೆಂಬಲ ನೀಡಿದ್ದಾರೆ.
ಇಂದು ವಿಧಾನಸಭೆಯಲ್ಲಿ ನಡೆದ ಸಭೆಯಲ್ಲಿ ರಿತಬ್ರತಾ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಯಿತು. 59 ಶಾಸಕರ ಸಹಿ ಇರುವ ಪತ್ರವನ್ನು ಸ್ಪೀಕರ್ಗೆ ಸಲ್ಲಿಸಲಾಗಿದ್ದು, ಆರು ಹೆಚ್ಚುವರಿ ಶಾಸಕರು ನಂತರ ಸಹಿ ಹಾಕುತ್ತಾರೆ ಎಂದು ಹೇಳಲಾಗಿದೆ.
ತೃಣಮೂಲ ಕಾಂಗ್ರಸ್ನ ಬಂಡಾಯ ಶಾಸಕರು ರಿತಬ್ರತಾ ಬ್ಯಾನರ್ಜಿಯನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡಿರುವುದಾಗಿ ಔಪಚಾರಿಕವಾಗಿ ಘೋಷಿಸಿದರು. ಜಾವೇದ್ ಖಾನ್, ಸಂದೀಪನ್ ಸಹಾ ಮತ್ತು ಶಿಯುಲಿ ಸಹಾ ಅವರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಅಖ್ರುಝಮಾನ್ ಅವರನ್ನು ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆ ಮಾಡಲಾಗಿದೆ.
ಇದೀಗ ಸ್ಪೀಕರ್ ಈ ಪತ್ರವನ್ನು ಸ್ವೀಕರಿಸಿ ಬಂಡಾಯ ಗುಂಪಿಗೆ ಮಾನ್ಯತೆ ನೀಡಿದರೆ, ರಿತಬ್ರತಾ ಅಧಿಕೃತವಾಗಿ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರಸ್ನ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿರೋಧ ಪಕ್ಷ ನಾಯಕರಾಗುತ್ತಾರೆ.
ಇದನ್ನೂ ಓದಿ: ಟಿಎಂಸಿಯಲ್ಲಿ ಭುಗಿಲೆದ್ದ ಬಂಡಾಯ: ಶಾಸಕರ ಸಹಿಯೊಂದಿಗೆ ವಿಧಾನಸಭೆಗೆ ಆಗಮಿಸಿದ ಉಚ್ಛಾಟಿತ ನಾಯಕ ರಿತಬ್ರತಾ

