ETV Bharat / bharat

ಮರಳಿ ಕುಟುಂಬವನ್ನು ಸೇರಿಸಿದ ಮೊಬೈಲ್ ಸಂಖ್ಯೆ; ಕಳ್ಳಸಾಗಣೆಯಲ್ಲಿ ಜಮ್ಮುವಿಗೆ ತೆರಳಿದ್ದ ಯುವಕ 18 ವರ್ಷದ ನಂತರ ವಾಪಸ್!

ಪುರುಷೋತ್ತಮ್ ಬಾಲ್ಯದಲ್ಲಿ ನೆನಪಿನಲ್ಲಿಟ್ಟುಕೊಂಡಿದ್ದ 10 ಅಂಕಿಯ ಮೊಬೈಲ್ ಸಂಖ್ಯೆಯನ್ನು 18 ವರ್ಷದ ಬಳಿಕವೂ ನೆನಪಿನಲ್ಲಿಟ್ಟುಕೊಂಡಿದ್ದರು. ಕೊನೆಗೆ ಅದು ಜಮ್ಮುವಿನಿಂದ ತನ್ನ ಮನೆಗೆ ಮರಳಲು ಸಹಾಯ ಮಾಡಿದೆ.

Purushottam Goud was received by family members and local representatives upon his arrival in Rourkela on Tuesday
ರೂರ್ಕೆಲಾಗೆ ಆಗಮಿಸಿದ ಪುರುಷೋತ್ತಮ್ ಗೌಡ್ ಅವರನ್ನು ಕುಟುಂಬ ಸದಸ್ಯರು ಮತ್ತು ಸ್ಥಳೀಯ ಪ್ರತಿನಿಧಿಗಳು ಬರಮಾಡಿಕೊಂಡರು (ETV Bharat)
author img

By ETV Bharat Karnataka Team

Published : February 26, 2026 at 6:54 PM IST

3 Min Read
Choose ETV Bharat

ರೂರ್ಕೆಲಾ (ಒಡಿಶಾ): ಪುರುಷೋತ್ತಮ ಗೌಡ್ ಅವರನ್ನು 13 ವರ್ಷದವರಿದ್ದಾಗ ಜಮ್ಮು ಮತ್ತು ಕಾಶ್ಮೀರಕ್ಕೆ ಕಳ್ಳಸಾಗಣೆ ಮಾಡಿ ಕಾರ್ಮಿಕರಾಗಿ ಕೆಲಸ ಮಾಡುವಂತೆ ಒತ್ತಾಯಿಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಆದರೆ, ಅವರಿಗೆ ತನ್ನ ಕುಟುಂಬದವರು ಹೊಂದಿದ್ದ ಮೊಬೈಲ್ ನಂಬರ್​ ಇನ್ನೂ ನೆನಪಿತ್ತು. ಆ ಹತ್ತು ಸಂಖ್ಯೆಗಳಿಂದಾಗಿಯೇ ಅವರು ಅಂತಿಮವಾಗಿ ಮಂಗಳವಾರ ಒಡಿಶಾದ ರೂರ್ಕೆಲಾದಲ್ಲಿ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗಿದ್ದಾರೆ.

'ನನಗೆ ತುಂಬಾ ಸಂತೋಷವಾಗುತ್ತಿದೆ. ಎಲ್ಲವೂ ನನಗೆ ಹೊಸದಾಗಿ ಕಾಣುತ್ತಿದೆ. ನಾನು ಯಾವಾಗಲೂ ಮನೆಗೆ ಹಿಂತಿರುಗಬೇಕೆಂದು ಬಯಸುತ್ತಿದ್ದೆ. ಆದರೆ, ನನ್ನ ಬಳಿ ಹಣವಾಗಲಿ ಅಥವಾ ಯಾವುದೇ ಗುರುತಿನ ಪುರಾವೆಯಾಗಲಿ ಇರಲಿಲ್ಲ' ಎಂದು ಪುರುಷೋತ್ತಮ್ ಈಟಿವಿ ಭಾರತ್‌ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

Trafficked To J&K At 13, Odisha Man Reunites With Family At 31 Using Memorised Phone Number
ಪುರುಷೋತ್ತಮ ಗೌಡ್ ಹಾಗೂ ಅವರ ಕುಟುಂಬ ಸದಸ್ಯರು (ETV Bharat)

ಲಥಿಕಟ್​ ತಾಲೂಕಿನ ಸೋನಪರ್ವತ್ ಗಂಜುಟೋಲಾ ನಿವಾಸಿ ಪುರುಷೋತ್ತಮ್ ಈ ಕುರಿತು ಮಾತನಾಡಿ, ತಾನು 13 ವರ್ಷದವನಿದ್ದಾಗ ಜಮ್ಮು ಮತ್ತು ಕಾಶ್ಮೀರಕ್ಕೆ ಕಳ್ಳಸಾಗಣೆ ಮಾಡಿ, ಕಾರ್ಮಿಕನಾಗಿ ಕೆಲಸ ಮಾಡಲು ಒತ್ತಾಯಿಸಲಾಯಿತು ಎಂದು ಆರೋಪಿಸಿದ್ದಾರೆ. ನಾನು ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಜಮ್ಮುವಿನ ಸಾಂಬಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

'ನಾನು ಅಲ್ಲಿ ಒಬ್ಬ ಉದ್ಯಮಿಯ ಮನೆಯಲ್ಲಿದ್ದೆ. ಎಲ್ಲಾ ರೀತಿಯ ಮನೆಕೆಲಸ ಮಾಡುತ್ತಿದ್ದೆ. ಅಲ್ಲಿ ಟ್ರಕ್‌ಗಳು ಮತ್ತು ಇತರ ವಾಹನಗಳನ್ನು ಓಡಿಸುವಂತೆ ಹೇಳುತ್ತಿದ್ದರು. ಅವರು ನನ್ನನ್ನು ಎಂದಿಗೂ ಹಿಂಸಿಸಲಿಲ್ಲ. ನನಗೆ ಆಹಾರ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡಿದರು. ಆದರೆ, ಅವರು ನನಗೆ ಎಂದಿಗೂ ಹಣ ನೀಡಲಿಲ್ಲ. ನಾನು ಪ್ರಾರಂಭದಲ್ಲಿ ಆ ಮೊಬೈಲ್ ಸಂಖ್ಯೆಯಲ್ಲಿಯೇ ಮನೆಗೆ ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಸಂಪರ್ಕಿಸಲು ಸಾಧ್ಯವಾಗಲಿಲ್ಲ' ಎಂದು ಪುರುಷೋತ್ತಮ್ ತಿಳಿಸಿದ್ದಾರೆ.

ಅವರ ಕುಟುಂಬದ ಸದಸ್ಯರು ತೀವ್ರ ಹುಡುಕಾಟವನ್ನು ಆರಂಭಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಮಧ್ಯೆ ಅವರ ಪೋಷಕರು ತಮ್ಮ ಏಕೈಕ ಮಗನನ್ನು ಕಾಯುತ್ತಾ ನಿಧನರಾಗಿದ್ದರು. ಪುರುಷೋತ್ತಮ್ ಈಗ ತಮ್ಮ ಚಿಕ್ಕಮ್ಮ ಮತ್ತು ಸೋದರ ಸಂಬಂಧಿಗಳೊಂದಿಗೆ ವಾಸಿಸುತ್ತಿದ್ದಾರೆ.

2022ರಲ್ಲಿ ಪುರುಷೋತ್ತಮ್ ಅವರು ಬಾಲ್ಯದಲ್ಲಿ ನೆನಪಿಟ್ಟುಕೊಂಡಿದ್ದ ಮೊಬೈಲ್ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಅವರ ಮನೆಗೆ ಕರೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅವರು ಜಮ್ಮು ಮತ್ತು ಕಾಶ್ಮೀರದಲ್ಲಿರುವ ತಮ್ಮ ಸ್ಥಳದ ಬಗ್ಗೆ ತಮ್ಮ ಕುಟುಂಬಕ್ಕೆ ಮಾಹಿತಿ ನೀಡಿ ಸಹಾಯವನ್ನು ಕೋರಿದ್ದರು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ.

ಆದಾಗ್ಯೂ ಅವರು ಭರವಸೆ ಕಳೆದುಕೊಳ್ಳಲಿಲ್ಲ. ಈ ವರ್ಷದ ಜನವರಿಯ ಆರಂಭದಲ್ಲಿ ಅವರು ಮತ್ತೆ ಮತ್ತೊಂದು ಫೋನ್‌ನಿಂದ ತಮ್ಮ ಕುಟುಂಬವನ್ನು ಸಂಪರ್ಕಿಸಿ ತಮ್ಮ ನಿಖರವಾದ ಸ್ಥಳವನ್ನು ಹಂಚಿಕೊಂಡರು. ರಕ್ಷಣೆಗಾಗಿ ಬೇಡಿಕೊಂಡರು. ಆಗ ಅವರ ಚಿಕ್ಕಮ್ಮ ಸ್ಥಳೀಯ ಸರಪಂಚರನ್ನು ಸಂಪರ್ಕಿಸಿದರು. ಅವರು ರಘುನಾಥಪಳ್ಳಿ ಶಾಸಕಿ ದುರ್ಗಾ ಚರಣ್ ತಂತಿ ಅವರನ್ನು ಸಂಪರ್ಕಿಸುವಂತೆ ಅನುಕೂಲ ಮಾಡಿಕೊಟ್ಟರು. ಶಾಸಕರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಚರ್ಚಿಸಿ, ಸಂಘಟಿತ ಕ್ರಮ ಕೈಗೊಳ್ಳಲು ಪ್ರೇರೇಪಿಸಿದರು.

ರೂರ್ಕೆಲಾದ ತಂಗರಪಲ್ಲಿ ಪೊಲೀಸರು ಸಾಂಬಾ ಜಿಲ್ಲೆಯ ರಾಜಪುರ ಪೊಲೀಸರನ್ನು ಸಂಪರ್ಕಿಸಿ, ಇಡೀ ಸನ್ನಿವೇಶವನ್ನು ವಿವರಿಸಿದ ನಂತರ, ಜಮ್ಮು ಮತ್ತು ಕಾಶ್ಮೀರದ ಸ್ಥಳೀಯ ಅಧಿಕಾರಿಗಳು ಪುರುಷೋತ್ತಮ್‌ ಅವರನ್ನು ರಕ್ಷಿಸಿದರು. ನಂತರ ಅವರನ್ನು ತಂಗರಪಲ್ಲಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌ಗೆ ಹಸ್ತಾಂತರಿಸಲಾಯಿತು. ಅವರು ಪುರುಷೋತ್ತಮ್​ ಅವರನ್ನು ಒಡಿಶಾಗೆ ಕಳಿಸುವಲ್ಲಿ ನೆರವಾದರು.

ಮಂಗಳವಾರ ಪುರುಷೋತ್ತಮ್ ರೈಲಿನಲ್ಲಿ ರೂರ್ಕೆಲಾಗೆ ಆಗಮಿಸಿದಾಗ, ಅವರನ್ನು ಅವರ ಕುಟುಂಬದ ಸದಸ್ಯರು ಮತ್ತು ಸ್ಥಳೀಯ ಪ್ರತಿನಿಧಿಗಳು ಬರಮಾಡಿಕೊಂಡರು. ನಂತರ ಸುಯಿದಿಹಿಯ ಗ್ರಾಮಸ್ಥರು ಸಾಂಪ್ರದಾಯಿಕ ಸಂಗೀತ ಮತ್ತು ಹೂವಿನ ಶುಭಾಶಯಗಳೊಂದಿಗೆ ಅವರ ಮರಳುವಿಕೆಯಿಂದಾಗಿ ಸಂತೋಷದಿಂದ ಸಂಭ್ರಮಿಸಿದರು.

ಪುರುಷೋತ್ತಮ್ ತನ್ನ ಊರಿಗೆ ಮರಳಲು ಪ್ರಯತ್ನಿಸಿದರೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗುತ್ತಿತ್ತು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

'ಅವನು ನಮ್ಮ ಬಳಿಗೆ ಹಿಂತಿರುಗುತ್ತಾನೆ ಎಂಬ ಭರವಸೆಯನ್ನು ನಾವು ಕಳೆದುಕೊಂಡಿದ್ದೆವು. ಅವನು ಹಿಂತಿರುಗಿರುವುದು ನಮಗೆ ತುಂಬಾ ಸಂತೋಷವಾಗಿದೆ. ಅವನು ಹಿಂತಿರುಗಲು ಪ್ರಯತ್ನಿಸಿದರೆ, ಅವನನ್ನು ಭಯೋತ್ಪಾದಕ ಎಂದು ಬಿಂಬಿಸಿ ಕೊಲ್ಲುವುದಾಗಿ ಕೆಲವರು ಬೆದರಿಕೆ ಹಾಕಿದ್ದರು' ಎಂದು ಅವರ ಅತ್ತಿಗೆ ಅನಿತಾ ಗೌಡ್ ಹೇಳಿದ್ದಾರೆ.

'ರೂರ್ಕೆಲಾ ರೈಲು ನಿಲ್ದಾಣದಲ್ಲಿ ನಮ್ಮನ್ನು ನೋಡಿದ ನಂತರ ಆತ ದುಃಖದಿಂದ ಕಣ್ಣೀರಿಟ್ಟ. ಅವನನ್ನು ಮರಳಿ ಕರೆತರಲು ಸಹಾಯ ಮಾಡಿದ ಪೊಲೀಸರು ಮತ್ತು ನಮ್ಮ ಸ್ಥಳೀಯ ಶಾಸಕರಿಗೆ ನಾವು ಕೃತಜ್ಞರಾಗಿರುತ್ತೇವೆ' ಎಂದು ಅತ್ತಿಗೆ ತಿಳಿಸಿದರು.

ಇದನ್ನೂ ಓದಿ : ಶಿವ ದೇಗುಲಕ್ಕೆ 1 ಕೋಟಿ 31 ಲಕ್ಷ ರೂಪಾಯಿಯ ನೋಟುಗಳಿಂದ ಅಲಂಕಾರ; ಇಲ್ಲಿ ಪೊಲೀಸರಿಲ್ಲ, ಭದ್ರತೆಯ ಹೊಣೆ ಮಹಾದೇವನದ್ದೇ!