ETV Bharat / bharat

ಪೊಂಗಲ್ ಉಡುಗೊರೆ: ಪಡಿತರ ಚೀಟಿದಾರರಿಗೆ ತಲಾ ₹3000 ನಗದು ಘೋಷಿಸಿದ ತಮಿಳುನಾಡು ಸರ್ಕಾರ

ತಮಿಳುನಾಡು ಸರ್ಕಾರ ಪೊಂಗಲ್ ಹಬ್ಬಕ್ಕೆ ಮುನ್ನ ರಾಜ್ಯದ 2.22 ಕೋಟಿ ಪಡಿತರ ಚೀಟಿದಾರರಿಗೆ ತಲಾ ₹3000 ನಗದು ಘೋಷಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Chief Minister M. K. Stalin
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (ANI)
author img

By ETV Bharat Karnataka Team

Published : January 4, 2026 at 7:46 PM IST

|

Updated : January 4, 2026 at 7:59 PM IST

2 Min Read
Choose ETV Bharat

ಚೆನ್ನೈ(ತಮಿಳುನಾಡು): ಈ ವರ್ಷ ಪೊಂಗಲ್ ಉಡುಗೊರೆ ಪ್ಯಾಕೇಜ್ ಜೊತೆಗೆ ಪ್ರತೀ ಪಡಿತರ ಚೀಟಿದಾರರಿಗೆ 3,000 ರೂ. ನಗದು ಉಡುಗೊರೆ ನೀಡಲಾಗುವುದು ಎಂದು ತಮಿಳುನಾಡು ಸರ್ಕಾರ ಘೋಷಿಸಿದೆ. ಈ ನಗದು ಉಡುಗೊರೆಯನ್ನು 2.22 ಕೋಟಿ ಅಕ್ಕಿ ಪಡಿತರ ಚೀಟಿದಾರರಿಗೆ ನೀಡಲಾಗುವುದು ಎಂದು ಹೇಳಿದೆ.

ತಮಿಳುನಾಡಿನಲ್ಲಿ ಪೊಂಗಲ್ ಹಬ್ಬದ ಸಮಯದಲ್ಲಿ ರಾಜ್ಯ ಸರ್ಕಾರ ಸಾಮಾನ್ಯವಾಗಿ ಪಡಿತರ ಚೀಟಿದಾರರಿಗೆ ಪೊಂಗಲ್ ಉಡುಗೊರೆಗಳನ್ನು ನೀಡುತ್ತದೆ. ಈ ಉಡುಗೊರೆಯಲ್ಲಿ ಸೀರೆ, ಧೋತಿ ಮತ್ತು ಕಬ್ಬಿನಂತಹ ವಸ್ತುಗಳೂ ಸೇರಿದಂತೆ ನಗದು ಇರುತ್ತದೆ.

ನಗದು ಉಡುಗೊರೆ ಸಾಮಾನ್ಯವಾಗಿ 2,000 ರೂ.ಯಿಂದ 2,500 ರೂ.ಯವರೆಗೆ ಇರುತ್ತದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ಆರ್ಥಿಕ ನಿರ್ಬಂಧಗಳಿಂದಾಗಿ ಸರ್ಕಾರ ನಗದು ಉಡುಗೊರೆ ನೀಡಿಲ್ಲ. ಕಳೆದ ವರ್ಷವೂ ಯಾವುದೇ ನಗದು ಉಡುಗೊರೆ ನೀಡಲಾಗಿಲ್ಲ.

ಈ ವರ್ಷ ಸರ್ಕಾರ ಪೊಂಗಲ್ ಉಡುಗೊರೆಯೊಂದಿಗೆ ನಗದು ನೀಡುತ್ತದೆ ಎಂಬ ಊಹಾಪೋಹಗಳು ವ್ಯಾಪಕವಾಗಿ ಹರಡಿದ್ದವು. ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ನಗದು ಉಡುಗೊರೆ ಸೇರಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು.

ಇದೀಗ ಊಹಾಪೋಹಗಳು ನಿಜವಾಗಿವೆ. ತಮಿಳುನಾಡು ಸರ್ಕಾರ ಪೊಂಗಲ್ ಉಡುಗೊರೆ ಪ್ಯಾಕೇಜ್ ಜೊತೆಗೆ 3,000 ರೂ. ನಗದು ಉಡುಗೊರೆಯನ್ನೂ ಘೋಷಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ರಾಜ್ಯದ ಜನರು ಪೊಂಗಲ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು, ಸರ್ಕಾರ ಎಲ್ಲ ಅಕ್ಕಿ ಪಡಿತರ ಚೀಟಿದಾರರು ಮತ್ತು ಶ್ರೀಲಂಕಾದ ತಮಿಳು ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುವ ಕುಟುಂಬಗಳಿಗೆ ಪೊಂಗಲ್ ಉಡುಗೊರೆ ಪ್ಯಾಕೇಜ್ ಒದಗಿಸುತ್ತದೆ ಎಂದಿದೆ.

ಪೊಂಗಲ್ ಉಡುಗೊರೆ ಪ್ಯಾಕೇಜ್‌ನಲ್ಲಿ ಒಂದು ಕಿಲೋಗ್ರಾಂ ಅಕ್ಕಿ, ಒಂದು ಕಿಲೋಗ್ರಾಂ ಸಕ್ಕರೆ ಮತ್ತು ಪೂರ್ಣ ಕಬ್ಬು ಸೇರಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದರು. ಇದರ ಮೂಲಕ, 2.22 ಕೋಟಿ ಅಕ್ಕಿ ಪಡಿತರ ಚೀಟಿದಾರರು ಮತ್ತು ಶ್ರೀಲಂಕಾದ ತಮಿಳು ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುವ ಕುಟುಂಬಗಳು ಪ್ರಯೋಜನ ಪಡೆಯಲಿವೆ. ಪೊಂಗಲ್ ಉಡುಗೊರೆ ಪ್ಯಾಕೇಜ್ ಮತ್ತು ನಗದು ಉಡುಗೊರೆಗಾಗಿ ಸರ್ಕಾರ ಒಟ್ಟು 6,936 ಕೋಟಿ ರೂ.ಗಳನ್ನು ನಿಗದಿಪಡಿಸಿದೆ.

ಪೊಂಗಲ್ ಉಡುಗೊರೆ ಪ್ಯಾಕೇಜ್ ಅನ್ನು ಪೊಂಗಲ್ ಹಬ್ಬದ ಮೊದಲು ಎಲ್ಲ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಬೇಕೆಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಆದೇಶಿಸಿದ್ದಾರೆ. ಜನವರಿ 8ರಿಂದ ಪಡಿತರ ಅಂಗಡಿಗಳಲ್ಲಿ ಇದಕ್ಕಾಗಿ ಟೋಕನ್‌ಗಳನ್ನು ವಿತರಿಸಲಾಗುತ್ತದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಆಗ್ರಾದಲ್ಲಿ ಬ್ರಿಟಿಷ್ ಯುಗದಿಂದಲೇ ಬ್ರಷ್​ ವ್ಯವಹಾರ: ಪ್ರತಿದಿನ 20 ಲಕ್ಷಕ್ಕೂ ಹೆಚ್ಚು ಬ್ರಷ್‌ಗಳ ತಯಾರಿಕೆ

Last Updated : January 4, 2026 at 7:59 PM IST