ETV Bharat / bharat

ಐ ಪ್ಯಾಕ್​ ಮೇಲೆ ಇಡಿ ದಾಳಿ; ದಾಖಲೆಗಳ ದುರ್ಬಳಕೆಗೆ ನಿರ್ಬಂಧ ಹೇರುವಂತೆ ಕೋರಿ ಹೈಕೋರ್ಟ್​​ ಮೆಟ್ಟಿಲೇರಿದ ಟಿಎಂಸಿ

ಇಡಿ ದಾಳಿ ಮೂಲಕ ಟಿಎಂಸಿಯ ಸೂಕ್ಷ್ಮ ಮತ್ತು ಗೌಪ್ಯ ರಾಜಕೀಯ ದತ್ತಾಂಶಗಳನ್ನು ವಶಕ್ಕೆ ಪಡೆಯಲಾಗಿದ್ದು, ತಮ್ಮ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ಕೋರಿ ಟಿಎಂಸಿ ಅರ್ಜಿ ಸಲ್ಲಿಸಿದೆ.

tmc-moves-cal-hc-seeking-restraint-on-misuse-of-documents-seized-by-ed-during-i-pac-raids
ದಾಳಿಯ ಸಮಯದಲ್ಲಿ ಐ-ಪಿಎಸಿ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದ ಹೊರಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ETV Bharat)
author img

By ETV Bharat Karnataka Team

Published : January 9, 2026 at 2:39 PM IST

2 Min Read
Choose ETV Bharat

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಐಪ್ಯಾಕ್​ ಘಟಕದ ಮುಖ್ಯಸ್ಥ ಮತ್ತು ಅವರ ನಿವಾಸದ ಮೇಲೆ ಇಡಿ ನಡೆಸಿದ ದಾಳಿಯ ವಿರುದ್ಧ ಟಿಎಂಸಿ ಕೋಲ್ಕತ್ತಾ ಹೈ ಕೋರ್ಟ್​ ಮೊರೆ ಹೋಗಿದ್ದು, ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಖಲೆಗಳ ದುರುಪಯೋಗ ಮತ್ತು ಪ್ರಸರಣವನ್ನು ನಿರ್ಬಂಧಿಸುವಂತೆ ಕೋರಿದೆ.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಟಿಎಂಸಿಯ ಬಳಕೆಗಾಗಿ ಉದ್ದೇಶಿಸಲಾದ ಸೂಕ್ಷ್ಮ ಮತ್ತು ಗೌಪ್ಯ ರಾಜಕೀಯ ದತ್ತಾಂಶವನ್ನು ಇಡಿ ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದು, ನಿರಂಕುಶ, ದುರುದ್ದೇಶಪೂರಿತ ಮತ್ತು ಅಧಿಕಾರಕ್ಕೆ ಬಣ್ಣ ಬಳಿಯುವ ಪ್ರಕ್ರಿಯೆಯಾಗಿದೆ ಎಂದು ಆರೋಪಿಸಿದೆ.

ಜನವರಿ 8ರಂದು 2002ರ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 17ರ ಅಡಿ ತನಿಖಾ ಸಂಸ್ಥೆ ನಡೆಸಿದ ಶೋಧ ಮತ್ತು ಮಾಹಿತಿ ವಶಕ್ಕೆ ಪಡೆದಿದ್ದು ಎಂಬುದು ಪಿಟಿಐ ಮೂಲಗಳಿಂದ ತಿಳಿದು ಬಂದಿದೆ. ಬಹುಕೋಟಿ ರೂಪಾಯಿ ಕಲ್ಲಿದ್ದಲು ಕಳ್ಳತನ ಹಗರಣದ ತನಿಖೆಯ ಭಾಗವಾಗಿ ಈ ಕಾರ್ಯಾಚರಣೆಗಳು ನಡೆದಿವೆ ಎಂದು ಜಾರಿ ನಿರ್ದೇಶನಾಲಯ ವಾದಿಸಿದೆ.

ವಶಪಡಿಸಿಕೊಳ್ಳಲಾದ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ದತ್ತಾಂಶಗಳು ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ, 2026ರಲ್ಲಿ ಚುನಾವಣಾ ಪ್ರಚಾರ ಉದ್ದೇಶಗಳಿಗಾಗಿ ಬಳಸಲಾಗುವ ಪ್ರಚಾರ ತಂತ್ರ, ಆಂತರಿಕ ಮೌಲ್ಯಮಾಪನಗಳು, ಸಂಶೋಧನಾ ಒಳಹರಿವು, ಸಾಂಸ್ಥಿಕ ಸಮನ್ವಯ ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದ ದತ್ತಾಂಶಗಳಿಗೆ ಸಂಬಂಧಿಸಿದ ಗೌಪ್ಯ ರಾಜಕೀಯ ದತ್ತಾಂಶಗಳನ್ನು ಒಳಗೊಂಡಿವೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

ಈ ವಿಷಯಗಳು ಯಾವುದೇ ನಿಗದಿತ ಅಪರಾಧ ಅಥವಾ ಅಪರಾಧದ ಆಪಾದಿತ ಆದಾಯದೊಂದಿಗೆ ಯಾವುದೇ ನಿಕಟ ಅಥವಾ ದೂರದ ಸಂಬಂಧವನ್ನು ಹೊಂದಿಲ್ಲ. 2002ರ ಹಣ ಅಕ್ರಮ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆಯ ಅಡಿ ತನಿಖೆಯ ವ್ಯಾಪ್ತಿಯೊಳಗೆ ಬರುವುದಿಲ್ಲ.

ತನಿಖೆ ನೆಪದಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಸ್ಪಷ್ಟ ಉದ್ದೇಶದಿಂದ ಅರ್ಜಿದಾರರ ಮತದಾರರ ಪಟ್ಟಿ ನಿರ್ವಹಣೆ, ಪ್ರಚಾರ ಯೋಜನೆ ಮತ್ತು ರಾಜಕೀಯ ಕಾರ್ಯತಂತ್ರವನ್ನು ಕಾನೂನುಬಾಹಿರವಾಗಿ ಪ್ರವೇಶಿಸುವುದು ಮತ್ತು ನಿಯಂತ್ರಿಸುವುದು ಇಡಿ ದಾಳಿಯ ಉದ್ದೇಶವಾಗಿದೆ ಎಂದು ಟಿಎಂಸಿ ಆರೋಪಿಸಿದೆ.

ಈ ರೀತಿಯ ಉದ್ದೇಶಿತ ವಶಪಡಿಸಿಕೊಳ್ಳುವಿಕೆಯು ಸಂವಿಧಾನದ 21ನೇ ವಿಧಿಯ ಅಡಿ ಗೌಪ್ಯತೆಯ ಹಕ್ಕಿನ ಮೇಲೆ ಮತ್ತು ವಿಧಿ19ರ ಅಡಿ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುವ ಸಾಂವಿಧಾನಿಕ ಹಕ್ಕಿನ ಮೇಲೆ ಆಗುತ್ತಿರುವ ಹಸ್ತಕ್ಷೇಪವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ತಕ್ಷಣ ಹಸ್ತಕ್ಷೇಪ ಮಾಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: TMC ಐಟಿ ಸೆಲ್​ ಮುಖ್ಯಸ್ಥನ ಐ-ಪ್ಯಾಕ್​ ಕಚೇರಿಗೆ ದಾಳಿ ಮಾಡಿದ ಇ.ಡಿ: ಇದು ರಾಜಕೀಯ ಪ್ರೇರಿತ ಎಂದ ದೀದಿ