ಛತ್ತೀಸ್ಗಢದ ಸುಕ್ಮಾದಲ್ಲಿ ಎನ್ಕೌಂಟರ್; ಮಹಿಳಾ ನಕ್ಸಲ್ ಸೇರಿದಂತೆ ಮೂವರು ಹತ
ಗುರುವಾರ ಬೆಳಗ್ಗೆ ಗೋಲಪ್ಪಲಿ ಅರಣ್ಯ ಪ್ರದೇಶದಲ್ಲಿ ನಕ್ಸಲರ ಇರುವಿಕೆ ಕುರಿತು ಮಾಹಿತಿ ಆಧಾರದ ಮೇಲೆ ಶೋಧ ಕಾರ್ಯಾಚರಣೆ ವೇಳೆ ಈ ಗುಂಡಿನ ಚಕಮಕಿ ನಡೆದಿದೆ.


Published : December 18, 2025 at 12:33 PM IST
ಸುಕ್ಮಾ (ಛತ್ತೀಸ್ಗಢ): ಅನೇಕ ಹಿಂಸಾತ್ಮಕ ಘಟನೆಯಲ್ಲಿ ಭಾಗಿಯಾದ ಓರ್ವ ಮಹಿಳಾ ಮಾವೋವಾದಿ ಸೇರಿದಂತೆ ಮೂವರು ನಕ್ಸಲರು ಎನ್ಕೌಂಟರ್ಗೆ ಬಲಿಯಾಗಿದ್ದಾರೆ. ಗುರುವಾರ ಛತ್ತೀಸ್ಗಢದ ಸುಕ್ಮಾದಲ್ಲಿ ನಡೆದ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಗೋಲಪ್ಪಲಿ ಪೊಲೀಸ್ ಠಾಣೆ ವ್ಯಾಪ್ತಿಯಡಿಯಲ್ಲಿ ಬರುವ ಅರಣ್ಯದ ಗುಡ್ಡಗಾಡು ಪ್ರದೇಶದಲ್ಲಿ ಇಂದು ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ.
ನಕ್ಸಲರ ಇರುವಿಕೆ ಕುರಿತು ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಗೋಲಪಲ್ಲಿ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಿತು. ಡಿಆರ್ಜಿ ಸಿಬ್ಬಂದಿಗಳನ್ನು ಕಂಡೊಡನೆ ನಕ್ಸಲರು ಗುಂಡಿನ ದಾಳಿ ನಡೆಸಲು ಮುಂದಾದರು. ಇದಕ್ಕೆ ಪ್ರತಿಯಾಗಿ ಪಡೆಯುವ ಎನ್ಕೌಂಟರ್ಗೆ ಮುಂದಾಯಿತು ಎಂದು ಸುಕ್ಮಾ ಎಸ್ಪಿ ಕಿರಣ್ ಚೌಹಾಣ್ ತಿಳಿಸಿದ್ದಾರೆ.
ಇಲ್ಲಿಯವರೆಗೆ ಮೂವರು ನಕ್ಸಲರ ಮೃತದೇಹಗಳು ಪತ್ತೆಯಾಗಿದೆ. ಇದರಲ್ಲಿ ಓರ್ವ ಮಹಿಳಾ ನಕ್ಸಲ್ ಸೇರಿದ್ದಾರೆ. ಸದ್ಯ ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆದಿದ್ದು, ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
ಸುಕ್ಮಾ ಪೊಲೀಸರ ಪ್ರಕಾರ, ಗುಂಡಿಗೆ ಬಲಿಯಾಗಿರುವ ನಕ್ಸಲರನ್ನು ಮದ್ವಿ ಜೋಗ ಅಲಿಯಾಸ್ ಮುನ್ನ ಅಲಿಯಾಸ್ ಜಗತ್ ಹಾಗೂ ಸೋದಿ ಬಂದಿ ಮತ್ತು ಮಹಿಳಾ ನಕ್ಸಲ್ ಅನ್ನು ನುಪ್ಪು ಬಜ್ನಿ ಎಂದು ಗುರುತಿಸಲಾಗಿದೆ. ಈ ಎಲ್ಲಾ ಸದಸ್ಯರು ಕಿಸ್ತರಾಮ್ ಪ್ರದೇಶ ಸಮಿತಿಯ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರ್ಷ ಛತ್ತೀಸ್ಗಢದಲ್ಲಿ ನಡೆದ ಎನ್ಕೌಂಟರ್ಗಳಲ್ಲಿ 284 ನಕ್ಸಲರು ಸಾವನ್ನಪ್ಪಿದ್ದಾರೆ. ಸುಕ್ಮಾ, ಬಿಜಾಪುರ ಮತ್ತು ದಂತೇವಾಡ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದಲ್ಲಿ 255 ನಕ್ಸಲರನ್ನು ನಿರ್ಮೂಲನೆ ಮಾಡಲಾಗಿದೆ. ರಾಯ್ಪುರ ವಿಭಾಗದ ಗರಿಯಾಬಂದ್ ಜಿಲ್ಲೆಯಲ್ಲಿ 27 ಜನರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ದುರ್ಗ್ ವಿಭಾಗದ ಮೊಹ್ಲಾ-ಮನ್ಪುರ-ಅಂಬಾಘರ್ ಚೌಕಿ ಜಿಲ್ಲೆಯಲ್ಲಿ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ.
ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯವು 2026ರ ಮಾರ್ಚ್ ಒಳಗೆ ದೇಶವನ್ನು ನಕ್ಸಲ್ ಮುಕ್ತವಾಗಿಸುವ ಪಣವನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಮಾವೋವಾದಿಗಳ ಪ್ರದೇಶದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈಗಾಗಲೇ ಈ ಕಾರ್ಯಾಚರಣೆಯಲ್ಲಿ ಭಾಗಶಃ ಪೂರ್ಣಗೊಂಡಿದ್ದು, ಅನೇಕ ನಕ್ಸಲರು ಶರಣಾಗಿದ್ದಾರೆ. ಶರಣಾಗತಿಯಾಗುವ ನಕ್ಸಲರಿಗೆ ಸರ್ಕಾರದಿಂದ ಪುನರ್ವಸತಿ ಸೌಲಭ್ಯವನ್ನು ನೀಡಲಾಗುತ್ತಿದೆ.
ಇವುಗಳನ್ನೂ ಓದಿ:
ತಲೆಗೆ ₹77 ಲಕ್ಷ ಬಹುಮಾನವಿದ್ದ ಪ್ರಮುಖ ನಕ್ಸಲ್ ಕಬೀರ್ ಸೇರಿ 11 ಮಂದಿ ಶರಣಾಗತಿ

