ಅಮೆರಿಕ-ಇಸ್ರೇಲ್ನಿಂದ ಜಂಟಿ ದಾಳಿ, ಇರಾನ್ನಿಂದಲೂ ಪ್ರತೀಕಾರ: ಮಧ್ಯಪ್ರಾಚ್ಯ ದೇಶಗಳಿಗೆ ವಿಮಾನ ಸೇವೆ ರದ್ದು, ಆತಂಕದಲ್ಲಿ ಭಾರತೀಯರು
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ಸೇನಾ ದಾಳಿಯ ಬಳಿಕ ಹಲವು ವಾಯು ಮಾರ್ಗಗಳನ್ನು ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮ ಸಾವಿರಾರು ಭಾರತೀಯ ಪ್ರಯಾಣಿಕರು, ಪ್ರವಾಸಿಗರು, ಉದ್ಯಮಿಗಳು ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ.

Published : March 2, 2026 at 10:47 PM IST
ನವದೆಹಲಿ: ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಯುದ್ಧ ಸಾರಿವೆ. ಇದಕ್ಕೆ, ಪ್ರತಿಕ್ರಿಯೆಯಾಗಿ ಇರಾನ್ ಸಹ ಅಮೆರಿಕ ಸೇರಿದಂತೆ ತನ್ನ ನೆರೆಯ ರಾಷ್ಟ್ರಗಳ ಮೇಲೆ ತನ್ನ ಪ್ರತೀಕಾರವನ್ನು ತೀರಿಸಿಕೊಳ್ಳಲು ಮುಂದಾಗಿದೆ. ಇದು ಈಗಾಗಲೇ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣವನ್ನು ಸೃಷ್ಟಿಮಾಡಿದೆ. ಯುದ್ಧ ಮುಂದುವರಿದಿದ್ದು, ನಾಗರಿಕ ವಿಮಾನಗಳ ಸಂಚಾರದ ಮೇಲೂ ದುಷ್ಪರಿಣಾಮ ಬೀರಿದೆ.
ಉದ್ವಿಗ್ನತೆಯಿಂದಾಗಿ ವಾಯಯಾನ ಸ್ಥಗಿತಗೊಳಿಸಲಾಗಿದ್ದು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು, ಸಿನಿಮಾ ತಾರೆಯರು ಸೇರಿದಂತೆ ಸಾವಿರಾರು ಭಾರತೀಯರು ಪ್ರಸ್ತುತ ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಇತರ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ವಾಸಿಸುವ ಮತ್ತು ಕೆಲಸ ಮಾಡುತ್ತಿರುವ ಭಾರತೀಯರ ಸುರಕ್ಷತೆಯ ಬಗ್ಗೆ ಕಳವಳ ಹುಟ್ಟುಹಾಕಿದೆ.
ಫೆ. 28 ರಂದು ಟೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಮತ್ತು ಅವರ ಉನ್ನತ ಶ್ರೇಣಿಯ ಮಿಲಿಟರಿ ನಾಯಕರು ಮೃತಪಟ್ಟಿದ್ದು, ಕಳೆದ 48 ಗಂಟೆಗಳಲ್ಲಿ ಇಡೀ ಮಧ್ಯಪ್ರಾಚ್ಯವು ಸಂಘರ್ಷ ವಲಯವಾಗಿ ಮಾರ್ಪಟ್ಟಿದೆ. ಪ್ರತೀಕಾರವಾಗಿ, ಇರಾನ್ ಕೂಡ ಇಸ್ರೇಲ್ ಮತ್ತು ಯುಎಇ, ಕತಾರ್, ಕುವೈತ್, ಸೌದಿ ಅರೇಬಿಯಾ, ಬಹ್ರೇನ್ ಮತ್ತು ಜೋರ್ಡಾನ್ ಸೇರಿದಂತೆ ಗಲ್ಫ್ ಪ್ರದೇಶದಲ್ಲಿನ ಯುಎಸ್-ಸಂಬಂಧಿತ ಮಿಲಿಟರಿ ಸ್ಥಾಪನೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ/ಸುತ್ತಿದೆ.
ಶನಿವಾರ ಆರಂಭದವಾದ ಸಂಘರ್ಷ ಇಂದು ಸೋಮವಾರವು (ಮಾ. 02) ಮುಂದುವರಿದಿದೆ. ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಇರಾನ್, ಇಸ್ರೇಲ್ ಸೇರಿ ಮಧ್ಯಪ್ರಾಚ್ಯ ರಾಷ್ಟ್ರಗಳು ತಮ್ಮ ವಾಯಯಾನವನ್ನು ಸ್ಥಗಿತಗೊಳಿಸಿವೆ. ಪರಿಣಾಮ ಹಲವು ಪ್ರಯಾಣಿಕರು ಪರದಾಡುವಂತಾಗಿದೆ. ಅದರಲ್ಲೂ ಈ ಮಧ್ಯಪ್ರಾಚ್ಯ ರಾಷ್ಟ್ರಗಳು ವಾಸಿಸುಸುತ್ತಿರುವ ಭಾರತೀಯ ವಲಸಿಗರಲ್ಲಿ ಆತಂಕ ಮೂಡಿದೆ.
ಸಂಘರ್ಷ ವಲಯದಲ್ಲಿ ಭಾರತೀಯರು: ಪಶ್ಚಿಮ ಏಷ್ಯಾವು ವಿಶ್ವದ ಅತಿದೊಡ್ಡ ಭಾರತೀಯ ವಲಸೆ ಜನಸಂಖ್ಯೆಗೆ ನೆಲೆಯಾಗಿರುವುದರಿಂದ, ಬಿಕ್ಕಟ್ಟು ವ್ಯಾಪಕ ಪರಿಣಾಮ ಬೀರಿದೆ. ಒಂಬತ್ತು ದಶಲಕ್ಷಕ್ಕೂ ಹೆಚ್ಚು ಭಾರತೀಯರು ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಯುಎಇ, ಸೌದಿ ಅರೇಬಿಯಾ, ಕತಾರ್, ಕುವೈತ್, ಓಮನ್ ಮತ್ತು ಬಹ್ರೇನ್ನಲ್ಲಿ ಅತಿ ಹೆಚ್ಚು ಜನರಿದ್ದಾರೆ.
ಸರ್ಕಾರಿ ಮಾಹಿತಿಯ ಪ್ರಕಾರ, 100,000ಕ್ಕೂ ಹೆಚ್ಚು ಭಾರತೀಯರು ಇಸ್ರೇಲ್ನಲ್ಲಿ ವಾಸಿಸುತ್ತಿದ್ದರೆ, 10,000ಕ್ಕೂ ಹೆಚ್ಚು ಭಾರತೀಯರು ಇರಾನ್ನಲ್ಲಿ ವಾಸಿಸುತ್ತಿದ್ದಾರೆ. ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಈ ಪ್ರದೇಶದಾದ್ಯಂತ ಅಧ್ಯಯನ ಮಾಡುತ್ತಿದ್ದಾರೆ. ಯುಎಇಯಲ್ಲಿ 43 ಲಕ್ಷ ಭಾರತೀಯ ಪ್ರಜೆಗಳು ದೇಶದಲ್ಲಿ ವಾಸಿಸುತ್ತಿದ್ದು ಇದು ಜನಸಂಖ್ಯೆಯ ಸುಮಾರು 35 ಪ್ರತಿಶತವನ್ನು ಹೊಂದಿದೆ. ಭಾರತೀಯ ಜನಸಂಖ್ಯೆಯು ದುಬೈ ಮತ್ತು ಅಬುಧಾಬಿ ಸೇರಿದಂತೆ ಎಲ್ಲಾ ಎಮಿರೇಟ್ಗಳಲ್ಲಿ ಹರಡಿದೆ. ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ಜನರಿದ್ದಾರೆ. 2024ರ ಅಂಕಿ-ಅಂಶಗಳ ಮಾಹಿತಿ ಇದಾಗಿದೆ.
ಗಲ್ಫ್ ಭಾರತದ ಅತಿದೊಡ್ಡ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. 2025ರಲ್ಲಿ, 86 ಲಕ್ಷ ಭಾರತೀಯರು ಯುಎಇಗೆ, 34 ಲಕ್ಷ ಸೌದಿ ಅರೇಬಿಯಾಕ್ಕೆ ಮತ್ತು 11 ಲಕ್ಷ ಭಾರತೀಯರು ಕತಾರ್ಗೆ ಪ್ರಯಾಣಿಸಿದ್ದಾರೆ. ನಡೆಯುತ್ತಿರುವ ಸಂಘರ್ಷದಿಂದ ಆತಂಕ ಮೂಡಿದೆ.
ವಿಮಾನ ನಿಲ್ದಾಣಗಳು ಮತ್ತು ಹೋಟೆಲ್ಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ಕ್ಷಿಪಣಿಗಳನ್ನು ಬಿಡಲಾಗುತ್ತಿದ್ದು, ದುಬೈ, ಅಬುಧಾಬಿ ಮತ್ತು ದೋಹಾದಲ್ಲಿನ ಹಬ್ಗಳನ್ನು ಮುಚ್ಚಲು ಕಾರಣವಾಗಿದೆ. 1,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಪ್ರತಿದಿನ ಸುಮಾರು 90,000 ಪ್ರಯಾಣಿಕರನ್ನು ನಿರ್ವಹಿಸುವ ವಿಮಾನ ನಿಲ್ದಾಣಗಳಲ್ಲಿ ಭಾರಿ ಅಡಚಣೆ ಉಂಟಾಗಿದೆ.
ರಾಜಸ್ಥಾನದ ಬರಾನ್ ಜಿಲ್ಲೆಯ ಹರ್ನಾವ್ಡಾ ಶಹಜಿಯ ಉದ್ಯಮಿಗಳಾದ ನರೇಂದ್ರ ಖಂಡೇಲ್ವಾಲ್ ಮತ್ತು ನವಲ್ ಕಿಶೋರ್ ಗರ್ಗ್ ತಮ್ಮ ಕುಟುಂಬಗಳೊಂದಿಗೆ ರಜೆಗಾಗಿ ದುಬೈಗೆ ಪ್ರಯಾಣಿಸಿದ್ದರು. ಅವರು ಮಾರ್ಚ್ 1 ರಂದು ಹಿಂತಿರುಗಬೇಕಿತ್ತು. ಆದರೆ, ಅವರ ವಿಮಾನ ರದ್ದಾಗಿದ್ದರಿಂದ ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ.
ದೂರವಾಣಿ ಕರೆಯಲ್ಲಿ ಮಾತನಾಡಿದ ನರೇಂದ್ರ ಖಂಡೇಲ್ವಾಲ್, "ದುಬೈನಲ್ಲಿ ಪ್ರಸ್ತುತ ವಾತಾವರಣ ಶಾಂತವಾಗಿದೆ. ಆದರೆ, ಪ್ರವಾಸಿಗರಲ್ಲಿ ಭಯವನ್ನು ಸೃಷ್ಟಿಸಿದೆ. ಭಾನುವಾರ, ಹೆಚ್ಚಿನ ಜನರು ಹೋಟೆಲ್ಗಳಲ್ಲಿಯೇ ಉಳಿದರು. ರಸ್ತೆಗಳಲ್ಲಿ ಸಂಚಾರ ತೀರಾ ಕಡಿಮೆಯಾಗಿತ್ತು. ಅಗತ್ಯ ಸೇವೆಗಳು ಮಾತ್ರ ಕಾರ್ಯನಿರ್ವಹಿಸುತ್ತಿರುವಂತೆ ಕಂಡುಬಂದವು. ತೀರಾ ಅಗತ್ಯವಿಲ್ಲದಿದ್ದರೆ ಯಾರೂ ಹೊರಗೆ ಹೋಗುತ್ತಿಲ್ಲ. ಆದರೆ, ನಮಗೆ ಇಲ್ಲಿ ಆರ್ಥಿಕ ಹೊರೆ ಹೆಚ್ಚುತ್ತಿದೆ. ನಮ್ಮ ವಿಸ್ತೃತ ವಾಸ್ತವ್ಯಕ್ಕಾಗಿ ನಾವು ಹೆಚ್ಚುವರಿ ಹೋಟೆಲ್ ಶುಲ್ಕಗಳು ಮತ್ತು ಹೆಚ್ಚುವರಿ ತೆರಿಗೆಗಳನ್ನು ಪಾವತಿಸಬೇಕಾಗಿದೆ. ಆಹಾರ ವ್ಯವಸ್ಥೆಗಳನ್ನು ಸಹ ವೈಯಕ್ತಿಕವಾಗಿ ನಿರ್ವಹಿಸಬೇಕಾಗಿದೆ. ವಸತಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ವಿಮಾನಗಳ ರದ್ದತಿ ಪ್ರವಾಸಿಗರಲ್ಲಿ ಆತಂಕವನ್ನು ಉಂಟುಮಾಡಿದೆ" ಎಂದರು.
ಸಂಘರ್ಷದ ಪರಿಣಾಮ ಒಡಿಯಾ ಯುವಕ ಪ್ರತೀಕ್ ದೇವ್ ದಾಸ್ ದೋಹಾದಲ್ಲಿ ಸಿಲುಕಿಕೊಂಡಿದ್ದಾರೆ. ಕ್ಷಿಪಣಿ ಬೆದರಿಕೆಗಳಿಂದಾಗಿ ಎರಡು ದಿನಗಳವರೆಗೆ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರನ್ನು ಹೋಟೆಲ್ಗಳಿಗೆ ಸ್ಥಳಾಂತರಿಸಲಾಗಿದೆ. 300ಕ್ಕೂ ಹೆಚ್ಚು ಪ್ರಯಾಣಿಕರೊಂದಿಗೆ ವಿಮಾನವು ದೋಹಾದಲ್ಲಿ ಸುರಕ್ಷಿತ ತುರ್ತು ಲ್ಯಾಂಡಿಂಗ್ ಆಗಿದೆ. ಆದರೆ, ಆತಂಕ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ತಮ್ಮ ಪುತ್ರನನ್ನು ಭಾರತಕ್ಕೆ ಮರಳಿ ಕರೆತರಲು ವಿಶೇಷ ವಿಮಾನಗಳನ್ನು ವ್ಯವಸ್ಥೆ ಮಾಡಬೇಕೆಂದು ಅವರ ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ.
ಇನ್ನು, ಅಬುಧಾಬಿ ಶಿಬಿರದ ಬಳಿ ಕ್ಷಿಪಣಿ ಸ್ಫೋಟದಿಂದ ಬಿಹಾರದ ಮುಜಫರ್ಪುರದ ಮಜೌಲಿಯಾ ನಿವಾಸಿ ಮೊಹಮ್ಮದ್ ಮುಸಿಮ್ ಎಂಬ ಯುವಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಅವನ ಮೂಲ ಶಿಬಿರದಿಂದ ಕೇವಲ 200 ಮೀಟರ್ ದೂರದಲ್ಲಿ ಸ್ಫೋಟ ಸಂಭವಿಸಿದೆ. ಡಿಸೆಂಬರ್ 2025 ರಿಂದ ಹಬ್ಶಾನ್ ಪ್ರದೇಶದ ಪೆಟ್ರೋಜೆಟ್ ಕಂಪನಿಯಲ್ಲಿ ಪೈಪ್ ಫಿಟ್ಟರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ.
"ಶನಿವಾರ ನನ್ನ ಫೋನ್ನಲ್ಲಿ ರಾತ್ರಿ 9:05ಕ್ಕೆ ಕ್ಷಿಪಣಿ ಬೀಳುವ ಎಚ್ಚರಿಕೆ ಬಂದಿತ್ತು. ಅದಾದ ನಾಲ್ಕು ನಿಮಿಷಗಳ ನಂತರ ಜೋರಾಗಿ ಸ್ಫೋಟ ಸಂಭವಿಸಿದೆ. ಸ್ಫೋಟವು ಕಾರ್ಮಿಕರಲ್ಲಿ ಭಯ ಉಂಟುಮಾಡಿದೆ. ವಿಶೇಷವಾಗಿ ಸುಮಾರು 20,000 ಭಾರತೀಯರು ಈ ಪ್ರದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ನನಗೆ ನನ್ನ ಸ್ವಂತ ದೇಶದಲ್ಲಿ ಸಿಕ್ಕಿದ್ದರೆ, ನಾನು ಇಲ್ಲಿಗೆ ಏಕೆ ಬರುತ್ತಿದ್ದೇವು?" ಎಂದು ನೋವು ತೋಡಿಕೊಂಡಿದ್ದಾನೆ.
ಗುಜರಾತ್ನ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಕೂಡ ಸಿಲುಕಿಕೊಂಡಿದ್ದಾರೆ. ಗುಜರಾತ್ನ ಪಾಲನ್ಪುರದಲ್ಲಿರುವ ಕುಟುಂಬ ತಮ್ಮ ಮಕ್ಕಳು ದುಬೈನಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ವಿದೇಶದಲ್ಲಿ ಕೆಲಸ ಮಾಡುತ್ತಿರುವ ಯುವಕನ ತಂದೆ ಜಯೇಶ್ಭಾಯ್ ರಾವಲ್ ಮಾತನಾಡಿ, "ನಮ್ಮ ಮಕ್ಕಳ ಬಗ್ಗೆ ತುಂಬಾ ಚಿಂತಿತರಾಗಿದ್ದೇವೆ. ಪ್ರತಿ ಎರಡು ಗಂಟೆಗಳಿಗೊಮ್ಮೆ ಅವರೊಂದಿಗೆ ಮಾತನಾಡುತ್ತೇವೆ. ಸದ್ಯಕ್ಕೆ ಅವರು ಸುರಕ್ಷಿತವಾಗಿದ್ದಾರೆ. ನಮ್ಮ ಕುಟುಂಬ ಮತ್ತು ಸಂಬಂಧಿಕರಿಂದ ಸುಮಾರು 20-22 ಹುಡುಗರು ಅಲ್ಲಿದ್ದಾರೆ. ಇಲ್ಲಿಯವರೆಗೆ, ಯಾವುದೇ ಸಮಸ್ಯೆ ಇಲ್ಲ. ವಿಮಾನಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ. ಆದ್ದರಿಂದ ಅವರು ಹಿಂತಿರುಗಲು ಸಾಧ್ಯವಾಗುತ್ತಿಲ್ಲ. ಶಾಪಿಂಗ್ ಮಾಲ್ಗಳು ಮತ್ತು ಹೋಟೆಲ್ಗಳು ಅಲ್ಲಿ ತೆರೆದಿವೆಯಂತೆ. ಆದರೆ ಮಾರುಕಟ್ಟೆಗಳು ಮುಚ್ಚಿದ್ದರಿಂದ ಎಲ್ಲಾ ಹುಡುಗರು ಮನೆಯೊಳಗೆ ಇದ್ದಾರೆ" ಎಂದು ಆತಂಕ ತೋಡಿಕೊಂಡಿದ್ದಾರೆ.
ವ್ಯವಹಾರ ಉದ್ದೇಶಗಳಿಗಾಗಿ ದುಬೈಗೆ ಪ್ರಯಾಣಿಸಿದ್ದ ಮೆಹ್ಸಾನಾದ ಮೂವರು ಉದ್ಯಮಿಗಳು ಈಗ ವಿಮಾನ ಸೇವೆಗಳ ಸ್ಥಗಿತದಿಂದಾಗಿ ಸಿಲುಕಿಕೊಂಡಿದ್ದಾರೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಮೆಹ್ಸಾನಾದ ಅಲ್ಪೇಶ್ಕುಮಾರ್ ಪಟೇಲ್, ಯೋಗೇಶ್ಕುಮಾರ್ ಪಟೇಲ್ ಮತ್ತು ಪಾರ್ಥಕುಮಾರ್ ಪಟೇಲ್ ಫೆಬ್ರವರಿ 25 ರಂದು ವ್ಯವಹಾರಕ್ಕಾಗಿ ದುಬೈಗೆ ಪ್ರಯಾಣಿಸಿದ್ದರು. ಮೂವರೂ ಪ್ರಸ್ತುತ ಬುರ್ ದುಬೈನಲ್ಲಿ ವಾಸಿಸುತ್ತಿದ್ದಾರೆ. ವಿಮಾನ ಸೇವೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿರುವುದರಿಂದ ಅವರ ಕುಟುಂಬಗಳಲ್ಲಿ ಕಳವಳ ಹೆಚ್ಚಾಗಿದೆ. ಅವರಿಗಾಗಿ ಆಗಮನಕ್ಕಾಗಿ ವ್ಯವಸ್ಥೆ ಮಾಡುವಂತೆ ಭಾರತ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ರಾಜ್ಯಸಭಾ ಸಂಸದ ಮಾಯಾಂಕ್ ನಾಯಕ್ ವಾಟ್ಸಾಪ್ ವಿಡಿಯೋ ಕರೆಯ ಮೂಲಕ ಅಲ್ಪೇಶ್ ಪಟೇಲ್ ಮತ್ತು ಇತರರನ್ನು ಸಂಪರ್ಕಿಸಿದ್ದು, "ಕೇಂದ್ರ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯವು ಈ ವಿಷಯದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಅವರು ಅವರಿಗೆ ಭರವಸೆ ನೀಡಿದರು. ಅಲ್ಲದೇ "ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ವದಂತಿಗಳಿಗೆ ಗಮನ ಕೊಡಬೇಡಿ" ಎಂದು ಮನವಿ ಕೂಡ ಮಾಡಿದ್ದಾರೆ.
ದುಬೈನಿಂದ, ಅಲ್ಪೇಶ್ ಪಟೇಲ್ ಕೃತಜ್ಞತೆ ಸಲ್ಲಿಸುತ್ತಾ, "ನಾವು ಬುರ್ ದುಬೈನಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇವೆ. ಭಾರತ ಸರ್ಕಾರ ಮತ್ತು ಸ್ಥಳೀಯ ರಾಯಭಾರ ಕಚೇರಿಯಿಂದ ನಮಗೆ ಸಂಪೂರ್ಣ ಸಹಕಾರ ಸಿಗುತ್ತಿದೆ. ಕ್ಷಿಪಣಿ ಪ್ರತಿಬಂಧಗಳು ಕೆಲವು ಅವಶೇಷಗಳು ಬೀಳಲು ಕಾರಣವಾಗಿವೆ. ಆದರೆ, ಯಾವುದೇ ದೊಡ್ಡ ಜೀವ ಅಥವಾ ಆಸ್ತಿ ನಷ್ಟ ಸಂಭವಿಸಿಲ್ಲ. ಇಲ್ಲಿ ಭಯದ ವಾತಾವರಣವಿಲ್ಲ" ಎಂದು ಹೇಳಿದ್ದಾರೆ.
ಸಹಾಯವಾಣಿ ಆರಂಭ: ದುಬೈ, ಅಬುಧಾಬಿ, ಓಮನ್, ಜೆಡ್ಡಾ ಮತ್ತು ಕುವೈತ್ನಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡಲು ತಮ್ಮ ಕಚೇರಿ "ಸೇವಾಲಯ" ಮೂಲಕ ವಿಶೇಷ ಸಹಾಯವಾಣಿ ಆರಂಭಿಸಲಾಗಿದೆ ಎಂದು ಸಂಸದ ಮಾಯಾಂಕ್ ನಾಯಕ್ ತಿಳಿಸಿದ್ದಾರೆ. ಇಲ್ಲಿಯವರೆಗೆ, 243ಕ್ಕೂ ಹೆಚ್ಚು ಜನರ ವಿವರಗಳನ್ನು ಸಂಗ್ರಹಿಸಿ ಕೇಂದ್ರ ಸಹಾಯ ಪೋರ್ಟಲ್ಗೆ ಅಪ್ಲೋಡ್ ಮಾಡಲಾಗಿದೆ ಎಂದಿದ್ದಾರೆ.
ಸಹಾಯದ ಅಗತ್ಯವಿರುವವರು ಸಹಾಯವಾಣಿ ಸಂಖ್ಯೆ: 9824633244 ನಲ್ಲಿ ವಾಟ್ಸಾಪ್ ಮೂಲಕ ಈ ಕೆಳಗಿನ ವಿವರಗಳನ್ನು ಹಂಚಿಕೊಳ್ಳಬಹುದು:
- ಪ್ರಯಾಣಿಕರ ಹೆಸರು
- ಸಿಲುಕಿಕೊಂಡಿರುವ ದೇಶ
- ವಿಮಾನ ವಿವರಗಳು
- ಪಾಸ್ಪೋರ್ಟ್ ಸಂಖ್ಯೆ
- ಪ್ರಯಾಣಿಕರ ಸಂಖ್ಯೆ
- ಸಂಬಂಧಿಕರ ಮೊಬೈಲ್ ಸಂಖ್ಯೆ
ಗುಜರಾತ್ನ ವಡೋದರಾ ಜಿಲ್ಲೆಯ 45ಕ್ಕೂ ಹೆಚ್ಚು ಪ್ರಯಾಣಿಕರು ದುಬೈ ಮತ್ತು ಅಬುಧಾಬಿ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. "ಯುದ್ಧದಂತಹ ಪರಿಸ್ಥಿತಿಯಿಂದಾಗಿ, ವಡೋದರಾದ ಹಲವು ಪ್ರಯಾಣಿಕರು ದುಬೈ ಮತ್ತು ಅಬುಧಾಬಿ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಇಲ್ಲಿಯವರೆಗೆ ಯಾವುದೇ ಪ್ರಮುಖ ಸಮಸ್ಯೆಗಳನ್ನು ಎದುರಿಸಿಲ್ಲ" ಎಂದು ಬಿಜೆಪಿ ಸಂಸದ ಹೇಮಾಂಗ್ ಜೋಶಿ ಹೇಳಿದ್ದಾರೆ.
ಮಹಾರಾಷ್ಟ್ರದ ಪ್ರವಾಸಿಗರು ಕೂಡ: 12 ಹಿರಿಯ ನಾಗರಿಕರು ಸೇರಿದಂತೆ ಥಾಣೆಯ ಇಪ್ಪತ್ತಮೂರು ಜನರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಪ್ರವಾಸಿಗರಾಗಿ ದುಬೈಗೆ ಭೇಟಿ ನೀಡಿದ್ದರು. "ನಾವು ಪ್ರವಾಸೋದ್ಯಮಕ್ಕಾಗಿ ದುಬೈಗೆ ಪ್ರಯಾಣಿಸಿದ್ದೆವು ಮತ್ತು ಭಾನುವಾರ ಮನೆಗೆ ಮರಳಬೇಕಿತ್ತು. ಆದರೆ, ವಿಮಾನಯಾನ ಸ್ಥಗಿತದಿಂದ ನಮ್ಮ ಯೋಜನೆಗಳು ವಿಫಲವಾದವು. ಭಾರತಕ್ಕೆ ಸುರಕ್ಷಿತವಾಗಿ ಮರಳಲು ತಕ್ಷಣದ ಸಹಾಯವನ್ನು ಪಡೆಯಲು ನಾನು ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದೇನೆ. ಪ್ರಯಾಣ ಅನಿಶ್ಚಿತವಾಗಿರುವುದರಿಂದ, ನಾವು ಸರ್ಕಾರದಿಂದ ಆರ್ಥಿಕ ಮತ್ತು ವ್ಯವಸ್ಥಾಪನಾ ಬೆಂಬಲವನ್ನು ಕೋರುತ್ತಿದ್ದೇವೆ" ಎಂದು ಅಬುಧಾಬಿ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರಲ್ಲಿ ಒಬ್ಬರಾದ ರಮೇಶ್ ಧಲ್ಪೆ ಹೇಳಿದ್ದಾರೆ.
ರಂಜಾನ್ ಸಮಯದಲ್ಲಿ ಉಮ್ರಾಕ್ಕಾಗಿ ಪ್ರಯಾಣಿಸಿದ ನಾಸಿಕ್, ಮಾಲೆಗಾಂವ್ ಮತ್ತು ಧುಲೆಯಿಂದ ಬಂದ ನೂರಾರು ಮುಸ್ಲಿಂ ಯಾತ್ರಿಕರು ಯುಎಸ್-ಇರಾನ್ ಸಂಘರ್ಷದ ನಡುವೆ ಅಂತರರಾಷ್ಟ್ರೀಯ ವಿಮಾನಗಳಲ್ಲಿನ ಅಡಚಣೆಗಳಿಂದಾಗಿ ಈಗ ಮೆಕ್ಕಾ ಮತ್ತು ಮದೀನಾದಲ್ಲಿ ಸಿಲುಕಿಕೊಂಡಿದ್ದಾರೆ. ಮಾರ್ಚ್ 2 ಮತ್ತು 3 ರಂದು ಹಿಂತಿರುಗಲು ನಿರ್ಧರಿಸಲಾಗಿತ್ತು. ಆದರೆ, ಟಿಕೆಟ್ ಪಡೆಯಲು ಸಾಧ್ಯವಾಗುತ್ತಿಲ್ಲ.
ಸೌದಿ ಅರೇಬಿಯಾದ ಉಮ್ರಾ ವೀಸಾ ಪೋರ್ಟಲ್ ಅನ್ನು ಸಹ ಮೂರು ದಿನಗಳವರೆಗೆ ಮುಚ್ಚಲಾಗಿದ್ದು, ಹೊಸ ಪ್ರಯಾಣ ವ್ಯವಸ್ಥೆ ಮಾಡುವುದು ಕಷ್ಟಕರವಾಗಿದೆ ಮತ್ತು ವೀಸಾಗಳನ್ನು ವಿಸ್ತರಿಸುವುದು ಸವಾಲಾಗಿದೆ. ಇಲ್ಲಿಯವರೆಗೆ, ನಾಸಿಕ್ನಿಂದ 175 ಯಾತ್ರಿಕರು ಮತ್ತು ಮಾಲೆಗಾಂವ್ನಿಂದ 1,350 ಯಾತ್ರಿಕರು ಸೌದಿ ಅರೇಬಿಯಾವನ್ನು ತಲುಪಿದ್ದಾರೆ.
ಅರ್ಮಾನ್ ಟೂರ್ಸ್ ಮತ್ತು ಟ್ರಾವೆಲ್ಸ್ನ ನಿರ್ದೇಶಕ ಫಾರೂಕ್ ತಂಬೋಲಿ ಮಾತನಾಡಿ, "ನಾವು ಯಾತ್ರಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರು ಸುರಕ್ಷಿತರಾಗಿದ್ದಾರೆ ಮತ್ತು ಪ್ರಸ್ತುತ ಹೋಟೆಲ್ಗಳಲ್ಲಿ ವಾಸಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಪುಣೆ ವಿದ್ಯಾರ್ಥಿಗಳು: ಇಂದಿರಾ ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್ನ ನಾಲ್ವರು ಅಧ್ಯಾಪಕರು ಸೇರಿದಂತೆ 80ಕ್ಕೂ ಹೆಚ್ಚು ಎಂಬಿಎ ವಿದ್ಯಾರ್ಥಿಗಳು ದುಬೈನಲ್ಲಿ ಸಿಲುಕಿದ್ದಾರೆ. ಡೀನ್ ಜನಾರ್ದನ್ ಪವಾರ್ ಮಾತನಾಡಿ, "ಎಲ್ಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸುರಕ್ಷಿತವಾಗಿದ್ದಾರೆ ಅವರನ್ನು ಹೋಟೆಲ್ಗೆ ಸ್ಥಳಾಂತರಿಸಲಾಗಿದೆ. ಅವರು ಬೇಗನೆ ಹಿಂದಿರುಗುವುದನ್ನು ಖಚಿತಪಡಿಸಿಕೊಳ್ಳಲು ನಾವು ನಿರಂತರವಾಗಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ" ಎಂದಿದ್ದಾರೆ.
ಪಂಜಾಬ್ ಪ್ರಾಂಶುಪಾಲರು ಸಿಲುಕಿಕೊಂಡಿದ್ದಾರೆ. ಭಟಿಂಡಾದ ನೀರು ಗರ್ಗ್ ಮಾತನಾಡಿ "ನಾವು ಅಮೃತಸರಕ್ಕೆ ನಮ್ಮ ಇಂಡಿಗೋ ವಿಮಾನವನ್ನು ಹತ್ತಲು ಸಿದ್ಧರಾಗಿದ್ದೆವು. ಆದರೆ, ಇದ್ದಕ್ಕಿದ್ದಂತೆ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ನಮಗೆ ತಿಳಿಸಲಾಯಿತು. ಯಾವುದೇ ವ್ಯವಸ್ಥೆ ಇಲ್ಲದ ಕಾರಣ ನಾವು ಎಲ್ಲಿ ಉಳಿಯಬೇಕೆಂದು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಕೇಳಿದ್ದೇವೆ. ಆದರೆ, ಸ್ಪಷ್ಟ ಉತ್ತರವನ್ನು ನೀಡಲಾಗಿಲ್ಲ. ಪ್ರವಾಸದ ಕೊನೆಯ ದಿನ ಎಂದು ಭಾವಿಸಿ ನಾವು ನಮ್ಮ ದಿರ್ಹಮ್ ಕರೆನ್ಸಿಯನ್ನು ಖಾಲಿ ಮಾಡಿದ್ದೇವೆ. ನಾವು ಈಗ ನಗದು ಅಥವಾ ಅಗತ್ಯ ಔಷಧಿಗಳಿಲ್ಲದೆ ಸಿಲುಕಿಕೊಂಡಿದ್ದೇವೆ. ಅನೇಕ ಪ್ರಯಾಣಿಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅಲ್ಲದೇ ಭಯಭೀತರಾಗಿದ್ದಾರೆ. ನಮಗೆ ಸಹಾಯ ಮಾಡಲು ನಾವು ಭಾರತ ಸರ್ಕಾರವನ್ನು ವಿನಂತಿಸುತ್ತೇವೆ" ಎಂದು ಹೇಳಿದ್ದಾರೆ.
ಪ್ರಸ್ತುತ ದುಬೈನಲ್ಲಿರುವ ಹಲವು ಭಾರತೀಯ ಸೆಲೆಬ್ರಿಟಿಗಳು ಸಹ ಅಲ್ಲಿನ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರ ನಿರ್ಮಾಪಕ ರಾಜ್ ಚಕ್ರವರ್ತಿ, ಅವರ ಪತ್ನಿ ಬಂಗಾಳಿ ನಟಿ ಶುಭಶ್ರೀ ಗಂಗೂಲಿ ಮತ್ತು ಅವರ ಮಗ ದುಬೈನಲ್ಲಿ ಸಿಲುಕಿದ್ದಾರೆ. "ಪಾಮ್ ಜುಮೇರಾದಲ್ಲಿ ನಾವು ತಂಗಿರುವ ಹೋಟೆಲ್ ಬಳಿ ಸ್ಫೋಟ ಸಂಭವಿಸಿದೆ ಎಂದು ಹೇಳುತ್ತಿದ್ದಾರೆ. ಸ್ಥಳೀಯ ಅಧಿಕಾರಿಗಳು ತೀರಾ ಅಗತ್ಯವಿಲ್ಲದಿದ್ದರೆ ಹೊರಗೆ ಹೋಗದಂತೆ ಸ್ಪಷ್ಟ ಸೂಚನೆಗಳನ್ನು ನೀಡಿದ್ದಾರೆ. ಸುರಕ್ಷತಾ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂದು ರಾಜ್ ಚಕ್ರವರ್ತಿ ಹೇಳಿದ್ದಾರೆ.
ನಟಿ ಇಶಾ ಗುಪ್ತಾ ಮಾತನಾಡಿ. "ನಾವು ಸುರಕ್ಷಿತವಾಗಿದ್ದೇವೆ. ಯುಎಇ ಅಧಿಕಾರಿಗಳು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ. ನಾವು ಶೀಘ್ರದಲ್ಲೇ ಮನೆಗೆ ಮರಳುತ್ತೇವೆ ಎಂದು ಅವರು ಹೇಳಿದ್ದಾರೆ. ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ಕೀತ್ ಸಿಕ್ವೇರಾ ಮತ್ತು ರೋಚೆಲ್ ರಾವ್ ಮಾತನಾಡಿ, "ಇಲ್ಲಿ ಯಾವುದೇ ಭಯವಿಲ್ಲ. ನಾವು ಊಟ ಮಾಡಲು ಸ್ವಲ್ಪ ಸಮಯ ಹೊರಗೆ ಹೋಗಿದ್ದೆವು. ಎಲ್ಲವೂ ಶಾಂತವಾಗಿ ಕಾಣುತ್ತಿದೆ. ಯುಎಇ ಸರ್ಕಾರವು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಿದೆ ಎಂದಿದ್ದಾರೆ.
ಬರ್ಮಿಂಗ್ಹ್ಯಾಮ್ಗೆ ಪ್ರಯಾಣಿಸುತ್ತಿದ್ದಾಗ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನಿರೀಕ್ಷಿತವಾಗಿ ಸಿಲುಕಿದ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಕೂಡ ಒಂದು ಭಯಾನಕ ಕ್ಷಣವನ್ನು ನೆನಪಿಸಿಕೊಂಡರು. ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಅವರು, "ಈ ಅಗ್ನಿಪರೀಕ್ಷೆ ಮುಂದುವರಿಯುತ್ತಲೇ ಇದೆ. ಪ್ರತಿ ಗಂಟೆ ಕಳೆದಂತೆ ಪರಿಸ್ಥಿತಿ ಹೆಚ್ಚು ಭಯಾನಕವಾಗುತ್ತಿದೆ. ಕೆಲವು ಗಂಟೆಗಳ ಹಿಂದೆ, ನಾವು ವಿಮಾನ ನಿಲ್ದಾಣದೊಳಗೆ ಆಶ್ರಯ ಪಡೆದಿದ್ದ ಪ್ರದೇಶದ ಬಳಿ ಸ್ಫೋಟ ಸಂಭವಿಸಿದೆ" ಎಂದು ಹೇಳಿದ್ದಾರೆ.
ಮಧ್ಯಪ್ರಾಚ್ಯದಾದ್ಯಂತ ಸಿಲುಕಿರುವ ಕನ್ನಡಿಗರಲ್ಲಿ ಹೆಚ್ಚುತ್ತಿರುವ ಕಳವಳವನ್ನು ಉಲ್ಲೇಖಿಸಿ, ಕರ್ನಾಟಕ ಸರ್ಕಾರವು ಕೇಂದ್ರದೊಂದಿಗೆ ಸಮಸ್ಯೆಯನ್ನು ಔಪಚಾರಿಕವಾಗಿ ಮುಟ್ಟಿಸಿದ ಮೊದಲ ಸರ್ಕಾರಗಳಲ್ಲಿ ಒಂದಾಗಿದೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ವಿದೇಶಾಂಗ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ವಿವರವಾದ ಸಂವಹನದಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದಾರೆ.
ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ನೇರವಾಗಿ ಮನವಿ ಮಾಡಿದ್ದಾರೆ. "ಉದ್ವಿಗ್ನತೆಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಪಂಜಾಬಿಗಳು ಮತ್ತು ಇತರ ಭಾರತೀಯರು ಯುದ್ಧದಂತಹ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ಹೆಚ್ಚು ಪರಿಣಾಮ ಬೀರುವ ದೇಶಗಳಿಂದ ಎಲ್ಲಾ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ಪ್ರಧಾನಿಗೆ ಮನವಿ ಮಾಡುತ್ತೇನೆ" ಎಂದು ಅವರು ಹೇಳಿದ್ದಾರೆ.
ಅಜೆರ್ಬೈಜಾನ್ನಿಂದ ಶಾರ್ಜಾ ಮೂಲಕ ಕುವೈತ್ಗೆ ಹೋಗುತ್ತಿದ್ದ ವಿಮಾನವು ವಾಯುಪ್ರದೇಶ ಮುಚ್ಚಿದ್ದರಿಂದ ಬೇರೆಡೆಗೆ ಶಿಫ್ಟ್ ಮಾಡಲಾಗಿದ್ದು, ಪಾಲಕ್ಕಾಡ್ನ ಒಂದು ಕುಟುಂಬ ಸೇರಿದಂತೆ ಎಂಟು ಜನ ಭಾರತೀಯರು ಕರಾಚಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.
"ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ವಾಯುಪ್ರದೇಶ ಸ್ಥಗಿತಗೊಂಡ ಕಾರಣ ವಿಮಾನವು ಕರಾಚಿಯಲ್ಲಿ ಇಳಿಯಬೇಕಾಯಿತು. ನಾವು ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರನ್ನು ಸುರಕ್ಷಿತವಾಗಿ ಮರಳಿ ಕರೆತರುವ ಪ್ರಯತ್ನಗಳು ನಡೆಯುತ್ತಿವೆ" ಎಂದು ನೋರ್ಕಾ ರೂಟ್ಸ್ನ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ: ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತನಾಡಿದ್ದಾರೆ. "ಈ ಕಷ್ಟದ ಸಮಯದಲ್ಲಿ ಭಾರತ ಯುಎಇಯೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತದೆ. ದಾಳಿಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಜೀವಹಾನಿಗೆ ಸಂತಾಪ ಸೂಚಿಸುತ್ತೇವೆ. ನಾವು ಉದ್ವಿಗ್ನತೆ ಶಮನ, ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಬೆಂಬಲಿಸುತ್ತೇವೆ" ಎಂದಿದ್ದಾರೆ.
ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿರುವ ಭಾರತೀಯರ ಸಂಖ್ಯೆ
| ದೇಶ | ಅನಿವಾಸಿ ಭಾರತೀಯರು | ಭಾರತೀಯ ಮೂಲದವರು | ಒಟ್ಟು |
| ಬಹ್ರೇನ್ | 323,908 | 3,899 | 327,807 |
| ಸೌದಿ ಅರೇಬಿಯಾ | 2,460,603 | 2,906 | 2,463,509 |
| ಕತಾರ್ | 835,175 | 1,609 | 836,784 |
| ಯುಎಇ | 3,554,274 | 14,574 | 3,568,848 |
| ಕುವೈತ್ | 993,284 | 2,244 | 995,528 |
| ಒಮನ್ | 684,771 | 1,864 | 686,635 |
| ಇರಾನ್ | 10,320 | 445 | 10,765 |
| ಇಸ್ರೇಲ್ | 20,000 | 85,000 | 105,000 |
ಇದನ್ನೂ ಓದಿ: VIDEO- ಅಮೆರಿಕ - ಇಸ್ರೇಲ್ ಮೇಲೆ ಹಾರಿಸಲು ಸನ್ನದ್ಧವಾಗಿಟ್ಟ ಡ್ರೋನ್, ಕ್ಷಿಪಣಿಗಳ ವಿಡಿಯೋ ಹಂಚಿಕೊಂಡ ಇರಾನ್

