ಟಿಟಹರಿ ಪಕ್ಷಿಯ ಮೊಟ್ಟೆಗಳಿಂದ ಮಾನ್ಸೂನ್ ಮುನ್ಸೂಚನೆ: ಉತ್ತಮ - ದೀರ್ಘಕಾಲೀನ ಮಳೆಯ ಭವಿಷ್ಯವಾಣಿ!; ಏನಿದು ನಾಲ್ಕು ಮೊಟ್ಟೆಗಳ ಕಥೆ?
ಸಾಮಾನ್ಯವಾಗಿ ಈ ಪಕ್ಷಿ ಮೂರು ಮೊಟ್ಟೆಗಳನ್ನು ಇಡುತ್ತದೆ. ಆದರೆ, ನಾಲ್ಕು ಮೊಟ್ಟೆಗಳ ಸಮೂಹ ಅಪರೂಪದ್ದಾಗಿದೆ ಎಂದು ದಕ್ಷಿಣ ಪನ್ನಾ ವನ್ಯಮಂಡಲದ ಡಿಎಫ್ಒ ಅನುಪಮ್ ಶರ್ಮಾ ಹೇಳಿದ್ದಾರೆ.

Published : May 30, 2026 at 10:04 PM IST
|Updated : May 30, 2026 at 10:47 PM IST
ಪನ್ನಾ, ಮಧ್ಯಪ್ರದೇಶ: ದಕ್ಷಿಣ ಪನ್ನಾ ವನ್ಯಮಂಡಲದ ರೈಪುರಾ ರೇಂಜ್ನ ಭರತಲಾ ವ್ಯಾಪ್ತಿಯ ಝಿರಿಯಾ ಸಮೀಪ ಟಿಟಹರಿ (Red-wattled Lapwing) ಪಕ್ಷಿಯ ಅಪರೂಪದ ನಾಲ್ಕು ಮೊಟ್ಟೆಗಳ ಗೂಡು ಪತ್ತೆಯಾಗಿದೆ.
ಸಾಮಾನ್ಯವಾಗಿ ಟಿಟಹರಿ ಅಥವಾ ಟಿಟ್ಟಿಭ ಪಕ್ಷಿಯು ಮೂರು ಮೊಟ್ಟೆಗಳನ್ನು ಇಡುತ್ತದೆ. ಆದರೆ, ನಾಲ್ಕು ಮೊಟ್ಟೆಗಳ ಸಮೂಹವನ್ನು ಕಾಣುವುದು ತುಸು ಅಪರೂಪ. ತೆರೆದ ಬಂಡೆ ಮತ್ತು ಕಲ್ಲುಗಳಿಂದ ಕೂಡಿದ ಪ್ರದೇಶದಲ್ಲಿ ಯಾವುದೇ ಸಾಂಪ್ರದಾಯಿಕ ಗೂಡು ನಿರ್ಮಿಸದೆಯೇ ಇಡಲಾಗಿರುವ ಈ ಮೊಟ್ಟೆಗಳು ಪ್ರಕೃತಿಯ ಅದ್ಭುತ ಸೃಷ್ಟಿಯನ್ನು ಅನಾವರಣಗೊಳಿಸಿದೆ.

ಮೊಟ್ಟೆಗಳ ಬಣ್ಣ ಮತ್ತು ವಿನ್ಯಾಸವು ಸುತ್ತಲಿನ ಮಣ್ಣು ಮತ್ತು ಕಲ್ಲುಗಳೊಂದಿಗೆ ಚೆನ್ನಾಗಿ ಬೆರೆತುಹೋಗಿರುವುದರಿಂದ ಅವುಗಳನ್ನು ಗುರುತಿಸುವುದೇ ಕಷ್ಟಕರ. ಇದು ಮೊಟ್ಟೆಗಳಿಗೆ ಸಹಜ ರಕ್ಷಣೆಯನ್ನು ಒದಗಿಸುತ್ತದೆ.
ಡಿಎಫ್ಒ ಪ್ರತಿಕ್ರಿಯೆ: ರೈಪುರಾ ರೇಂಜ್ನ ಭರತಲಾ ಬೀಟ್ನಲ್ಲಿ ಝಿರಿಯಾ ಸಮೀಪ ರೆಡ್-ವಾಟಲ್ಡ್ ಲ್ಯಾಪ್ವಿಂಗ್ (ಟಿಟಹರಿ) ಮೊಟ್ಟೆಗಳು ಪತ್ತೆಯಾಗಿವೆ. ಸಾಮಾನ್ಯವಾಗಿ ಈ ಪಕ್ಷಿ ಮೂರು ಮೊಟ್ಟೆಗಳನ್ನು ಇಡುತ್ತದೆ. ಆದರೆ, ನಾಲ್ಕು ಮೊಟ್ಟೆಗಳ ಸಮೂಹ ಅಪರೂಪದ್ದಾಗಿದೆ ಎಂದು ದಕ್ಷಿಣ ಪನ್ನಾ ವನ್ಯಮಂಡಲದ ಡಿಎಫ್ಒ ಅನುಪಮ್ ಶರ್ಮಾ ಹೇಳಿದ್ದಾರೆ.

ಸ್ಥಳೀಯ ನಂಬಿಕೆ ಪ್ರಕಾರ ಮೊಟ್ಟೆಗಳ ಸಂಖ್ಯೆ ಮಳೆಯ ಸೂಚಕವಂತೆ: ಸ್ಥಳೀಯ ಗ್ರಾಮಸ್ಥರಲ್ಲಿ ಬಹುಕಾಲದಿಂದ ಒಂದು ಆಸಕ್ತಿಕರ ನಂಬಿಕೆ ಪ್ರಚಲಿತದಲ್ಲಿದೆ. ಟಿಟಹರಿ ಇಡುವ ಮೊಟ್ಟೆಗಳ ಸಂಖ್ಯೆಯು ಮುಂದಿನ ವರ್ಷದ ಮಳೆಯ ಅವಧಿಯನ್ನು ಸೂಚಿಸುತ್ತದೆ ಎಂಬುದು ಇಲ್ಲಿನವರ ಬಲವಾದ ನಂಬಿಕೆ. ನಾಲ್ಕು ಮೊಟ್ಟೆಗಳಿದ್ದಲ್ಲಿ ಉತ್ತಮ ಮತ್ತು ದೀರ್ಘಕಾಲೀನ ಮಳೆಯಾಗುವ ಸಾಧ್ಯತೆ ಎಂದು ಭಾವಿಸಲಾಗುತ್ತದೆ.
ಈ ನಂಬಿಕೆಗೆ ಇದುವರೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲವಾದರೂ, ಇದು ಲೋಕಜ್ಞಾನ ಮತ್ತು ಪ್ರಕೃತಿ ಅವಲೋಕನದ ಶ್ರೀಮಂತ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ಈ ವರ್ಷ ಝಿರಿಯಾ ಪ್ರದೇಶದಲ್ಲಿ ನಾಲ್ಕು ಮೊಟ್ಟೆಗಳ ಪತ್ತೆಯಾಗಿರುವುದು ಸ್ಥಳೀಯ ಜನರು ಮತ್ತು ವನ್ಯಾಧಿಕಾರಿಗಳ ನಡುವೆ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.

ವನ್ಯಾಧಿಕಾರಿಗಳ ಪ್ರಕಾರ, ಇಂತಹ ಸಾಂಪ್ರದಾಯಿಕ ಅನುಭವಗಳನ್ನು ವ್ಯವಸ್ಥಿತವಾಗಿ ದಾಖಲಿಸಿ ದೀರ್ಘಕಾಲೀನ ಅಧ್ಯಯನ ನಡೆಸಿದಲ್ಲಿ ಭವಿಷ್ಯದಲ್ಲಿ ಆಸಕ್ತಿಕರ ನಿರ್ಣಯಗಳಿಗೆ ದಾರಿ ಮಾಡಿಕೊಡಬಹುದು.
ಜಲಸಂರಕ್ಷಣೆ ಕಾರ್ಯದ ಪರಿಣಾಮವಿದು: ದಕ್ಷಿಣ ಪನ್ನಾ ವನ್ಯಮಂಡಲವು ‘ಜಲಗಂಗಾ ಸಂವರ್ಧನ’ ಅಭಿಯಾನದಡಿ ಝಿರಿಯಾಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯಗಳನ್ನು ಕೈಗೊಂಡಿದೆ. ಇದರ ಪರಿಣಾಮವಾಗಿ ಈ ಪ್ರದೇಶಗಳಲ್ಲಿ ಪಕ್ಷಿಗಳು ಮತ್ತು ಇತರ ವನ್ಯಜೀವಿಗಳ ಚಟುವಟಿಕೆಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ.
ಝಿರಿಯಾ ಪುನರುಜ್ಜೀವನ ಕಾರ್ಯವನ್ನು ವನ್ಯರಕ್ಷಕ ಮತ್ತು ಬೀಟ್ ಪ್ರಭಾರಿ ರಜನೀಶ್ ಚೌರಸಿಯಾ ಅವರು ನಿರ್ವಹಿಸುತ್ತಿದ್ದಾರೆ. ಇವರು ಹೇಳಿರುವ ಪ್ರಕಾರ, ಟಿಟಹರಿ ಮತ್ತು ಇತರ ಸೂಕ್ಷ್ಮ ಪಕ್ಷಿಗಳ ಉಪಸ್ಥಿತಿಯು ಪ್ರಕೃತಿ ನಿವಾಸ ಮತ್ತು ಜಲಸಂಪನ್ಮೂಲಗಳು ಮತ್ತೆ ಜೀವಂತಗೊಳ್ಳುತ್ತಿವೆ ಎಂಬ ಸಕಾರಾತ್ಮಕ ಸಂಕೇತವಾಗಿದೆ. ಈ ಅಪರೂಪದ ಘಟನೆ ಪ್ರಕೃತಿ ಮತ್ತು ಸ್ಥಳೀಯ ಜನರ ನಡುವಿನ ಆಳವಾದ ಸಂಬಂಧವನ್ನು ಎತ್ತಿ ತೋರಿಸುತ್ತದೆ.
ಇದನ್ನೂ ಓದಿ:
ಜೂನ್ 3ರವರೆಗೆ ದೇಶದ ಹಲವೆಡೆ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

