ರಾಮ ಮಂದಿರ ಕಾಣಿಕೆ ಕಳ್ಳತನ ಕೇಸ್ ಸಿಬಿಐಗೆ ನೀಡಿ: ಸುಪ್ರೀಂ ಕೋರ್ಟ್ಗೆ ಆರ್ಜೆಡಿ ಸಂಸದ ಅರ್ಜಿ
ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ. ಈ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿದ ಆರ್ಜೆಡಿ. ಸುಪ್ರೀಂ ಕೋರ್ಟ್ ನಿಗಾದಲ್ಲಿ ತನಿಖೆ ನಡೆಸಲು ಆಗ್ರಹ.

Published : July 4, 2026 at 5:21 PM IST
ನವದೆಹಲಿ: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ನಡೆದ ಹುಂಡಿ ಹಣ ಕಳವು ಪ್ರಕರಣವನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ನೀಡಬೇಕು ಎಂದು ಕೋರಿ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಸಂಸದ ಸುಧಾಕರ್ ಸಿಂಗ್ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಯಾದ 2020ರ ಫೆಬ್ರುವರಿ 5 ರಿಂದ ಇದುವರೆಗೆ ಸ್ವೀಕರಿಸಲಾದ ಹಣ ಮತ್ತು ಅಮೂಲ್ಯ ವಸ್ತುಗಳ ರೂಪದಲ್ಲಿರುವ ಎಲ್ಲಾ ದೇಣಿಗೆಗಳ ಸಂಪೂರ್ಣ ವಿವರವನ್ನು ನ್ಯಾಯಾಲಯದ ಮುಂದೆ ಮಂಡಿಸಲು ಟ್ರಸ್ಟ್ಗೆ ನಿರ್ದೇಶನ ನೀಡಬೇಕು ಎಂದೂ ಅವರು ಅರ್ಜಿಯಲ್ಲಿ ವಿನಂತಿಸಿದ್ದಾರೆ.
ಎಲ್ಲ ವ್ಯವಹಾರದ ಮಾಹಿತಿ ನೀಡಿ: ವಕೀಲರಾದ ಸತ್ಯಂ ಸಿಂಗ್ ರಜಪೂತ್ ಮತ್ತು ಜಸ್ವಂತಿ ಎ. ಅವರ ಮೂಲಕ ಸಲ್ಲಿಕೆಯಾಗಿರುವ ಈ ಅರ್ಜಿಯು, ರಾಮ ಮಂದಿರದ ಕೋಟ್ಯಂತರ ಭಕ್ತರ ಕಾಣಿಕೆಗಳ ರಕ್ಷಣೆ ಹಾಗೂ ದೇಶದ ಅತ್ಯಂತ ಪೂಜನೀಯ ಧಾರ್ಮಿಕ ಸಂಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಅರ್ಜಿಯ ವಿಚಾರಣೆ ಮತ್ತು ಈ ಕುರಿತು ನಡೆಯಬೇಕಾದ ತನಿಖೆಯು ಅಗತ್ಯವಾಗಿದೆ ಎಂದು ಪ್ರತಿಪಾದಿಸಲಾಗಿದೆ.
ಭಕ್ತರ ಕಾಣಿಕೆಗಳ ನಿರ್ವಹಣೆಗೆ ಸಂಬಂಧಿಸಿದ ಆರೋಪಗಳ ತನಿಖೆಯು ನಿಷ್ಪಕ್ಷಪಾತ, ಸ್ವತಂತ್ರ ಮತ್ತು ದೇಶದ ಜನರಲ್ಲಿ ವಿಶ್ವಾಸ ಮೂಡಿಸುವಂತಿರಲು ಸಾಂವಿಧಾನಿಕ ಸುರಕ್ಷತಾ ಕ್ರಮಗಳ ಅಗತ್ಯವಿದೆ ಎಂದು ಅರ್ಜಿಯಲ್ಲಿ ಒತ್ತಿಹೇಳಲಾಗಿದೆ. ನಗದು, ಬ್ಯಾಂಕ್ ವರ್ಗಾವಣೆ, ಡಿಜಿಟಲ್ ಪಾವತಿ, ವಿದೇಶಿ ಕೊಡುಗೆಗಳು, ಚಿನ್ನ, ಬೆಳ್ಳಿ ಸೇರಿದಂತೆ ಎಲ್ಲಾ ದೇಣಿಗೆಗಳ ಲೆಕ್ಕಪತ್ರ ನಿರ್ವಹಣೆ, ರಕ್ಷಣೆ ಮತ್ತು ಬಳಕೆಯ ಎಲ್ಲ ವಿವರಗಳನ್ನು ಬಹಿರಂಗಪಡಿಸಲು ಸುಪ್ರೀಂ ಕೋರ್ಟ್ ಟ್ರಸ್ಟ್ಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಸಿಬಿಐ ಅಥವಾ ಕೋರ್ಟ್ ನೇತೃತ್ವದ ತನಿಖೆಯಾಗಲಿ: "ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ವೀಕರಿಸಿದ ದೇಣಿಗೆಗಳ ಆಡಳಿತ, ಲೆಕ್ಕಪತ್ರ ಮತ್ತು ಬಳಕೆಗೆ ಸಂಬಂಧಿಸಿದ ಆರೋಪಗಳ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲು ಸೂಕ್ತ ಆದೇಶ ಹೊರಡಿಸಬೇಕು. ಈ ತನಿಖೆಯು ಸುಪ್ರೀಂ ಕೋರ್ಟ್ನ ಮೇಲ್ವಿಚಾರಣೆಯಲ್ಲಿ ಅಥವಾ ನ್ಯಾಯಾಲಯವು ಸೂಕ್ತವೆಂದು ಭಾವಿಸುವ ಸ್ವತಂತ್ರ ವ್ಯವಸ್ಥೆಯಡಿ ನಡೆಯಬೇಕು" ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ಜೊತೆಗೆ, ಈ ದೇಣಿಗೆ ಕಳವು ಪ್ರಕರಣದ ವಿಚಾರಣೆ ಪೂರ್ಣಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗುವವರೆಗೆ ಟ್ರಸ್ಟ್ ಅನ್ನು ಎಲ್ಲಾ ಜವಾಬ್ದಾರಿಗಳಿಂದ ದೂರ ಇಡಬೇಕು. ದೇವಾಲಯದ ವ್ಯವಹಾರಗಳನ್ನು ನಿರ್ವಹಿಸಲು ತಾತ್ಕಾಲಿಕ ಉಸ್ತುವಾರಿ ಸಮಿತಿಯನ್ನು ರಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇವುಗಳನ್ನೂ ಓದಿ:

