ಮರಗಳನ್ನು ನೆಡಿ, ನೀರನ್ನು ಸಂರಕ್ಷಿಸಿ : ಮಾರ್ಗದರ್ಶಿ ಎಂಡಿ ಸೈಲಜಾ ಕಿರಣ್
ಪೆದ್ದಾಪುರಂನಲ್ಲಿರುವ ಶ್ರೀ ಪ್ರಕಾಶ್ ಸಿನರ್ಜಿ ಶಾಲೆಯ 18ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸೈಲಜಾ ಕಿರಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.

Published : January 11, 2026 at 7:48 PM IST
ಹೈದರಾಬಾದ್ : ಪರಿಸರವನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಮಾರ್ಗದರ್ಶಿ ಚಿಟ್ ಫಂಡ್ ವ್ಯವಸ್ಥಾಪಕ ನಿರ್ದೇಶಕಿ ಸೈಲಜಾ ಕಿರಣ್ ಹೇಳಿದರು. ಶನಿವಾರ ಸಂಜೆ ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪೆದ್ದಾಪುರಂನಲ್ಲಿರುವ ಶ್ರೀ ಪ್ರಕಾಶ್ ಸಿನರ್ಜಿ ಶಾಲೆಯ 18ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
'ಮಾರ್ಗದರ್ಶಿಯಲ್ಲಿ, ನಾವು 1 ಲಕ್ಷ ಮರಗಳನ್ನು ನೆಟ್ಟಿದ್ದೇವೆ. ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಜೀವಿತಾವಧಿಯಲ್ಲಿ ಕನಿಷ್ಠ 100 ಮರಗಳನ್ನು ನೆಡಬೇಕೆಂದು ನಾನು ಕರೆ ನೀಡುತ್ತೇನೆ. ಇಂದು ನೆಟ್ಟ ಒಂದು ಮರವು ದಶಕಗಳವರೆಗೆ ಪ್ರಯೋಜನಗಳನ್ನು ನೀಡುತ್ತದೆ' ಎಂದು ಹೇಳಿದರು.

ನೀರಿನ ಮಹತ್ವದ ಕುರಿತು ಮಾತನಾಡಿದ ಅವರು, 'ನೀರನ್ನು ಸಂರಕ್ಷಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. 'ನಾವು 'ನೀರು ಉಳಿಸಿ! ಜೀವ ಉಳಿಸಿ!' ಎಂಬ ಘೋಷಣೆಯನ್ನು ಕೇಳಿರುತ್ತೇವೆ. ಇದು ಕೇವಲ ಘೋಷಣೆಯೇ? ನೀರಿಲ್ಲದ ದಿನವನ್ನು ಊಹಿಸಿ. ನೀರಿಲ್ಲದಿದ್ದರೆ ಆಹಾರವಿಲ್ಲ, ಜೀವವಿಲ್ಲ. ಅದಕ್ಕಾಗಿಯೇ ಪ್ರತಿ ಹನಿಯೂ ಮುಖ್ಯವಾಗಿದೆ' ಎಂದು ಅವರು ತಿಳಿಸಿದರು.
ರಾಮೋಜಿ ಸಮೂಹ ಕಂಪನಿಗಳ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಶ್ರೀ ರಾಮೋಜಿ ರಾವ್ ಅವರು ಮೌಲ್ಯಗಳು, ಸಂಸ್ಕೃತಿ ಮತ್ತು ಸಂಬಂಧಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು ಎಂದು ಸೈಲಜಾ ಕಿರಣ್ ಇದೇ ವೇಳೆ ಹೇಳಿದರು.
ಹಿರಿಯರನ್ನು ಗೌರವಿಸುವ ಮೂಲಕ ಮತ್ತು ಅವರ ಜೀವನ ಪಾಠಗಳ ಸಾರವನ್ನು ಗ್ರಹಿಸುವ ಮೂಲಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಪೋಷಕರು, ಶಿಕ್ಷಕರು, ರೈತರು, ಸೈನಿಕರು ಮತ್ತು ನೈರ್ಮಲ್ಯ ಕಾರ್ಮಿಕರನ್ನು ಗೌರವಿಸಬೇಕು ಎಂದ ಶೈಲಜಾ ಕಿರಣ್, 'ಶಿಕ್ಷಣವು ನಮಗೆ ಹೇಗೆ ಗಳಿಸುವುದು ಎನ್ನುವುದಕ್ಕಿಂತ ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತದೆ' ಎಂದು ಪ್ರತಿಪಾದಿಸಿದರು.
ಶ್ರೀ ಪ್ರಕಾಶ್ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಕೆ. ಕೇಶವರಾವ್ ಮತ್ತು ಶ್ರೀ ಪ್ರಕಾಶ್ ಸಿನರ್ಜಿ ಶಾಲೆಯ ನಿರ್ದೇಶಕ ಸಿ. ಹೆಚ್. ವಿಜಯಪ್ರಕಾಶ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ಕೊಚ್ಚಿಯ ಟ್ರಾವೆಲ್ ಮಾರ್ಟ್ನಲ್ಲಿ ರಾಮೋಜಿ ಫಿಲ್ಮ್ ಸಿಟಿ: ಚಿತ್ರನಗರಿ ಬಗ್ಗೆ ಜನರಲ್ಲಿ ಆಸಕ್ತಿ

