ಟೆಹ್ರಾನ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷಿತ ಸ್ಥಳಾಂತರಕ್ಕೆ ಮುಂದಾದ ರಾಯಭಾರ ಕಚೇರಿ
ಇರಾನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಕೋಮ್ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ರಾಯಭಾರ ಕಚೇರಿಯ ಈ ಸ್ಥಳಾಂತರಕ್ಕೆ ನಿರಾಕರಿಸಿದ ಕೆಲವೇ ಸಂಖ್ಯೆಯ ವಿದ್ಯಾರ್ಥಿಗಳು ಮಾತ್ರ ಟೆಹ್ರಾನ್ನಲ್ಲಿ ಉಳಿದಿದ್ದಾರೆ.

Published : March 3, 2026 at 4:30 PM IST
ಟೆಹ್ರಾನ್ (ಇರಾನ್): ಇರಾನ್ನಲ್ಲಿ ಉಂಟಾಗಿರುವ ಯುದ್ದ ಪರಿಸ್ಥಿತಿ ಹಿನ್ನೆಲೆಯಲ್ಲಿ ಭಾರತದ ರಾಯಭಾರಿ ಕಚೇರಿ ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ರಕ್ಷಣೆಗೆ ಮುಂದಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಟೆಹ್ರಾನ್ ಹೊರವಲಯದಲ್ಲಿನ ಸುರಕ್ಷಿತ ಸ್ಥಳಗಳಿಗೆ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಾರಿಗೆ, ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಕೆಲವು ವಿದ್ಯಾರ್ಥಿಗಳ ಮೂಲಗಳು ತಿಳಿಸಿದಂತೆ, ವಿದ್ಯಾರ್ಥಿಗಳನ್ನು ಕೋಮ್ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ರಾಯಭಾರ ಕಚೇರಿಯ ಈ ಸ್ಥಳಾಂತರಕ್ಕೆ ನಿರಾಕರಿಸಿದ ಕೆಲವೇ ಸಂಖ್ಯೆಯ ವಿದ್ಯಾರ್ಥಿಗಳು ಮಾತ್ರ ಟೆಹ್ರಾನ್ನಲ್ಲಿ ಉಳಿದಿದ್ದಾರೆ. ಅವರಿಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸುರಕ್ಷಿತವಾಗಿ ಇರುವಂತೆ ಸೂಚಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
— India in Iran (@India_in_Iran) March 3, 2026
ಅಮೆರಿಕ ಮತ್ತು ಇಸ್ರೇಲ್ನ ಹೊಸ ಮಿಲಿಟರಿ ದಾಳಿಗಳಿಂದಾಗಿ ಪರ್ಷಿಯನ್ ಕೊಲ್ಲಿಯಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಇರಾನ್ನಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಹಾಗೂ ಮನೆಗಳಿಂದ ಹೊರಗೆ ಬಾರದಂತೆ ಭಾರತೀಯ ರಾಯಭಾರ ಕಚೇರಿ ಸಲಹೆ ನೀಡಿದೆ.
ಸ್ಥಳಾಂತರಕ್ಕೆ ನಿರಾಕರಿಸಿ ಇರಾನ್ನಲ್ಲಿಯೇ ಇರುವ ವಿದ್ಯಾರ್ಥಿಗಳು ಮತ್ತು ಭಾರತೀಯ ಪ್ರಜೆಗಳು ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು. ಸಾಕಷ್ಟು ಎಚ್ಚರಿಕೆಯಿಂದ ವರ್ತಿಸಿ, ಇರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ತಿಳಿಸಿದ್ದು, ಸಹಾಯವಾಣಿಯ ಸಂಖ್ಯೆಯನ್ನು ಕೂಡಾ ಹಂಚಿಕೊಳ್ಳಲಾಗಿದೆ.
ಇರಾನ್ನಲ್ಲಿ ಸುಮಾರು 1,200 ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ ಹೆಚ್ಚಿನವರು ಎಂಬಿಬಿಎಸ್ ಮತ್ತು ಎಂಜಿನಿಯರಿಂಗ್ ಕಲಿಕೆಯಲ್ಲಿ ತೊಡಗಿದ್ದು, ಇರಾನ್ನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಸೇರಿದಂತೆ ಸುಮಾರು 9,000 ಭಾರತೀಯರು ಇರಾನ್ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸ್ಥಳಾಂತರ ಪ್ರಕ್ರಿಯೆಯಲ್ಲಿ ಸೂಕ್ತ ಸಮಯದಲ್ಲಿ ಬೆಂಬಲ ಮತ್ತು ಪರಿಣಾಮಕಾರಿ ಸಮನ್ವಯಕ್ಕಾಗಿ ನಾವು ರಾಯಭಾರ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ ಎಂದು ಅಖಿಲ ಭಾರತ ವೈದ್ಯಕೀಯ ವಿದ್ಯಾರ್ಥಿಗಳ ಸಂಘ ತಿಳಿಸಿದೆ. ಜೊತೆಗೆ ಸಂಘವು, ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ನಡುವೆ ಮಧ್ಯಪ್ರಾಚ್ಯದ ಇತರ ದೇಶಗಳಾದ ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಗಳ ಮೇಲೆ ಇರಾನ್ ದಾಳಿಗಳನ್ನು ಮಾಡುತ್ತಿರುವುದರಿಂದ ಮಾರ್ಚ್ 5 ರಿಂದ ನಡೆಯಬೇಕಿದ್ದ 10, 12 ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಲು ಸಿಬಿಎಸ್ಸಿ ಮಂಡಳಿ ನಿರ್ಧರಿಸಿದೆ ಎಂದು CBSE ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ಹೇಳಿದ್ದಾರೆ.
ಇರಾನ್ನಲ್ಲಿ 787 ಸಾವು: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಇಲ್ಲಿಯವರೆಗೆ 787 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ಎಕ್ಸ್ ಜಾಲತಾಣದಲ್ಲಿ ತಿಳಿಸಿದೆ.
ಇವುಗಳನ್ನೂ ಓದಿ: ಇರಾನ್ v/s ಇಸ್ರೇಲ್, ಅಮೆರಿಕ ಸಂಘರ್ಷ: ಮಧ್ಯಪ್ರಾಚ್ಯದಲ್ಲಿ ಸಿಬಿಎಸ್ಇ 10, 12ನೇ ಕ್ಲಾಸ್ ಪರೀಕ್ಷೆಗಳ ಮುಂದೂಡಿಕೆ
ಗಲ್ಫ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯಾರಂಭ; ಇಂಡಿಗೋ, ಸ್ಪೈಸ್ಜೆಟ್ ವಿಶೇಷ ವಿಮಾನ ಹಾರಾಟ

