ಏಳು ಸಮುದ್ರಗಳನ್ನು ದಾಟಿ ಹಿರಾಕುಡ್ ಜಲಾಶಯಕ್ಕೆ ಹಾರಿ ಬರುವ ವಿದೇಶಿ ಪಕ್ಷಿಗಳು; ಅವುಗಳ ವಲಸೆಗೆ ಕಾರಣ ಹೀಗಿದೆ
ಚಳಿಗಾಲದಲ್ಲಿ ರಷ್ಯಾ, ಮಧ್ಯ ಏಷ್ಯಾ, ಮಂಗೋಲಿಯಾ ಮತ್ತು ಯುರೋಪಿನಿಂದ ಹಿರಾಕುಡ್ ಜಲಾಶಯಕ್ಕೆ ಹಾರಿಕೊಂಡು ಬರುತ್ತಿದ್ದು, ಕಳೆದ ಮೂರು ವರ್ಷಗಳಿಂದ ಅವುಗಳ ಸಂಖ್ಯೆಯಲ್ಲಿ ಹೆಚ್ಚುತ್ತಿದೆ.

Published : January 9, 2026 at 8:45 PM IST
|Updated : January 10, 2026 at 8:59 AM IST
ವರದಿ: ಬಾದ್ಶಾ ಜುಸ್ಮಾನ್ ರಾಣಾ
ಸಂಬಲ್ಪುರ (ಒಡಿಶಾ): ಜಿಲ್ಲೆಯ ಹಿರಾಕುಡ್ ಜಲಾಶಯವು ಚಳಿಗಾಲದಲ್ಲಿ ವಲಸೆ ಪಕ್ಷಿಗಳಿಗೆ ಸ್ವರ್ಗವಾಗುತ್ತದೆ. ಈ ಪ್ರದೇಶವು ಸುರಕ್ಷಿತ ಆವಾಸಸ್ಥಾನ ಆಗಿದ್ದರಿಂದ ಪ್ರತಿ ವರ್ಷ, ಚಳಿಗಾಲಕ್ಕೆ ಲಕ್ಷಾಂತರ ವಿದೇಶಿ ಪಕ್ಷಿಗಳು ಏಳು ಸಮುದ್ರಗಳನ್ನು ದಾಟಿ ಇಲ್ಲಿಗೆ ಹಾರಿ ಬರುತ್ತವೆ. ಕಳೆದ 3 ವರ್ಷಗಳಿಂದ ಈ ಸಂಖ್ಯೆಯು ಹೆಚ್ಚಾಗುತ್ತಿರುವುದು ಪಕ್ಷಿ ಪ್ರೇಮಿಗಳಿಗೆ ಖುಷಿ ತರಿಸಿದೆ. ಸದ್ಯ ಹಿರಾಕುಡ್ ಜಲಾಶಯವು ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ಪಕ್ಷಿಗಳಿಗೆ ಮೊದಲ ಆಯ್ಕೆಯ ಸ್ಥಳವಾಗಿ ಹೊಸ ಗುರುತನ್ನು ಪಡೆದುಕೊಂಡಿದೆ.
ಕಳೆದ 3 ವರ್ಷಗಳಿಂದ, ಚಳಿಗಾಲ ಬಂತೆಂದರೆ ಸಾಕು ಇಲ್ಲಿಗೆ ಬರುವ ವಲಸೆ ಹಕ್ಕಿಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಬಗ್ಗೆ ದಾಖಲೆಗಳು ತೋರಿಸುತ್ತವೆ. ವಿದೇಶಿ ಪಕ್ಷಿಗಳ ಸಂಖ್ಯೆ ಹೆಚ್ಚಿರುವುದು ಮಾತ್ರವಲ್ಲದೇ, ಬೇರೆ ಬೇರೆ ಜಾತಿಯ ಪಕ್ಷಿಗಳು ಸಹ ಇಲ್ಲಿಗೆ ಬರುತ್ತಿವೆ.
ಸಂಬಲ್ಪುರದ ಹಿರಾಕುಡ್ ಜಲಾಶಯವು ವಲಸೆ ಹಕ್ಕಿಗಳ ಸ್ವರ್ಗವಾಗಿ ಮಾರ್ಪಟ್ಟಿದೆ, ಮಧ್ಯ ಏಷ್ಯಾ, ಮಂಗೋಲಿಯಾ ಮತ್ತು ಸೈಬೀರಿಯಾದಂತಹ ದೂರದ ದೇಶಗಳಿಂದ 112 ಪ್ರಭೇದಗಳಿಗೆ ಸೇರಿದ 3.7 ಲಕ್ಷಕ್ಕೂ ಹೆಚ್ಚು ವಲಸೆ ಹಕ್ಕಿಗಳು ಇಲ್ಲಿಗೆ ಬರುತ್ತಿವೆ. ಹಿರಾಕುಡ್ನ ವಿಶಾಲವಾದ ಜೌಗು ಪ್ರದೇಶ, ಸಮೃದ್ಧ ಆಹಾರ, ಸುರಕ್ಷಿತ ಮತ್ತು ಮುಕ್ತ ಬೇಟೆಗಾಗಿ ಹಕ್ಕಿಗಳು ಇಲ್ಲಿಗೆ ಬರುವುದುಂಟು ಎಂಬುವುದು ಗಮನಾರ್ಹ.
ವಿದೇಶಿ ಪಕ್ಷಿಗಳ ನೆಚ್ಚಿನ ತಾಣ: ಹಿರಾಕುಡ್ ವನ್ಯಜೀವಿ ಇಲಾಖೆಯ ಮಾಹಿತಿಯ ಪ್ರಕಾರ, 2023ರಲ್ಲಿ, 108 ಜಾತಿಗಳ 3,16,676 ಪಕ್ಷಿಗಳು ಜಲಾಶಯಕ್ಕೆ ಭೇಟಿ ನೀಡಿದ್ದರೆ, 2024 ರಲ್ಲಿ, 113 ಜಾತಿಗಳ 3,42,345 ಪಕ್ಷಿಗಳು ಭೇಟಿ ನೀಡಿವೆ. 2025ರಲ್ಲಿ, 122 ಜಾತಿಗಳ 3,77,732 ಪಕ್ಷಿಗಳು ಭೇಟಿ ನೀಡಿವೆ. ಇದರಲ್ಲಿ ಭಾರತೀಯ ಪಕ್ಷಿಗಳು ಹಾಗೂ ರಷ್ಯಾ, ಮಂಗೋಲಿಯಾ, ಮಧ್ಯ ಏಷ್ಯಾ, ಯುರೋಪ್ ಮತ್ತು ಟಿಬೆಟ್ನ ಪಕ್ಷಿಗಳು ಸೇರಿವೆ.
ಸ್ಥಳೀಯ ಪಕ್ಷಿಗಳಲ್ಲಿ Egrets, Herons, Cormorants, Lapwings ಸೇರಿದಂತೆ ಮುಂತಾದ ಪಕ್ಷಿಗಳು ಇಲ್ಲಿಗೆ ಬರುತ್ತವೆ. Pintail, Shoveler, Teal, Pochard, Bar Headed Goose, Godwits, Sandpipers, Snipes, Brown Headed Gull, Whiskered Terns ಸೇರಿದಂತೆ ಮುಂತಾದ ವಿದೇಶಿ ಪಕ್ಷಿಗಳು ರಷ್ಯಾ, ಮಧ್ಯ ಏಷ್ಯಾ, ಮಂಗೋಲಿಯಾ, ಟಿಬೆಟ್ ಮತ್ತು ಯುರೋಪ್ನಂತಹ ದೇಶಗಳಿಂದ ಇಲ್ಲಿಗೆ ಬರುತ್ತಿವೆ.

ವಿದೇಶಿ ಪಕ್ಷಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ: ಇಲ್ಲಿ ವರ್ಷದಿಂದ ವರ್ಷಕ್ಕೆ ವಿದೇಶಿ ಪಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಬಲವಾದ ಕಾರಣ ಇದೆ. ಪಕ್ಷಿ ತಜ್ಞ ಮತ್ತು ಸಂಬಲ್ಪುರ ಪಕ್ಷಿ ನಿಗಾ ಕ್ಲಬ್ ಸದಸ್ಯ ಆಶಿಶ್ ಪ್ರಧಾನ್ ಮಾತನಾಡಿ, "ಹಿರಾಕುಡ್ ಜಲಾಶಯದ ವಿಶಾಲವಾದ ಸಿಹಿನೀರು ವಲಸೆ ಹಕ್ಕಿಗಳನ್ನು ಆಕರ್ಷಿಸುತ್ತದೆ. ಮತ್ತೊಂದೆಡೆ, ರಷ್ಯಾ, ಮಂಗೋಲಿಯಾ, ಮಧ್ಯ ಏಷ್ಯಾ ಮತ್ತು ಯುರೋಪ್ನಲ್ಲಿ, ನವೆಂಬರ್ ಮತ್ತು ಡಿಸೆಂಬರ್ನಲ್ಲಿ ತಾಪಮಾನ ತೀವ್ರವಾಗಿ ಇಳಿಯುತ್ತದೆ. ಆದ್ದರಿಂದ ವಿದೇಶಿ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಏಕೆಂದರೆ ಈ ಸಮಯದಲ್ಲಿ ಇಲ್ಲಿ ತಾಪಮಾನವು ತುಲನಾತ್ಮಕವಾಗಿ ಹೆಚ್ಚಾಗಿರುತ್ತದೆ. ಇದರ ಜೊತೆಗೆ, ಪಕ್ಷಿಗಳು ತಿನ್ನಲು ಇಲ್ಲಿ ಸಾಕಷ್ಟು ಮೀನುಗಳಿವೆ. ಮತ್ತೊಂದೆಡೆ ಪಕ್ಷಿಗಳ ಬೇಟೆ ಆಡಲು ಇಲ್ಲಿ ನಿರ್ಬಂಧಗಳಿವೆ. ಅರಣ್ಯ ಇಲಾಖೆ ದೋಣಿ ಗಸ್ತು ಮತ್ತು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ" ಎಂದು ಕೆಲವು ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯಿಂದ ರಕ್ಷಣೆ ಮತ್ತು ಜಾಗೃತಿ: ಹಿರಾಕುಡ್ ವನ್ಯಜೀವಿ ಇಲಾಖೆಯ ಡಿಎಫ್ಒ ಪ್ರಜ್ಞಾ ದಾಸ್ ಮಾತನಾಡಿ, "ರಷ್ಯಾ, ಮಂಗೋಲಿಯಾ, ಮಧ್ಯ ಏಷ್ಯಾ ಇತ್ಯಾದಿಗಳಲ್ಲಿ ತೀವ್ರ ಶೀತ ಮತ್ತು ಹಿಮಪಾತದಿಂದಾಗಿ ಈ ಪಕ್ಷಿಗಳು ಚಳಿಗಾಲದಲ್ಲಿ ಹಿರಾಕುಡ್ಗೆ ಬರುತ್ತವೆ. ಅರಣ್ಯ ಇಲಾಖೆ ಈ ಪಕ್ಷಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ಹಿರಾಕುಡ್ ಜಲಾಶಯವು 700 ಚದರ ಅಡಿ ಪ್ರದೇಶದಲ್ಲಿ ಹರಡಿಕೊಂಡಿದ್ದರೂ, ಇದು 100 ಕಿ.ಮೀ ಉದ್ದದ ತೀರವನ್ನು ಹೊಂದಿದೆ. ಮತ್ತೊಂದೆಡೆ, ಪಕ್ಷಿಗಳನ್ನು ರಕ್ಷಿಸಲು, ಅರಣ್ಯ ಇಲಾಖೆಯು ತೀರದಲ್ಲಿ ಕಾವಲುಗಾರರನ್ನು ನಿಯೋಜಿಸುತ್ತದೆ. ಅರಣ್ಯ ಇಲಾಖೆ ನೌಕರರು ಮತ್ತು ಹತ್ತಿರದ ಹಳ್ಳಿಗಳ ಜನರನ್ನು ಇದಕ್ಕಾಗಿ ನಿಯೋಜಿಸಲಾಗಿದೆ. ಹೆಚ್ಚಿನ ಪಕ್ಷಿಗಳಿರುವ ಪ್ರದೇಶಗಳಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಈ ಸಮಯದಲ್ಲಿ ಮೀನುಗಾರರಿಗೆ ನೈಲಾನ್ ಬಲೆಗಳನ್ನು ಬಳಸದಂತೆ ಸೂಚನೆ ನೀಡಲಾಗುತ್ತದೆ ಎಂದರು.

'ಬರ್ಡ್ ವಿಲೇಜ್ ಗೋವಿಂದಪುರ'ದ ಗೋಡೆಯ ಮೇಲೆ ಪಕ್ಷಿಗಳ ಚಿತ್ರ: "ಪಕ್ಷಿಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು, ಹಿರಾಕುಡ್ ಜಲಾಶಯದ ದಡದಲ್ಲಿರುವ ಹಳ್ಳಿಗಳ ಶಾಲಾ ಮಕ್ಕಳಿಗೆ ಪಕ್ಷಿಗಳ ರಕ್ಷಣೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರೊಂದಿಗೆ, ಒಡಿಶಾ - ಛತ್ತೀಸ್ಗಢ ಗಡಿಯಲ್ಲಿ ಹಿರಾಕುಡ್ ಜಲಾಶಯದ ಜೌಗು ಪ್ರದೇಶದಲ್ಲಿ ಗೋವಿಂದಪುರ ಪಕ್ಷಿ ಗ್ರಾಮವನ್ನು ಸ್ಥಾಪಿಸಲಾಗಿದೆ. ಈ ಗ್ರಾಮದಲ್ಲಿರುವವರೆಲ್ಲರೂ ಮೀನುಗಾರರು. ಆದ್ದರಿಂದ, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು, ಪ್ರತಿ ಮನೆಯ ಗೋಡೆಗಳ ಮೇಲೆ ವಿವಿಧ ಜಾತಿಯ ಪಕ್ಷಿಗಳ ಚಿತ್ರಗಳನ್ನು ಅವುಗಳ ಹೆಸರಿನೊಂದಿಗೆ ಬಿಡಿಸಲಾಗಿದೆ. ಇದರೊಂದಿಗೆ, ಗ್ರಾಮಸ್ಥರು ಸ್ಥಳೀಯ ಭಾಷೆಯಲ್ಲಿ ಈ ಪಕ್ಷಿಗಳನ್ನು ಏನು ಕರೆಯುತ್ತಾರೆ ಎಂಬುದನ್ನು ಸಹ ಚಿತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಚಿಕ್ಕ ಮಕ್ಕಳಲ್ಲಿ ಜಾಗೃತಿ ಮೂಡಿಸಲು, ಇದೇ ತಿಂಗಳ 18 ರಂದು ನಡೆಯಲಿರುವ ಹಿರಾಕುಡ್ ಪಕ್ಷಿ ಎಣಿಕೆ ಪ್ರಕ್ರಿಯೆಯಲ್ಲಿ ಶಾಲಾ ಮಕ್ಕಳನ್ನು ಸಹ ಸೇರಿಸಲಾಗುವುದು" ಎಂದು ಡಿಎಫ್ಒ ಅನ್ಸುಪ್ರಜ್ಞಾ ದಾಸ್ ಹೇಳಿದರು.
ಇದನ್ನೂ ಓದಿ: ಪುಷ್ಕರ್ ಅರಣ್ಯ ವ್ಯಾಪ್ತಿಯಲ್ಲಿ ಅಳಿವಿನಂಚಿನಲ್ಲಿರುವ 'ಹಿಮಾಲಯನ್ ಗ್ರಿಫನ್' ರಣಹದ್ದು ರಕ್ಷಣೆ

