ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಅಧ್ಯಾಯವಿರುವ NCERT ಪಠ್ಯಪುಸ್ತಕ ನಿಷೇಧಿಸಿದ ಸುಪ್ರೀಂ ಕೋರ್ಟ್: ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ
ಸೂಕ್ತ ಕ್ರಮವನ್ನು ಏಕೆ ಪ್ರಾರಂಭಿಸಬಾರದು ಎಂದು ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಶಿಕ್ಷಣ ಸಚಿವಾಲಯ ಮತ್ತು NCERT ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಅವರಿಗೆ ಸುಪ್ರೀಂ ಕೋರ್ಟ್ ಶೋ-ಕಾಸ್ ನೋಟಿಸ್ ಜಾರಿ ಮಾಡಿದೆ.


Published : February 26, 2026 at 12:43 PM IST
|Updated : February 26, 2026 at 1:05 PM IST
ನವದೆಹಲಿ: NCERT 8 ನೇ ತರಗತಿಯ ಪುಸ್ತಕ ರದ್ದತಿ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಈ ಬಗ್ಗೆ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್, ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಅಧ್ಯಾಯವಿರುವ NCERT ಪಠ್ಯಪುಸ್ತಕವನ್ನು ನಿಷೇಧಿಸಿದೆ. ಮತ್ತು ಅದರ ಎಲ್ಲಾ ಭೌತಿಕ ಪ್ರತಿಗಳನ್ನು ವಶಪಡಿಸಿಕೊಳ್ಳುವುದರ ಜೊತೆಗೆ ಡಿಜಿಟಲ್ ರೂಪಗಳನ್ನು ತೆಗೆದುಹಾಕುವಂತೆ ಆದೇಶಿಸಿದೆ.
ಗುರುವಾರ ಈ ಬಗ್ಗೆ ವಿಚಾರ ಮುಂದುವರೆಸಿದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇದು ಆಳವಾಗಿ ಬೇರೂರಿರುವ ಪಿತೂರಿ ಮತ್ತು ಉತ್ತಮವಾಗಿ ಯೋಜಿಸಿರುವ ಕೃತ್ಯ ಎಂದು ಕರೆದಿದೆ.
ನ್ಯಾಯಾಲಯದ ತಿರಸ್ಕಾರ ಕಾಯ್ದೆ ಅಥವಾ ಕಾನೂನಿನ ಯಾವುದೇ ಇತರ ನಿಬಂಧನೆಗಳ ಅಡಿ ಸೂಕ್ತ ಕ್ರಮವನ್ನು ಏಕೆ ಪ್ರಾರಂಭಿಸಬಾರದು ಎಂದು ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಶಿಕ್ಷಣ ಸಚಿವಾಲಯ ಮತ್ತು NCERT ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಅವರಿಗೆ ಸುಪ್ರೀಂ ಕೋರ್ಟ್ ಶೋ-ಕಾಸ್ ನೋಟಿಸ್ ಜಾರಿ ಮಾಡಿದೆ.
ಈ ವಿಷಯವನ್ನು ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್, ಆನ್ಲೈನ್ನಲ್ಲಿ ಲಭ್ಯವಿರುವ ಸಂಬಂಧಿತ ವಿಭಾಗದ PDF ಆವೃತ್ತಿಯನ್ನು ರದ್ದು ಮಾಡುವಂತೆ ಆದೇಶಗಳನ್ನು ಹೊರಡಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ. ತಲೆಗಳು ಉರುಳಬೇಕಾ ಎಂದು ಎಚ್ಚರಿಸುತ್ತಾ, ನ್ಯಾಯಾಲಯವು ಈ ವಿಷಯದ ಬಗ್ಗೆ ಆಳವಾದ ತನಿಖೆಗೆ ಆದೇಶಿಸಬಹುದಾಗಿದೆ ಎಂದು ಸಿಜೆಐ ಹೇಳಿದರು.
ಇದನ್ನು ಲೆಕ್ಕಾಚಾರದ ನಡೆ ಎಂದು ಕರೆದ ಸಿಜೆಐ, ಎನ್ಸಿಇಆರ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಕ್ಷಮೆಯಾಚಿಸುವ ಒಂದೇ ಒಂದು ಪದವೂ ಇಲ್ಲ ಎಂದು ಹೇಳಿದರು. ಇದು ಆಳವಾಗಿ ಬೇರೂರಿರುವ ಪಿತೂರಿ ಮತ್ತು ಉತ್ತಮವಾಗಿ ಯೋಜಿಸಲಾದ ಕೃತ್ಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪುಸ್ತಕವು ಮಾರುಕಟ್ಟೆಯಲ್ಲಿ ಇನ್ನೂ ಲಭ್ಯವಿದೆ ಮತ್ತು ಅದರ ಪ್ರತಿಯನ್ನು ತಮಗೂ ನೀಡಲಾಗಿದೆ ಎಂದು ಸಿಜೆಐ ಹೇಳಿದರು. ಮೊದಲ ನೋಟದಲ್ಲಿ, ಪುಸ್ತಕದ ವಿಷಯಗಳನ್ನು ಪರಿಶೀಲಿಸಿದಾಗ, ಸಂಸ್ಥೆಯನ್ನು ದುರ್ಬಲಗೊಳಿಸಲು ಮತ್ತು ನ್ಯಾಯಾಂಗದ ಘನತೆಯನ್ನು ಅವಮಾನಿಸುವ ಲೆಕ್ಕಾಚಾರದ ನಡೆ ಇದೆ ಎಂದು ನಮಗೆ ತೋರುತ್ತದೆ ಎಂದು ಅವರು ಹೇಳಿದರು.
ಸಾಂವಿಧಾನಿಕ ನೈತಿಕತೆ ಮತ್ತು ಮೂಲ ರಚನೆಯ ಸಿದ್ಧಾಂತವನ್ನು ಎತ್ತಿಹಿಡಿಯುವಲ್ಲಿ ಮತ್ತು ನ್ಯಾಯಾಂಗದ ಪಾತ್ರವನ್ನು ಗುರುತಿಸುವಲ್ಲಿ ಪಠ್ಯಪುಸ್ತಕವು ವಿಫಲವಾಗಿದೆ ಎಂದು ಸಿಜೆಐ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪುಸ್ತಕದಲ್ಲಿನ ಪದಗಳ ಆಯ್ಕೆಯು ಕೇವಲ ಅಜಾಗರೂಕತೆ ಅಥವಾ ನಿಷ್ಕಪಟ ದೋಷವಾಗಿರಲಾರದು ಎಂದು ನಮಗೆ ತೋರುತ್ತದೆ. ಈ ಹಂತದಲ್ಲಿ ಯಾವುದೇ ನ್ಯಾಯಸಮ್ಮತ ವಿಮರ್ಶೆಯನ್ನು ಹತ್ತಿಕ್ಕುವ ಉದ್ದೇಶದಿಂದ ಈ ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ಸಿಜೆಐ ಹೇಳಿದರು. ಪುಸ್ತಕದ ವಿಷಯಕ್ಕೆ ಸಂಬಂಧಿಸಿದಂತೆ ಗಂಭೀರವಾದ ಪರಿಹರಿಸಲಾಗದ ಹಾನಿ ಉಂಟಾಗಿದೆ ಎಂದು ಅವರು ಹೇಳಿದರು.
ಕ್ಷಮೆಯಾಚಿಸಿದ್ದ ಎನ್ಸಿಇಆರ್ಟಿ: NCERTಯ 8 ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ಎಂಬ ವಿಭಾಗವನ್ನು ಸೇರಿಸಿದ್ದಕ್ಕಾಗಿ ಭಾರತದ ಸುಪ್ರೀಂ ಕೋರ್ಟ್ ಬುಧವಾರ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ ಕೆಲವೇ ಗಂಟೆಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ಕ್ಷಮೆಯಾಚಿಸಿ ಹೇಳಿಕೆ ನೀಡಿತ್ತು. ಅದು ಆಕಸ್ಮಾತಾಗಿ ನುಸುಳಿದೆ ಎಂದು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿತ್ತು.
ಫೆಬ್ರವರಿ 24 ರಂದು ಈ ಪುಸ್ತಕದ ವಿತರಣೆಯನ್ನು ಮುಂದಿನ ಆದೇಶದವರೆಗೆ ಕಟ್ಟುನಿಟ್ಟಿನ ತಡೆಹಿಡಿಯುವಂತೆ ಇರಿಸಲು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ NCERT ಈ ತಪ್ಪಿಗೆ ವಿಷಾದಿಸುತ್ತಿದೆ ಎಂದು ಕ್ಷಮೆಯಾಚಿಸಿತ್ತು

