ಮಹಾರಾಷ್ಟ್ರದಲ್ಲಿ ಭಾರಿ ಮಳೆ: ನದಿಯಲ್ಲಿ ಕೊಚ್ಚಿಹೋದ 3 ಸಾವಿರ ಗ್ಯಾಸ್ ಸಿಲಿಂಡರ್ಗಳು! Video
ನದಿಯಲ್ಲಿ ತೇಲಿಬಂದ ಗ್ಯಾಸ್ ಸಿಲಿಂಡರ್ಗಳು- ಮಳೆ ನೀರಿಗೆ ಕೊಚ್ಚಿ ಹೋದ ಎಲ್ಪಿಜಿ ಸಿಲಿಂಡರ್ಗಳು- ಮಹಾರಾಷ್ಟ್ರದ ಪಾತಾಳಗಂಗಾ ನದಿ.

Published : July 9, 2026 at 1:43 PM IST
ರಾಯಗಢ (ಮಹಾರಾಷ್ಟ್ರ): ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಅನೇಕ ಪ್ರದೇಶಗಳು ಜಲಾವೃತವಾಗಿವೆ. ಇಲ್ಲಿ ಹರಿಯುವ ಪಾತಾಳಗಂಗಾ ನದಿಯಲ್ಲಿ ನೂರಾರು ಗ್ಯಾಸ್ ಸಿಲಿಂಡರ್ಗಳು ಕೊಚ್ಚಿ ಹೋಗಿರುವ ದೃಶ್ಯ ಬೆಳಕಿಗೆ ಬಂದಿದೆ.
ಆರಂಭದಲ್ಲಿ, ಈ ಸಿಲಿಂಡರ್ಗಳು ಎಲ್ಲಿಂದ ಬಂದವು ಎಂಬುದರ ಬಗ್ಗೆ ಗೊಂದಲವಿತ್ತು. ಈಗ ಜಿಲ್ಲಾಡಳಿತ ಈ ಬಗ್ಗೆ ಮಾಹಿತಿ ನೀಡಿದೆ. ಪನ್ವೇಲ್ ತಾಲೂಕಿನ ಚವಾಣೆಯಲ್ಲಿರುವ ಹೆಚ್ಪಿಸಿಎಲ್ ಎಲ್ಪಿಜಿ ಬಾಟ್ಲಿಂಗ್ ಸ್ಥಾವರದಿಂದ ಇವು ಪ್ರವಾಹದ ಅಬ್ಬರಕ್ಕೆ ಕೊಚ್ಚಿಕೊಂಡು ಬಂದಿವೆ. ಮಳೆ ನೀರು ಗ್ಯಾಸ್ ಘಟಕಕ್ಕೆ ನುಗ್ಗಿತ್ತು. ಇದರಿಂದ ಸಿಲಿಂಡರ್ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಇದರಲ್ಲಿ ತುಂಬಿದ ಮತ್ತು ಖಾಲಿ ಸಿಲಿಂಡರ್ಗಳೂ ಇವೆ ಎಂದು ತಿಳಿಸಿದೆ.
ಮಳೆಯ ಅಬ್ಬರ : ಮಹಾರಾಷ್ಟ್ರದ ಪಾತಾಳಗಂಗಾ ನದಿಯಲ್ಲಿ ಕೊಚ್ಚಿ ಹೋದ 3,000 ಗ್ಯಾಸ್ ಸಿಲಿಂಡರ್ಗಳು #Maharashtra #gascylinder #patalgangariver pic.twitter.com/1bx8wtRMim
— ETV Bharat Karnataka (@ETVBharatKA) July 9, 2026
ಸಿಲಿಂಡರ್ ಸಂಗ್ರಹಿಸಲು ಜನರಿಂದ ಸಾಹಸ: ನದಿ ನೀರಿನಲ್ಲಿ ತೇಲಿಬಂದ ಗ್ಯಾಸ್ ಸಿಲಿಂಡರ್ಗಳನ್ನು ಸಂಗ್ರಹಿಸಲು ಜನರು ಸಾಹಸ ಮಾಡಿದ್ದಾರೆ. ರಭಸವಾಗಿ ಹರಿಯುವ ನೀರನ್ನೂ ಲೆಕ್ಕಿಸದೆ ಹಗ್ಗದಿಂದ ಕೊಕ್ಕೆ ಹಾಕಿ ಹಿಡಿಯಲು ಪ್ರಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಕೊಚ್ಚಿಹೋದ ಸಿಲಿಂಡರ್ಗಳನ್ನು ಹೆಚ್ಪಿ ಕಂಪನಿಗೆ ವಾಪಸ್ ತಂದುಕೊಡುವಂತೆ ಜಿಲ್ಲಾಧಿಕಾರಿ ಕಿಶನ್ ಜವಾಲೆ ಜನರಲ್ಲಿ ಮನವಿ ಮಾಡಿದ್ದಾರೆ. ನದಿಯಿಂದ ಅಥವಾ ಆ ಪ್ರದೇಶದಿಂದ ಸಿಕ್ಕ HPCL ಗ್ಯಾಸ್ ಸಿಲಿಂಡರ್ಗಳನ್ನು ಸಂಗ್ರಹಿಸಿದವರು ಅವುಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬಾರದು. ತಕ್ಷಣವೇ ಅವುಗಳನ್ನು ಹೆಚ್ಪಿ ಕಂಪನಿ, ಹತ್ತಿರದ ವಿತರಕರು, ತಹಶೀಲ್ದಾರ್ ಕಚೇರಿ, ಉಪ ವಿಭಾಗೀಯ ಅಧಿಕಾರಿ ಕಚೇರಿಗೆ ತಂದು ಕೊಡಬೇಕು. ಅಂತಹ ಸಿಲಿಂಡರ್ಗಳನ್ನು ಬಳಸಿ ಜನರು ಅಪಾಯ ಮೈಮೇಲೆ ಎಳೆದುಕೊಳ್ಳಬೇಡಿ ಎಂದು ತಿಳಿಸಿದ್ದಾರೆ.
ಇವುಗಳನ್ನೂ ಓದಿ:

