ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ ನಿಧನ
ಹಿರಿಯ ಕಾಂಗ್ರೆಸಿಗ ಮತ್ತು ಕೇಂದ್ರದ ಮಾಜಿ ಸಚಿವ ಸುರೇಶ್ ಕಲ್ಮಾಡಿ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.

Published : January 6, 2026 at 9:29 AM IST
ಪುಣೆ(ಮಹಾರಾಷ್ಟ್ರ): ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಸುರೇಶ್ ಕಲ್ಮಾಡಿ (81) ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಇಂದು (ಮಂಗಳವಾರ) ಬೆಳಗ್ಗೆ 3.30ರ ಸುಮಾರಿಗೆ ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಮಗ ಮತ್ತು ಸೊಸೆ, ಇಬ್ಬರು ವಿವಾಹಿತ ಹೆಣ್ಣುಮಕ್ಕಳು ಮತ್ತು ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸುರೇಶ್ ಕಲ್ಮಾಡಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ)ನ ಮಾಜಿ ಅಧ್ಯಕ್ಷರು. ಪುಣೆಯ ಪ್ರಮುಖ ರಾಜಕೀಯ ನೇತಾರರಾಗಿದ್ದ ಇವರು, ಲೋಕಸಭೆಯಲ್ಲಿ ಹಲವು ಬಾರಿ ನಗರವನ್ನು ಪ್ರತಿನಿಧಿಸಿದ್ದರು. ತಮ್ಮ ರಾಜಕೀಯ ಜೀವನದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಹಲವು ವರ್ಷಗಳ ಕಾಲ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಆಡಳಿತದೊಂದಿಗೆ ಸಂಬಂಧ ಹೊಂದಿದ್ದರು.
ಕಲ್ಮಾಡಿ ಅವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ. ಪಾರ್ಥಿವ ಶರೀರವನ್ನು ಪುಣೆಯ ಎರಾಂಡ್ವಾನೆ ಪ್ರದೇಶದ ಕಲ್ಮಾಡಿ ನಿವಾಸದಲ್ಲಿ ಇಂದು ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ 3.30ಕ್ಕೆ ನವಿ ಪೇತ್ನಲ್ಲಿರುವ ವೈಕುಂಠ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
#WATCH | Pune, Maharashtra | Former Union Minister and Senior Congress leader Suresh Kalmadi passed away after a prolonged illness.
— ANI (@ANI) January 6, 2026
(Visuals from outside his residence) pic.twitter.com/HWKh3MhKgh
ಸುರೇಶ್ ಕಲ್ಮಾಡಿ ಮೂಲ ಮಂಗಳೂರು: ಸುರೇಶ್ ಕಲ್ಮಾಡಿ ಮೇ 1, 1944ರಂದು ತಮಿಳುನಾಡಿನ ಮದ್ರಾಸ್ನಲ್ಲಿ (ಈಗ ಚೆನ್ನೈ) ಜನಿಸಿದರು. ಇವರ ಪೋಷಕರು ಕರ್ನಾಟಕದ ಮಂಗಳೂರಿನವರು. ಕಲ್ಮಾಡಿ ಪುಣೆಯಲ್ಲಿ ಆರಂಭಿಕ ಶಾಲಾ ಶಿಕ್ಷಣ ಪಡೆದರು. ಅಲ್ಲೇ ಮಾಧ್ಯಮಿಕ ಶಿಕ್ಷಣವನ್ನೂ ಪೂರ್ಣಗೊಳಿಸಿದ್ದರು. ನಂತರ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಪದವಿಪೂರ್ವ ಅಧ್ಯಯನ ಮುಂದುವರಿಸಿ, ಪದವಿ ಪಡೆದರು. ಖಡಕ್ವಾಸ್ಲಾದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್ಡಿಎ)ಯಲ್ಲಿ ವ್ಯಾಸಂಗ ಮಾಡಿದರು. ಜೋಧ್ಪುರ ಮತ್ತು ಅಲಹಾಬಾದ್ನಲ್ಲಿರುವ ವಾಯುಪಡೆಯ ಕಾಲೇಜಿನಲ್ಲಿ ವಿಶೇಷ ವಾಯುಯಾನ ತರಬೇತಿ ಪಡೆದಿದ್ದರು.
1982ರಲ್ಲಿ ಶರದ್ ಪವಾರ್ ನೇತೃತ್ವದ ಕಾಂಗ್ರೆಸ್ (ಎಸ್) ಬಣದ ಬೆಂಬಲದೊಂದಿಗೆ ಕಲ್ಮಾಡಿ ಚುನಾವಣಾ ರಾಜಕೀಯ ಪ್ರವೇಶಿಸಿದರು. ಮಹಾರಾಷ್ಟ್ರವನ್ನು ಪ್ರತಿನಿಧಿಸುವ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡು ಆಯ್ಕೆಯಾದರು. ಸುದೀರ್ಘ ರಾಜಕೀಯ ಜೀವನದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಕಲ್ಮಾಡಿ 1996ರಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA)ನ ಅಧ್ಯಕ್ಷರಾಗಿ ಆಯ್ಕೆಯಾದರು. ತಮ್ಮ ಅಧಿಕಾರಾವಧಿಯಲ್ಲಿ IOA ಭಾರತದ ರಾಷ್ಟ್ರೀಯ ಒಲಿಂಪಿಕ್ ಸಮಿತಿಯಾಗಿ ಕಾರ್ಯನಿರ್ವಹಿಸಿತು. ಒಲಿಂಪಿಕ್ ಕಾರ್ಯಕ್ರಮಗಳಲ್ಲಿ ದೇಶದ ಭಾಗವಹಿಸುವಿಕೆಯನ್ನು ಸಂಘಟಿಸಿತು. ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳನ್ನು ಮೇಲ್ವಿಚಾರಣೆ ಮಾಡಿತು. ಅಕ್ಟೋಬರ್ 2012ರಲ್ಲಿ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಒತ್ತಡದ ಮೇರೆಗೆ, ಕಲ್ಮಾಡಿ ಐದನೇ ಅವಧಿಗೆ ಮರುಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು. ಇದು ಅವರ ಸಕ್ರಿಯ ಅಧ್ಯಕ್ಷತೆಯನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿತು. IOA ಅಧ್ಯಕ್ಷರಾಗಿ ಅವರ ಒಟ್ಟಾರೆ ಸೇವೆ 1996ರಿಂದ 2011 ರವರೆಗೆ ವ್ಯಾಪಿಸಿತು.
2010ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹಗರಣ: ಏಪ್ರಿಲ್ 25, 2011ರಂದು ಕಲ್ಮಾಡಿ ಅವರನ್ನು ಕೇಂದ್ರ ತನಿಖಾ ದಳ (CBI) 2010ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ, ವಂಚನೆ ಮತ್ತು ಕ್ರಿಮಿನಲ್ ಪಿತೂರಿಯ ಆರೋಪದ ಮೇಲೆ ಬಂಧಿಸಿತು. ಹಣಕಾಸಿನ ಅಕ್ರಮಗಳ ತನಿಖೆಯ ನಂತರ ವಿಶೇಷವಾಗಿ ಸ್ಪರ್ಧಾತ್ಮಕ ಬಿಡ್ಡಿಂಗ್ ಇಲ್ಲದೆ ಸ್ವಿಸ್ ಸಂಸ್ಥೆ ಒಮೆಗಾಗೆ 107 ಕೋಟಿ ರೂ.ಗಳ ಟೈಮಿಂಗ್, ಸ್ಕೋರಿಂಗ್ ಮತ್ತು ರಿಸಲ್ಟ್ಸ್ (ಟಿಎಸ್ಆರ್) ವ್ಯವಸ್ಥೆಯ ಒಪ್ಪಂದ ನೀಡಿದ ಪ್ರಕರಣದ ನಂತರ ಬಂಧಿಸಲಾಗಿತ್ತು. ಈ ನಿರ್ಧಾರವು ಬೊಕ್ಕಸಕ್ಕೆ ಭಾರಿ ನಷ್ಟ ಉಂಟುಮಾಡಿದೆ ಎಂದು ಸಂಸ್ಥೆ ಆರೋಪಿಸಿತ್ತು.
ಆ ವೇಳೆ ಕಾಮನ್ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿಯ ಅಧ್ಯಕ್ಷರಾಗಿದ್ದ ಕಲ್ಮಾಡಿ, ಆರೋಪಗಳನ್ನು ನಿರಾಕರಿಸಿದ್ದರು. ಅವುಗಳನ್ನು ರಾಜಕೀಯ ಪ್ರೇರಿತವೆಂದು ಹೇಳಿದ್ದರು. ಫೆಬ್ರವರಿ 2013ರಲ್ಲಿ ದೆಹಲಿ ನ್ಯಾಯಾಲಯ ಕಲ್ಮಾಡಿ ಮತ್ತು ಇತರ ಒಂಬತ್ತು ಜನರ ವಿರುದ್ಧ ವಂಚನೆ, ನಕಲಿ ಮತ್ತು ಕ್ರಿಮಿನಲ್ ಪಿತೂರಿಗಳಿಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಿತು. ಸ್ಪ್ಯಾನಿಷ್ ಸಂಸ್ಥೆಯ 62 ಕೋಟಿ ರೂ.ಗಳ ಕಡಿಮೆ ಬಿಡ್ ಅನ್ನು ತಪ್ಪಿಸಿ, ಸ್ವಿಸ್ ಟೈಮಿಂಗ್ಗೆ 141.21 ಕೋಟಿ ರೂ.ಗಳ ಟಿಎಸ್ಆರ್ ಒಪ್ಪಂದವನ್ನು ಅನಿಯಮಿತವಾಗಿ ನೀಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಆದರೆ ಕಲ್ಮಾಡಿ ತಪ್ಪೊಪ್ಪಿಕೊಂಡಿಲ್ಲ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಜನವರಿ 2012ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮತ್ತು ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ನಡುವೆ, ಕಲ್ಮಾಡಿ ಜೂನ್ 3, 2015ರಂದು ಏಷ್ಯನ್ ಅಥ್ಲೆಟಿಕ್ಸ್ ಅಸೋಸಿಯೇಷನ್ (AAA) ಅಧ್ಯಕ್ಷರ ಪ್ರಶಸ್ತಿ ಪಡೆದರು.

